'ನಾಗಿಣಿ'ಗೆ ವಂಚಿಸಿದ ಕಿಲಾಡಿ, ಪೊಲೀಸ್ ಠಾಣೆಗೆ ನಾಗಿಣಿ ದೌಡು!
ಹಿಂದಿಯಲ್ಲಿ 'ನಾಗಿನ್' ಧಾರಾವಾಹಿ ಸರಣಿ ಜನಪ್ರಿಯವಾಗಿದೆ. ಇದೀಗ 'ನಾಗಿಣಿ' ಧಾರಾವಾಹಿಯ ಆರನೇ ಸೀಸನ್ ಹಿಂದಿಯಲ್ಲಿ ಪ್ರಸಾರವಾಗುತ್ತಿದೆ.
'ನಾಗಿನ್' ಧಾರಾವಾಹಿಯಲ್ಲಿ ನಾಗಿಣಿ ಪಾತ್ರಕ್ಕೆ ಅತ್ಯುತ್ತಮ ನಟಿಯರನ್ನು ಆಯ್ಕೆ ಮಾಡಲಾಗುತ್ತದೆ. 'ನಾಗಿನ್' ಧಾರಾವಾಹಿಯಲ್ಲಿ ಮೌನಿ ರಾಯ್ ಮೊದಲ ಬಾರಿ ನಾಗಿಣಿಯಾಗಿ ನಟಿಸಿದ್ದರು. ಈಗ ಅವರು ಬಾಲಿವುಡ್ನಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಆ ನಂತರ ನಾಗಿಣಿಯಾಗಿ ನಟಿಸಿದ ಕೆಲವು ನಟಿಯರು ಸಹ ಸ್ಟಾರ್ಗಳಾಗಿದ್ದಾರೆ.
ಈಗ 'ನಾಗಿನ್' ಧಾರಾವಾಹಿಯ ಆರನೇ ಸೀಸನ್ನಲ್ಲಿ ನಾಗಿಣಿ ಪಾತ್ರದಲ್ಲಿ ತೇಜಸ್ವಿನಿ ಪ್ರಕಾಶ್ ನಟಿಸುತ್ತಿದ್ದಾರೆ. ಜೊತೆಗೆ ಮಹೆಕ್ ಚಾಹಲ್ ಸಹ ನಾಗಿಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಳುಕುವ ಬಳ್ಳಿಯಂತಿರುವ ಮಹೆಕ್ ಚಾಹಲ್ರ ನಟನೆ ಧಾರಾವಾಹಿ ವೀಕ್ಷಕರಿಗೆ ಇಷ್ಟವಾಗಿದೆ. ಆದರೆ ಪಾಪ ಈ ಟಿವಿ ಲೋಕದ ನಾಗಿಣಿಗೆ ಯಾರೋ ಆನ್ಲೈನ್ನಲ್ಲಿ ಸರಿಯಾಗಿ ಕುಟುಕಿದ್ದಾರೆ.
ಆಗಿರುವುದಿಷ್ಟು, ನಾಗಿಣಿ ಪಾತ್ರಧಾರಿ ಮಹೆಕ್ಗೆ ಆನ್ಲೈನ್ನಲ್ಲಿ ಮೋಸ ಆಗಿದ್ದು, ನಟಿಯು 49,000 ರುಪಾಯಿಗಳನ್ನು ಕಳೆದುಕೊಂಡಿದ್ದಾರೆ. ಕೂಡಲೇ ನಟಿ ಮಹೆಕ್ ಬಾಂದ್ರಾ ಪೊಲೀಸ್ ಠಾಣೆಗೆ ಹೋಗಿ ವಂಚನೆ ಮಾಡಿದವನ ವಿರುದ್ಧ ದೂರು ನೀಡಿದ್ದಾರೆ. ತಮ್ಮ ಹಣ ಪಡೆದೇ ತೀರುವುದಾಗಿಯೂ ಹೇಳಿದ್ದಾರೆ.

ಕೊರಿಯರ್ ಸರ್ವೀಸ್ಗಾಗಿ ಹುಡುಕುತ್ತಿದ್ದ ನಟಿ
ಅನ್ಲೈನ್ನಲ್ಲಿ ವಂಚನೆ ನಡೆದಿರುವ ಬಗ್ಗೆ ಮಾಧ್ಯಮಗಳಿಗೆ ವಿವರಿಸಿರುವ ಮಹೆಕ್, ''ಆನ್ಲೈನ್ನಲ್ಲಿ ಕೊರಿಯರ್ ಸರ್ವೀಸ್ಗಾಗಿ ಸರ್ಚ್ ಮಾಡುತ್ತಿದ್ದೆ. ಗುಡ್ಗಾಂವ್ನಲ್ಲಿರುವ ಯಾರಿಗೋ ಕೊರಿಯರ್ ಮಾಡಬೇಕಿತ್ತು. ಆಗ ಆನ್ಲೈನ್ನಲ್ಲಿ ಮೊಬೈಲ್ ಸಂಖ್ಯೆಯೊಂದು ಸಿಕ್ಕಿತು. ಆತ ತಾನು ದೊಡ್ಡ ಕೊರಿಯರ್ ಸಂಸ್ಥೆಯ ಹೆಸರು ಹೇಳಿ ತಾನು ಆ ಸಂಸ್ಥೆಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ. ನಾನು ಸಹ ನಂಬಿದೆ'' ಎಂದು ಘಟನೆ ವಿವರಿಸಿದ್ದಾರೆ ನಟಿ.

ಹತ್ತು ರುಪಾಯಿ ಪೇಮೆಂಟ್ ಮಾಡುವಂತೆ ಹೇಳಿದ್ದಾನೆ
''ಆ ನಂತರ ಅವರ ಕೊರಿಯರ್ ಸರ್ವೀಸ್ ಅನ್ನು ಬಳಸಲು ಆನ್ಲೈನ್ನಲ್ಲಿ ಅಪ್ಲಿಕೇಶನ್ ಫಿಲ್ ಮಾಡುವಂತೆ ಒಂದು ಲಿಂಕ್ ಕಳಿಸಿದ. ಹಾಗೂ ಹತ್ತು ರುಪಾಯಿ ಹಣವನ್ನು ಮುಂಗಡವಾಗಿ ಕಳಿಸಲು ಹೇಳಿದ. ನಾನು ಸಹ ಗೂಗಲ್ ಪೇ ನಿಂದ ಪೇಮೆಂಟ್ ಮಾಡಲು ಯತ್ನಿಸಿದೆ ಆದರೆ ಆಗಲಿಲ್ಲ. ಆಗ ಆತ ಒಂದು ಲಿಂಕ್ ಕಳಿಸಿ ಇದರಲ್ಲಿ ಯುಪಿಐ ಮಾಹಿತಿ ಹಾಕುವಂತೆ ಹೇಳಿದ, ನಾನು ಹಾಕಿದೆ. ಬಳಿಕ ಒಂದು ಎನ್ಸ್ಕ್ರಿಪ್ಟೆಡ್ ಸಂದೇಶ ಕಳಿಸಿ ಮೊಬೈಲ್ ಸಂಖ್ಯೆಯೊಂದಕ್ಕೆ ಅದನ್ನು ಕಳಿಸಲು ಹೇಳಿದ, ಮೊದಲ ಬಾರಿ ಕಳಿಸಿದಾಗ ಅದು ಹೋಗಲಿಲ್ಲ. ಎರಡನೇ ಬಾರಿ ಯತ್ನಿಸಿದಾಗ ಹೋಯಿತು'' ಎಂದಿದ್ದಾರೆ ನಟಿ ಮಹೆಕ್.

49,000 ಹಣ ಬ್ಯಾಂಕ್ ಖಾತೆಯಿಂದ ಕಟ್!
ಅದಾದ ಕೆಲವೇ ಹೊತ್ತಿನಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ 49,000 ರುಪಾಯಿ ಹಣ ಹೋಗಿರುವುದು ನಟಿಗೆ ಗೊತ್ತಾಗಿದೆ. ನಟಿಗೆ ಮೆಸೇಜ್ ಬಂದ ಕೂಡಲೇ ಎಚ್ಚೆತ್ತುಕೊಂಡ ನಟಿ, ತಮ್ಮ ಬ್ಯಾಂಕ್ಗೆ ಕರೆ ಮಾಡಿ ಕೂಡಲೇ ತನ್ನ ಖಾತೆಗಳನ್ನೆಲ್ಲ ಬ್ಲಾಕ್ ಮಾಡುವಂತೆ ಮನವಿ ಮಾಡಿದ್ದಾರೆ. ಕೂಡಲೇ ಬ್ಯಾಂಕ್ನವರು ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ನಂತರ ತ್ವರಿತವಾಗಿ ಬಾಂದ್ರಾ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ವಿವರವಾಗಿ ದೂರು ನೀಡಿದ್ದಾರೆ. ಸೈಬರ್ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.

'ನಾಗಿನ್' ಧಾರಾವಾಹಿ ಚಿತ್ರೀಕರಣ ನಿಲ್ಲಿಸಬೇಕಾಯಿತು: ನಟಿ
''ಸೈಬರ್ ಠಾಣೆ ಪೊಲೀಸರು ಶೀಘ್ರವಾಗಿ ನನ್ನ ದೂರು ದಾಖಲಿಸಿಕೊಂಡರು. ಅವರಿಂದ ಸಾಕಷ್ಟು ಸಹಾಯವಾಯಿತು. ಈ ಘಟನೆಯಿಂದ ನಾನು ತೀವ್ರ ಶಾಕ್ಗೆ ಒಳಗಾದೆ. ಹೇಗೆ ಕೆಲವೇ ನಿಮಿಷಗಳಲ್ಲಿ ಆನ್ಲೈನ್ನಲ್ಲಿ ನಿಮ್ಮನ್ನು ಮೋಸ ಮಾಡಬಹುದು ಎಂಬುದನ್ನು ತಿಳಿದು ಆಘಾತಕ್ಕೆ ಒಳಗಾದೆ. ಈ ಘಟನೆಯಿಂದಾಗಿ ನಾನು 'ನಾಗಿನ್' ಧಾರಾವಾಹಿಯ ಶೂಟಿಂಗ್ ಸಹ ನಿಲ್ಲಿಸಬೇಕಾಗಿ ಬಂತು. ದೂರು ನೀಡಿದ ಬಳಿಕ ನಾನು ಆ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಲೇ ಇದ್ದೀನಿ. ಆದರೆ ಆ ವಂಚಕ ಹಣ ಡ್ರಾ ಮಾಡಿದ ಕೂಡಲೇ ಸಿಮ್ ಅನ್ನು ತೆಗೆದು ಬಿಸಾಡಿದ್ದಾನೆ'' ಎಂದಿದ್ದಾರೆ ನಟಿ ಮಹೆಕ್.


Click it and Unblock the Notifications











