ವಿಜಯ್ ಸೂರ್ಯ-ನೇಹಾ ಗೌಡ ನಟನೆಯ 'ನಮ್ಮ ಲಚ್ಚಿ' ಧಾರಾವಾಹಿ ಶೀಘ್ರದಲ್ಲೇ ದಿ ಎಂಡ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿ ಜನಮನ ಗೆದ್ದಿರುವುದಂತೂ ಸತ್ಯ. 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ನಾಯಕ ನಟನಾಗಿ, ಹಾಗೆಯೇ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ಅಲಿಯಾಸ್ ನೇಹಾ ಗೌಡ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯ 'ನಮ್ಮ ಲಚ್ಚಿ' ಧಾರಾವಾಹಿ ಕಳೆದ ವರ್ಷ ಆರಂಭವಾಗಿತ್ತು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ 'ನಮ್ಮ ಲಚ್ಚಿ' ಧಾರಾವಾಹಿ ಬೆಂಗಾಲಿಯ 'ಪೊಟೆಲ್ ಕುಮಾರ' ಸೀರಿಯಲ್ನ ರಿಮೇಕ್ ಆಗಿದೆ. ಅಪ್ಪ ಮಗಳ ಬಾಂಧವ್ಯವನ್ನು ಸಾರುವ ಈ ಧಾರಾವಾಹಿ ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರಿಗೆ ಇಷ್ಟ ಆಗಿತ್ತು.

ಪೇಟೆಯ ಗಾಯಕ ಸಂಗಮ್ ಸಂಪಿಗೆಪುರ ಎಂಬ ಹಳ್ಳಿಗೆ ಹೋದಾಗ ಅದೇ ಹಳ್ಳಿಯ ಹುಡುಗಿಯ ಪ್ರೀತಿಗೆ ಬೀಳುತ್ತಾನೆ. ನಂತರ ಆಕೆಯನ್ನು ಮದುವೆಯೂ ಆಗುತ್ತಾನೆ. ಮತ್ತೆ ಆಕೆಯನ್ನು ಕರೆದೊಯ್ಯುವುದಾಗಿ ಹೇಳಿ ನಗರ ಸೇರಿದವನು ತನ್ನದೇ ಜಂಜಾಟದಲ್ಲಿ ಮುಳುಗಿ ಬಿಡುತ್ತಾನೆ. ಅಣ್ಣ ಸಾಗರ್ ಮಾಡಿದ ಮೋಸದಿಂದ ಪತ್ನಿಯನ್ನು ಬಿಟ್ಟು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಇತ್ತ ಸಿಟಿಯ ಪ್ರಿಯಕರ ಸಂಗಮ್ಗಾಗಿ ಕಾಯುವ ಗಿರಿಜಾ ಅವನ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ತನ್ನದೇ ವೈಯಕ್ತಿಕ ಜಂಜಾಟದಲ್ಲಿ ಹಳ್ಳಿಯ ಹೆಂಡತಿಯನ್ನು ಮರೆಯುವ ಸಂಗಮ್ ಶ್ರೀಮಂತ ಹುಡುಗಿ ದೀಪಿಕಾ ಎಂಬ ಹುಡುಗಿಯನ್ನು ಮದುವೆಯಾಗಿ ರಿಯಾ ಎಂಬ ಹೆಣ್ಣು ಮಗುವಿಗೆ ತಂದೆ ಆಗುತ್ತಾನೆ.

ಇತ್ತ ಸಂಪಿಗೆಪುರದಲ್ಲಿನ ಸಂಗಮ್ ಮಗಳು ಲಚ್ಚಿ ಅಪ್ಪನಂತೆ ಗಾಯಕಿ ಆಗಿರುತ್ತಾಳೆ. ಆದರೆ, ಅತ್ತೆಯ ಕಾಟದಿಂದ ತಪ್ಪಿಸಿಕೊಳ್ಳಲು ಹುಡುಗನಂತೆ ವೇಷ ಮರಿಸಿಕೊಂಡು ತಾನೆಂದು ಕಾಣದ ತಂದೆಯನ್ನು ಹುಡುಕಿಕೊಂಡು ಸಿಟಿಗೆ ಬರುತ್ತಾಳೆ. ತನಗೆ ಗೊತ್ತಿಲ್ಲದೆ ಸಂಗಮ್ ಮನೆ ಸೇರುತ್ತಾಳೆ. ಆಕೆ ಹೆಣ್ಣು ಎಂದು ಗೊತ್ತಿಲ್ಲದೆ ಎಲ್ಲರೂ ಆಕೆಯನ್ನು ಹುಡುಗನ ಎಂದೇ ಭಾವಿಸುತ್ತಾರೆ.
ಕೆಲ ದಿನಗಳ ನಂತರ ಸಂಗಮಗೆ ತನ್ನ ಹಳ್ಳಿಯ ಹೆಂಡತಿಯಿಂದ ಮಗುವಿದೆ ಎಂಬ ವಿಚಾರ ಗೊತ್ತಾಗಿ ಹಳ್ಳಿಗೆ ತೆರಳುತ್ತಾನೆ. ಅಲ್ಲಿ ತನ್ನ ಮಗಳು ಮತ್ತ್ಯಾರು ಅಲ್ಲದೆ ಲಚ್ಚಿ ಎಂಬ ವಿಚಾರ ಗೊತ್ತಾಗುತ್ತದೆ. ಜೊತೆಗೆ ಫಿಲಂ ಸ್ಟೈಲ್ ನಲ್ಲಿ ಒಂದಷ್ಟು ಫೈಟಿಂಗ್ ಆದ ಮೇಲೆ ತಂದೆ ಮಗಳಿಬ್ಬರು ಒಂದಾಗುತ್ತಾರೆ. ಅದೇ ಸಂದರ್ಭದಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಜಾಜಿಯ ರೂಪದಲ್ಲಿದ್ದ ಗಿರಿಜಾಗೆ ನಿಧಾನವಾಗಿ ನೆನಪಿನ ಶಕ್ತಿ ಮರುಕಳಿಸುತ್ತದೆ.
ಇತ್ತ ಪೇಟೆ ಹೆಂಡತಿ ದೀಪಿಕಾ ಮಾಡಿರುವ ಆಟ ಹಾಗೂ ಮೋಸಗೊಳನೆಲ್ಲ ತಿಳಿದ ಮೇಲೆ ಪೊಲೀಸರು ಆಕೆಯನ್ನು ಬಂಧಿಸುತ್ತಾರೆ. ಈ ರೀತಿ ಕಥೆಯಲ್ಲಿ ಒಳ್ಳೊಳ್ಳೆಯ ಅಂಶಗಳು ಬರುತ್ತಿದ್ದಂತೆಯೇ ಕಥೆ ಧಾರಾವಾಹಿ ಮುಗಿಯಲಿದೆ ಎಂಬುದನ್ನು ಕೇಳಿ ವೀಕ್ಷಕರಂತೂ ಬಹಳ ನೊಂದಿದ್ದಾರೆ.
ಇಷ್ಟು ಬೇಗ ಇಷ್ಟು ಒಳ್ಳೆಯ ಧಾರಾವಾಹಿಯನ್ನು ಮುಗಿಸುತ್ತಿರುವುದು ಖಂಡಿತ ಬೇಸರದ ವಿಚಾರ. ಯಾವುದೇ ಅನಾವಶ್ಯಕ ಅಂಶಗಳನ್ನು ತೋರಿಸದೆ ಕಥೆಯನ್ನು ಗಟ್ಟಿಯಾಗಿ ಚೆನ್ನಾಗಿ ತೆಗೆದುಕೊಂಡು ಹೋದ ಧಾರಾವಾಹಿ ಇದು ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಧಾರಾವಾಹಿಯನ್ನು ಮೆಚ್ಚಿದ್ದಾರೆ.


Click it and Unblock the Notifications











