ಸದ್ಯದಲ್ಲೇ ಮಿಲನ ಪ್ರಕಾಶ್ ಧಾರಾವಾಹಿ 'ಕನಕ' ಶುರು

ಕನಕ ಮೂಲತಃ ಕಂಡಕ್ಟರ್ ಒಬ್ಬಳ ಜೀವನದ ಏಳುಬೀಳುಗಳ ಕಥೆ. ಕನಕಳ ತಂದೆ ಕಂಡಕ್ಟರ್. ಪೊಲೀಸ್ ಆಗಬೇಕೆಂಬ ಆಸೆ ಹೊಂದಿದ್ದ ಕನಕಳಿಗೆ ಅಕಸ್ಮಾತ್ ಅವಳ ತಂದೆಯ ಉದ್ಯೋಗವನ್ನೇ ಮುಂದುವರಿಸುವ ಅನಿವಾರ್ಯತೆ ಬರುತ್ತದೆ. ಇದರಿಂದ ಇಷ್ಟವಿಲ್ಲದಿದ್ದರೂ ಕಂಡಕ್ಟರ್ ಆಗಬೇಕಾಗುತ್ತದೆ. ಅದೇ ಬಸ್ನ ಡ್ರೈವರ್ ಮಗನಿಗೆ ಕನಕಳ ಮೇಲೆ ಪ್ರೀತಿ ಉಂಟಾಗುತ್ತದೆ.
ಹೀಗಿರುವಾಗ ಒಂದು ದಿನ ಶ್ರೀಮಂತ ವ್ಯಕ್ತಿಯೊಬ್ಬ 18 ವರ್ಷಗಳ ಹಿಂದೆ ಕಳೆದುಹೋದ ತನ್ನ ಮಗಳನ್ನು ಹುಡುಕಿಕೊಟ್ಟವರಿಗೆ ಲಕ್ಷಾಂತರ ರೂಪಾಯಿ ಬಹುಮಾನ ಕೊಡುವುದಾಗಿ ಜಾಹಿರಾತು ಕೊಟ್ಟಿರುತ್ತಾನೆ. ಅದನ್ನು ನೋಡಿದ ಕನಕ, ಆ ಹುಡುಗಿಯ ಜಾಡು ಹುಡುಕಿ ಹೊರಡುತ್ತಾಳೆ. ಇಲ್ಲಿಂದ ಮುಂದೆ ಅವಳ ಜೀವನದ ಬಸ್ ಎಲ್ಲೆಲ್ಲಿ ಯಾವ್ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದೇ ಕುತೂಹಲಕರ.
ಮಿಲನ, ಖುಷಿ, ರಿಷಿ, ವಂಶಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿದ್ದಲ್ಲದೇ 'ಲಕುಮಿ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಭಾರೀ ಕಂಪನ ಸೃಷ್ಟಿಸಿದ ನಿರ್ದೇಶಕ ಪ್ರಕಾಶ್ ಕನಕ ಸಾರಥ್ಯ ವಹಿಸಿಕೊಂಡಿದ್ದಾರೆ. ಅವರೇ ರೂಪಿಸಿರುವ ಅತ್ಯಂತ ಹೊಸ ಬಗೆಯ ಕಥೆಯನ್ನು ನವೀನ ಮಾದರಿಯಲ್ಲಿ ನಿರೂಪಿಸುವ ಇರಾದೆ ಅವರದು.
ಸಮಾಜದ ಕೆಳಮಧ್ಯಮ ಸ್ತರದ ಜೀವನವನ್ನು ಅನಾವರಣಗೊಳಿಸುವ ಈ ಧಾರಾವಾಹಿ, ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ. ಈ ನಿಟ್ಟಿನಲಿ ಇದೊಂದು ಪ್ರಯೋಗಾತ್ಮಕ ಧಾರಾವಾಹಿ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಡಾ. ಗೌತಮ ಮಾಚಯ್ಯ.
ಬರುವ ತಿಂಗಳು, ಜುಲೈ 2, 2012 ರಿಂದ ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಈ ವೇಳೆಯಲ್ಲಿ ಪ್ರಸಾರವಾಗುತ್ತಿರುವ ಮೊದಲ ಧಾರಾವಾಹಿ ಕನಕ. ಇದು ವಾಹಿನಿಗೆ ಒಂದು ಮೈಲಿಗಲ್ಲು. ಕನಕ ಹೊಸ ಇತಿಹಾಸ ಸೃಷ್ಟಿಸುವ ಭರವಸೆ ಇದೆ. ಎನ್ನುತ್ತಾರೆ ಜೀ ಕನ್ನಡ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್.
ಲಕುಮಿ ಖ್ಯಾತಿಯ ಸುಷ್ಮಾ ಕನಕ ಧಾರಾವಾಹಿಯಲ್ಲಿ ಕಂಡಕ್ಟರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಋತು, ಗೌತಮ್, ಬಿ.ಎಂ.ವೆಂಕಟೇಶ್, ಖುಷಿ, ವೀಣಾ ವೆಂಕಟೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಶರವಣ ಟೆಲಿಫಿಲಮ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಯ ಸಂಚಿಕೆ ನಿರ್ದೇಶಕರು ಭಾರತೀಶ್. ಚಿತ್ರಕಥೆ: ಶಂಕರ್ ಬಿಲ್ಲೇಮನೆ, ಸಂಭಾಷಣೆ: ಕೇಶವ ಚಂದ್ರ ಅವರದು. (ಒನ್ ಇಂಡಿಯಾ ಕನ್ನಡ)


Click it and Unblock the Notifications











