Lakshmi Nivasa: ಮುರಿದು ಬಿತ್ತು ಭಾವನಾ ಮದುವೆ; ಮಗಳ ನಿರ್ಧಾರಕ್ಕೆ ಸಾಥ್ ಕೊಡುವರೇ ಹೆತ್ತವರು?
ಭಾವನ ಮದುವೆ ಮುರಿದು ಬಿದ್ದಿದೆ. ಜವರೇಗೌಡನ ಮಗ ಮಾಡಿದ ಆಕ್ಸಿಡೆಂಟ್ ನಿಂದಾಗಿ ಭಾವನಾ ಕನಸಿನ ಗೋಪುರ ನುಚ್ಚು ನೂರಾಗಿದೆ. ಮದುವೆ ಮನೆಗೆ ಬರುತ್ತಿದ್ದ ಶ್ರೀಕಾಂತ್ ಕುಟುಂಬಕ್ಕೆ ಅಪಘಾತ ಸಂಭವಿಸಿತ್ತು. ಈ ವಿಚಾರ ಲಕ್ಷ್ಮೀ ಕಿವಿಗೆ ಬೀಳುತ್ತಿದ್ದ ಹಾಗೆಯೇ ಶಾಕ್ನಲ್ಲಿ ಇದ್ದಾಳೆ. ಅದೇ ಬೇಸರದಲ್ಲಿಯೇ ಭಾವನಾ ಮದುವೆ ಮನೆ ಬಿಟ್ಟು ನೇರವಾಗಿ ಆಸ್ಪತ್ರೆಗೆ ಓಡಿ ಬಂದಿದ್ದಾಳೆ.
ಶ್ರೀಕಾಂತ್ ತಾಯಿ ಬಳಿಗೆ ಬಂದ ಭಾವನಾ, ಅಮ್ಮ ಏನಾಯಿತು ನಿಮಗೆ ಎಂದು ಬಹಳ ಆಘಾತದಲ್ಲಿ ಕೇಳಿದಾಗ ಕೊನೆಯದಾಗಿ ಒಂದು ಮಾತನ್ನು ಹೇಳಿ ಕೊನೆಯುಸಿರು ಬಿಡುತ್ತಾರೆ . ಖುಷಿಯನ್ನು ನಿನ್ನ ಮಗಳು ಎಂದು ಸಾಕು. ಆಕೆ ನಿನ್ನ ಜೊತೆಯೇ ಇರಲಿ ಎಂದು ಶ್ರೀಕಾಂತ್ ತಾಯಿ ಕೊನೆಯದಾಗಿ ಲಕ್ಷ್ಮೀ ಬಳಿ ಕೇಳುತ್ತಾರೆ. ಇದನ್ನು ಕೇಳಿ ಸೌಪರ್ಣಿಕಾಗೆ ಬಹಳ ಶಾಕ್ ಆಗುತ್ತದೆ. ಸೌಪರ್ಣಿಕಾ ಮಾಡಿದ ಸಂಚಿಗೆ ಇಡೀ ಕುಟುಂಬವೇ ಸರ್ವನಾಶವಾಗಿ ಹೋಗಿದೆ. ಆಕೆಯ ದುರಾಸೆಗೆ ಖುಷಿ ಮಾತ್ರ ಉಳಿದುಕೊಂಡಿದ್ದಾಳೆ.

ಖುಷಿಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ ಶ್ರೀಕಾಂತ್ ತಾಯಿ ಕಣ್ಣು ಮುಚ್ಚಿಕೊಳ್ಳುತ್ತಾರೆ. ಇನ್ನು ಭಾವನಾಗೆ ಉಳಿದಿರುವುದು ಶ್ರೀಕಾಂತ್ ಒಬ್ಬರೇ. ಶ್ರೀಕಾಂತ್ಗೆ ಆಪರೇಶನ್ ಥಿಯೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಕೊನೆಗೂ ಚಿಕಿತ್ಸೆ ಫಲಿಸದೆ ಶ್ರೀಕಾಂತ್ ಕೂಡ ಕೊನೆಯುಸಿರೆಳೆಯುತ್ತಾರೆ. ಇತ್ತ ಜವರೇಗೌಡನ ಮಗ ಮಾತ್ರ ಅಪಘಾತ ಆದವರಿಗೆ ಏನಾಯಿತು ಎಂದು ಯೋಚಿಸುತ್ತಿರುತ್ತಾನೆ. ಕಾರಲ್ಲಿ ಯಾರೆಲ್ಲ ಇದ್ದರೂ ಅದು ಕೂಡ ಆತನಿಗೆ ತಿಳಿದಿಲ್ಲ. ಒಟ್ಟಿನಲ್ಲಿ ಏನು ಆಗದೆ ಸೇಫ್ ಆಗಿ ಬರಲಿ ಎಂದುಕೊಂಡಿರುತ್ತಾನೆ.
ಡಾಕ್ಟರ್ ಮಾತಿಗೆ ಬೆಚ್ಚಿ ಬಿದ್ದ ಭಾವನಾ
ಇನ್ನು ಡಾಕ್ಟರ್ ಬಳಿ ಬಂದು ಅಪಘಾತಕ್ಕೆ ಒಳಗಾದವರ ಬಗ್ಗೆ ಕೇಳುತ್ತಾನೆ. ಆಗ ಡಾಕ್ಟರ್ ನಿಜ ವಿಚಾರವನ್ನು ತಿಳಿಸದೆ ದುಡ್ಡಿನ ಆಸೆಗಾಗಿ ಜವರೇಗೌಡನ ಮಗನ ಬಳಿ ಸುಳ್ಳು ಹೇಳುತ್ತಾರೆ. ನೀವು ಏನು ಯೋಚನೆ ಮಾಡಬೇಡಿ, ಅವರು ಈಗಾಗಲೇ ಡಿಸ್ಚಾರ್ಜ್ ಆಗಿ ಹೋಗಿದ್ದಾರೆ ಎಂದು ಡಾಕ್ಟರ್ ಸುಳ್ಳು ಹೇಳುತ್ತಾರೆ. ಅದನ್ನೇ ನಿಜ ಎಂದು ನಂಬಿ ಆತ ಅಲ್ಲಿಂದ ಹೋಗುತ್ತಾನೆ. ಶ್ರೀಕಾಂತ್ ಇನ್ನಿಲ್ಲ ಎನ್ನುವ ವಿಚಾರವನ್ನು ಭಾವನ ಬಳಿ ಹೇಳಿದಾಗ ದಿಕ್ಕೇ ತೋಚದ ಹಾಗೆ ಆಗುತ್ತೆ.

ಖುಷಿಗಾಗಿ ಬದುಕು ಮೀಸಲಿಟ್ಟ ಭಾವನಾ
ಸಂಸಾರದ ಭಾರ ಹೊರಬೇಕಾಗಿದ್ದ ಭಾವನಾ ಇದೀಗ ಮಗುವಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾಳೆ. ಇತ್ತ ಖುಷಿಗೆ ಪ್ರಜ್ಞೆ ಬರುತ್ತದೆ. ಅಪ್ಪ.. ಅಜ್ಜಿ ಎಂದು ಕರೆದಾಗ ಅಲ್ಲಿಗೆ ಬಂದ ಭಾವನಾ ಖುಷಿಯನ್ನು ಸಮಾಧಾನ ಮಾಡುತ್ತಾಳೆ. ಖುಷಿ ನಿನಗೆ ಅಪ್ಪ ಅಮ್ಮ ಎಲ್ಲಾ ನಾನೇ. ನಾನು ನಿನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಖುಷಿ ಸುಮ್ಮನೆ ಇದ್ದರೂ, ಸೌಪರ್ಣಿಕಾ ಮಾತ್ರ ಇನ್ನೂ ಮೇಲೆ ನಿನಗೆ ಯಾರು ಇಲ್ಲ. ಇನ್ನೂ ನಿನಗೆ ನಾನು ಮಾತ್ರ ಎಂದು ಹೇಳಿ ಡಿಸ್ಚಾರ್ಜ್ ಮಾಡಿ ಕರೆದುಕೊಂಡು ಹೋಗುತ್ತಾಳೆ.
ಭಾವನಾಳನ್ನು ನೋಡಿ ಸಂತಸಪಟ್ಟ ಖುಷಿ
ಭಾವನಾಳನ್ನು ಖುಷಿ ಅಮ್ಮ ಎಂದು ಕರೆಯುತ್ತಾಳೆ. ಇದನ್ನು ಕಂಡು ಭಾವನಾ ಮನಸ್ಸು ತಡೆಯುವುದು ಇಲ್ಲ. ಸೌಪರ್ಣಿಕಾ ಮಾತ್ರ ಖುಷಿ ಹಠ ಮಾಡುವುದನ್ನು ನೋಡಿ ಆಕೆಗೆ ಹೊಡೆಯಲು ಮುಂದಾಗುತ್ತಾಳೆ. ಇದನ್ನು ತಡೆದ ಭಾವನಾ ನೇರವಾಗಿ ಸೌಪರ್ಣಿಕಾಗೆ ಹೇಳುತ್ತಾಳೆ. "ಇನ್ಮೇಲೆ ನಾನು ಖುಷಿಯನ್ನು ನೋಡಿಕೊಳ್ಳುತ್ತೇನೆ" ಎಂದು ಹೇಳಿ ಸೌಪರ್ಣಿಕಾಳನ್ನು ಎದುರು ಹಾಕಿಕೊಂಡು ಖುಷಿಯನ್ನು ಕರೆದುಕೊಂಡು ಮನೆಗೆ ಹೋಗುತ್ತಾಳೆ.


Click it and Unblock the Notifications











