ಮತ್ತೊಂದು ಹೊಸ ಧಾರಾವಾಹಿಯ ಪ್ರೊಮೋ ರಿಲೀಸ್: ನಾಯಕಿಯನ್ನು ನೋಡಿ ಅಭಿಮಾನಿಗಳು ಖುಷ್
ಜೀ ಕನ್ನಡ ವಾಹಿನಿಯಲ್ಲಿ ಕಳೆದ ತಿಂಗಳಷ್ಟೇ ಹೊಸ ಧಾರಾವಾಹಿ ಒಂದು ಶುರುವಾಗಿದೆ. ಇನ್ನೂ ಒಂದು ಧಾರಾವಾಹಿ ಶುರುವಾಗಲು ಕಾಯುತ್ತಿದೆ. ಹೀಗಿರುವಾಗಲೇ ಮತ್ತೊಂದು ಧಾರಾವಾಹಿಯ ಪ್ರೊಮೋ ಕೂಡ ರಿಲೀಸ್ ಆಗಿದೆ.
ಭೂಮಿಗೆ ಬಂದ ಭಗವಂತ ಧಾರಾವಾಹಿ ಕಳೆದ ತಿಂಗಳು ಪ್ರಸಾರ ಆರಂಭಗೊಂಡಿದೆ. ಈ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಮಿಡಲ್ ಕ್ಲಾಸ್ ಜನರ ಜೀವನ ಹೇಗೆಲ್ಲಾ ಇರುತ್ತೆ ಎಂಬುದನ್ನು ಸರಳವಾಗಿ ತೋರಿಸಲಾಗುತ್ತಿದೆ.

ಡೈಲಾಗ್ ಗಳು ಕೂಡ ನಿತ್ಯ ಮನೆಯಲ್ಲಿ ಉಪಯೋಗಿಸುವ ಮಾತುಗಳೇ ಇದ್ದು, ಮಿಡಲ್ ಕ್ಲಾಸ್ ನಲ್ಲಿ ಜೀವನ ಮಾಡುವ ವ್ಯಕ್ತಿಯ ಕಥೆಯನ್ನು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಇನ್ನು ಸೀತಾ ರಾಮ ಧಾರಾವಾಹಿ ಕೂಡ ಜೀ ಕನ್ನಡದಲ್ಲಿ ಮೂಡಿ ಬರಬೇಕಿದೆ. ಈ ಧಾರಾವಾಹಿಯ ಎರಡೂ ಪ್ರೊಮೋಗಳು ರಿಲೀಸ್ ಆಗಿದ್ದು, ಜನ ನಟಿ ವೈಷ್ಣವಿ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿ ಪ್ರೀತಿಗೆ ಸೇತುವೆಯಾಗಿ ಬರುವ ಪುಟಾಣಿ ಇರುವಂತಹ ಕಥೆಯಾಗಿದೆ. ಇದರಲ್ಲಿ ನಟ ಗಗನ್ ಚಿನ್ನಪ್ಪ ಅವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ವೈಷ್ಣವಿ ಗೌಡ ಅವರು ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಈವರಿಬ್ಬರ ಪ್ರೀತಿಗೆ ಸೇತುವೆಯಾಗಿ ಬಾಲ ನಟಿ ರಿತು ಸಿಂಗ್ ಇದ್ದಾರೆ. ಸೀತಾ ರಾಮ ಧಾರಾವಾಹಿಯ ಪ್ರೋಮೋ ನೋಡಿಯೇ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. ಧಾರಾವಾಹಿಯನ್ನು ಆದಷ್ಟು ಬೇಗ ಪ್ರಸಾರ ಮಾಡುವಂತೆ ಕಮೆಂಟ್ ಮಾಡುತ್ತಿದ್ದಾರೆ. ಸತ್ಯ ಧಾರಾವಾಹಿಯ ನಿರ್ದೇಶಕಿ ಸ್ವಪ್ನಕೃಷ್ಣ ಅವರೇ ಈ ಸೀರಿಯಲ್ ನ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ.

ಸೀತಾ ರಾಮ ಧಾರಾವಾಹಿಯ ಪ್ರಸಾರ ಯಾವಾಗ ಎಂದೇ ತಿಳಿದಿಲ್ಲ. ಅದಾಗಲೇ ಈಗ ಮತ್ತೊಂದು ಹೊಸ ಧಾರಾವಾಹಿ ಅಮೃತಧಾರೆ ಪ್ರೊಮೋ ಕೂಡ ರಿಲೀಸ್ ಆಗಿದೆ. ಹುಡುಗ-ಹುಡುಗಿ ಹೊಂದುಕೊಂಡಿದ್ದರೆ ಅದೊಂದು ಚೆಂದದ ಕಥೆ! ಅವರಿಬ್ಬರೂ ಕಿತ್ತಾಡಿಕೊಂಡಿದ್ದರೆ ಅದು ಬೇರೆನೆ ಕಥೆ!! ಬರ್ತಿದೆ ಒಂದು ಬೊಂಬಾಟ್ ಕಥೆ! ಅಮೃತಧಾರೆ ಶೀಘ್ರದಲ್ಲಿ ಎಂದು ಇನ್ ಸ್ಟಾಗ್ರಾಂನಲ್ಲಿ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದನ್ನು ನೋಡಿ ಹಲವು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ನಟಿ ಛಾಯಾ ಸಿಂಗ್ ಹಾಗೂ ನಟ ರಾಜೇಶ್ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಹಿಂದಿಯದ್ದಾಗಿದ್ದು, ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಹಿಂದಿಯಲ್ಲಿ ಬಡೆ ಅಚ್ಚೆ ಲಗ್ತಾ ಎಂಬ ಧಾರಾವಾಹಿಯನ್ನು ಕನ್ನಡದಲ್ಲಿ ಅಮೃತಧಾರೆ ಎಂದು ಪ್ರಸಾರ ಮಾಡಲಾಗುತ್ತಿದೆ. ನಟಿ ಛಾಯಾ ಸಿಂಗ್ ಅವರು ಭೂಮಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ರಾಜೇಶ್ ಅವರು ಗೌತಮ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಇನ್ನು ನಟಿ ಛಾಯಾ ಸಿಂಗ್ ಅವರು ತಮಿಳು ಮತ್ತು ಕನ್ನಡದಲ್ಲಿ ಸಕ್ರಿಯರಾಗಿದ್ದ ನಟಿ. ಮದುವೆಯಾದ ನಂತರ ಬಿಗ್ ಬ್ರೇಕ್ ಪಡೆದು ಬಳಿಕ ಸ್ಯಾಂಡಲ್ ವುಡ್ ಗೆ ಮಫ್ತಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಇದಾದ ಬಳಿಕ ಈಗ ಕನ್ನಡ ಕಿರುತೆರೆಗೂ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಉದಯ ಟಿವಿಯಲ್ಲಿ ಮೂಡಿ ಬಂದ ನಂದಿನಿ ಎಂಬ ಧಾರಾವಾಹಿಯಲ್ಲೂ ಛಾಯಾ ಸಿಂಗ್ ಅವರು ಬಣ್ಣ ಹಚ್ಚಿದ್ದರು. ಇದೀಗ ಧಾರಾವಾಹಿಯೊಂದಕ್ಕೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಛಾಯಾ ಸೀಮಗ್ ಅವರಿಗೆ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ಆದಷ್ಟು ಬೇಗ ಧಾರಾವಾಹಿ ಪ್ರಸಾರ ಕಾಣಲಿ ಎಂದು ಬಯಸಿದ್ದಾರೆ.


Click it and Unblock the Notifications











