500ನೇ ಸಂಚಿಕೆಯತ್ತ ಜನಪ್ರಿಯ ಧಾರಾವಾಹಿ "ಮುದ್ದುಲಕ್ಷ್ಮಿ"
ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ "ಮುದ್ದುಲಕ್ಷ್ಮಿ" ತನ್ನ ಯಶಸ್ವಿ 500 ಸಂಚಿಕೆಗಳನ್ನು ಪೂರೈಸುತ್ತಿದೆ. ಕಪ್ಪು ಬಣ್ಣದಿಂದ ಹುಟ್ಟಿದ ಹೆಣ್ಣು ಮಗಳೊಬ್ಬಳು ಜೀವನದಲ್ಲಿ ಪಡುವ ಪಾಡುಗಳನ್ನು ದಿಟ್ಟವಾಗಿ ಎದುರಿಸಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠ ಎಂದು ಸಾರುವ ಮುದ್ದುಲಕ್ಷ್ಮಿ ಧಾರಾವಾಹಿಯನ್ನು 2018ರ ಜನವರಿ 22ರಂದು ವೀಕ್ಷಕರಿಗೆ ನೀಡಿತ್ತು ಸ್ಟಾರ್ ಸುವರ್ಣ.
ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆದ ಮುದ್ದುಲಕ್ಷ್ಮಿ ಇದೀಗ ಕರುನಾಡ ಮನೆಮಗಳೇ ಆಗಿದ್ದಾಳೆ. ಇದೆ ಸೆಪ್ಟಂಬರ್ 25ರಂದು "ಮುದ್ದುಲಕ್ಷ್ಮಿ" ಧಾರಾವಾಹಿಯ 500ನೆ ಸಂಚಿಕೆ ಪ್ರಸಾರವಾಗುತ್ತಿದೆ. ಬಹುಕಾಲ ರಹಸ್ಯವಾಗೆ ಇದ್ದ ದೃಷ್ಠಿ ಮುದ್ದುಲಕ್ಷ್ಮಿಯ ಮಗಳೆಂಬ ಸತ್ಯ ಸೌಂದರ್ಯದೇವಿಗೆ ತಿಳಿಯುವ ಮಹಾಘಟ್ಟ ಒಂದೆಡೆಯಾದರೆ ಧೃವಂತ್ ಗೆ ಅಡಿಗೆಯಮ್ಮ ಬೇರೆ ಯಾರು ಅಲ್ಲ ತಾನು ನಖಶಿಖಾಂತ ದ್ವೇಷಿಸುತ್ತಿರುವ ತನ್ನ ಹೆಂಡತಿ ಮುದ್ದುಲಕ್ಷ್ಮಿ ಎಂಬ ವಿಚಾರ ಬಯಲಾಗುವುದು ಇನ್ನೊಂದು ಘಟ್ಟ.

ಈ ಎರಡು ಮಹಾರಹಸ್ಯಗಳ ಅನಾವರಣದಿಂದ ಮುದ್ದುಲಕ್ಷ್ಮಿ ರೋಚಕ ತಿರುವು ಪಡೆದುಕೊಳ್ಳಲಿದೆ. ಈ ತಿರುವು ಕಥಾನಾಯಕಿ ಲಕ್ಷ್ಮಿಯ ಜೀವನದ ದಿಕ್ಕನ್ನೆ ಬದಲಿಸುತ್ತದೆ. ತಳಿರು ಕ್ರಿಯೇಷನ್ಸ್ ಲಾಂಚನದಡಿ ಹರೀಶ್ ಬಾಬು ಮಾಗಡಿ ನಿರ್ಮಿಸುತ್ತಿರುವ ಮುದ್ದುಲಕ್ಷ್ಮಿ ಧಾರಾವಾಹಿಯ ತಾರಾ ಬಳಗದಲ್ಲಿ ಆಶ್ವಿನಿ, ಚರಿತ್, ಅರ್ಚನ, ಮೈಕೋ ಶಿವು, ತನುಜ, ರಾಮಸ್ವಾಮಿ, ಅನು ಪೂವಮ್ಮ, ರಕ್ಷಿತ್, ನಂದಿನಿ, ಅನುಷ್ಕ ಮತ್ತು ಮಾನಿಕ ನಟಿಸುತ್ತಿದ್ದಾರೆ.
ಮುದ್ದುಲಕ್ಷ್ಮಿಧಾರಾವಾಹಿಯನ್ನು ಪ್ರೀತು ರಾಜು (ಆಲದಹಳ್ಳಿ)ನಿರ್ದೇಶಿಸುತ್ತಿದ್ದಾರೆ.ಸ. ಹರೀಶ್ ರವರ ಸಂಭಾಷಣೆ,ಕಿರಣ್ ಕುಮಾರ್ ಕುರಿಹಳ್ಳಿ ಸಂಕಲನ ಮತ್ತು ರಘು ಎಸ್.ಸಿ ಛಾಯಾಗ್ರಹಣ ಈ ಧಾರಾವಾಹಿಗೆ ಇದೆ.


Click it and Unblock the Notifications











