ಹೊಸ ಅವತಾರದಲ್ಲಿ ಬಂದ ದೀಪಕ್ ಸುಬ್ರಮಣ್ಯ ಬಣ್ಣದ ಲೋಕದಲ್ಲಿ ಫುಲ್ ಬ್ಯುಸಿ
ಲಕ್ಷ್ಮೀ ನಿವಾಸ ಧಾರಾವಾಹಿ ಶುರುವಾಗಿ ಅದಾಗಲೇ 17 ಸಂಚಿಕೆಗಳು ಮುಕ್ತಾಯಗೊಂಡಿವೆ. ಹಾಗಿದ್ದರೂ ಕೂಡ ಇನ್ನೂ ಧಾರಾವಾಹಿ ಕಥೆಯ ಕ್ಲಾರಿಟಿ ಯಾರಿಗೂ ಸಿಗುತ್ತಿಲ್ಲ.
ಪ್ರತಿ ದಿನವೂ ಒಂದೊಂದು ಹೊಸ ಹೊಸ ಪಾತ್ರಗಳ ಎಂಟ್ರಿ ಆಗುತ್ತಲೇ ಇವೆ. ಇದರಲ್ಲಿ ಹೀರೋ ಹಾಗೂ ಹೀರೋಯಿನ್ ಯಾರು? ಎಂಬುದೂ ಕೂಡ ಇನ್ನು ಸ್ಪಷ್ಟವಾಗಿಲ್ಲ.
ಕೇವಲ ಎರಡು ವಾರಗಳಲ್ಲೇ ಅತಿಥಿ ಪಾತ್ರಗಳು ಬಂದೋಗಿದೆ. ಇದೀಗ ಮತ್ತೊಂದು ಹೊಸ ಪಾತ್ರ ಎಂಟ್ರಿ ಕೊಟ್ಟಿದ್ದು, ನಟ ದೀಪಕ್ ಸುಬ್ರಮಣ್ಯ ಕಾಣಿಸಿಕೊಂಡಿದ್ದಾರೆ.

ದಾಸ ಪುರಂದರ ಶ್ರೀನಿವಾಸ ನಾಯಕ
ದೀಪಕ್ ಸುಬ್ರಮಣ್ಯ ಎಂದ ಕೂಡಲೇ ನಿಮಗೆ ಯಾರು ಎಂಬುದು ಗೊತ್ತಾಗದೇ ಇರಬಹುದು. ಅದೇ ಶ್ರೀನಿವಾಸ ನಾಯಕ ಎಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವರ್ಷ ಪ್ರಸಾರವಾಗಿದ್ದ ದಾಸ ಪುರಂದರ ಧಾರಾವಾಹಿಯಲ್ಲಿ ನಟಿಸಿದ್ದರು. ನಾಯಕ ನಟನಾಗಿ ನಟಿಸಿದ್ದ ಶ್ರೀನಿವಾಸನೇ ಈ ದೀಪಕ್ ಸುಬ್ರಮಣ್ಯ. ದಾಸ ಪುರಂದರ ಧಾರಾವಾಹಿ ಮೂಲಕ ದೀಪಕ್ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಆ ಧಾರಾವಾಹಿಯೂ ಕೂಡ ಹಿಟ್ ಆಗಿತ್ತು. ಇದಾದ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ದೀಪಕ್ ಸುಬ್ರಮಣ್ಯ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಸ ಧಾರಾವಾಹಿಯಲ್ಲಿ ನಟನೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್ ಪಾತ್ರದಲ್ಲಿ ಜಾಹ್ನವಿಯ ಕಾಲೇಜ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಅಗಮಿಸಿದ್ದಾರೆ. ದಾಸ ಪುರಂದರದಲ್ಲಿನ ಲುಕ್ಗೂ ಈಗ ಸೂಟ್ ಬೂಟ್ನಲ್ಲಿರುವ ಲುಕ್ ಅನ್ನು ನೋಡಿ ಅಭಿಮಾನಿಗಳು ನೋಡಿ ಫುಲ್ ಖುಷ್ ಆಗಿದ್ದಾರೆ. ಆದರೆ ದೀಪಕ್ ಈ ಧಾರಾವಾಹಿಗೆ ಗೆಸ್ಟ್ ಆಗಿ ಬಂದಿದ್ದಾರೋ ಅಥವಾ ಹೀರೋ ಆಗಿ ಉಳಿಯುತ್ತಾರೋ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಮುಂದಿನ ಸಂಚಿಕೆ ತಪ್ಪದೇ ನೋಡಬೇಕಿದೆ.

ರಂಗಭೂಮಿ ಪ್ರತಿಭೆ ದೀಪಕ್ ಸುಬ್ರಮಣ್ಯ
ಇನ್ನು ದೀಪಕ್ ಸುಬ್ರಮಣ್ಯ ಕಳೆದ 20 ವರ್ಷಗಳಿಂದ ರಂಗಭೂಮಿಯಲ್ಲಿ ಇದ್ದಾರೆ. ಎಂಜಿನಿಯರ್ ಆಗಿ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿರುವ ದೀಪಕ್ ಸುಬ್ರಮಣ್ಯ ತಮ್ಮ ಆಸೆಯಂತೆ ಕಲಾವಿದರಾಗಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿರುವ ದೀಪಕ್, ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ, ಕಳೆದ ಐದಾರು ವರ್ಷಗಳಿಂದ ದೀಪಕ್ ಪರ್ಫಾಮೆನ್ಸ್ ಇನ್ ರಿಯಲಿಸಂ ಎಂಬ ಕೋರ್ಸ್ ಅನ್ನು ಟೀಚ್ ಮಾಡುತ್ತಿದ್ದಾರೆ. ಇದು ಮೂರೂವರೆ ತಿಂಗಳ ಕೋರ್ಸ್ ಆಗಿದೆ. ಧಾರಾವಾಹಿಗಳಷ್ಟೇ ಅಲ್ಲದೇ, ದೀಪಕ್ ಕನ್ನಡದ ಸಿನಿ ಕ್ಷೇತ್ರದಲ್ಲೂ ಬಣ್ಣ ಹಚ್ಚಿದ್ದಾರೆ.
ಸಾರಾಂಶ ಚಿತ್ರದಲ್ಲಿ ದೀಪಕ್
ದೀಪಕ್ ಸುಬ್ರಮಣ್ಯ 'ಸಾಲಗಾರ', 'ಜಾರು ಬಂಡೆ', 'ಪಿಂಕಿ ಎಲ್ಲಿ..?', 'ಶುದ್ಧಿ', 'ಆಯಾನಾ', 'ಸಾರಾಂಶ' ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಸಾರಾಂಶ ಚಿತ್ರದ ಟ್ರೈಲರ್ ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಾರಾಂಶ ಚಿತ್ರ ಟ್ರೈಲರ್ ಮೂಲಕವೇ ಈಗಾಗಲೇ ಕುತೂಹಲ ಮೂಡಿಸಿದೆ. ಫೆಬ್ರವರಿ 15 ರಂದು ಸಾರಾಂಶ ಚಿತ್ರ ರಿಲೀಸ್ ಆಗಲಿದ್ದು, ದೀಪಕ್ ಸುಬ್ರಮಣ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಹರಿಹರನ್, ಸೂರ್ಯ ವಸಿಷ್ಠ, ಶ್ವೇತಾ ಗುಪ್ತಾ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಿನಿಮಾ ರಂಗ, ರಂಗಭೂಮಿ ಹಾಗೂ ಕಿರುತೆರೆ ಮೂರರಲ್ಲೂ ಈಗ ದೀಪಕ್ ಸುಬ್ರಮಣ್ಯ ಬ್ಯುಸಿಯಾಗಿದ್ದಾರೆ.


Click it and Unblock the Notifications











