ನಿರ್ದೇಶಕಿಯಾಗಿ ಭಡ್ತಿ ಪಡೆದ ನಟಿ ರಂಜನಿ ರಾಘವನ್; 'ಕನ್ನಡತಿ' ಹೊಸ ಹೆಜ್ಜೆಗೆ ನೆಟ್ಟಿಗರ ಪ್ರತಿಕ್ರಿಯೆ ಏನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಕನ್ನಡತಿ'ಯೂ ಒಂದು. 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸಿದ್ದ ರಂಜನಿ ರಾಘವನ್ ಅವರು ಬಹುಮುಖ ಪ್ರತಿಭೆಯ ಬೆಡಗಿ ಹೌದು. ನಟನೆಯ ಹೊರತಾಗಿ ಲೇಖಕಿಯಾಗಿಯೂ ಮೋಡಿ ಮಾಡಿದ ಬೆಡಗಿ ಈಕೆ. 'ಕಥೆ ಡಬ್ಬಿ' ಮತ್ತು 'ಸ್ವೈಪ್ ರೈಟ್' ಪುಸ್ತಕಗಳನ್ನು ರಂಜನಿ ರಾಘವನ್ ಬರೆದಿದ್ದಾರೆ.
ಸೀರಿಯಲ್ ಜೊತೆಗೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ರಂಜನಿ ರಾಘವನ್ ಅವರು ಇದೀಗ ನಿರ್ದೇಶಕಿಯಾಗಿ ಭಡ್ತಿ ಪಡೆದಿದ್ದಾರೆ. ಈ ಸಂತಸದ ವಿವಾರವನ್ನು ಸ್ವತಃ ರಂಜನಿ ರಾಘವನ್ ಅವರೇ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ.

"ಒಂದು ಹೊಸ ಆಯಾಮದಲ್ಲಿ ನಿಮ್ಮ ಕೆಲಸವನ್ನು ನೋಡಲು ಕಾಯುತ್ತಿರುವೆ. ನೀವು ಬರೆದಿರುವೆ ಕಥೆ ನಿಮ್ಮ ಆಲೋಚನೆಯಂತೆಯೇ ಪರದೆ ಮೇಲೆ ಮೂಡಿ ಬರಲಿ ಎಂದು ಆಶಿಸುತ್ತೇನೆ. ಶುಭವಾಗಲಿ" ಎಂದಿದ್ದಾರೆ. ಇನ್ನೊಬ್ಬರು "ನೀವು ಮತ್ತು ಆದಿತ್ಯ ನಟನೆಯ ಕಾಂಗರೂ ಸಿನಿಮಾ ಚೆನ್ನಾಗಿದೆ ಮೇಡಂ ಒಳ್ಳೆಯದಾಗಲಿ" ಎಂದರೆ, ಮತ್ತೊಬ್ಬರು "ನಿಮ್ಮ ಮೊದಲ ಬುಕ್ ಓದುತ್ತಾ ಇದ್ದೇನೆ ಅರ್ಧ ಮುಗಿದಿದೆ ಎನ್ನೂ ಸ್ವಲ್ಪ ಇದೆ.. ಸ್ಟೋರಿ ಚೆನ್ನಾಗಿದೆ" ಎಂದು ಶುಭ ಕೋರಿದ್ದಾರೆ.
ತಮ್ಮ ಹೊಸ ಪ್ರಯತ್ನ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. "ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ" ಎಂದು ರಂಜನಿ ರಾಘವನ್ ಬರೆದುಕೊಂಡಿದ್ದಾರೆ.

"ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ. ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನು ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ. ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ" ಎಂದು ಆಕೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
"ಸೆಪ್ಟೆಂಬರ್ ಹದಿಮೂರು 2023 ರಂದು ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ "ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು" ಅಂತಷ್ಟೇ ಅಂದುಕೊಂಡಿದ್ದು. ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ. ಕೊಲ್ಲೂರು ಮೂಕಾಂಬಿಕೆ ನನ್ನವ್ವ ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ "ಒನ್ ಕಾಲ್ ಅವೇ" ಅನ್ನೋ ಜಂಭ ಹುಟ್ಟಿಸಿದ್ದಾರೆ" ಎಂದಿದ್ದಾರೆ ರಂಜನಿ ರಾಘವನ್.
"ಹೋದ ವರ್ಷ 2024 ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು. ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನು ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ" ಎಂದು ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ ನಟಿ ರಂಜನಿ ರಾಘವನ್.
ಅಂದ ಹಾಗೇ ರಂಜನಿ ರಾಘವನ್ ಅವರು ಈ ಮೊದಲು ಧಾರಾವಾಹಿಯೊಂದರ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾಣಿಸಿಕೊಂಡಿದ್ದರು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಇಷ್ಟದೇವತೆ' ಧಾರಾವಾಹಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾಣಿಸಿಕೊಂಡಿದ್ದ ಈಕೆ ಆ ಧಾರಾವಾಹಿಗೆ ಸಂಭಾಷಣೆ ಬರೆದಿದ್ದು ಮಾತ್ರವಲ್ಲದೇ ಸಹ ನಿರ್ಮಾಪಕರಾಗಿಯೂ ಕಾಣಿಸಿಕೊಂಡಿದ್ದರು. ಇದೀಗ ಮೊದಲ ಬಾರಿಗೆ ಸಿನಿಮಾ ನಿರ್ದೇಶನವನ್ನು ಮಾಡ ಹೊರಟಿರುವ ರಂಜನಿ ರಾಘವನ್ ಅವರ ಹೊಸ ಪ್ರಯತ್ನ ಸುಗಮವಾಗಿ ಸಾಗಲಿ ಎಂಬುದೇ ನಮ್ಮ ಹಾರೈಕೆ.


Click it and Unblock the Notifications











