ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ನಂದಗೋಕುಲ' ರಕ್ಷಾ ; ಬೆಳ್ತಂಗಡಿಯಲ್ಲಿ ಅಮೋಘ್ ಜೊತೆ ಮದುವೆಯಾದ ಕೃಷ್ಣಪ್ರಿಯಾ
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಅದಕ್ಕೆ ಮದುವೆ ಎನ್ನುವುದು ಒಂದೆರಡು ದಿನದ ಆಟ ಅಲ್ಲ, ಜೀವನ ಪೂರ್ತಿ ಸಂಗಾತಿಯ ಜೊತೆ ಬಾಳುತ್ತೇವೆ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವಂತಹ ಸುಸಂದರ್ಭ. ಇಂತಹದ್ದೊಂದು ಸಂದರ್ಭಕ್ಕೆ ಕೃಷ್ಣಪ್ರಿಯಾ ಭಟ್ ಸಾಕ್ಷಿಯಾಗಿದ್ದಾರೆ. ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು, ಕೃಷ್ಣಪ್ರಿಯಾ ಭಟ್.. ''ನಂದಗೋಕುಲ''ದ ರಕ್ಷಾ. ಮಾಧವ.. ಕೇಶವ.. ವಲ್ಲಭ.. ಅವರ ಮುದ್ದಿನ ತಂಗಿ. ನಂದನ ಕೊನೆ ಮಗಳು. ಇಂಥಾ ಕೃಷ್ಣಪ್ರಿಯಾ ಕಳೆದ ವರ್ಷ ಆಗಸ್ಟ್ 24ರಂದು ಅಮೋಘ್ ಕುಂಟಿನಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿಗೆ ದೂಡಿದ್ದರು.

ಈಗ ತಮ್ಮ ಮನ ಮೆಚ್ಚಿದ ಹುಡುಗ ಅಮೋಘ್ ಜೊತೆ ಕೃಷ್ಣಪ್ರಿಯಾ ಸಪ್ತಪದಿಯನ್ನು ತುಳಿದಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಕೃಷ್ಣಪ್ರಿಯಾ ಅವರ ಊರಾದ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಇಂದು (ಫೆಬ್ರವರಿ 6) ಅದ್ಧೂರಿಯಾಗಿ ಮದುವೆ ನಡೆದಿದ್ದು, ನಾಳೆ (ಫೆಬ್ರವರಿ 7) ಶ್ರೀಕ್ಷೇತ್ರ ಧರ್ಮಸ್ಥಳ ಸಮೀಪವಿರುವ ಕನ್ಯಾಡಿ ಶ್ರೀರಾಮ ಮಂದಿರದಲ್ಲಿ ಆರತಕ್ಷತೆ ನಡೆಯಲಿದೆ. ಗುರು ಹಿರಿಯರ ಸಮ್ಮುಖದಲ್ಲಿ ನಡೆದ ಮದುವೆಗೆ ಕಿರುತೆರೆಯ ಹಲವು ಕಲಾವಿದರು ಬಂದು ನವ ಜೋಡಿಗೆ ಶುಭ ಕೋರಿದ್ದಾರೆ.
ಅಂದ್ಹಾಗೇ ಕೃಷ್ಣಪ್ರಿಯಾ ಭಟ್ ಮತ್ತು ಅಮೋಘ್.. ಬಾಲ್ಯದಿಂದಲೂ ಚಿರಪರಿಚಿತರು. ಬಾಲ್ಯದಿಂದಲೇ ಒಬ್ಬರನ್ನೊಬ್ಬರು ನೋಡ್ಕೊಂಡು ಬೆಳೆದು ಆ ನಂತರ ಇಬ್ಬರೂ ಸ್ನೇಹಿತರಾದರೂ ಕೂಡ ಇಬ್ಬರ ಮದುವೆಯನ್ನು ನಿಶ್ಚಯಿಸಿದ್ದು ಮಾತ್ರ ಮನೆಯ ಹಿರಿಯರು. ಮೊದಲಿಂದ ಪರಿಚಯ ಇದ್ದ ಹಿನ್ನೆಲೆ ಅಮೋಘ್ ಮತ್ತು ಕೃಷ್ಣಪ್ರಿಯಾ ಕೂಡ ಮದುವೆಗೆ ಒಪ್ಪಿಕೊಂಡರು. ಈಗ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಇನ್ನು ಕೃಷ್ಣಪ್ರಿಯಾ ಭಟ್ ಅವರ ಹೃದಯ ಗೆದ್ದ ಅಮೋಘ್ ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಿಂದಲೂ ದೂರ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಅಮೋಘ್ ಟಾಟಾ EKXSI ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅಮೋಘ್ ಚಂಡೆ ಕಲಾವಿದರು ಕೂಡ ಹೌದು. ಇನ್ನು ಇಬ್ಬರ ನಡುವೆ ಆರು ವರ್ಷಗಳ ಅಂತರ ಇದೆ.
ಇನ್ನು ಸಾಮಾನ್ಯವಾಗಿ ಮದುವೆಯಾದ ಮೇಲೆ ಚಿತ್ರರಂಗದಿಂದ ಅಥವಾ ಕಿರುತೆರೆಯಿಂದ ಹಲವರು ದೂರವಾಗುತ್ತಾರೆ. ಮನೆ-ಸಂಸಾರ ಎಂದು ಬ್ಯುಸಿಯಾಗುತ್ತಾರೆ. ಮತ್ತೂ ಕೆಲ ಒಮ್ಮೆ ಗಂಡಿನ ಮನೆಯವರು ಬಣ್ಣದ ಪ್ರಪಂಚದಿಂದ ದೂರ ಆಗಬೇಕೆಂಬ ಷರತ್ತನ್ನು ಹಾಕಿರುತ್ತಾರೆ. ಹೀಗಾಗಿ ಮದುವೆಯಾದರೆ ''ನಂದಗೋಕುಲ'' ಧಾರಾವಾಹಿಯಿಂದ ರಕ್ಷಾ ಹೊರ ನಡೆಯುತ್ತಾರಾ ಎನ್ನುವ ಅನುಮಾನ ಸದ್ಯ ಕಿರುತೆರೆಯ ಪ್ರೇಕ್ಷಕರಲ್ಲಿ ಕೆಲವರನ್ನು ಕಾಡುತ್ತಿದೆ.

ಈ ಪ್ರಶ್ನೆಗೆ ಈ ಹಿಂದೆ ಉತ್ತರ ನೀಡಿದ್ದ ಕೃಷ್ಣಪ್ರಿಯಾ ಭಟ್ ಮದುವೆಯ ನಂತರವೂ ನಾನು ''ನಂದಗೋಕುಲ'' ಧಾರಾವಾಹಿಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ಸದ್ಯಕ್ಕೆ ನನ್ನ ಕೆಲಸ ಮುಗಿಸಿ ಒಂದು ಚಿಕ್ಕ ವಿರಾಮ ಪಡೆದಿದ್ದು ಕೆಲ ಸಂಚಿಕೆಗಳು ಇನ್ನೂ ಪ್ರಸಾರವಾಗಬೇಕಿವೆ ಎಂದಿದ್ದರು. ಮದುವೆಯ ನಂತರವೂ ಬಣ್ಣದ ಜೊತೆಗಿನ ನನ್ನ ನಂಟು ಹೀಗೆ ಮುಂದುವರೆಯುತ್ತೆ ಎಂದು ಹೇಳಿದ್ದರು. ಸದ್ಯ ಅಮೋಘ್ ಅವರ ಜೊತೆ ಕೃಷ್ಣಪ್ರಿಯಾ ಸಪ್ತಪದಿ ತುಳಿದಿದ್ದು ಈ ಸುಂದರ ಜೋಡಿಗೆ ಹಲವರು ಶುಭಾಶಯ ಕೋರುತ್ತಿದ್ದಾರೆ.


Click it and Unblock the Notifications











