14 ವರ್ಷದ ದಾಂಪತ್ಯ ಅಂತ್ಯ ;₹5 ಕೋಟಿ ಜೀವನಾಂಶ ಕೇಳಿದ ನಟಿ ?ಡಿವೋರ್ಸ್ ಮತ್ತು ದುಡ್ಡು-ಚೆಲುವೆಯ ಖಡಕ್ ಉತ್ತರ
ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.ಆದರೆ ಈಗೀಗ ಪ್ರೀತಿಯ ಅರ್ಥ ಬದಲಾಗಿದೆ.
ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಹಲವರು ವಿಚ್ಚೇದನ ಪಡೆದ ನಂತರ ಜೀವನಾಂಶಕ್ಕೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ರಂಪ ರಾಮಾಯಣ ಮಾಡುತ್ತಾರೆ. ಬೆಳ್ಳಿತೆರೆ ಮತ್ತು ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ.

ಇದಕ್ಕೆ ಕೈಗನ್ನಡಿ ಎಂಬಂತೆ ಡಿವೋರ್ಸ್ ಪಡೆದ ನಂತರ ಯಜುವೇಂದ್ರ ಚಹಾಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಅವರಿಂದ ಹಿಡಿದು ಹಲವರ ಮೇಲೆ ಜೀವನಾಂಶ ಪಡೆದ ಆರೋಪ ಮಾಡಲಾಗಿದೆ. ಜೀವನಾಂಶ ಪಡೆಯಲೆಂದೇ ಮದುವೆಯಾಗಿದ್ದರಾ ? ಎಂಬರ್ಥದಲ್ಲಿ ಪ್ರಶ್ನೆಯನ್ನು ಕೂಡ ಕೇಳಲಾಗಿದೆ. ಸದ್ಯ ಇದೇ ತರಹದ ಪ್ರಶ್ನೆ ಮಹಿ ವಿಜ್ ಅವರಿಗೆ ಕೇಳಲಾಗುತ್ತಿದೆ.
ಹೌದು, ಮಹಿ ವಿಜ್ ಮತ್ತು ಜೈ ಭಾನುಶಾಲಿ.. ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರುಗಳು. ''ಲಾಗಿ ತುಜಸೇ ಲಗನ್''.. ''ಬಾಲಿಕಾ ವಧು''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ಮಹಿ ವಿಜ್, ''ನಚ್ ಬಲಿಯೇ ಸೀಸನ್ 5''ರ ವಿನ್ನರ್ ಕೂಡ ಹೌದು. ''ಜಲಕ್ ದಿಖಲಾ ಜಾ''.. ''ಖತ್ರೋನ್ ಕೆ ಖಿಲಾಡಿ'' ಅಂತಹ ರಿಯಾಲಿಟಿ ಶೋನಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ.
ಇನ್ನು ಜೈ ಭಾನುಶಾಲಿ ಹಿಂದಿ ಕಿರುತೆರೆಯ ಖ್ಯಾತ ನಿರೂಪಕ. ''ಡ್ಯಾನ್ಸ್ ಇಂಡಿಯಾ ಡ್ಯಾನ್ಸ್-ಸೂಪರ್ ಮಾಮ್ಸ್''.. ''ಡ್ಯಾನ್ಸ್ ಇಂಡಿಯಾ ಡ್ಯಾನ್ಸ್- ಲಿಟಲ್ ಮಾಸ್ಟರ್ಸ್''.. ''ಸರೆಗಮಪ-2012''.. ''ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಸೀಸನ್ 3''.. ಇವರ ನಿರೂಪಣೆಯ ಕೆಲ ಜನಪ್ರಿಯ ಕಾರ್ಯಕ್ರಮಗಳು.
''ಹಮ್ ರಹೇ ನಾ ರಹೇ ಹಮ್'' .. ''ಗೀತ್-ಹುಯಿ ಸಬ್ಸೇ ಪರಾಯಿ'' .. ಧಾರಾವಾಹಿಯಲ್ಲಿ ಕೂಡ ಅಭಿನಯಿಸಿರುವ ಜೈ ಭಾನುಶಾಲಿ ''ಹೇಟ್ ಸ್ಟೋರಿ 2'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ಇಂಥಾ ಮಹಿ ವಿಜ್ ಮತ್ತು ಜೈ ಭಾನುಶಾಲಿ ಇಬ್ಬರು ಪರಸ್ಪರ ಪ್ರೀತಿಸಿ 2010-11ರಲ್ಲಿ ಮದುವೆಯಾಗಿದ್ದರು. ತಮ್ಮ ಕೆಲವೇ ಕೆಲ ಅತ್ಯಾಪ್ತ ಸ್ನೇಹಿತರು ಮತ್ತು ಮನೆಯ ಸದಸ್ಯರ ಎದುರು ಸಪ್ತಪದಿ ತುಳಿದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಕಳೆದ ವರ್ಷದವರೆಗೆ ಖುಷಿ ಖುಷಿಯಾಗಿಯೇ ಕಾಲ ಕಳೆದ ಇಬ್ಬರು ತಮ್ಮ ಮನೆ ಕೆಲಸದವರ ಇಬ್ಬರು ಮಕ್ಕಳನ್ನು 2017ರಲ್ಲಿ ದತ್ತು ಪಡೆದಿದ್ದರು. ಆ ಮಕ್ಕಳಿಗೆ ರಾಜ್ ವೀರ್ ಮತ್ತು ಖುಷಿ ಎಂದು ನಾಮಕರಣ ಮಾಡಿದರು. ತಮ್ಮ ಮಕ್ಕಳಷ್ಟೇ ಪ್ರೀತಿಯನ್ನು ನೀಡಿದರು. 2019ರಲ್ಲಿ ಮನೆಗೆ ಸ್ವಂತ ಮಗಳನ್ನು ಬರ ಮಾಡಿಕೊಂಡರು. ಮುದ್ದಾದ ಮಗಳಿಗೆ ತಾರಾ ಎಂದು ಹೆಸರಿಟ್ಟರು.
ಹೀಗೆ ಬದುಕಿನ ಏರಿಳಿತವನ್ನು ಕಳೆದ 14-15 ವರ್ಷಗಳಿಂದ ನೋಡಿರುವ, ಕಷ್ಟಕಾಲದಲ್ಲಿ ಒಬ್ಬರಿಗೆ ಒಬ್ಬರು ಹೆಗಲಾಗುತ್ತಾ ಬಂದ ಈ ಇಬ್ಬರು ಈ ವರ್ಷಾರಂಭದಲ್ಲಿಯೇ ದೂರವಾಗಿದ್ದಾರೆ. ತಮ್ಮ ವಿಚ್ಚೇದನದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.
ಆದರೆ, ಇದೇ ಸಮಯದಲ್ಲಿ ಕೆಲವರು ಮಹಿ ವಿಜ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಜೈ ಭಾನುಶಾಲಿ ಅವರಿಂದ ಮಹಿ ವಿಜ್ 5 ಕೋಟಿ ಜೀವನಾಂಶ ಪಡೆದಿದ್ದಾರೆ ಎಂದು ಪುಕಾರು ಹಬ್ಬಿಸಿದ್ದಾರೆ. ತಮ್ಮ ಬಗ್ಗೆ ಕೇಳಿ ಬರುತ್ತಿರುವ ಈ ಸುದ್ದಿಗಳಿಗೆ ಮಹಿ ವಿಜ್ ಸದ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೆಂಡ ಕಾರಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಮಹಿ ವಿಜ್ ನನ್ನ ಮತ್ತು ಜೈ ಸಂಬಂಧ ಮುರಿದು ಬಿದ್ದಿದ್ದು, ನಾವು ವಿಚ್ಚೇದನ ಪಡೆದಿದ್ದು ನಿಜಾ ಎಂದು ಹೇಳಿದ್ದಾರೆ. ಡಿವೋರ್ಸ್ ಆದರು ಕೂಡ ನಾವು ಉತ್ತಮ ಸ್ನೇಹಿತರಾಗಿ ಇರುತ್ತೇವೆ ಎಂದು ಹೇಳಿರುವ ಮಹಿ ನಾವು ಇಬ್ಬರು ಶಾಂತ ಸ್ವಭಾವದವರು, ನಮಗೆ ಈ ನಾಟಕ, ಜಗಳ ಎಲ್ಲ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಪರಸ್ಪರ ಮಾತುಕಥೆ ನಡೆಸಿ ನಾವು ಬೇರೆ ಬೇರೆ ದಾರಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದಿದ್ದಾರೆ.

ಮುಂದುವರೆದು ನಮ್ಮ ಮದುವೆ ಮುರಿದು ಬಿದ್ದರೂ ಕೂಡ ಮಕ್ಕಳ ಯೋಗಕ್ಷೇಮ ಅವರ ಲಾಲನೆ ಪಾಲನೆ ಯಾವುದಕ್ಕೂ ತೊಂದರೆಯಾಗಿಲ್ಲ ಎಂದು ಹೇಳಿರುವ ಮಹಿ ವಿಜ್ ನಾವು ವಿಚ್ಚೇದನ ಪಡೆದ ನಂತರ
ನಮ್ಮ ಮಕ್ಕಳು ಇದ್ದಕ್ಕಿದ್ದಂತೆ ಅನಾಥರಾಗಿ ಬೀದಿಗೆ ಬಂದಿದ್ದಾರೆಂದು ಹಲವರು ಮಾತನಾಡುತ್ತಿದ್ದಾರೆ. ಆದರೆ ಅದು ನಿಜಾ ಅಲ್ಲ ಎಂದು ಹೇಳಿದ್ದಾರೆ. ಜೈ ಭಾನುಶಾಲಿ ಅವರ ಮನೆಯ ಸದಸ್ಯರ ಜೊತೆ ಇವತ್ತು ಕೂಡ ನನ್ನ ಬಾಂಧವ್ಯ ಮುಂದುವರೆದಿದೆ ಎಂದಿದ್ದಾರೆ.
ಇನ್ನು ಇದೇ ಸಮಯದಲ್ಲಿ 5 ಕೋಟಿ ಜೀವನಾಂಶ ಪಡೆದಿದ್ದಾರೆ ಎನ್ನುವ ಸುದ್ದಿಯ ಕುರಿತು ಕೂಡ ಪ್ರತಿಕ್ರಿಯೆ ನೀಡಿರುವ ಮಹಿ ವಿಜ್, ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಜನ ಮಹಿ 5 ಕೋಟಿ ರೂಪಾಯಿ ಜೀವನಾಂಶ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಈ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ತಮ್ಮ ಪೇಜ್ನ ಲೈಕ್ಸ್ ಮತ್ತು ಕಾಮೆಂಟ್ಗಳ ಹಸಿವಿಗಾಗಿ ನನ್ನ ವ್ಯೆಯಕ್ತಿಕ ಜೀವನವನ್ನು ಇವರು ಚರ್ಚೆಯ ವಸ್ತು ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸದಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಯಾರಿಗೂ ವಿಚ್ಚೇದನ ಪಡೆಯುವ ಅವಶ್ಯಕತೆ ಇರುವುದಿಲ್ಲ, ಯಾರಿಗೂ ಅದು ಬೇಕಾಗಿರುವುದಿಲ್ಲ, ನಾವು ಯಾವುದೇ ಡ್ರಾಮಾ ಕೂಡ ಮಾಡುತ್ತಿಲ್ಲ ಎಂದು ಹೇಳಿರುವ ಮಹಿ ವಿಜ್ ವಿಚ್ಚೇದನದ ಪ್ರಕರಣಗಳು ಕೇವಲ ಚಿತ್ರರಂಗದಲ್ಲಿ ಮಾತ್ರ ಹೆಚ್ಚಾಗುತ್ತಿಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ ಹಲವರು ವಿಚ್ಚೇದನ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೂ ಕೂಡ ಜನ ಚಿತ್ರರಂಗದವರಿಗೆ ಮದುವೆ ಮತ್ತು ವಿಚ್ಚೇದನ ಎರಡು ತಮಾಷೆಯಾಗಿದೆ ಎಂದು ಹೇಳುವುದು ನಿಜಕ್ಕೂ ತಮಾಷೆ ಎನಿಸುತ್ತೆ ಎಂದು ಹೇಳಿದ್ದಾರೆ.


Click it and Unblock the Notifications











