'ನಾ ನಿನ್ನ ಬಿಡಲಾರೆ' ಧಾರಾವಾಹಿಯ ದುರ್ಗಾ ರಿಯಲ್ ಲೈಫ್ನಲ್ಲಿ ಹೇಗಿದ್ದಾರೆ ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಾ ನಿನ್ನ ಬಿಡಲಾರೆ' ಯೂ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸತೀಶ್ ಕೃಷ್ಣ ನಿರ್ದೇಶಿಸುತ್ತಿರುವ ಹಾರರ್ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ಅಮ್ಮ ಮಗಳ ನಡುವಿನ ಭಾಂದವ್ಯವನ್ನು ತೋರಿಸಲಾಗುತ್ತಿದೆ.
ಶರತ್ ಮತ್ತು ಅಂಬಿಕಾ ದಂಪತಿಯ ಪ್ರಪಂಚ ಎಂದರೆ ಮುದ್ದು ಮಗಳು ಹಿತಾ. ಆದರೆ, ಈ ಪುಟ್ಟ ಸಂಸಾರಕ್ಕೆ ಮಾಯಾ ಎಂಬುವವಳು ತನ್ನ ಕೆಟ್ಟ ದೃಷ್ಟಿ ಬೀರುತ್ತಾಳೆ. ಶರತ್ನನ್ನು ತನ್ನ ವಶ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಅಂಬಿಕಾಳನ್ನು ಮಾಯಾ ಸಾಯಿಸುತ್ತಾಳೆ. ಅಮ್ಮನಿಲ್ಲದೆ ಅನಾಥಳಾಗಿ ಬೆಳೆಯುವ ಹಿತಾ, ತಾಯಿಯ ಸಾವಿಗೆ ತಂದೆಯೇ ಕಾರಣ ಎಂದು ತಿಳಿದುಕೊಂಡು ತಂದೆಯ ಜೊತೆಯೇ ಮುನಿಸಿಕೊಂಡು ಮಾತು ಬಿಡುತ್ತಾಳೆ. ಅತ್ತ ಮಾಯಾ ತನ್ನ ದಾರಿಗೆ ಅಡ್ಡವಾಗಿದ್ದಾಳೆ ಎಂದು ಹಿತಾಳನ್ನೂ ಕೊಲ್ಲುವುದಕ್ಕೆ ಸಂಚು ರೂಪಿಸುತ್ತಾಳೆ. ಯಾವಾಗ ಹಿತಾಳಿಗೆ ತೊಂದರೆ ಆಗುತ್ತಿದೆ ಎಂಬುದು ಗೊತ್ತಾಗುತ್ತದೋ, ಆಗ ಸತ್ತು ಹೋದ ತಾಯಿ ಅಂಬಿಕಾ, ಪುನಃ ಬರುತ್ತಾಳೆ. ಅದು ಹೇಗೆ ಎಂಬುದೇ ರೋಚಕ. ಮಾಯಾಳಿಂದ ಮಗಳನ್ನು ಅಂಬಿಕಾ ಹೇಗೆ ಕಾಪಾಡಿಕೊಳ್ತಾಳೆ? ಹಿತಾಳಿಗೆ ತಂದೆಯ ಮೇಲಿನ ಕೋಪ ಯಾವಾಗ ಕಡಿಮೆ ಆಗುತ್ತದೆ? ಎಂಬುದೇ ಧಾರಾವಾಹಿಯ ಕಥಾ ಹಂದರ.

ಶರತ್, ಅಂಬಿಕಾ, ಮಾಯಾ ಪಾತ್ರದ ಹೊರತಾಗಿ ಮಗದೊಂದು ಗಮನ ಸೆಳೆಯುವ ಪಾತ್ರವೆಂದರೆ ಅದು ದುರ್ಗಾ. ಅಸಲಿಗೆ ಅಂಬಿಕಾಳ ತಂಗಿಯಾಗಿರುವ ದುರ್ಗಾಳ ಕಣ್ಣಿಗೆ ಮಾತ್ರ ಅಂಬಿಕಾ ಕಾಣುತ್ತಾಳೆ. ಒಳ್ಳೆಯವಳಾಗಿರುವ ದುರ್ಗಾಳನ್ನು ಶರತ್ ಜೊತೆಗೆ ಒಂದು ಮಾಡುವ ಆಲೋಚನೆ ಅಂಬಿಕಾಳದ್ದು. ಇದರಿಂದ ತನ್ನ ಮಗಳು ಹಿತಾಳಿಗೆ ಅಮ್ಮನ ಪ್ರೀತಿ ಸಿಗಬಹುದು ಎಂಬ ಆಸೆ ಅಂಬಿಕಾಳದ್ದು.
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದುರ್ಗಾಳಾಗಿ ನಟಿಸುತ್ತಿರುವ ಈಕೆಯ ಹೆಸರು ರಿಷಿಕಾ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.
ಮೊದಲ ಧಾರಾವಾಹಿಯಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ ಈಕೆ. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

ಅಸಲಿಗೆ ನೋಡಿದರೆ ರಿಷಿಕಾ ಅವರು 'ಕನ್ಯಾದಾನ' ಧಾರಾವಾಹಿ ಆರಂಭವಾದಾಗ ಚಿತ್ರಾ ಪಾತ್ರದಲ್ಲಿ ನಟಿಸುತ್ತಿರಲಿಲ್ಲ. ಈ ಮೊದಲು ಚಿತ್ರಾ ಪಾತ್ರ ಮಾಡುತ್ತಿರುವವರು ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಪಾತ್ರಕ್ಕೆ ಬಂದ ರಿಷಿಕಾ ಮುಂದೆ ಪರಿಪೂರ್ಣವಾಗಿ ಚಿತ್ರಾ ಆಗಿ ಬದಲಾದುದಲ್ಲದೇ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು.
"ಚಿತ್ರಾ ರೋಲ್ ನಿಜಕ್ಕೂ ಅ ಚಾಲೆಂಜಿಂಗ್ ಆಗಿತ್ತು. ಇದನ್ನು ಧಾರಾವಾಹಿ ಪ್ರೊಡ್ಯೂಸರ್ ಮೊದಲೇ ವಿವರಿಸಿ ಹೇಳಿದ್ದರು. ಲವ್ ಸ್ಟೋರಿಯಾಗಲೀ, ರೊಮ್ಯಾಂಟಿಕ್ ಕ್ಯಾರೆಕ್ಟರ್ ಆಗಲಿ ಅದನ್ನು ಯಾರೂ ಬೇಕಾದರೂ ಮಾಡುತ್ತಾರೆ. ಆದರೆ ಈ ಪಾತ್ರ ನಿಜಕ್ಕೂ ಭಿನ್ನ. ಯಾಕೆಂದರೆ ಮುಖ್ಯವಾಗಿ ಈ ಪಾತ್ರದಲ್ಲಿ ಅನುಮಾನದ ಭೂತ ಇರುವ ಗಂಡನನ್ನು ಸಹಿಸಿಕೊಳ್ಳಬೇಕು. ಮುಂದೆ ಪ್ರೆಗ್ನೆಂಟ್, ಮಗು ಹೆರುವುದು ಹೀಗೆ? ನಟನೆಗೆ ಅವಕಾಶವೂ ಜಾಸ್ತಿ ಇರುತ್ತದೆ ಎಂದು ಹೇಳಿದ್ದರು. ಚಾಲೆಂಜಿಂಗ್ ರೋಲ್ ಎನ್ನುವ ಕಾರಣಕ್ಕೆ ಒಪ್ಪಿಕೊಳ್ಳೋಣ ಎಂದೆನಿಸಿತು. ಎಲ್ಲದಕ್ಕಿಂತಲೂ ಹೆಚ್ಚು ಇದು ಎರಡನೇ ಧಾರಾವಾಹಿಯಾದರೂ ಮೊದಲ ಲೀಡ್ ಪಾತ್ರ" ಎಂದು ಈ ಹಿಂದೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಿಷಿಕಾ ಹೇಳಿಕೊಂಡಿದ್ದರು.
ಮುಂದೆ 'ಯಡಿಯೂರು ಶ್ರೀಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿರುವ ರಿಷಿಕಾ ಇದೀಗ ದುರ್ಗಾಳಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ತನ್ನ ಅಕ್ಕ ಅಂಬಿಕಾಳನ್ನು ದುರ್ಗಾ ಕಳೆದುಕೊಳ್ಳುತ್ತಾಳೆ. ಚಿಕ್ಕಪ್ಪ, ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆಯುವ ದುರ್ಗಾಳನ್ನು ಕಂಡರೆ ಚಿಕ್ಕಮ್ಮನಿಗೆ ಅಷ್ಟಕ್ಕಷ್ಟೆ. ದುರ್ಗಪುರದಲ್ಲಿರುವ ಈಕೆ ದೇವಸ್ಥಾನದ ಕೆಲಸಗಳನ್ನೆಲ್ಲಾ ಮಾಡಿದರೂ, ದೇವಿಯನ್ನು ಕಂಡರೆ ಈಕೆಗೆ ಸಿಟ್ಟು. ದೇವಿಯನ್ನು ಕಣ್ಣೆತ್ತಿಯೂ ನೋಡದ ಆಕೆ ತನ್ನ ಅಕ್ಕ ಕಾಣೆಯಾದುದಕ್ಕೆ ದೇವಿಯೇ ಕಾರಣ ಎಂದು ನಂಬಿರುತ್ತಾಳೆ.
ಇತ್ತ ಸತ್ತು ಭೂತ ಆಗಿ ಮರಳಿರುವ ಅಂಬಿಕಾಳೇ ದುರ್ಗಾಳ ನಿಜವಾದ ಅಕ್ಕ. ದೇವಿಯ ಕೃಪೆಯಿಂದಲೇ ಅಂಬಿಕಾ ಹಾಗೂ ದುರ್ಗಾ ಭೇಟಿಯಾಗುತ್ತದೆ. ಯಾರ ಕಣ್ಣಿಗೂ ಕಾಣಿಸಿದ ಅಂಬಿಕಾ ದುರ್ಗಾಳ ಕಣ್ಣಿಗೆ ಕಾಣಿಸುತ್ತಾಳೆ. ಮುಂದೆ ದುರ್ಗಾಳ ಆಗಮನದಿಂದಾಗಿ ಅಂಬಿಕಾಗೆ ಯಾವ ಪ್ರಯೋಜನವಾಗುತ್ತದೆ? ಅಂಬಿಕಾಳ ಮಗಳು ಹಿತಾಳನ್ನು ದುರ್ಗಾ ಕಾಪಾಡುತ್ತಾಳಾ? ಅಂಬಿಕಾಳೇ ತನ್ನ ಅಕ್ಕ ಎಂಬುದು ದುರ್ಗಾಳಿಗೆ ತಿಳಿಯುತ್ತಾ? ಎಂಬುದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.


Click it and Unblock the Notifications











