ದಶಕದ ಬಳಿಕ ಧಾರಾವಾಹಿ ಪ್ರಪಂಚದಲ್ಲಿ ರಾಘವೇಂದ್ರ ರಾಜ್ ಕುಮಾರ್
ಬಹಳ ವರ್ಷಗಳ ಬಳಿಕ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ನಟ ರಾಘವೇಂದ್ರ ರಾಜ್ ಕುಮಾರ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಫೆಬ್ರವರಿ 25 ರಿಂದ ಪ್ರಸಾರವಾಗಲಿರುವ 'ಮರಳಿ ಬಂದಳು ಸೀತೆ' ಧಾರಾವಾಹಿಯನ್ನು ಡಾ.ರಾಜ್ ಕುಮಾರ್ ಕುಟುಂಬ ನಿರ್ಮಿಸಲು ಮುಂದಾಗಿದೆ.
'ಮರಳಿ ಬಂದಳು ಸೀತೆ' ಮೂಲಕ ಮತ್ತೊಮ್ಮೆ ಕಿರುತೆರೆಗೆ ಬರ್ತಿದೆ ಡಾ.ಪಾರ್ವತಮ್ಮ ರಾಜಕುಮಾರ್ ರವರ ವಜ್ರೇಶ್ವರಿ ಸಂಸ್ಥೆಯ ಪೂರ್ಣಿಮ ಎಂಟರ್ಪ್ರೈಸಸ್. ಕತೆಗೆ ಹೆಚ್ಚು ಪ್ರಾಮುಖ್ಯತೆ ಕೊಡೋ ಪರಿಪಾಠ ಇಲ್ಲು ಮುಂದುವರೆದಿದೆ. ಸ್ಟಾರ್ ಸುವರ್ಣ ವಾಹಿನಿ ಮೂಲಕ ಇನ್ಮುಂದೆ ದಿನ ಅಭಿಮಾನಿ ದೇವರುಗಳ ಮನೆ ಮನಕ್ಕೆ ನಾವು ಬರ್ತಿದೀವಿ. ಮರಳಿ ಬಂದಳು ಸೀತೆ ಜನರ ಮನಸನ್ನು ಗೆದ್ದೆ ಗೆಲ್ಲುತ್ತೆ ಅನ್ನೋ ನಂಬಿಕೆ ಇದೆ" ಎಂದು ರಾಘವೇಂದ್ರ ರಾಜ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್ಯವರ್ಧನ ಮತ್ತು ಅಂಗಧ ಮದುವೆ ನಡೆಯುವ ಸಂದರ್ಭದಲ್ಲಿ ತಾನು ಆರ್ಯವರ್ಧನನ ಮೊದಲನೇ ಹೆಂಡತಿ ಸೀತೆ ಎಂದು ಮದುವೆ ಮನೆಗೆ ಬರುವ ಹುಡುಗಿ, ಆರ್ಯವರ್ಧನ ಕುಟುಂಬದ ಎಲ್ಲಾ ವಿವರಗಳನ್ನು ತಿಳಿದಿರುತ್ತಾಳೆ. ಆಕೆ ಹೇಳುವಂತೆ ಆರ್ಯವರ್ಧನನಿಗೆ ಮೊದಲೇ ಮದುವೆ ಆಗಿದ್ದೂ ಮೊದಲನೇ ಹೆಂಡತಿ ಸೀತೆಗೂ, ತಾನು ಸೀತೆ ಎಂದು ಹೇಳಿಕೊಂಡು ಮದುವೆ ನಿಲ್ಲಿಸಲು ಬಂದಿರುವ ಹುಡುಗಿಗೂ ಯಾವುದೇ ಹೋಲಿಕೆ ಇರುವುದಿಲ್ಲ.

ಈ ಹುಡುಗಿ ಮದುವೆ ಛತ್ರ ತಲುಪುವ ಹೊತ್ತಿಗಾಗಲೇ ಆರ್ಯವರ್ಧನ ಮತ್ತು ಅಂಗಧರ ಮದುವೆ ನಡೆದು ಹೋಗಿರುತ್ತೆ. ಮದುವೆ ನಿಲ್ಲಿಸಲು ಬಂದಿರುವ ಹುಡುಗಿಯನ್ನು ಆಚೆ ಕಳಿಸಲು ಎಲ್ಲರೂ ಮುಂದಾದಾಗ, ಆರ್ಯವರ್ಧನ ಮತ್ತು ಆತನ ಮೊದಲನೇ ಹೆಂಡತಿ ಸೀತೆಯ ಮಗಳು ತನಿಷ್ಕ ಆಕೆಯನ್ನು ತಡೆದು ಅಮ್ಮ ಎಂದು ಗುರುತಿಸುತ್ತಾಳೆ.
ತಾನೇ ಸೀತೆ ಎಂದು ಬಂದಿರುವ ಹುಡುಗಿ ನಿಜವಾಗಲು ಸೀತೆಯಾ? ಆಕೆ ಆರ್ಯವರ್ಧನ ಮತ್ತು ಅವನ ಕುಟುಂಬದವರಿಗೆ ತಾನೇ ಸೀತೆ ಎಂದು ನಂಬಿಸಲು ಯಶಸ್ವಿಯಾಗುತ್ತಾಳಾ? ಒಂದು ವೇಳೆ ಅವಳು ಸೀತೆಯಲ್ಲದಿದ್ದರೆ ಮತ್ಯಾರು? ಅವಳ ಉದ್ದೇಶವೇನು ? ಈ ಎಲ್ಲಾ ಪ್ರಶ್ನೆಗಳಿಗೆ ಧಾರಾವಾಹಿಯ ಕಂತುಗಳು ಉತ್ತರವಾಗುತ್ತೆ.

ಈ ರೋಚಕ ಕಥೆ ಮತ್ತು ಚಿತ್ರಕಥೆಯನ್ನು ಹೇಮಂತ್ ಹೆಗ್ಡೆ ಅವರು ಬರೆದಿದ್ದಾರೆ. ನಿರ್ದೇಶಕ ಧರಣೀಶ್ 'ಮರಳಿ ಬಂದಳು ಸೀತೆ'ಯನ್ನು ನಿರ್ದೇಶಿಸಿದ್ದಾರೆ. ಕೌಶಿಕ್ ನಾಗಾರ್ಜುನ್, ಮಧುಬಾಲಾ, ರಕ್ಷಿತಾ, ಅಪೇಕ್ಷಾ ಪುರೋಹಿತ್, ಪ್ರಕಾಶ್, ಅಶ್ವಿನಿ ಗೌಡ, ವಿಶಾಲ್ ರಘು, ಹೇಮಾ ಬೆಳ್ಳೂರ್, ಸಚಿನ್, ಇಂಚರ ಜೋಷಿ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಸಾಯಿ ಪ್ರಸಾದ್, ಬ್ಯುಸಿನೆಸ್ ಹೆಡ್ , ಸ್ಟಾರ್ ಸುವರ್ಣ
'ಕರ್ನಾಟಕದ ಅಗ್ರಗಣ್ಯ ನಿರ್ಮಾಣ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ಸ್ಟಾರ್ ಸುವರ್ಣ ವಾಹಿನಿಗೆ ಬಹಳ ಗೌರವದ ಸಂಗತಿ. ವಜ್ರೇಶ್ವರಿ ಕಂಬೈನ್ಸ್ ಮತ್ತು ಸ್ಟಾರ್ ಸುವರ್ಣ ಸಂಸ್ಥೆಗಳ ಮೌಲ್ಯಗಳು ಒಂದೇ ಆಗಿದೆ, ಎರಡೂ ಸಂಸ್ಥೆಗಳು ನಂಬಿರುವುದು ಮನೆಮಂದಿಯೆಲ್ಲಾ ಕುಳಿತು ನೋಡಬಲ್ಲ ಮನರಂಜನೆಯನ್ನ. 'ಮರಳಿ ಬಂದಳು ಸೀತೆ' ಉತ್ತಮ ಕಥಾವಸ್ತು ಹೊಂದಿರುವ ಕೌಟುಂಬಿಕ ಧಾರಾವಾಹಿ. ಇದರಲ್ಲಿ ವೀಕ್ಷಕರನ್ನು ತಲ್ಲೀನಗೊಳಿಸುವ ಕನ್ನಡದ ಸ್ವಂತ ಕಥೆಯಿದೆ "
'ಮರಳಿ ಬಂದಳು ಸೀತೆ' ಫೆಬ್ರವರಿ 25ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











