ಮುದ್ದುಮಣಿಗಳು: ದೃಷ್ಟಿ-ಸೃಷ್ಟಿ ಒಂದಾಗಿ ಆಯ್ತು.. ಅಹಲ್ಯಾ ಮುಖ ನೋಡುವುದಕ್ಕೆ ಆಗುತ್ತಿಲ್ಲ!
ಆಸ್ತಿ ಆಸೆಗಾಗಿ ಮುದ್ದುಲಕ್ಷ್ಮೀಯ ಮಕ್ಕಳನ್ನು ಅಗಲಿಸಿದ್ದಳು ಅಹಲ್ಯಾ. ಆದರೆ ಭೂಮಿಗೆ ತನ್ನ ಹುಟ್ಟುಹಬ್ಬದ ದಿನದಂದು ಎಲ್ಲಾ ಸತ್ಯ ಗೊತ್ತಾಗಿತ್ತು. ಅಪ್ಪ ಅಮ್ಮನ ಸಾವಿಗೆ ಅಕ್ಕ ಕಾರಣ ಅಲ್ಲ ಎಂಬುದು. ಬಳಿಕ ಭೂಮಿ ಸಂಪೂರ್ಣ ಬದಲಾದಳು. ಆದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಆದರೂ ಅಕ್ಕನ ಮೇಲಿನ ಪ್ರೀತಿಯನ್ನು ಮನಸ್ಸಲ್ಲಿಯೇ ಇಟ್ಟುಕೊಂಡು ಕೊರಗುತ್ತಿದ್ದಳು. ಆದರೆ ಅಹಲ್ಯಾ ಮಾಡಿದ ಕೆಡುಕುತನವೇ ಅಕ್ಕ ತಂಗಿಯರಿಗೆ ವರವಾಗಿದೆ.
ದೃಷ್ಟಿ ಮತ್ತು ಭೂಮಿ ಒಂದಾಗಬಾರದು ಅಂತ ಅಹಲ್ಯಾ ಒಳಗೊಳಗೆ ಪ್ಲ್ಯಾನ್ ಮಾಡಿದ್ದಳು. ಭೂಮಿಯ ಜೊತೆಗೆ ತಾನೂ ತುಂಬಾ ಒಳ್ಳೆಯವಳಂತೆ ನಟನೆ ಮಾಡಿದಳು. ಭೂಮಿಯ ಆಸ್ತಿ ಒಡೆಯುವುದಕ್ಕೆ ಪ್ಲ್ಯಾನ್ ಮಾಡಿದ್ದಳು. ಆದರೆ ಮನೆಯವರೆಲ್ಲ ನಾಟಕವಾಡುವಾಗ ಅಹಲ್ಯಾ ಬೇಕಂತಾನೆ ದೃಷ್ಟಿಗೆ ಬ್ಯಾಟ್ ನಿಂದ ಹೊಡೆದಿದ್ಳು. ಆ ಒಂದು ಘಟನೆಯೇ ಅಕ್ಕ ತಂಗಿಯರನ್ನು ಒಂದು ಮಾಡಿತ್ತು.

ದೃಷ್ಟಿಗಾಗಿ ಮನೆಯೆಲ್ಲಾ ಅಲಂಕಾರ
ಅಹಲ್ಯಾ ಮಾಡಿದ ಕಡುಕುತನದಿಂದ ದೃಷ್ಟಿ ಆಸ್ಪತ್ರೆ ಸೇರಬೇಕಾಯಿತು. ಸಾವು ಬದುಕಿನ ನಡುವೆ ಹೋರಾಟ ನಡೆಸಬೇಕಾಗಿ ಬಂತು. ಈ ಮಧ್ಯೆ ಭೂಮಿಯನ್ನು ತುಂಬಾ ನೆನೆಸಿಕೊಂಡಿದ್ದಳು. ಭೂಮಿ ಕೂಡ ಆಸ್ಪತ್ರೆಗೆ ಹೋಗಿ ಧೈರ್ಯ ತುಂಬಿ ಬಂದಿದ್ದಳು. ಈಗ ಮನೆಗೆ ಕರೆದುಕೊಂಡು ಬಂದಾಗ ಅದ್ಧೂರಿ ಸ್ವಾಗತ ಕೋರಿದ್ದಾಳೆ. ಮನೆಯನ್ನೆಲ್ಲಾ ಬಲೂನ್ಗಳಿಂದ ಅಲಂಕಾರ ಮಾಡಿ, ನಡೆಯುವ ಹಾದಿಯಲ್ಲಿ ಹೂವಿನ ಹಾಸಿಗೆ ಹಾಸಿ ಸ್ವಾಗತ ಕೋರಿದ್ದಾಳೆ. ಇದನ್ನು ಕಂಡು ದೃಷ್ಟಿ ಖೂಷಿಯಾಗಿದ್ದಾಳೆ.

ದೃಷ್ಟಿ ಎಂಟ್ರಿಗೆ ಅಹಲ್ಯಾ ಕಂಗಾಲು
ದೃಷ್ಟಿಯನ್ನು ಹೊರಗಡೆಯೇ ನಿಲ್ಲಿಸಿ ಬಂದಿದ್ದಳು ಭೂಮಿ. ನಾಣು ಹೇಳುವ ತನಕ ಒಳಗೆ ಬರುವಂತಿಲ್ಲ ಎಂದು ಆರ್ಡರ್ ಮಾಡಿದ್ದಳು. ಹಾಗೆ ಹೇಳಿ ಬಂದವಳೇ ಮನೆಯಲ್ಲೆಲ್ಲಾ ಅಕ್ಕನಿಗೆ ಬೇಸರವಾಗುವಂತ ವಸ್ತುವನ್ನೆಲ್ಲಾ ಎತ್ತಿ ಬಿಸಾಡಿದಳು. ಒಂದು ಮನೆಯಲ್ಲಿ ಎರಡೆರಡು ಭಾಗವಾಗಿತ್ತು. ಆ ಭಾಗಕ್ಕೆ ಅಡ್ಡ ಮಾಡಲಾಗಿತ್ತು. ಅಡ್ಡವಾಗಿದ್ದ ಎಲ್ಲಾ ವಸ್ತುಗಳನ್ನು ಭೂಮಿ ಮೊದಲು ಹೊರಗಡೆ ಬಿಸಾಡಿದಳು. ಅದನ್ನು ಕಂಡು ಮನೆಯವರೆಲ್ಲಾ ಖುಷಿ ಪಟ್ಟರೆ ಅಹಲ್ಯಾ ಮಾತ್ರ ಹೊಟ್ಟೆ ಉರಿದುಕೊಳ್ಳುತ್ತಿದ್ದಳು. ಇನ್ನು ದೃಷ್ಟಿಯನ್ನು ಆರತಿ ಎತ್ತಿ ಒಳಗೆ ಕರೆದುಕೊಂಡಾಗಂತು ಅಹಲ್ಯ ಮುಖವನ್ನು ನೋಡುವುದಕ್ಕೂ ಆಗಲಿಲ್ಲ.

ದೃಷ್ಟಿಗೆ – ಸೃಷ್ಟಿ ಸಿಕ್ಕಿದ ಖುಷಿ
ಭೂಮಿ ತನ್ನ ಸ್ವಂತ ತಂಗಿ ಎಂದು ಗೊತ್ತಾದ ಮೇಲಂತೂ ದೃಷ್ಟಿಗೆ ಜಗತ್ತಿನಲ್ಲಿ ಬೇರೆ ಸಂತೋಷವೇ ಇಲ್ಲ ಎಂಬಂತೆ ಆಗಿತ್ತು. ಅಂದಿನಿಂದ ಅವಳ ಜೊತೆ ಚೆನ್ನಾಗಿ ಇರುವುದಕ್ಕೆ ಎಷ್ಟೆ ಪ್ರಯತ್ನ ಪಟ್ಟರು ಅಹಲ್ಯಾಳ ಕೆಟ್ಟತನದಿಂದ ಅಕ್ಕ ತಂಗಿಯರು ಒಂದಾಗುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಎಲ್ಲವೂ ಸರಿಯಾಗಿದ್ದು, ಈಗ ಅಕ್ಕ ತಂಗಿಯರು ಒಂದಾಗಿದ್ದಾರೆ. ಭೂಮಿಯ ಹೆಸರು ಈ ಮೊದಲು ಸೃಷ್ಟಿ ಅಂತ ಇತ್ತು. ಈಗ ದೃಷ್ಟಿ ಮನೆಗೆ ಬಂದಿರುವ ಖುಷಿಯಲ್ಲಿರುವ ಭೂಮಿ ನಾನು ನಿನ್ನ ಸೇವೆ ಮಾಡುತ್ತೀನಿ. ನಿನಗೆ ಏನು ಬೇಕೋ ಅದನ್ನ ನನ್ನ ಬಳಿಯೇ ಕೇಳು ಎಂದಿದ್ದಾಳೆ.

ಅಹಲ್ಯಾನ ಇಕ್ಕಟ್ಟಿಗೆ ಸಿಲುಕಿಸಿದ ಭೂಮಿ
ಈ ಮಧ್ಯೆ ಅಕ್ಕ ತಂಗಿಯರು ಖುಷಿ ಖುಷಿಯಾಗಿ ಮಾತಾಡುತ್ತಾ ಕುಳಿತಿರುವಾಗ ದೃಷ್ಟಿ ಭೂಮಿಗೆ ಒಂದು ಮಾತು ಹೇಳ್ತೀನಿ ಬೇಜಾರು ಮಾಡಿಕೊಳ್ಳಬೇಡ ಅಂತ ಹೇಳಿ, ನಾವಿಬ್ಬರು ಇಷ್ಟು ಚೆನ್ನಾಗಿ ಇರುವುದು ಅಹಲ್ಯಾ ಅತ್ತೆಗೆ ಇಷ್ಟವಾಗುತ್ತಿಲ್ಲ ಎಂದಿದ್ದಾಳೆ. ಆದರೆ ಭೂಮಿ ಅದನ್ನು ನಂಬುತ್ತಿಲ್ಲ. ಭೂಮಿಗೆ ಅತ್ತೆ ಮೇಲೆ ನಂಬಿಕೆ ಜಾಸ್ತಿ. ಹೀಗಾಗಿ ಅಹಲ್ಯಾಳನ್ನು ದೃಷ್ಟಿ ಮುಂದೆ ನಿಲ್ಲಿಸಿ, ನಾವಿಬ್ಬರನ್ನು ನೋಡಿ ನಿಮಗೆ ಬೇಸರವಾಗಿದೆಯಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಅಹಲ್ಯಾ ತುಂಬಾ ಕಿಲಾಡಿತನದಿಂದಲೇ ಯೋಚಿಸಿದ್ದಾಳೆ. ಈಗ ಇಲ್ಲ ಎಂದರೆ ಮುಂದೆ ನನಗೆ ಕಷ್ಟವಾಗುತ್ತೆ ಎಂದು ಅರ್ಥ ಮಾಡಿಕೊಂಡ ಅಹಲ್ಯಾ, ಇಲ್ಲಮ್ಮ ನೀವಿಬ್ಬರು ಹೀಗೆ ಒಂದಾಗಲಿ ಅಂತ ನಾನು ಬಹಳ ದಿನದಿಂದ ಬಯಸುತ್ತಿದ್ದೆ ಎಂದೇ ಹೇಳಿದ್ದಾಳೆ.


Click it and Unblock the Notifications











