ಕೆಬಿಸಿಯಲ್ಲಿ ಅಮಿತಾಬ್ ಬಚ್ಚನ್ಗೆ ಅಗೌರವ ; ಹೇಳಿದ್ದೇನು ಅವಮಾನ ಮಾಡಿದ್ದ 10 ವರ್ಷದ ಹುಡುಗ ?
ಮಕ್ಕಳ ಲಾಲನೆ-ಪಾಲನೆಯಲ್ಲಿ ಪೋಷಕರ ಪಾತ್ರ ದೊಡ್ಡದು. ಹಸುಗೂಸುದಿಂದ ಹಿಡಿದು ಹದಿಹರೆಯದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಬೆಳವಣಿಗೆ ಪೋಷಕರ ಜವಾಬ್ದಾರಿ. ತಮ್ಮ ಮಗ ಅಥವಾ ಮಗಳು ದಾರಿ ತಪ್ಪಬಾರದು, ಸಮಾಜದ ಏಳಿಗೆಗಾಗಿ ಕೆಲಸ ಮಾಡಬೇಕೆಂದೇ ಎಲ್ಲ ಪೋಷಕರು ಬಯಸುತ್ತಾರೆ. ಆದರೆ.. ಬದಲಾದ ಈ ಕಾಲದಲ್ಲಿ ದುಡಿಮೆಯ ಬೆನ್ನತ್ತಿದ ಪೋಷಕರು ಮಕ್ಕಳತ್ತ ಗಮನ ಕೊಡುವುದೇ ಇಲ್ಲ.
ಸೂಕ್ಷ್ಮ ಮನಸ್ಸುಗಳನ್ನು ಸೂಕ್ತರೀತಿಯಲ್ಲೂ ನಿಭಾಯಿಸುವಲ್ಲಿ ವಿಫಲರಾಗುತ್ತಾರೆ. ಈ ಹಿನ್ನೆಲೆ ಒಮ್ಮೊಮ್ಮೆ ಮಕ್ಕಳಲ್ಲಿ ಸಭ್ಯತೆ-ಸಂಸ್ಕಾರ-ವಿನಯ-ಗೌರವ ಇವೆಲ್ಲವೂ ಮಾಯವಾಗುತ್ತವೆ. ಈ ವಿಚಾರ ಪೋಷಕರ ಗಮನಕ್ಕೆ ಆ ಕ್ಷಣಕ್ಕೆ ಬಾರದಿರಬಹುದು.

ಆದರೆ.. ಒಂದಿಲ್ಲೊಂದು ದಿನ ತಮ್ಮಿಂದ ತಪ್ಪಾಗಿದೆ ಎಂಬ ಮನವರಿಕೆ ಪೋಷಕರಿಗೆ ಆಗಿಯೇ ಆಗುತ್ತೆ. ತಮ್ಮ ಮಕ್ಕಳಲ್ಲಿ ವಿನಯವಂತಿಕೆಯ ಕೊರತೆ ಇರುವುದು ಗಮನಕ್ಕೆ ಬರುತ್ತೆ. ಇನ್ನೂ ಕೆಲ ಒಮ್ಮೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕ-ಪಕ್ಕದವರ ಮನೆಯಲ್ಲಿ ಚರ್ಚೆ ಕೂಡ ಶುರುವಾಗುತ್ತೆ. ಇಷಿತ್ ಭಟ್ ಇದಕ್ಕೆ ಅತ್ಯುತ್ತಮ ಉದಾಹರಣೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಕಳೆದ ಕೆಲ ದಿನಗಳ ಹಿಂದೆ ಅಮಿತಾಬ್ ಬಚ್ಚನ್ ನಡೆಸಿಕೊಡುವ ''ಕೌನ್ ಬನೇಗಾ ಕರೋಡ್ಪತಿ ಜ್ಯೂನಿಯರ್'' ಕಾರ್ಯಕ್ರಮದಲ್ಲಿ ಗುಜರಾತ್ನ ಗಾಂಧಿನಗರದ ಐದನೇ ತರಗತಿ ವಿದ್ಯಾರ್ಥಿ ಇಷಿತ್ ಭಟ್ ಭಾಗವಹಿಸಿದ್ದ.
ಆದರೆ ಇದೇ ವೇಳೆ ಅಮಿತಾಬ್ ಬಚ್ಚನ್ ಅವರನ್ನು ಅಗೌರವದಿಂದ ಕಂಡಿದ್ದ. ಅವಮಾನವಾಗುವಂತೆ ಮಾತನಾಡಿದ್ದ. ಇಶಿತ್ನ ಈ ನಡೆ ಮತ್ತು ನುಡಿಯ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದಕ್ಕೆ ಪೋಷಕರಿಗೆ ಇದೊಂದು ಪಾಠ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಕೆಲವರಂತೂ ಆ ಬಾಲಕನ ವಯಸ್ಸು ಕೇವಲ ಹತ್ತು ವರ್ಷ ಎನ್ನುವುದನ್ನು ಕೂಡ ಮರೆತು ಇಷಿತ್ ಮಾನಸಿಕವಾಗಿ ಜರ್ಜರಿತವಾಗುವಂತೆ ಮಾತನಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಂಡ ಕಾರಿದ್ದರು. ಇದೀಗ ಒಂದು ವಾರದ ನಂತರ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶದ ಕುರಿತು ಖುದ್ದು ಇಷಿತ್ ಮಾತನಾಡಿದ್ದಾನೆ. ಅಮಿತಾಬ್ ಬಚ್ಚನ್ ಅವರ ಕ್ಷಮೆಯನ್ನು ಕೂಡ ಕೇಳಿದ್ದಾನೆ.

ಹೌದು, @ishit_bhatt_official ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದು ಹಂಚಿಕೊಳ್ಳಲಾಗಿದ್ದು, 'ಕೌನ್ ಬನೇಗಾ ಕರೋಡ್ಪತಿ'ಯ ವಿಡಿಯೋ ಜೊತೆ ಕೆಲವೊಂದು ಸಾಲುಗಳನ್ನು ಬರೆಯಲಾಗಿದೆ.
ಎಲ್ಲರಿಗೂ ನಮಸ್ಕಾರ, ಕೌನ್ ಬನೇಗಾ ಕರೋಡ್ಪತಿಯಲ್ಲಿ ನನ್ನ ವರ್ತನೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಮಾತನಾಡಿದ ರೀತಿ ಅನೇಕರಿಗೆ ನೋವುಂಟು ಮಾಡಿದೆ ಅಥವಾ ನಿರಾಶೆಗೊಳಿಸಿದೆ ಎಂದು ನನಗೆ ಗೊತ್ತಾಗಿದೆ ಎಂದು ಬರೆಯಲಾಗಿದ್ದು ನನ್ನ ವರ್ತನೆಗೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ಇಶಿತ್ ಭಟ್ದು ಎನ್ನಲಾದ ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆಯಲಾಗಿದೆ.
ಮುಂದುವರೆದು ಅಮಿತಾಬ್ ಬಚ್ಚನ್ ಅವರ ಎದುರು ಅಸಭ್ಯವಾಗಿ ವರ್ತಿಸುವುದಾಗಲಿ, ಅವರಿಗೆ ಅವಮಾನ ಮಾಡುವ ಉದ್ದೇಶವಾಗಲಿ, ನನಗೆ ಖಂಡಿತವಾಗಿಯೂ ಇರಲಿಲ್ಲ. ಆ ಸಮಯದಲ್ಲಿ ನನಗೆ ಆತುರ ಜಾಸ್ತಿ ಇತ್ತು. ಈ ಹಿನ್ನೆಲೆ ನಾನು ಬೇಗ ಬೇಗ ಆಡಲು ಬಯಸಿದ್ದೆ. ನನ್ನ ಈ ಆತುರದ ವರ್ತನೆ ತಪ್ಪು ಎನ್ನುವುದು ನನಗೆ ಈಗ ಮನವರಿಕೆಯಾಗಿದೆ ಎಂದು ಈ ಇನ್ಸ್ಟಾಗ್ರಾಮ್ನಲ್ಲಿ ಬರೆಯಲಾಗಿದೆ.
ನಾವಾಡುವ ಪದಗಳು ಮತ್ತು ನಮ್ಮ ಕ್ರಿಯೆಗಳು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಎನ್ನುವ ವಿಚಾರ ನನಗೆ ಗೊತ್ತಾಯ್ತು. ನಾನು ತುಂಬಾ ದೊಡ್ಡ ಪಾಠ ಕಲಿತೆ. ದೊಡ್ಡ ವೇದಿಕೆಯಲ್ಲಿ ಹೇಗಿರಬೇಕು ಎನ್ನುವುದು ನನಗೆ ಮನದಟ್ಟಾಗಿದೆ. ಭವಿಷ್ಯದಲ್ಲಿ ನಾನು ಹೆಚ್ಚು ವಿನ್ರಮನಾಗಿ, ಗೌರವಯುತವಾಗಿ ಬದುಕುವ ಪ್ರಯತ್ನ ಮಾಡುತ್ತೇನೆ. ಈ ಕಷ್ಟದ ಸಮಯದಲ್ಲಿ ಕೂಡ ನನಗೆ ಬೆಂಬಲಿಸಿದವರಿಗೆ ಧನ್ಯವಾದಗಳು. ನಿಮ್ಮ ಕೆಬಿಸಿ ಹುಡುಗ ಎಂದು ಈ ಖಾತೆಯಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಇಶಿತ್ ಬರೆದಿದ್ದಾನೆ ಎನ್ನಲಾದ ಈ ಬರಹಕ್ಕೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ತಪ್ಪನ್ನು ಒಪ್ಪಿಕೊಳ್ಳುವುದು ಕೂಡ ದೊಡ್ಡ ಕೆಲಸ. ತುಂಬಾ ಒಳ್ಳೆಯದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ವ್ಯಂಗ್ಯವಾಡಿದ್ದಾರೆ.


Click it and Unblock the Notifications











