ಸೀರಿಯಲ್ ಮೂಲಕ ಕಾಮಿಡಿ ಕಚಗುಳಿ ನೀಡಲು ಬರ್ತಿದ್ದಾರೆ ರಘುವೇಂದ್ರ
ಸಿನಿಮಾಗಳಲ್ಲಿ ಸಾಕಷ್ಟು ಹೊಸ ಪಾತ್ರಗಳು ಬಂದು ಹೋಗುವಂತೆ ಕಿರುತೆರೆಯಲ್ಲಿಯೂ ಅತಿಥಿ ಪಾತ್ರಗಳು ಹಾಗೂ ಸಪ್ರೈಸ್ ಎಂಟ್ರಿ, ಹೊಸ ಪಾತ್ರದಾರಿಗಳ ಪ್ರವೇಶ ಆಗುತ್ತಲೇ ಇರುತ್ತವೆ. ಇದೀಗ ಕಿರುತೆರೆಯ ಮಜಾ ಭಾರತ ಕಾಮಿಡಿ ಶೊ ಮೂಲಕ ರಾಗಿಣಿ ಅಂತಾನೆ ಫೇಮಸ್ ಆಗಿರೋ ರಘು ಅವರು ಮತ್ತೊಂದು ಸೀರಿಯಲ್ ಪ್ರವೇಶ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆ ವಾಹಿನಿಯಲ್ಲಿ ತನ್ನ ಅಭಿನಯದ ಮೂಲಕವೇ ಭರವಸೆ ಮೂಡಿಸಿರುವ ರಘು ಸಾಕಷ್ಟು ಜನಮನ್ನಣೆ ಮಡೆದಿರುವ 'ನಮ್ಮನೆ ಯುವರಾಣಿ' ಸೀರಿಯಲ್ ಪ್ರವೇಶಿಸಿದ್ದಾರೆ. ಈ ಖುಷಿ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಜಾ ಭಾರತ ಕಾಮಿಡಿ ರಿಯಾಲಿಟಿ ಶೊ ಮೂಲಕ ಜನರನ್ನು ನಕ್ಕು ನಗಿಸುತ್ತಿದ್ದ ರಘು ಮಹಿಳೆಯರ ಪಾತ್ರದಲ್ಲೆ ವೀಕ್ಷಕರಿಗೆ ಹೆಚ್ಚು ಹತ್ತಿರವಾದವರು. ಮಹಿಳೆಯರ ರೀತಿ ಉಡುಪು ತೊಟ್ಟು ಸ್ಟೇಜ್ ಮೇಲೆ ಬಂದರೆ ರಘು ಅವರನ್ನು ಯಾರು ಮಹಿಳಾ ಪಾತ್ರಧಾರಿ ಎಂದು ಗುರುತು ಹಿಡಿಯದಷ್ಟರ ಮಟ್ಟಿಗೆ ಮೋಡಿ ಮಾಡುತ್ತಿದ್ದರು. ಹೀಗೆ ಜನರನ್ನು ನಗೆಕಡಲಲ್ಲಿ ತೇಲಿಸುತ್ತಿದ್ದ ರಘುಗೆ ರಿಯಾಲಿಟಿ ಶೋ ನಂತರ ಸಾಕಷ್ಟು ಸಿನಿಮಾ ಮತ್ತು ಧಾರವಾಹಿಗಳಿಂದ ಬೇಡಿಕೆ ಹೆಚ್ಚಾಗಿತ್ತು. ಸದ್ಯ ಕಿರುತೆರೆಯನ್ನೇ ಆಯ್ಕೆ ಮಾಡಿಕೊಂಡಿರೋ ರಘು ಸಾಕಷ್ಟು ಧಾರವಾಹಿಗಳಲ್ಲಿ ಈಗಾಗಲೇ ಬಣ್ಣ ಹಚ್ಚಿದ್ದಾರೆ.
ಜನಪ್ರಿಯ ಸೀರಿಯಲ್ 'ನಮ್ಮನೆ ಯುವರಾಣಿ'ಗೆ ರಘು ಪ್ರವೇಶ ಪಡೆದಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಮೆಚ್ಚುಗೆಯನ್ನು ಪಡೆದಿರುವ ನಮ್ಮನೆ ಯುವರಾಣಿ ಧಾರವಾಹಿ ಸಾಕಷ್ಟು ಟ್ವಿಸ್ಟ್ ಹಾಗೂ ಹೊಸ ಪಾತ್ರಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೆ ಹೊಸ ಪಾತ್ರಧಾರಿಗಳ ಪರಿಚಯ ಕೂಡ ಈ ಸೀರಿಯಲ್ನಲ್ಲಿ ಮಾಡಲಾಗಿತ್ತು. ಈಗ ರಘು ಕೂಡ 'ನಮ್ಮನೆ ಯುವರಾಣಿ' ಸೀರಿಯಲ್ ಕುಟುಂಬ ಸೇರ್ಪಡೆಯಾಗಿದ್ದು, ವಿಭಿನ್ನ ಪಾತ್ರವನ್ನು ನಿರ್ವಹಿಸಲಿದ್ದಾರೆ.

'ನಮ್ಮನೆ ಯುವರಾಣಿ' ಸೀರಿಯಲ್ನಲ್ಲಿ ರಘು ರಾಜ್ಗುರು ಕುಟುಂಬಕ್ಕೆ ಸಹಾಯ ಮಾಡುವ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಾಜ್ ಗುರು ಕುಟುಂಬ ಈಗಾಗಲೇ ಸಂಕಷ್ಟದಲ್ಲಿದೆ. ರಾಜ್ಗುರು ಕುಟುಂಬದ ಮೇಲೆ ಕಲ್ಪನಾ ಹಗೆ ಸಾಧಿಸುತ್ತಿದ್ದು, ಮನೆಯವರನ್ನೆಲ್ಲ ಸಂಚುಮಾಡಿ ಹೊರಹಾಕಿದ್ದಾಳೆ. ಅಲ್ಲದೇ ರಾಜ್ಗುರು ಕುಟುಂಬದ ಮನೆಯನ್ನು ಮಾರಾಟಮಾಡಲು ಕಲ್ಪನಾ ಪ್ರಯತ್ನಿಸುತ್ತಿದ್ದಾಳೆ. ಈ ಪ್ರಯತ್ನವನ್ನು ತಡೆಯಲು ರಾಜ್ಗುರು ಕುಟುಂಬದ ಸಾಕೇತ್-ಅಹಲ್ಯ, ಅನಿಕೇತ್-ಮೀರಾ ಪ್ರಯತ್ನಿಸುತ್ತಿದ್ದು, ಹೇಗಾದರು ಮಾಡಿ ಕಲ್ಪನಾ ಸಂಚನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಮಾತಾಜಿ ಪಾತ್ರದಾರಿ ರಘು ಕೂಡ ಕಲ್ಪಾನಾಗೆ ಚಳ್ಳೆಹಣ್ಣು ತಿನ್ನಿಸಲಿದ್ದು, ಕಾಮಿಡಿ ಟಚ್ ಕೂಡ ಇರಲಿದೆಯಂತೆ. ರಘುಗೆ ಒಪ್ಪುವಂತಹ ಪಾತ್ರವನ್ನೆ ಅವರಿಗೆ ನೀಡಿದ್ದು, ಕುತಂತ್ರಿ ಕಲ್ಪಾನರನ್ನ ರಘು ಗೋಳಿಡಲಿದ್ದಾರೆ.

ಹಾಗೇ ರಘು ರಾಜ್ಗುರು ಕುಟುಂಬವನ್ನು ಉಳಿಸಲು ಬೇರೆಯದೇ ರೀತಿಯಲ್ಲಿ ಪ್ರಯತ್ನ ಮಾಡಲಿದ್ದಾರೆ. ರಾಜ್ಗುರು ಕುಟುಂಬ ಅಪಾಯದಿಂದ ಪಾರಾಗುವ ವರೆಗೂ 'ನಮ್ಮನೆ ಯುವರಾಣಿ' ಸೀರಿಯಲ್ನಲ್ಲಿ ಕಾಣಿಸಿಕೊಳ್ಳಲಿರುವ ರಘು ನಂತರ ಈ ಧಾರವಾಹಿಯಲ್ಲಿ ಮುಂದುವರೆಯೋದಿಲ್ಲ. ಇದೊಂದು ಅತಿಥಿ ಪಾತ್ರವಾಗಿದ್ದು, ಕೆಲದಿನ ಅಷ್ಟೇ ಈ ಸೀರಿಯಲ್ನಲ್ಲಿ ರಘು ಕಾಣಿಸಿಕೊಳ್ಳಲಿದ್ದಾರೆ. ಅತಿಥಿ ಪಾತ್ರವಾದರೂ ತುಂಬ ಪ್ರಾಮುಖ್ಯತೆಯಿರುವ ರೋಲ್ ಇದಾಗಿದ್ದು, ರಘುಗೆ ಈ ಸೀರಿಯಲ್ ಮೂಲಕ ಮತ್ತಷ್ಟು ಮೈಲೇಜ್ ಸಿಗಲಿದೆಯಂತೆ.

'ನಮ್ಮನೆ ಯುವರಾಣಿ' ಸೀರಿಯಲ್ಗು ಮುನ್ನ ರಘು ಸಾಕಷ್ಟು ಧಾರವಾಹಿ ಮತ್ತು, ಕಾಮಿಡಿ ಶೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಉದಯ ವಾಹಿನಿಯ 'ಕಾವ್ಯಾಂಜಲಿ' ಸೀರಿಯಲ್ನಲ್ಲಿ ಬಣ್ಣ ಹಚ್ಚಿದ್ರು. ಈ ಧಾರವಾಹಿಯಲ್ಲೂ ಅತಿಥಿ ಪಾತ್ರ ನಿರ್ವಹಿಸಿದ್ದ ರಘು ಕುರವಂಜಿ ಪಾತ್ರದಲ್ಲಿ ವೀಕ್ಷಕರನ್ನು ಮೋಡಿ ಮಾಡಿದ್ದರು. ಹೀಗೆ ತನ್ನ ಮಾತಿನ ಶೈಲಿ, ಮಹಿಳಾ ಪಾತ್ರದಿಂದಲೇ ಹೆಚ್ಚು ಗಮನ ಸೆಳೆದಿರೋ ನಟ ರಘು 'ನಮ್ಮನೆ ಯುವರಾಣಿ' ಸೇರ್ಪಡೆ ಯಾಗಿದ್ದು, ಇವರ ಜೈಮಾತ ಪಾತ್ರ ವೀಕ್ಷಕರಿಗೆ ಹೇಗೆ ಹಿಡಿಸಲಿದೆ ಅನ್ನೋದನ್ನ ನೋಡಬೇಕಿದೆ.


Click it and Unblock the Notifications