ಬೆಳಗಾವಿ ದಂಪತಿಯ ಮಗುವಿಗೆ ''ಕನ್ನಡ'' ಎಂದು ಹೆಸರಿಟ್ಟ ನಾದಬ್ರಹ್ಮ ಹಂಸಲೇಖ
ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಭಾವುಟ ಹಾರಿಸಲು ಕನ್ನಡ ಪರ ಹೋರಾಟಗಾರರು ಪಟ್ಟ ಶ್ರಮ ಬಹಳ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ, ಮರಾಠ ಪ್ರಾಭಾವವಿರುವ ಬೆಳಗಾವಿಯ ಗಡಿನಾಡ ದಂಪತಿ ತಮ್ಮ ಮಗುವಿಗೆ ''ಕನ್ನಡ'' ಎಂದು ನಾಮಕರಣ ಮಾಡಿ ಕನ್ನಡತನ ಮೆರೆದಿದ್ದಾರೆ.
ಅಂದ್ಹಾಗೆ, ಈ ಮಗುವಿಗೆ ಹೆಸರಿಟ್ಟಿದ್ದು ಕನ್ನಡ ಸಂಗೀತ ಲೋಕದ ನಾದಬ್ರಹ್ಮ ಹಂಸಲೇಖ. ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ನಡೆದ ಅವಿಸ್ಮರಣೀಯ ಕ್ಷಣದಲ್ಲಿ ಹಂಸಲೇಖ ಅವರು ಈ ಮಗುವಿಗೆ ''ಕನ್ನಡ'' ಎಂದು ನಾಮಕರಣ ಮಾಡಿದರು. ಇದು ಕನ್ನಡಾಭಿಮಾನಿಗಳ ಹೃದಯ ಮುಟ್ಟಿದೆ. ಅಷ್ಟಕ್ಕೂ, ಯಾರು ಆ ದಂಪತಿ? ಮುಂದೆ ಓದಿ....

ಬೆಳಗಾವಿಯ ನಿಪ್ಪಾಣಿ ದಂಪತಿ
ಬೆಳಗಾವಿಯ ನಿಪ್ಪಾಣಿಯಲ್ಲಿರುವ ಕಾಗವಾಡ ನಿವಾಸಿ ಸಿದ್ದು ಗೌಡ ಬಸಗೌಡ ಪಾಟೀಲ್ ಹಾಗೂ ಅಶ್ವಿನಿ ದಂಪತಿಯ ಅಪ್ಪಟ ಕನ್ನಡಿಗರು. ಮರಾಠ ಪ್ರಾಭಾವವಿರುವ ಬೆಳಗಾವಿಯ ಗಡಿನಾಡ ಕನ್ನಡತನಕ್ಕೆ ಪ್ರತಿರೂಪವಾಗಿದ್ದಾರೆ. ಈ ದಂಪತಿ ತಮ್ಮ ಚೊಚ್ಚಲ ಮಗುವಿಗೆ '"ಕನ್ನಡ ವೃದ್ದಿ'' ಎಂದು ಎಂದು ಹೆಸರಿಡಲಾಗಿದೆ. ನಾದಬ್ರಹ್ಮ ಡಾ. ಹಂಸಲೇಖ ಹಾಗೂ ಕನ್ನಡ ಪುರೋಹಿತರಾದ ಹಿರೇಮಗಳೂರು ಕಣ್ಣನ್ ಅವ್ರ ಸಾರಥ್ಯದಲ್ಲಿ ಒಂದು ತಿಂಗಳ ಮಗುವಿಗೆ ''ಕನ್ನಡ ವೃದ್ಧಿ'' ಎಂದು ನಾಮಕರಣ ಮಾಡಿದ್ದಾರೆ.

'ಕನ್ನಡತಿ' ಧಾರಾವಾಹಿಯ ಅಭಿಮಾನಿಗಳು
ರಂಜನಿ ರಾಘವನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಕನ್ನಡತಿ' ಧಾರಾವಾಹಿಗೆ ಈ ದಂಪತಿಗಳು ಅಭಿಮಾನಿಗಳು. ಈ ಹಿನ್ನೆಲೆಯಲ್ಲಿ ಕಲರ್ಸ್ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕರೆಯಿಸಲಾಯಿತು. ಈ ವೇಳೆ ತಮ್ಮ ಚೊಚ್ಚಲ ಮಗುವಿಗೆ ಹಂಸಲೇಖ ಅವರ ಬಳಿಕ ಹೆಸರಿಡಲು ಕೇಳಿಕೊಂಡಾಗ, ನಾದಬ್ರಹ್ಮ ''ಕನ್ನಡ'' ಎಂದು ಕೂಗಿದರು. ಈ ಹೆಸರು ಕೇಳಿ ದಂಪತಿ ಸಹ ಖುಷಿಯಾದರು.

ಬಾಲ್ಯದಿಂದಲೇ ಕನ್ನಡದ ಕಿಚ್ಚು ಹೊಂದಿದ್ದರು
ಮಗುವಿನ ತಂದೆ ಸಿದ್ದು VSMS ಸೋಮಶೇಖರ್ ಆರ್ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾಗಿ ಕಾರ್ಯನಿರ್ವಣೆ ಮಾಡ್ತಿದ್ದಾರೆ. ಬೆಳಗಾವಿಯ ಮಹಾರಾಷ್ಟ್ರದ ಗಡಿಯಲ್ಲಿರುವ ಕಾಗಾವಾಡದವರು ಕನ್ನಡ ನೆಲದಲ್ಲಿ ಮರಾಠಿ ಪ್ರಭಾವ ಹೆಚ್ಚಾಗಿ ಬಾಲ್ಯದಿಂದಲೇ ತಮ್ಮ ಕನ್ನಡ ಮೇಷ್ಟ್ರ ಸ್ಫೂರ್ತಿಯಿಂದ ಕನ್ನಡಾಭಿಮಾನದ ಕಿಚ್ಚನ್ನ ಹೊತ್ತಿಸಿಕೊಂಡರು. ಬೆಂಗಳೂರಿನ PEST ಕಾಲೇಜಿಗೆ ಉನ್ನತ ವ್ಯಾಸಂಗಕ್ಕಾಗಿ ಬಂದಾಗ ಇಲ್ಲಿನ ಬಹುಭಾಷಾ ಸಂಸ್ಕೃತಿಯ ಕಂಡು ಸಿಡಿದು, ಕನ್ನಡದ ಮಹತ್ವ ಮತ್ತು ಹೆಮ್ಮೆಯನ್ನ ಪರಭಾಷಿಕರಿಗೆ ಸಾರಿ ಹೇಳುತ್ತಾ ಬಂದರು.

ಮರಾಠಿಗರಿಂದ ಕನ್ನಡ ರಾಜ್ಯೋತ್ಸವ ಆಚರಿಸಿದ ವ್ಯಕ್ತಿ
ಇವರ ಕಾಲೇಜಿನಲ್ಲಿ 1500 ವಿದ್ಯಾರ್ಥಿಗಳು ಮರಾಠಿಗರಾದರೆ, 1500 ವಿದ್ಯಾರ್ಥಿಗಳು ಕನ್ನಡದವರಾಗಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನ ಬ್ಲ್ಯಾಕ್ ಡೇ ಆಚರಿಸುವ ಬೆಳಗಾವಿ ಗಡಿಯಲ್ಲಿ, ಇಂದು ಅದೇ ಮರಾಠಿ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವವನ್ನ ಆಚರಿಸುತ್ತಿದ್ದಾರೆ. ಮಾರಾಠಿಗರನ್ನ ದ್ವೇಷಿಸದೇ ಪ್ರೀತಿಸುತ್ತಾ ನೆಲದ ಸೊಗಡನ್ನ ಸೂಸುವಂತೆ ಮಾಡಿ, ಕನ್ನಡ ಪ್ರೇಮವನ್ನ ಅವ್ರಲ್ಲಿ ಮೋಡಿಸಿ ಎಲೆ ಮರಿಕಾಯಿಯಂತೆ ತಮ್ಮದೇ ಹಾದಿಯಲ್ಲಿ ಕನ್ನಡ ಸೇವೆಸಲ್ಲಿಸುತ್ತಿದ್ದಾರೆ.

ಮಗು ತಾಯಿ ಅಶ್ವಿನಿ ಮಹಾದೇವ್ ಬುಲಾಬುಲಿ
ಸಿದ್ದು-ಅಶ್ವಿನಿ ಮದುವೆಯಾಗಿ ಎಂಟು ವರ್ಷಗಳ ನಂತರ ಈಗ ನವೆಂಬರ್ 26, 2020ರಂದು ಹೆಣ್ಣು ಮಗು ಹುಟ್ಟಿದೆ. ಅಪ್ಪಟ ಕನ್ನಡ ಪ್ರೇಮಿಗಳಾಗಿರುವ ಈ ದಂಪತಿ, ಮೊದಲು ಕನ್ನಡತಿ ಧಾರಾವಾಹಿಯನ್ನ ಸಾಮಾನ್ಯವಾಗಿ ನೋಡ್ತಿದ್ರು, ಆದ್ರೆ ನಮ್ಮ ಉದ್ದೇಶ ಮತ್ತು ಅಭಿಯಾನದ ಕುರಿತು ತಿಳಿಸಿದ ಮೇಲೆ ಈಗ ಇವರು ಕನ್ನಡತಿ ಧಾರಾವಾಹಿಯ ಅಪ್ಪಟ ಅಭಿಮಾನಿಗಳಾಗಿದ್ದಾರೆ. ಕನ್ನಡ ಭಾಷೆ ಎಷ್ಟು ಇವ್ರನ್ನ ಆವರಿಸಿಕೊಂಡಿದೆಯೋ, ಇದೀಗ ಕನ್ನಡತಿ ಧಾರಾವಾಹಿ ತಮ್ಮ ಜೀವನದ ಕನಸಿನ ಕೂಸಿಗೆ ಕನ್ನಡ ಅಂತ ಹೆಸರಿಡಲು ಪ್ರೇರೇಪಿಸಿದೆ, ಸ್ಫೂರ್ತಿ ತುಂಬಿದೆ. ಈ ವಿಶೇಷ ಸಂಚಿಕೆಯನ್ನ ಇದೇ 15-16-17ನೇ ತಾರೀಖು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ.


Click it and Unblock the Notifications











