ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಂತಿವೆ ಕಿರುತೆರೆಯ ಧಾರಾವಾಹಿಗಳು!
ಒಂದು ಕಾಲಕ್ಕೆ ಧಾರಾವಾಹಿ ಅಂದರೆ ಅದು ಹೆಣ್ಣುಮಕ್ಕಳಿಗೆ ಮಾತ್ರ ಎನ್ನುವ ಭಾವನೆ ಇತ್ತು. ಧಾರಾವಾಹಿಯಲ್ಲಿ ಬರುವ ಅತ್ತೆ ಸೊಸೆ ಜಗಳ, ಅಲ್ಲಿ ಬರುವ ಘಟನೆಗಳು ಮನೆಯನ್ನು ಹಾಳು ಮಾಡುತ್ತದೆ ಎನ್ನುವ ಮಾತು ಕೂಡ ಹೆಚ್ಚಾಗಿತ್ತು.
ಆದರೆ ಈಗೀಗ ಸೀರಿಯಲ್ ಗಳ ಟ್ರೆಂಡ್ ಬದಲಾಗುತ್ತಿದೆ. ಕನ್ನಡದಲ್ಲಿ ಈಗ ಸಿನಿಮಾಗೆ ಪೈಪೋಟಿ ನೀಡುವಂತಹ ಧಾರಾವಾಹಿಗಳು ಬರುತ್ತಿವೆ. ಕೋಟಿ ಕೋಟಿ ವೆಚ್ಚದಲ್ಲಿ ಹೊಸತನದಿಂದ ತಯಾರಾದ ಈ ಧಾರಾವಾಹಿಗಳು ವೀಕ್ಷಕರಿಂದ ದೊಡ್ಡ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

'ಶನಿ'
ಸದ್ಯ ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿರುವ ಧಾರಾವಾಹಿ ಶನಿ. ಈ ಧಾರಾವಾಹಿಯ ಮೇಕಿಂಗ್, ಪಾತ್ರಗಳು ಸೀರಿಯಲ್ ನೋಡದವರನ್ನು ಸಹ ಟಿವಿ ಮುಂದೆ ಕೂರಿಸಿದೆ. ಸಾಮಾಜಿಕ ಜಾಲತಾಣದಲ್ಲಿ 'ಶನಿ' ಬಗ್ಗೆ ತುಂಬ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ.

'ಜಗ್ಗು ದಾದಾ' ನಿರ್ದೇಶಕ
'ಶನಿ' ಧಾರಾವಾಹಿಯನ್ನು 'ಜಗ್ಗು ದಾದಾ' ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ ನಿರ್ದೇಶನ ಮಾಡಿದ್ದಾರೆ. 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಸೋಮವಾರ ದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರ ಆಗುತ್ತಿದೆ.

'ನಾಗ ಕನ್ನಿಕೆ'
'ಕಲರ್ಸ್ ಸೂಪರ್' ವಾಹಿನಿಯಲ್ಲಿ ಪ್ರಸಾರ ಆಗುವ 'ನಾಗ ಕನ್ನಿಕೆ' ಧಾರಾವಾಹಿ ಕೂಡ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಸೆಟ್ ಹಾಕಿ ಧಾರಾವಾಹಿಯನ್ನು ಚಿತ್ರೀಕರಣ ಮಾಡಿದ್ದು, 'ನಾಗ ಕನ್ನಿಕೆ' ಆಗಿ ನಟಿ ಅಧಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

'ಹರ ಹರ ಮಹದೇವ'
ಶಿವನ ಕಥೆಯನ್ನು ಮನೆ ಮನೆಗೆ ಹೇಳುವ ಧಾರಾವಾಹಿ 'ಹರ ಹರ ಮಹದೇವ'. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಸೀರಿಯಲ್ ಕನ್ನಡದ ದುಬಾರಿ ಸೀರಿಯಲ್ ಗಳಲ್ಲಿ ಒಂದಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಈ ಧಾರಾವಾಹಿ ಪ್ರಸಾರ ಆಗುತ್ತಿದೆ.

'ನಾಗಿಣಿ'
'ನಾಗಿಣಿ' ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿ ಕೂಡ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಧಾರಾವಾಹಿಯಲ್ಲಿ ಬರುವ ಗ್ರಾಫಿಕ್ಸ್ ನಿಂದಾಗಿ ಹೆಚ್ಚು ಹಣ ಬೇಕಾಗುತ್ತದೆಯಂತೆ.

'ನಂದಿನಿ'
ಉದಯ ಟಿವಿಯ 'ನಂದಿನಿ' ಸೀರಿಯಲ್ ಕೂಡ ತುಂಬ ಶ್ರೀಮಂತಿಕೆಯಿಂದ ಕೂಡಿದೆ. ಇಲ್ಲಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಜನಪ್ರಿಯ ನಟಿ ಖುಷ್ಬು ಕೂಡ ಧಾರಾವಾಹಿಯ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications