ಚಾರ್ಟರ್ಡ್ ಅಕೌಂಟೆಂಟ್ ಆಗಬೇಕಾದವರು ನಟಿಯಾದ ಕತೆ: ಮೈಸೂರಿನ ತೇಜಸ್ವಿನಿ ಜರ್ನಿಯೇ ಅದ್ಭುತ!
ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಸುಂದರವಾದ ಫೋಟೊಗಳನ್ನು ಹಂಚಿಕೊಳ್ಳುವುದರ ಮೂಲಕ ಹಲವಾರು ಕಿರುತೆರೆ ಹಾಗೂ ಸಿನಿಮಾ ನಟಿಯರು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಹೀಗೆ ಹಲವಾರು ನಟಿಯರಲ್ಲಿ ಕೆಲವರು ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದರೂ, ಕನಸನ್ನು ಬೇರೆಯೆಡೆಗೆ ಕಟ್ಟಿಕೊಂಡಿರುತ್ತಾರೆ. ಆದರೆ ಅವರ ಜೀವನದಲ್ಲಿ ಬಂದಂತಹ ಒಂದು ತಿರುವು ಅವರನ್ನು ನಟನಾ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತದೆ. ಇದಕ್ಕೆ ಇನ್ನೊಂದು ಸಾಕ್ಷಿ ಎಂಬಂತೆ ನಟಿ ತೇಜಸ್ವಿನಿ ಶೇಖರ್.
ಹೌದು ತೇಜಸ್ವಿನಿ ಶೇಖರ್, ಸಿಎ ಮುಗಿಸಿ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸನ್ನು ಹೊಂದಿದ್ದವರು. ಆದರೆ ಬಂದಿದ್ದು ಮಾತ್ರ ನಟನಾ ಕ್ಷೇತ್ರಕ್ಕೆ. ತೇಜಸ್ವಿನಿ ಶೇಖರ್, ಪ್ರತಿದಿನ ಸುಂದರವಾದ ಫೋಟೊಗಳನ್ನು ಫೇಸ್ ಬುಕ್ನಲ್ಲಿ ಅಪ್ ಲೋಡ್ ಮಾಡುತ್ತಿದ್ದರು. ಈ ಫೋಟೊಗಳನ್ನು ನೋಡಿದ ಕಿರುತೆರೆಯ ನಿರ್ದೇಶಕರೊಬ್ಬರು ಇವರಿಗೆ ಆಡಿಷನ್ಗೆ ನೀಡುವ ಅವಕಾಶವನ್ನು ನೀಡಿದ್ದರು.

'ಸೌಭಾಗ್ಯವತಿ'ಯಿಂದ ಕಿರುತೆರೆಗೆ ಎಂಟ್ರಿ
ಆಕಸ್ಮಿಕವಾಗಿ ಬಂದ ಅವಕಾಶವನ್ನು ಬಿಡದ ತೇಜಸ್ವಿನಿ ಶೇಖರ್ ಆಡಿಷನ್ಗೆ ಹಾಜರಾಗಿದ್ದರು. ನೀಡಿದ ಮೊದಲ ಅಡಿಷನಲ್ಲೇ ತೇಜಸ್ವಿನಿ ಶೇಖರ್ ಆಯ್ಕೆಯಾದರು. ಆಕಸ್ಮಿಕವಾಗಿ ಪಡೆದ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ. ಈಗ ಹಲವು ಧಾರಾವಾಹಿಗಳಲ್ಲಿ ನಟಿಸಿರೋ ತೇಜಸ್ವಿನಿ ಎಲ್ಲರಿಗೂ ಚಿರಪರಿಚಿತ. ಮೊದಲು 'ಸೌಭಾಗ್ಯವತಿ' ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ 'ಮಹಾನದಿ', 'ಮಧುಬಾಲಾ' ಮತ್ತು 'ನೀಲಿ' ಎಂಬ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿಯನ್ನು ಗಳಿಸಿದ್ದರು.

ಹೆತ್ತವರಿಗೆ ಇಷ್ಟವಿರಲಿಲ್ಲ ನಟನೆ
ಮೂಲತಃ ಹಾಸನದವರಾದರೂ ತೇಜಸ್ವಿನಿಗೆ ಮೈಸೂರಿನ ನಂಟಿದೆ. ತೇಜಸ್ವಿನಿ ಶೇಖರ್ ತಂದೆ ವೈದ್ಯರು. ಮೈಸೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ್ದ, ತೇಜಸ್ವಿನಿ ಹಾಸನದಲ್ಲಿ ಕಾಲೇಜಿಗೆ ಸೇರಿದ್ದರು. ಆ ಸಂದರ್ಭದಲ್ಲೇ ಕಿರುತೆರೆಯಲ್ಲಿ ಚಾನ್ಸ್ ಸಿಕ್ಕಿತ್ತು. ಮೊದಮೊದಲಿಗೆ ಮಗಳು ನಟನೆಗೆ ಸೇರುವುದು ಮನೆಯವರಿಗೆ ಇಷ್ಟವಿರಲಿಲ್ಲ. ಒಲ್ಲದ ಮನಸ್ಸಿನಲ್ಲೇ ಇವರು ಸಮ್ಮತಿಸಿದ್ದರು. ಯಾವಾಗ ತೆರೆಮೇಲೆ ತೇಜಸ್ವಿನಿ ಕಾಣಿಸಿಕೊಂಡರೋ ನೋಡಿದವರೆಲ್ಲಾ ಮನೆಮಗಳಂತೆ ಒಪ್ಪಿಕೊಂಡರೋ ಆಗ ಮನೆಯಲ್ಲಿ ಕೂಡಾ ಸಂತಸ ಪಡುವಂತಾಯಿತು.

'ಲಾಂಗ್ ಡ್ರೈವ್' ಮೊದಲ ಸಿನಿಮಾ
"ನಾನು ಈ ಇಂಡಸ್ಟ್ರಿಗೆ ಕಾಲಿಡುತ್ತೇನೆ. ಇಷ್ಟೆಲ್ಲಾ ಅವಕಾಶ ಪಡೆಯುತ್ತೇನೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಎಲ್ಲವೂ ತಾನಾಗಿಯೇ ನನಗೆ ದಕ್ಕಿದೆ. ನನ್ನ ಪ್ರೀತಿ ಪಾತ್ರರೆಲ್ಲರಿಗೂ ನನ್ನ ಬಗ್ಗೆ ಅಪಾರ ಗೌರವವಿದೆ. ಈಗ ಸಿನಿಮಾರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲಬೇಕೆನ್ನುವ ಬಯಕೆ ನನ್ನೊಳಗೆ ಮೂಡಿದೆ. ಹಾಗಂತ ಬಂದ ಅವಕಾಶಗಳನ್ನೆಲ್ಲಾ ಒಪ್ಪಿದ್ದಿದ್ದರೆ ಇಷ್ಟೊತ್ತಿಗೆ ಸಾಕಷ್ಟು ಚಿತ್ರಗಳಾಗಿರುತ್ತಿತ್ತು. ಉತ್ತಮ ಪಾತ್ರಗಳನ್ನಷ್ಟೇ ಒಪ್ಪಬೇಕೆನ್ನುವುದು ನನ್ನ ಮನಸ್ಥಿತಿ. 'ಲಾಂಗ್ ಡ್ರೈವ್' ನನ್ನ ಸಿನಿಮಾ ಜರ್ನಿಗೆ ಒಂದೊಳ್ಳೆ ಮುನ್ನುಡಿಯಾಗುತ್ತದೆ ಅನ್ನೋ ನಂಬಿಕೆ ನನ್ನದು." ಇದು ತೇಜಸ್ವಿನಿ ಅಂತರಾಳದ ಮಾತು.
ಇವರಿಗೆ ಹೆಸರು ತಂದುಕೊಟ್ಟ ಧಾರಾವಾಹಿ ಎಂದರೆ 'ಮಹಾನದಿ'. ಈ ಧಾರಾವಾಹಿಯಲ್ಲಿ ತೇಜಸ್ವಿನಿಯವರು ಮೇಘನಾ ಎಂಬ ಪಾತ್ರದಲ್ಲಿ ಮಿಂಚಿ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದರು. ಸದ್ಯಕ್ಕೆ ತೇಜಸ್ವಿನಿ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರವಾಹಿಯಲ್ಲಿ ತೇಜಸ್ವಿನಿ ಜಿಲ್ಲಾಧಿಕಾರಿ ಇಂದಿರಾ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ವೀಕ್ಷಕರಿಗೆ ಹಿಡಿಸಿದ್ದು, ಮೆಚ್ಚುಗೆಯನ್ನು ಗಳಿಸಿದೆ.

ಸಿನಿಮಾದಲ್ಲಿ ಮಿಂಚಲು ರೆಡಿ
ತೇಜಸ್ವಿನಿ ಇದೀಗ ಬೆಳ್ಳಿತೆರೆಗೆ ಕಾಲಿಟ್ಟಿದ್ದು, 'ಲಾಂಗ್ ಡ್ರೈವ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಾಯಕನಾಗಿ ಅರ್ಜುನ್ ಯೋಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಶ್ರೀರಾಜ್ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ 'ಸೀತಾ ವಲ್ಲಭ' ಖ್ಯಾತಿಯ ಸುಪ್ರಿತಾ ಸತ್ಯನಾರಾಯಣ ಕೂಡ ನಟಿಸುತ್ತಿದ್ದಾರೆ. ಹೀಗೆ ಜಿಲ್ಲಾಧಿಕಾರಿಯಿಂದ ಇದೀಗ 'ಲಾಂಗ್ ಡ್ರೈವ್' ಎಂಬ ಚಿತ್ರದಲ್ಲಿ ನಟಿಸುವ ಮೂಲಕ ತೇಜಸ್ವಿನಿ ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕಿಯರ ಕೊರತೆ ಎದ್ದುಕಾಣುತ್ತಿದೆ. ಹೀರೊಯಿನ್ನಾಗಿ ನೆಲೆ ನಿಲ್ಲಲು ಬೇಕಿರುವ ಸೌಂದರ್ಯ, ಪ್ರತಿಭೆ ಎಲ್ಲವೂ ಇರುವ ತೇಜಸ್ವಿನಿ ಈ ಕ್ಷೇತ್ರದಲ್ಲಿ ಯಾವ ಹಂತಕ್ಕೆ ಬೆಳೆದು ನಿಲ್ಲುತ್ತಾರೆ ಎನ್ನುವುದೇ ಈಗ ಕುತೂಹಲ.


Click it and Unblock the Notifications











