ಉದಯಟಿವಿ ನಂದಿನಿಯಲ್ಲಿ ವಾರವಿಡೀ 'ನಾಗಪಂಚಮಿ'
ಪ್ರತಿ ವಾರವೂ ಏನಾದರೊಂದು ವಿಶೇಷ ಕತೆ, ತಿರುವು, ಕುತೂಹಲದೊಂದಿಗೆ ಸಂಚಿಕೆ ಮೂಡುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ ಈಗ ಮತ್ತೊಂದು ಸ್ಪೆಷಲ್ ಕಥೆ ಬರಲಿದೆ.
ನಮ್ಮ ಸಂಸ್ಕೃತಿಯಲ್ಲಿ, ಮನುಷ್ಯ ಹಾಗೂ ಸರ್ಪಕ್ಕೆ ಪೌರಾಣಿಕವಾಗಿ, ಹಾಗೂ ಮಾನಸಿಕವಾಗಿ ಸಾವಿರಾರು ವರ್ಷಗಳಿಂದ ವಿಶೇಷ ಸಂಬಂಧವಿದೆ. ಮನೆ-ಮನೆಗಳಲ್ಲಿ ಆಚರಿಸುವ "ನಾಗಪಂಚಮಿ" ಹಬ್ಬವನ್ನು 'ನಂದಿನಿʼ ಧಾರಾವಾಹಿಯಲ್ಲೂ ವಿಶೇಷವಾಗಿ ಆಚರಿಸಲಿದ್ದಾರೆ.
ಇದೇ ಆಗಸ್ಟ್ 5 ರಿಂದ ವಿಶೇಷ ಸಂಚಿಕೆಗಳು ಶುರುವಾಗಲಿದ್ದು ವೀಕ್ಷಕರಿಗೆ ವಾರವಿಡಿ ರಸದೌತಣವನ್ನೇ ಬಡಿಸುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ಮಾಗಡಿಯಲ್ಲಿ ನಾಗದೇವರ ದೊಡ್ಡ ಸೆಟ್ ಹಾಕಿದ್ದು, ಅದ್ದೂರಿ ಅಲಂಕಾರದೊಂದಿಗೆ ವಿಜ್ರಂಭಣೆಯಲ್ಲಿ ಆಚರಿಸಲಿದ್ದಾರೆ. ಈ ಕಥೆಯನ್ನು ಚಿತ್ರೀಕರಿಸುವಾಗ ಸ್ವತಃ ನಿತ್ಯಾ ರಾಮ್ ಕೂಡ ನಾಗರಪಂಚಮಿ ವ್ರತದಲ್ಲಿದ್ದದ್ದು ವಿಶೇಷವೇ ಸರಿ.

ಶರಭ ಎಂಬ ಮಾಯಾವಿ, ಅಪಾರ ಶಕ್ತಿಯುಳ್ಳ ನಾಗಮಣಿಯನ್ನು ಪಡೆಯುವ ದುರುದ್ದೇಶದಿಂದ ನಾಯಕಿ ಜನನಿಯ ವೇಷದಲ್ಲಿ ರಾಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಾಯಕ ವಿರಾಟನನ್ನು ಮನಸಾರೆ ಪ್ರೀತಿಸುತ್ತಿರುವ ಜನನಿಗೆ ತನ್ನ ಅನುಪಸ್ಥಿತಿಯಲ್ಲಿ ತನ್ನದೇ ನಿಶ್ಚಿತಾರ್ಥ ವಿಷಯ ತಿಳಿದು ದೊಡ್ಡ ಆಘಾತದ ಜೊತೆಗೆ ಅಯೋಮಯವಾಗಿದೆ. ಈ ಕುಚೋದ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ನಾಗಪಂಚಮಿಯ ದಿನ ನಾಗದೇವತೆಯ ಪವಾಡದಿಂದ ಜನನಿಗೆ ತಿಳಿಯುವುದೇ ಎಂಬುದು ಕುತೂಹಲ.
ಇನ್ನೊಂದೆಡೆ ನಂಬೂದರಿ ಇಡೀ ಸರ್ಪ ಸಂಕುಲವನ್ನೇ ನಾಶ ಮಾಡಿ ನಾಗಮಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ದುರಾಸೆಯಲ್ಲಿ ನಾಗಪಂಚಮಿಯಂದು ಮಹಾಸರ್ಪಯಾಗ ಮಾಡಲು ಅನುವಾಗುತ್ತಾನೆ. ಈ ಸರ್ಪಯಾಗದಲ್ಲಿ ಸಾವಿರಾರು ಸರ್ಪಗಳ ಜೊತೆ ವಿಶೇಷ ಶಕ್ತಿಯುಳ್ಳ ಅರ್ಧ ಶಿವನಾಗಿಣಿ ಜನನಿಯನ್ನೇ ಮಹಾಬಲಿ ಕೊಡುವ ಹುನ್ನಾರದಲ್ಲಿದ್ದಾನೆ.

ಇಷ್ಟು ದಿನ ತನ್ನ ನಿಜರೂಪ ಕಳೆದುಕೊಂಡು ಗಿಣಿ ವೇಷದಲ್ಲಿದ್ದ ಜನನಿಯ ಅಕ್ಕ ದೇವಸೇನಾಳಿಗೆ ನಂಬೂದರಿ ನಿಜರೂಪ ಕೊಡುವುದು ನಾಗಪಂಚಮಿ ಸಂಚಿಕೆಗಳ ಮತ್ತೊಂದು ವಿಶೇಷ. ಆದರೆ ಇದರ ಹಿಂದಿರುವ ನಿಜವಾದ ಉದ್ದೇಶ, ದೇವಸೇನಾಳಿಂದಲೇ ಅವಳ ತಂಗಿ ಜನನಿಯನ್ನು ಮಹಾಯಾಗದಲ್ಲಿ ಬಲಿಕೊಡಿಸುವುದು.
ಹೀಗೇ ನಾನಾ ತಿರುವುಗಳೊಡನೆ ಸಾಗುತ್ತಿರುವ ನಂದಿನಿ ಧಾರಾವಾಹಿ ನಿಮಗೆ ಪರಿಪೂರ್ಣ ಮನರಂಜನೆ ನೀಡುತ್ತದೆ ಎಂಬುದು ನಂದಿನಿ ತಂಡದ ನಂಬಿಕೆ. ನಿತ್ಯಾ ರಾಮ್, ವಿನಯ್ ಗೌಡ, ಶ್ರೀನಿವಾಸ ಪ್ರಭು, ರವಿ ಭಟ್, ಜಯಶ್ರೀ ಎಸ್ ರಾಜ್, ರಶ್ಮಿ, ಅನು ಪೂವಮ್ಮ ಮೊದಲಾದ ಬಹುತಾರಾಗಣವಿರುವ ನಂದಿನಿ, ನಾಗಪಂಚಮಿ ವಿಶೇಷ ಸಂಚಿಕೆಗಳು ಇದೇ ಆಗಸ್ಟ್ 5, ಸೋಮವಾರದಿಂದ ಶುರುವಾಗಲಿದೆ.


Click it and Unblock the Notifications











