ಕಿರುತೆರೆಯಲ್ಲಿ ಸಿನಿಮಾ ತಾರೆಯರದ್ದೇ ಅಬ್ಬರ; ಧಾರಾವಾಹಿಗಳಲ್ಲಿ ದಿಗ್ಗಜರ ಖದರ್
ಬೆಳ್ಳಿತೆರೆ ಕಲಾವಿದರೆಲ್ಲ ಇದೀಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಹೌದು ಈಗ ಕೆಲವು ವರ್ಷಗಳಿಂದ ಈ ಟ್ರೆಂಡ್ ಆರಂಭವಾಗಿದೆ. ಹಲವು ಬೆಳ್ಳಿತೆರೆ ಕಲಾವಿದರು ಕಿರುತೆರೆಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಧಾರಾವಾಹಿಗಳ ಕಥೆಗೆ ಹಾಗೂ ಇಡೀ ತಾರಾ ಗಣಕ್ಕೆ ಹೊಸ ಮೆರುಗೂ ನೀಡುತ್ತಿದ್ದಾರೆ.
ಈ ಪಟ್ಟಿ ಬಹಳ ದೊಡ್ಡದೇ ಇದೆ. ಕಲಾವಿದರಾದ ಅನಂತ್ ನಾಗ್, ಉಮಾಶ್ರೀ, ವಿನಯಾ ಪ್ರಸಾದ್, ನಟ-ನಿರ್ದೇಶಕ ಹಾಸ್ಯ ನಟ ನಾರಾಯಣ್, ಸುಧಾರಾಣಿ, ಶ್ರೀನಾಥ್, ಜೈ ಜಗದೀಶ್, ಇತ್ತೀಚೆಗೆ ನಟಿ ಹರಿಪ್ರಿಯಾ, ಕ್ರೇಜಿ ಸ್ಟಾರ್ ನಟ ರವಿಚಂದ್ರನ್, ಹಾಸ್ಯ ನಟ ದೊಡ್ಡಣ್ಣ ಎಲ್ಲರೂ ನಾನಾ ಪಾತ್ರಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.

'ಪ್ರೀತಿ ಇಲ್ಲದ ಮೇಲೆ', 'ಚಿಟ್ಟೆ ಹೆಜ್ಜೆ', ಹೀಗೆ ಕೆಲ ವಿಭಿನ್ನ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಹೆಗ್ಗಳಿಕೆ ನಟ ಅನಂತನಾಗ್ ಅವರಿಗೆ ಇದೆ. ಇನ್ನು ನಟಿ ಉಮಾಶ್ರೀ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಪುಟ್ಟಕ್ಕನ ಪಾತ್ರದಲ್ಲಿ ಇಂದಿಗೂ ಮಿಂಚುತ್ತಿದ್ದಾರೆ. ಸ್ತ್ರೀ ಸಬಲೀಕರಣದ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲೊಂದು.
ಇದರಲ್ಲಿ ಪುಟ್ಟಕ್ಕನ ಪಾತ್ರವಂತೂ ಪ್ರೇಕ್ಷಕರಿಗೆ ಬಹಳ ಹಿಡಿಸಿದಂತಿದೆ. ಈ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿ ಉಮಾಶ್ರೀ ತಮ್ಮ ಅಭಿನಯದ ಮೂಲಕ ಮತ್ತೊಮ್ಮೆ ಎಲ್ಲರ ಮನಗೆದ್ದಿದ್ದಾರೆ. ಮೊದಲು ಉಮಾಶ್ರೀ ಹಲವು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿ, ಪೋಷಕನಾಗಿ ಬಹಳ ವಿಭಿನ್ನ ಹಾಗೂ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಇನ್ನು ಪ್ರಣಯ ರಾಜ ನಟ ಶ್ರೀನಾಥ್ ಹಲವು ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ ನಂತರ ನಿಧಾನವಾಗಿ ಕಿರುತೆರೆಗೆ ಕಾಲಿಟ್ಟರು. ಉದಯ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ನಟ ಜೈ ಜಗದೀಶ್ ಕೂಡ ಚಿತ್ರರಂಗದಲ್ಲಿ ನಾಯಕನಾಗಿ ವಿಲನ್ ಆಗಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಂತರ ಕಿರುತೆರೆಯಲ್ಲಿ 'ಪ್ರೀತಿಯ ಅರಸಿ', 'ಕಸ್ತೂರಿ ನಿವಾಸ', 'ಜೊತೆ ಜೊತೆಯಲಿ', 'ಅರಮನೆ' ಹೀಗೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಸುಧಾರಾಣಿ ಪ್ರಸ್ತುತ 'ಶ್ರೀ ರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಪಾತ್ರರಾದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಹಾಗೆಯೇ ನಟಿ ವಿನಯಾ ಪ್ರಸಾದ್ 'ಪಾರು' ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ನಡುವೆ ಬಹಳ ಫೇಮ್ ಪಡೆದರು. ಇತ್ತೀಚೆಗೆ ನಟಿ ಹರಿಪ್ರಿಯಾ ಕೂಡ ಒಂದು ಲಾಯರ್ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟರು.
ನಟ ಎಸ್. ನಾರಾಯಣ್ 'ಪಾರು' ಧಾರಾವಾಹಿಯಲ್ಲಿ ಒಂದೊಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರ ಮನ ಗೆದ್ದರು. ಇನ್ನು ನಟ ರವಿಚಂದ್ರನ್ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವುದಲ್ಲದೆ 'ಸೀತಾರಾಮ' ಧಾರಾವಾಹಿಯಲ್ಲಿ ಒಂದು ಚಿಕ್ಕ ಆದರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಪ್ರಸ್ತುತ ಕನ್ನಡ ಬೆಳ್ಳಿತೆರೆ ಕಂಡ ಅದ್ಭುತ ಹಾಸ್ಯ ನಟ ಕಲಾವಿದ ದೊಡ್ಡಣ್ಣನವರು ಹೊಸದೊಂದು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ನಟಿ ದಿವ್ಯ ಉರುಡುಗ ಅವರ ಅಭಿನಯದಲ್ಲಿ ಮೂಡಿ ಬರುತ್ತಿರುವ 'ನಿನಗಾಗಿ' ಧಾರಾವಾಹಿಯಲ್ಲಿ ದೊಡ್ಡಣ್ಣ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಸ್ಯ ನಟನಾಗದೆ ಒಂದು ಗಂಭೀರ ಪಾತ್ರದಲ್ಲಿ ದೊಡ್ಡಣ್ಣ ಕಿರುತೆರೆ ಪ್ರೇಕ್ಷಕರ ಮುಂದೆ ಬಂದು ನಿಂತಿದ್ದಾರೆ. ಈ ಪಾತ್ರ ಯಾವ ರೀತಿ ಇಡೀ ಕಥೆಗೆ ಟ್ವಿಸ್ಟ್ ಕೊಡಲಿದೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಅದರಲ್ಲೂ 'ನಿನಗಾಗಿ' ಧಾರಾವಾಹಿಯ ಅಭಿಮಾನಿಗಳಲ್ಲಿ ಮೂಡಿದೆ. ಈ ಮೊದಲು ದೊಡ್ಡಣ್ಣ 'ಕೆಂಡಸಂಪಿಗೆ' ಧಾರಾವಾಹಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











