ಬಿಗ್ ಬಾಸ್ ಮನೆಗೆ 'ಗೋರಿ ಪಾಳ್ಯದ ಗಲ್ಲಿ'ಯ ಚೆಲುವೆ, ಹೇಳಿದ್ದೇನು ಮಾದಕ ನಟಿ..?
ಪ್ರತಿ ವರ್ಷ ''ಬಿಗ್ ಬಾಸ್'' ಸುತ್ತ ಮುತ್ತ ಕುತೂಹಲ ಮನೆ ಮಾಡುತ್ತೆ. ಈ ವರ್ಷ ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಕಾರ್ಯಕ್ರಮ ಶುರುವಾಗುವ ಒಂದೆರಡು ತಿಂಗಳ ಮುನ್ನವೇ ಸ್ಪರ್ಧಿಗಳ ಕುರಿತು ಚರ್ಚೆ ಶುರುವಾಗುತ್ತೆ. ಅಂತೆ-ಕಂತೆಯ ಸಂತೆಯಲ್ಲಿ ಹಲವಾರು ಜನರ ಹೆಸರು ಕೇಳಿ ಬರುತ್ತೆ.
ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈ ಕುರಿತು ಪ್ರತಿ ವರ್ಷ ಚರ್ಚೆ ನಡೆಯುತ್ತಲೇ ಇರುತ್ತೆ. ಆ ಪೈಕಿ ಕೆಲವರು ನೇರಾನೇರವಾಗಿಯೇ ತಮ್ಮ ಕುರಿತು ಹರಡಿರುವ ಸುದ್ದಿಗೆ ಪ್ರತಿಕ್ರಿಯೆಯನ್ನು ಕೊಡುತ್ತಾರೆ. ಬಿಗ್ ಬಾಸ್ನಲ್ಲಿ ಭಾಗವಹಿಸುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾರೆ. ಸುಖಾ ಸುಮ್ಮನೆ ತಮ್ಮ ಹೆಸರನ್ನು ಎಳೆದು ತರದಂತೆ ಮನವಿಯನ್ನು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಬಿಗ್ ಬಾಸ್ ನಲ್ಲಿ ತಾವು ಭಾಗವಹಿಸುತ್ತಿರುವ ಸುದ್ದಿಯನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಉದಾಹರಣೆಗೆ ''ಮಲ್ಲಿಕಾ ಶೆರಾವತ್''.

ಹೌದು, ಮಲ್ಲಿಕಾ ಶೆರಾವತ್.. ಎರಡು ದಶಕದ ಹಿಂದೆ ಹಲವರ ನಿದ್ದೆಗೆಡಿಸಿದ್ದ ಮಾದಕ ಚೆಲುವೆ. ''ಮರ್ಡರ್'' ಚಿತ್ರದ ಮೂಲಕ ಪಡ್ಡೆ ಹುಡುಗರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಮಲ್ಲಿಕಾ ಶೆರಾವತ್ ಆ ನಂತರ ಹತ್ತು ಹಲವು ಚಿತ್ರಗಳನ್ನು ಮಾಡಿದರು. ಆದರೆ ಮರ್ಡರ್ ಚಿತ್ರದಲ್ಲಿ ಸಿಕ್ಕ ಹೆಸರು ಇವರಿಗೆ ಸಿಗಲೇ ಇಲ್ಲ.
ಇನ್ನು, ಆ ಕಾಲದಲ್ಲಿಯೇ '' ಪ್ರೀತಿ ಏಕೆ ಭೂಮಿ ಮೇಲಿದೆ'' ಚಿತ್ರಕ್ಕೋಸ್ಕರ ಪ್ರೇಮ್ ಇವರನ್ನು ಕನ್ನಡಕ್ಕೆ ಕರೆತಂದಿದ್ದರು. ''ಗೋರಿ ಪಾಳ್ಯದ ಗಲ್ಲಿ''ಯೊಳಗೆ ಕುಣಿಸಿದ್ದರು. ಕನ್ನಡದ ಅನೇಕ ಚಿತ್ರ ರಸಿಕರ ಪಾಲಿಗೆ ಈ ಹಾಡು ಇವತ್ತು ಕೂಡ ಫೇವರಿಟ್.
ಇಂಥಾ ಮಲ್ಲಿಕಾ ಶೆರಾವತ್ ಈ ಬಾರಿ ಹಿಂದಿ ''ಬಿಗ್ ಬಾಸ್'' ಮನೆಗೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರಲು ಶುರುವಾಗಿತ್ತು. ಹಲವರು ಈ ಸುದ್ದಿಯನ್ನು ನಿಜಾ ಎಂದುಕೊಂಡಿದ್ದರು. ಮಲ್ಲಿಕಾ ಶೆರಾವತ್ ಅವರ ದರ್ಶನವನ್ನು ಇನ್ಮುಂದೆ ದಿನಾ ಮನೆಯಲ್ಲಿಯೇ ಕುಳಿತು ಮಾಡಬಹುದು ಎಂದು ಸಂಭ್ರಮಿಸಿದ್ದರು.
ಆದರೆ.. ಈ ಸಂಭ್ರಮಕ್ಕೆ ಈಗ ಕೊಳ್ಳಿ ಬಿದ್ದಿದೆ. ಯಾಕೆಂದರೆ ಖುದ್ದು ಮಲ್ಲಿಕಾ ಶೆರಾವತ್ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೌದು. ''ಬಿಗ್ ಬಾಸ್''ನಲ್ಲಿ ಭಾಗವಹಿಸುತ್ತಿರುವ ಕುರಿತು ಪ್ರತಿಕ್ರಿಯೆಯನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ನೀಡಿರುವ ಮಲ್ಲಿಕಾ ಶೆರಾವತ್ '' ಬಿಗ್ಬಾಸ್''ನಲ್ಲಿ ನಾನು ಭಾಗವಹಿಸುತ್ತಿಲ್ಲ. ಯಾವತ್ತು ಭಾಗವಹಿಸುವುದು ಇಲ್ಲ ಎಂದು ಹೇಳಿದ್ದಾರೆ. ಎಲ್ಲಾ ವದಂತಿಗಳಿಗೆ ನಾನು ತೆರೆ ಎಳೆದಿದ್ದೇನೆ ಎಂದು ಭಾವಿಸುತ್ತೇನೆ, ಧನ್ಯವಾದಗಳು ಎಂದು ಹೇಳಿದ್ದಾರೆ.

ಅಂದ್ಹಾಗೇ ಕಳೆದ ವರ್ಷ ''ಬಿಗ್ ಬಾಸ್'' ಕಾರ್ಯಕ್ರಮ ನಡೆಯುವ ಸಮಯದಲ್ಲಿ ಮಲ್ಲಿಕಾ ಶೆರಾವತ್ ''ಬಿಗ್ ಬಾಸ್'' ವೇದಿಕೆಗೆ ಬಂದಿದ್ದರು. ತಮ್ಮ ''ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ''ದ ಪ್ರಚಾರವನ್ನು ಮಾಡಿದ್ದರು.
ಇನ್ನುಳಿದಂತೆ ಮಲ್ಲಿಕಾ ಶೆರಾವತ್ ಅವರಂತೆಯೇ ಹಿಂದಿಯ ಖ್ಯಾತ ನಟ ''ರಾಮ್ ಕಪೂರ್''.. ಕನ್ನಡದ ''ಭದ್ರ'' ಸೇರಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದ ''ಡೈಸಿ ಷಾ''... ಕತ್ರಿನಾ ಕೈಫ್ ಅವರ ತದ್ರೂಪಿ ಎಂದೇ ಹೆಸರುವಾಸಿಯಾದ ''ಜರೀನ್ ಖಾನ್'' ಕೂಡ ''ಬಿಗ್ ಬಾಸ್'' ವಿಷಯದಲ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ''ಬಿಗ್ ಬಾಸ್''ನಲ್ಲಿ ಭಾಗವಹಿಸುತ್ತಿಲ್ಲ.. ಭಾಗವಹಿಸುವುದೂ ಇಲ್ಲ.. ಕ್ಷಮೆ ಇರಲಿ ಎಂದು ಹೇಳಿದ್ದಾರೆ. ಮಿಕ್ಕಂತೆ ಹಿಂದಿಯಲ್ಲಿ ಈ ಬಾರಿ ಆಗಸ್ಟ್ 30ರಿಂದ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲಿದೆ.


Click it and Unblock the Notifications











