'ಮಹಾನಾಯಕ' ಧಾರಾವಾಹಿ ಪೋಸ್ಟರ್ಗೆ ಬೆಂಕಿ: ನಾಲ್ವರು ಪೊಲೀಸರ ವಶಕ್ಕೆ
ಡಾ. ಬಿ. ಆರ್ ಅಂಬೇಡ್ಕರ್ ಜೀವನ ಆಧರಿಸಿದ 'ಮಹಾನಾಯಕ' ಧಾರಾವಾಹಿಗೆ ಕೋಟ್ಯಂತರ ವೀಕ್ಷಕರು ಕರ್ನಾಟಕದಲ್ಲಿದ್ದಾರೆ. ಈ ಧಾರಾವಾಹಿ ಅದೆಷ್ಟು ಜನಪ್ರಿಯವಾಗಿದೆಯೆಂದರೆ ಹಳ್ಳಿಗಳಲ್ಲಿ 'ಮಹಾನಾಯಕ' ಧಾರಾವಾಹಿಯ ದೊಡ್ಡ ಫ್ಲೆಕ್ಸ್ಗಳನ್ನು ಹಾಕಲಾಗಿದೆ.
ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕು ಬೆಳತೂರು ಗ್ರಾಮದಲ್ಲಿ ಕೆಲವು ಅಭಿಮಾನಿಗಳು ಅಂಬೇಡ್ಕರ್ ಚಿತ್ರಸಹಿತ 'ಮಹಾನಾಯಕ' ಧಾರಾವಾಹಿಯ ದೊಡ್ಡ ಫ್ಲೆಕ್ಸ್ ಹಾಕಿಸಿದ್ದರು. ಆದರೆ ಅಂಬೇಡ್ಕರ್ ಜಯಂತಿಯ ಹಿಂದಿನ ರಾತ್ರಿ ಯಾರೊ ಕಿಡಿಗೇಡಿಗಳು ಫ್ಲೆಕ್ಸ್ಗೆ ಬೆಂಕಿ ಹಚ್ಚಿದ್ದಾರೆ.
ಗ್ರಾಮದ ದಲಿತ ಯುವಕರು ಏಪ್ರಿಲ್ 14 ರಂದು ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಲು ಸಜ್ಜಾಗುತ್ತಿದ್ದರು. ಆದರೆ ಏಪ್ರಿಲ್ 13 ರ ರಾತ್ರಿ ಯಾರೊ ಕಿಡಿಗೇಡಿಗಳು 'ಮಹಾನಾಯಕ' ಫ್ಲೆಕ್ಸ್ಗೆ ಬೆಂಕಿ ಹಚ್ಚಿದ್ದಾರೆ.

ಗ್ರಾಮದ ಅಂಬೇಡ್ಕರ್ ಯುವಸೇನೆ ಪದಾಧಿಕಾರಿ ಸ್ವಾಮಿ ಎಂಬುವರು ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಅದೇ ಗ್ರಾಮದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
'ಮಹಾನಾಯಕ' ಫ್ಲೆಕ್ಸ್ಗೆ ಬೆಂಕಿ ಹಚ್ಚಿರುವ ಪ್ರಕರಣದ ಗ್ರಾಮದಲ್ಲಿ ಕುದಿ ವಾತಾವರಣ ನಿರ್ಮಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, 'ಮಹಾನಾಯಕ' ಧಾರಾವಾಹಿ ಪ್ರಸಾರವಾಗುತ್ತಿರುವ ಝೀ ಕನ್ನಡ ಚಾನೆಲ್ನ ರಾಘವೇಂದ್ರ ಹುಣಸೂರು ಅವರಿಗೆ 'ಮಹಾನಾಯಕ' ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ ಕರೆಗಳು ಬಂದಿದ್ದವು. ಈ ಬಗ್ಗೆ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಲ್ಲದೆ ತಾವು ಧಾರಾವಾಹಿ ಪ್ರಸಾರ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು ರಾಘವೇಂದ್ರ ಹುಣಸೂರು.
'ಮಹಾನಾಯಕ' ಧಾರಾವಾಹಿಯು ಅಂಬೇಡ್ಕರ್ ಜೀವನ ಆಧರಿಸಿದ್ದಾಗಿದೆ. ಅಂಬೇಡ್ಕರ್ ಕತೆಯ ಮೂಲಕ 1900ರ ಸಮಯದಲ್ಲಿ ದಲಿತರನ್ನು ಮೇಲ್ವರ್ಗದವರು ಹೇಗೆ ತುಳಿತಕ್ಕೊಳಪಡಿಸಿದರು ಎಂಬುದನ್ನು ತೋರಿಸಲಾಗಿದೆ. ಇದು ಕೆಲವು ಜಾತೀಯವಾದಿಗಳಿಗೆ ಇಷ್ಟವಾಗುತ್ತಿಲ್ಲ.


Click it and Unblock the Notifications











