ಕಲರ್ಸ್ ಸೂಪರ್ ವಾಹಿನಿಯಲ್ಲಿ ಹೊಸ ಧಾರಾವಾಹಿ 'ನಾಗಕನ್ನಿಕೆ'
ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಸಂಚಲನ ಉಂಟು ಮಾಡುತ್ತಿರುವ ಕಲರ್ಸ್ ಸೂಪರ್ ಚಾನೆಲ್ ತನ್ನ ಮೊದಲನೇ ಹುಟ್ಟುಹಬ್ಬ ಆಚರಿಸುವ ಸಂಭ್ರಮದಲ್ಲಿದೆ. ಈ ಖುಷಿಯೊಂದಿಗೆ ಬಿಗ್ ಬಜೆಟ್ ನಲ್ಲಿ ಸಿದ್ದವಾಗುತ್ತಿರುವ 'ನಾಗಕನ್ನಿಕೆ' ಧಾರಾವಾಹಿ ಕೂಡ ಶುರು ಆಗಲಿದೆ. ಜೂನ್ 26 ರಿಂದ ರಾತ್ರಿ 7.30ಕ್ಕೆ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ನಾಗಕನ್ನಿಕೆ' ಪ್ರಸಾರ ಆಗಲಿದೆ.
ಇದು ಇಚ್ಛಾಧಾರಿ 'ನಾಗಕನ್ನಿಕೆ'ಯ ಕತೆ. ಅಂದ್ರೆ ಸೇಡು ತೀರಿಸಿಕೊಳ್ಳಲು ಇಷ್ಟ ಬಂದಾಗ ತನ್ನ ಆಕಾರವನ್ನು ಬದಲಿಸುವ, ಹಾವು ಹೆಣ್ಣಿನ ರೂಪ ತಾಳಿ ಕಾರ್ಯ ಸಾಧಿಸುವ ಕಥಾಹಂದರ ಇದರಲ್ಲಿದೆ.

'ನಾಗಕನ್ನಿಕೆ' ದೈನಂದಿನ ಧಾರಾವಾಹಿ ಆದರೂ, ಇದರ ನಿರ್ಮಾಣಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಿದ ನುರಿತ ಅನುಭವಿ ತಂಡ ಕೆಲಸ ಮಾಡಿದೆ.
ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹಾಗೂ ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ 'ನಾಗಕನ್ನಿಕೆ' ಧಾರಾವಾಹಿಯ ಚಿತ್ರೀಕರಣ ಮಾಡಲಾಗುತ್ತಿದೆ.
ನಾಗಮಣಿಯ ರಕ್ಷಕರಾದ ಶಿವಾನಿಯ ತಂದೆ-ತಾಯಿಯನ್ನು ಕೊಲೆ ಮಾಡಿದ ಪಾತಕರ ಮೇಲೆ ಸೇಡು ತೀರಿಸಿಕೊಳ್ಳಲು ಶಿವಾನಿ (ಅಧಿತಿ ಪ್ರಭುದೇವ್) ತಪಸ್ಸಿನ ಮೂಲಕ ಇಚ್ಛಾಧಾರಿ ವರವನ್ನು ಪಡೆದುಕೊಳ್ಳುತ್ತಾಳೆ. ಪ್ರತೀಕಾರ ತೀರಿಸಿಕೊಳ್ಳಲು ಪ್ರೀತಿಯ ಅಸ್ತ್ರವನ್ನು ಬಳಸಿ ನಾಯಕ ಪ್ರೀತಮ್ (ಶಿವಕುಮಾರ) ಮನೆ ಸೇರುತ್ತಾಳೆ.
ಬಿಸಿನೆಸ್ ಮ್ಯಾನ್ ಮಹೇಂದ್ರ (ಮಿಥುನ್ ತೇಜಸ್ವಿ) ಮಗ ಪ್ರೀತಮ್ ಶಿವಾನಿಗೆ ಮನಸೋಲುತ್ತಾನೆ. ಪತ್ರೀಕಾರ ತೀರಿಸಿಕೊಳ್ಳಲು ಶಿವಾನಿಗೆ ತಂಗಿ ಶೇಷ (ಮೇಘಶ್ರೀ) ಸಾಥ್ ನೀಡುತ್ತಾಳೆ.
ಇತ್ತ ಪ್ರೀತಮ್ ತನ್ನ ಬಾಲ್ಯದ ಸ್ನೇಹಿತೆ ತನ್ವಿ (ಕೋಳಿ ರಮ್ಯಾ) ಜೊತೆ ನಿಶ್ಚಿತಾರ್ಥ ನಿಶ್ಚಯವಾಗಿದ್ದರೂ, ಶಿವಾನಿಯ ಮೇಲೆ ಪ್ರೀತಿ ಹುಟ್ಟುತ್ತದೆ. ಪ್ರೀತಮ್ ಅಮ್ಮ ಮಲ್ಲಿಕಾ (ಮಲ್ಲಿಕಾ ಪ್ರಸಾದ್) ಅವರ ಪಾತ್ರ ಕಥಾಹಂದರದಲ್ಲಿ ಪ್ರಮುಖವಾಗಿದೆ.
ಶಿವಾನಿಗೆ ಮನಸ್ಸಿನಲ್ಲಿ ಇರುವ ಸೇಡು ಒಂದೆಡೆ ಆದರೆ ನಿಧಾನವಾಗಿ ಪ್ರೀತಮ್ ಮೇಲೆ ಹುಟ್ಟುವ ಪ್ರೀತಿ ಮತ್ತೊಂದೆಡೆ. ಹೀಗೆ ಪ್ರೀತಿ ಮತ್ತು ಪ್ರತೀಕಾರಗಳೆರಡನ್ನೂ ಹೇಗೆ ಶಿವಾನಿ ನಿಭಾಯಿಸುತ್ತಾಳೆ ಎಂಬುದೇ 'ನಾಗಕನ್ನಿಕೆ'ಯ ಕಥಾಹಂದರ.
ನಾಳೆಯಿಂದ ಸೋಮವಾರದಿಂದ ಶುಕ್ರವಾರದವರೆಗೆ 'ಕಲರ್ಸ್ ಸೂಪರ್' ವಾಹಿನಿಯಲ್ಲಿ 'ನಾಗಕನ್ನಿಕೆ' ಪ್ರಸಾರ ಆಗಲಿದೆ. ಮಿಸ್ ಮಾಡದೆ ನೋಡಿರಿ....


Click it and Unblock the Notifications











