"ಇಷ್ಟು ದಿನ ನನ್ನನ್ನು ನೋಡಿ ಬೈಯ್ಯುತ್ತಿದ್ದವರು ಇನ್ನು ಮುಂದೆ ನಗ್ತಾರೆ" ಮಜಾ ಟಾಕೀಸ್ ಪ್ರಿಯಾಂಕಾ ಶಿವಣ್ಣ
ಪ್ರಿಯಾಂಕಾ ಶಿವಣ್ಣ! ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶಾಂತಿನಿವಾಸ' ಧಾರಾವಾಹಿಯಲ್ಲಿ ಖಳನಾಯಕಿ ಮಂತ್ರ ಪಾತ್ರದಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕಾ ಶಿವಣ್ಣ ಇದೀಗ ಮಜಾ ಟಾಕೀಸ್ ಸೇರಿದ್ದಾರೆ. ಹೌದು, ಇತ್ತೀಚೆಗಷ್ಟೇ ಶುರುವಾಗಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಶೋವಿನಲ್ಲಿ ಪ್ರಿಯಾಂಕಾ ಶಿವಣ್ಣ ಕೂಡಾ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
"ಮೊದಲನೆಯದಾಗಿ ಮಜಾ ಟಾಕೀಸ್ ಫ್ಯಾಮಿಲಿ ಸೇರ್ತಿರೋದಕ್ಕೆ ತುಂಬಾ ಖುಷಿಯಿದೆ. ಯಾಕೆಂದರೆ ಮಜಾ ಟಾಕೀಸ್ ಅಂದ್ರೆ ಎಲ್ಲರಿಗೂ ತುಂಬಾ ಇಷ್ಟ. ಎಲ್ಲರೂ ತಮ್ಮ ಎಲ್ಲಾ ಟೆನ್ಶನ್ ಮರೆತು ಈ ಒಂದು ಶೋ ನೋಡ್ತಾರೆ. ನಾನು ಈ ಶೋವಿನ ಅಭಿಮಾನಿ. ಇದರಲ್ಲಿ ನಾನು ಭಾಗವಹಿಸುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ನಾನು ಈ ಮಜಾ ಟಾಕೀಸ್ ಕುಟುಂಬದ ಸದಸ್ಯೆ. ತುಂಬಾ ಖುಷಿಯಾಗುತ್ತಿದೆ" ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕಾ ಶಿವಣ್ಣ.

"ಮಜಾ ಟಾಕೀಸ್ ಇಂದ ಕಾಲ್ ಬಂದಾಗ ನನಗೆ ಆಶ್ಚರ್ಯವಾಗಿತ್ತು. ಇದರ ಜೊತೆಗೆ ಕೊಂಚ ಭಯ ಕೂಡಾ ಆಗಿತ್ತು. ಎಕ್ಸೈಟ್ಮೆಂಟ್ ಜಾಸ್ತಿ ಇದೆ. ಭಯ ಯಾಕೆಂದರೆ ಮಜಾ ಟಾಕೀಸ್ ನಲ್ಲಿ ಎಲ್ಲಾ ಅನುಭವಿ ಕಲಾವಿದರುಗಳಿದ್ದಾರೆ. ನಾನು ಇಲ್ಲಿ ಜಸ್ಟ್ ಒಂದು ಸಣ್ಣ ಗುಬ್ಬಿ ಮರಿ ಥರ ಬಂದಿದ್ದೇನೆ. ಏನೆಲ್ಲಾ ಆಗುತ್ತೆ? ಹೇಗೆಲ್ಲಾ ಆಗುತ್ತೆ ಎಂಬುದನ್ನು ನೋಡಬೇಕಷ್ಟೇ" ಎಂದು ಪ್ರಿಯಾಂಕಾ ಶಿವಣ್ಣ ಹೇಳಿಕೊಂಡಿದ್ದಾರೆ.
"ಇಷ್ಟು ದಿನ ನನ್ನನ್ನು ಕಿರುತೆರೆಯಲ್ಲಿ ನೋಡಿದ ಅನೇಕರು ನನಗೆ ಬೈಯ್ಯುತ್ತಿದ್ದರು. ಶಾಪ ಹಾಕುತ್ತಿದ್ದರು. ಮೇ ಬೀ ಈ ಒಂದು ಶೋವಿನಿಂದ ಎಲ್ಲರೂ ಇನ್ನು ಮುಂದೆ ನನ್ನನ್ನ ಪ್ರೀತಿಯಿಂದ ಮಾತನಾಡಿಸ್ತಾರೆ. ಯಾರೂ ಕೂಡಾ ಬೈಯ್ಯಲ್ಲ. ಬದಲಿಗೆ ನಗ್ತಾರೆ. ಅದೊಂದು ಖುಷಿಯಿದೆ ನನಗೆ" ಎಂದು ಹೇಳಿಕೊಂಡಿದ್ದಾರೆ ಪ್ರಿಯಾಂಕಾ ಶಿವಣ್ಣ.

ಇನ್ನು ಕಿರುತೆರೆಯ ವಿಚಾರ ಬಂದರೆ ಪ್ರಿಯಾಂಕಾ ಶಿವಣ್ಣ ಸದ್ಯ 'ಶಾಂತಿ ನಿವಾಸ' ಧಾರಾವಾಹಿಯ ಮಂತ್ರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇದಕ್ಕಿಂತಲೂ ಮೊದಲು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯ' ಧಾರಾವಾಹಿಯಲ್ಲಿ ನಾಯಕಿ ಅಕ್ಕ ದಿವ್ಯ ಆಗಿ ನಟಿಸಿದ್ದರು. ಆರಂಭದಲ್ಲಿ ದಿವ್ಯ ಪಾತ್ರ ಸಂಪೂರ್ಣ ನೆಗೆಟಿವ್ ಆಗಿದ್ದರೂ, ಧಾರಾವಾಹಿ ಮುಗಿಯುವ ವೇಳೆಗೆ ಪಾಸಿಟಿವ್ ಆಗಿ ಬದಲಾಗಿತ್ತು.
'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ಒಂದೂರಲ್ಲಿ ರಾಜ ರಾಣಿ', 'ಪರಿಣಯ' ಧಾರಾವಾಹಿಗಳಲ್ಲಿ ನಟಿಸಿದರು. ಮುಂದೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಆಗಿ ನಟಿಸಿರುವ ಈಕೆ ಮೊದಲ ಬಾರಿಗೆ ಖಳನಾಯಕಿಯಾಗಿ ಕಾಣಿಸಿಕೊಂಡರು. ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈಕೆ ಬರೋಬ್ಬರಿ ಎಂಟು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸಿದ್ದರು.
ಜೊತೆಗೆ ಚಂದ್ರಿಕಾ ಪಾತ್ರಕ್ಕೆ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ನಲ್ಲಿ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಕೂಡಾ ಪಡೆದುಕೊಂಡಿದ್ದರು. ಇನ್ನು ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಗಳಲ್ಲಿ ನಟಿಸಿರುವ ಬೆಡಗಿ ಈಕೆ. ತೆಲುಗಿನ 'ಕೃಷ್ಣ ತುಳಸಿ', 'ನಾಗಪಂಚಮಿ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಪ್ರಿಯಾಂಕಾ ಶಿವಣ್ಣ ಅಲ್ಲೂ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದರು.
ಸದ್ಯ ಮಜಾ ಟಾಕೀಸ್ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ಪ್ರಿಯಾಂಕಾ ಶಿವಣ್ಣ ನಟಿಸಿರುವ ಹೆಚ್ಚಿನ ಧಾರಾವಾಹಿಗಳಲ್ಲಿ ಖಳನಾಯಕಿಯಾಗಿ ನಟಿಸಿದ್ದೇ ಹೆಚ್ಚು. ಜೊತೆಗೆ ನೆಗೆಟಿವ್ ರೋಲ್ ನಲ್ಲಿ ನಟನೆಗೆ ಅವಕಾಶ ಜಾಸ್ತಿ ಎಂಬುದು ಪ್ರಿಯಾಂಕಾ ಅವರ ಅಭಿಪ್ರಾಯ.


Click it and Unblock the Notifications











