ಕೊನೆಗೂ 'ವೀಕೆಂಡ್ ವಿತ್ ರಮೇಶ್-3'ಗೆ 'ಇವರೆಲ್ಲ' ಬರಲೇ ಇಲ್ಲ.!
ಜೀ ಕನ್ನಡ ವಾಹಿನಿಯ ಹೆಮ್ಮೆಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿ ಮುಕ್ತಾಯಗೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ರವರ ಲೈಫ್ ಸ್ಟೋರಿಯನ್ನ ವೀಕೆಂಡ್ ಟೆಂಟ್ ನಲ್ಲಿ ರಿವೈಂಡ್ ಮಾಡುವ ಮೂಲಕ 'ವೀಕೆಂಡ್ ವಿತ್ ರಮೇಶ್-3'ಗೆ ಪೂರ್ಣ ವಿರಾಮ ಬಿದ್ದಿದೆ.
ಕಳೆದ ಸೀಸನ್ ನಂತೆ ಸಂಪೂರ್ಣ 'ಚಿತ್ರರಂಗ'ಮಯವಾಗಿರಿಸದೆ, ರಾಜಕೀಯ ರಂಗದ ಹಿರಿಯರೂ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಮೇಲೆ ಕೂತರು.
ಸುಮಾರು ಮೂರು ತಿಂಗಳಿಗೂ ಅಧಿಕ ಕಾಲ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಜಗ್ಗೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂತೋಷ್ ಹೆಗ್ಡೆ ಸೇರಿದಂತೆ ಹಲವರು 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮ ಶುರುವಾಗುವ ಮುನ್ನವೇ 'ಇವರೆಲ್ಲ' ಈ ಬಾರಿಯ 'ವೀಕೆಂಡ್ ಅತಿಥಿಗಳು' ಅಂತ ಹೇಳಿಕೊಂಡಿದ್ದ ಜೀ ಕನ್ನಡ ವಾಹಿನಿ, ಕೆಲವರನ್ನ ಸಾಧಕರ ಸೀಟ್ ಮೇಲೆ ಕೂರಿಸಲೇ ಇಲ್ಲ.
'ಇವರನ್ನೆಲ್ಲ' ಈ ಬಾರಿಯಾದರೂ 'ವೀಕೆಂಡ್'ನಲ್ಲಿ ನೋಡಬಹುದು ಅಂತ ಕಾತರದಿಂದ ಕಾಯುತ್ತಿದ್ದ ಕರ್ನಾಟಕದ ಜನತೆಗೆ ನಿರಾಸೆ ಆಗಿರುವುದು ಖಂಡಿತ.

ಅನಿಲ್ ಕುಂಬ್ಳೆ
ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಿಲ್ ಕುಂಬ್ಳೆ ಭಾಗವಹಿಸಲಿದ್ದಾರೆ ಎಂಬುದು ಜಗಜ್ಜಾಹೀರಾಗಿತ್ತು. ಆದ್ರೆ, ಕಡೆಗೂ ಅನಿಲ್ ಕುಂಬ್ಳೆ ಬರಲೇ ಇಲ್ಲ.

ಮಾಲಾಶ್ರೀ
ಸಾಧಕರ ಸೀಟ್ ಮೇಲೆ 'ಕನಸಿನ ರಾಣಿ' ಮಾಲಾಶ್ರೀ ಕೂರಬೇಕಿತ್ತು. ಆದ್ರೆ ಕಾಲ ಕೂಡಿ ಬರಲಿಲ್ಲ.

ಅರುಂಧತಿ ನಾಗ್
ರಂಗಭೂಮಿಯಲ್ಲಿ ತಮ್ಮದೇ ರೀತಿಯಲ್ಲಿ ಸಾಧನೆ ಮಾಡಿರುವ ಅರುಂಧತಿ ನಾಗ್ ರವರನ್ನ 'ವೀಕೆಂಡ್'ನಲ್ಲಿ ನೋಡಬೇಕು ಎಂದು ಮೊದಲ ಸೀಸನ್ ನಿಂದಲೂ ಜನ ಕಾಯುತ್ತಿದ್ದಾರೆ. ಆದ್ರೆ, ಆ ಘಳಿಗೆ ಇನ್ನೂ ಬಂದಿಲ್ಲ.

ವೀರೇಂದ್ರ ಹೆಗ್ಗಡೆ
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ರವರೂ ಕೂಡ ಈ ಬಾರಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರಲಿಲ್ಲ.

ವೀಕ್ಷಕರ ಇಚ್ಛಾನುಸಾರವಾಗಿ....
ಇನ್ನೂ ಮೊದಲ ಸೀಸನ್ ನಿಂದಲೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಾಹುಲ್ ಡ್ರಾವಿಡ್ ರವರನ್ನ ನೋಡಬೇಕು ಎಂಬುದು ವೀಕ್ಷಕರ ಬಯಕೆ. ಇದು ಯಾವಾಗ ಈಡೇರುತ್ತೋ.?

ಕರುನಾಡ ಕ್ರಿಕೆಟರ್ಸ್
ಕರುನಾಡ ಕ್ರಿಕೆಟರ್ ಗಳಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಶಿ ರವರನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೋಡುವ ಭಾಗ್ಯ ಎಂದು ಸಿಗುವುದೋ.?!

ನಾರಾಯಣ ಮೂರ್ತಿ
ಯುವ ಜನತೆಗೆ ಸ್ಫೂರ್ತಿ ನೀಡುವ ನಾರಾಯಣ ಮೂರ್ತಿ ಕಥೆ 'ವೀಕೆಂಡ್ ಟೆಂಟ್' ನಲ್ಲಿ ಎಂದು ಅನಾವರಣ ಆಗುವುದೋ.?!

'ನಾದಬ್ರಹ್ಮ' ಹಂಸಲೇಖ
ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ವಿ.ಹರಿಕೃಷ್ಣ ರವರಂತೆ ಹಂಸಲೇಖ ರವರ ಸಂಗೀತ ಸಾಧನೆಯನ್ನ ಆಲಿಸುವ ಭಾಗ್ಯ ಎಂದು ಲಭಿಸುವುದೋ.! ಎನ್ನುವುದು ವೀಕ್ಷಕರ ಕೋರಿಕೆ.

ಮುಂದಿನ ಸೀಸನ್ ನಲ್ಲಿ ನೋಡ್ಬಹುದಾ.?
ವೀಕ್ಷಕರ ಇಚ್ಛಾನುಸಾರದಂತೆ ಮುಂದಿನ ಸೀಸನ್ ನಲ್ಲಿ 'ಇವರನ್ನೆಲ್ಲ' ನೋಡಬಹುದಾ.? ಜೀ ಕನ್ನಡ ವಾಹಿನಿ ಮನಸ್ಸು ಮಾಡಿ... 'ಸಾಧಕರು' ಗ್ರೀನ್ ಸಿಗ್ನಲ್ ಕೊಟ್ಟರೆ ಖಂಡಿತ ಸಾಧ್ಯ.


Click it and Unblock the Notifications











