ತೆರೆಯ ಮೇಲೆ ಆಟೋ ಓಡಿಸಿದ್ದ 'ಮಿಥುನ'ರಾಶಿ; ಈಕೆ ದಕ್ಷಿಣ ಭಾರತದ ಕಿರುತೆರೆಯ ಸ್ಟಾರ್!
ಕನ್ನಡ ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕ ನಟ ನಟಿಯರು ಮುಂದಿನ ದಿನಗಳಲ್ಲಿ ಪರಭಾಷೆಯತ್ತ ಮುಖ ಮಾಡುವುದು ಸರ್ವೇಸಾಮಾನ್ಯ. ಈಕೆಯೂ ಅಷ್ಟೇ.. ಕನ್ನಡ, ತಮಿಳು, ಮಲಯಾಳಂ ಕಿರುತೆರೆಯ ನಂತರ ಇದೀಗ ತೆಲುಗು ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ಈಕೆಯನ್ನು ಚರ್ತುಭಾಷಾ ತಾರೆ ಎಂದು ಕರೆದರೆ ತಪ್ಪಾಗಲಾರದು. ಅಂದ ಹಾಗೇ ಈಕೆಯ ಹೆಸರು ವೈಷ್ಣವಿ.
ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಥುನರಾಶಿ' ಧಾರಾವಾಹಿಯಲ್ಲಿ ನಾಯಕಿ ರಾಶಿಯಾಗಿ ಅಭಿನಯಿಸಿದ್ದ ವೈಷ್ಣವಿ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದ ಬೆಡಗಿ. ಅಂದ ಹಾಗೇ ಜವಾಬ್ದಾರಿಯುತ ಹೆಣ್ಣುಮಗಳ ಪಾತ್ರಕ್ಕೆ ಜೀವ ತುಂಬಿದ ವೈಷ್ಣವಿ ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕು ಎಂಬ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಹೌದು.

ಹೌದು, ಸಣ್ಣ ವಯಸ್ಸಿನಲ್ಲಿಯೇ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ರಾಶಿ ಆಟೋ ಡ್ರೈವರ್ ಕೂಡ ಹೌದು. ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದ ರಾಶಿ ಬದುಕಿನಲ್ಲಿ ಏನೇ ಕಷ್ಟಗಳು ಬಂದರೂ ಅದನ್ನು ದಿಟ್ಟತನದಿಂದ ಎದುರಿಸಿದ ದಿಟ್ಟ ಮಹಿಳೆ. ಒಟ್ಟಿನಲ್ಲಿ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ವೈಷ್ಣವಿ.
ಮುಂದೆ 'ಮಿಥುನರಾಶಿ' ಧಾರಾವಾಹಿಯು ತಮಿಳು ಭಾಷೆಗೆ ರಿಮೇಕ್ ಆಗಿದ್ದು, ಅದರಲ್ಲಿ ನಾಯಕಿಯಾಗಿ ವೈಷ್ಣವಿ ಅಭಿನಯಿಸಿದ್ದು ವಿಶೇಷ. ಮುಂದೆ ಮಲಯಾಳಂ ಕಿರುತೆರೆಯತ್ತ ಮುಖ ಮಾಡಿದ ಈಕೆ ಅಲ್ಲೂ ಕೂಡಾ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮಲಯಾಳಂನ 'ಕಣ್ಣಲ್ಪೂವು' ಎಂಬ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿರುವ ವೈಷ್ಣವಿ ತೆಲುಗು ಕಿರುತೆರೆಗೆ ಕಾಲಿಟ್ಟಾಗಿದೆ.
ತೆಲುಗಿನ 'ಸೀತಾರಾಮುಡಿ ಕತ್ನಂ' ಧಾರಾವಾಹಿಯಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿರುವ ವೈಷ್ಣವಿ ಅವರು ಚರ್ತುಭಾಷಾ ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸಿದ ಬೆಡಗಿ. ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ ಮೂಡಿಸಿಕೊಂಡಿದ್ದ ವೈಷ್ಣವಿ ಅವರಿಗೆ ನಟನಾ ಜಗತ್ತಿನಲ್ಲಿ ಕಾಣಿಸಿಕೊಳ್ಳುವ ಕನಸಿತ್ತು.

ಅಂತೆಯೇ ಹಿರಿತೆರೆ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಈಕೆ ಮೊದಲು ನಟಿಸಿದ್ದು 'ಶಾಲಿನಿ ಐಪಿಎಸ್' ಸಿನಿಮಾದಲ್ಲಿ. ಮುಂದೆ ಕುಲದೀಪ್ ನಿರ್ದೇಶನದ 'ಧೂಮ' ಕಿರುಚಿತ್ರದಲ್ಲಿ ಬಣ್ಣ ಹಚ್ಚಿದ್ದ ವೈಷ್ಣವಿ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು ವಿನೋದ್ ದೋಂಡಾಳೆ ಅವರ 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ. ನಂತರ 'ಮಿಥುನರಾಶಿ' ಧಾರಾವಾಹಿಯ ರಾಶಿಯಾಗಿ ಬದಲಾದ ಈಕೆ ಕೆ ಎಲ್ ರಾಜಶೇಖರ್ ನಿರ್ದೇಶನದ 'ಉಂಡೆನಾಮ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











