ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ದೇವಯಾನಿ'
ಕರ್ನಾಟಕದ ಮನೆ ಮನದ ಮನರಂಜನಾ ವಾಹಿನಿಯಾದ ಉದಯ ಟಿವಿ ತನ್ನ ಅಭೂತ ಪೂರ್ವ ಕಾರ್ಯಕ್ರಮಗಳಿಂದ ವೀಕ್ಷಕರ ಮನ ಗೆದ್ದಿದೆ. ಉದಯ ಟಿವಿ ದೀಪಾವಳಿಯ ಕೊಡುಗೆಯಾಗಿ ಹೊಸ ಧಾರಾವಾಹಿಯೊಂದನ್ನು ಪ್ರಾರಂಭಿಸಲಿದೆ.
ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಮತ್ತು ಪ್ರೇಮಕಥೆಯನ್ನು ಒಳಗೊಂಡ ಹೊಸ ಕಥೆ 'ದೇವಯಾನಿ' ಇದೇ ನವೆಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.
ಪ್ರೀತಿಸಿದ ಹುಡುಗನನ್ನು ಮದುವೆ ಆಗಲು ಹೊರಟಾಗ 'ದೇವಯಾನಿ'ಗೆ ಎದುರಾಗುವ ಸಂಕಷ್ಟಗಳೇ 'ದೇವಯಾನಿ' ಧಾರಾವಾಹಿಯ ಕಥಾಹಂದರ. ಮುಂದೆ ಓದಿರಿ...

ದೇವಯಾನಿ-ಶ್ರೀವತ್ಸ ಪ್ರೀತಿ
ದೇವಯಾನಿ 8 ವರ್ಷದಿಂದ ಶ್ರೀವತ್ಸನನ್ನ ಪ್ರೀತಿಸಿರುತ್ತಾಳೆ. ಅವರ ಪ್ರೀತಿಗೆ ಎರಡು ಮನೆಯವರಿಂದ ವಿರೋಧವಿದೆ. 8 ವರ್ಷದ ನಂತರ ಅವರ ಮದುವೆಗೆ ಎರಡು ಕುಟುಂಬ ಒಪ್ಪಿಗೆ ಕೊಟ್ಟಿದೆ. ಹೀಗೆ ಮದುವೆ ಮಂಟಪವರೆಗೂ ಬಂದಾಗ ಅಲ್ಲಿಗೆ ಬರುವ ಪವಾಡ ಪುರುಷರೊಬ್ಬರು ಈ ಮದುವೆ ನಡೆದದ್ದೇ ಆದಲ್ಲಿ ದೇವಯಾನಿ ಸಾವಾಗುತ್ತದೆ ಎಂದು ಹೇಳುತ್ತಾರೆ.

ಮದುವೆಯಾದರೂ ಕಷ್ಟ ನಿಲ್ಲಲ್ಲ
ಅದಕ್ಕೆ ಪೂರಕವಾಗಿ, ಮದುವೆ ನಿಲ್ಲಿಸಲು ಪ್ರೇಮಿಗಳ ಸುತ್ತ ಹತ್ತಾರು ಶತ್ರುಗಳು ಸೇರುತ್ತಾರೆ. ದೇವಯಾನಿ ಮತ್ತು ಶ್ರೀವತ್ಸರನ್ನು ಕೊಲ್ಲುವ ಕುತಂತ್ರ ಮಾಡುತ್ತಾರೆ. ಈ ಎಲ್ಲಾ ಅಡ್ಡಿ ಆತಂಕಗಳಿಂದ ಪಾರಾಗುವ ಈ ಜೋಡಿ ಮದುವೆಯಾಗುತ್ತಾರೆ. ಮದುವೆ ಆದ ನಂತರವೂ ದೇವಯಾನಿ ಕಷ್ಟ ನಿಲ್ಲಲ್ಲ. ಶತಾಯ ಗತಾಯ ಶ್ರೀವತ್ಸ ದೇವಯಾನಿ ಜೋಡಿಯನ್ನ ಬೇರ್ಪಡಿಸಲೇ ಬೇಕೆಂದು ಮುಂದಾಗುತ್ತಾರೆ ಕೆಲ ಹಿತ ಶತ್ರುಗಳು.

ಪ್ರತಿ ಸಂಚಿಕೆಯಲ್ಲೂ ತಿರುವು
ಸಾವನ್ನು ಗೆದ್ದು ಮತ್ತೆ ನಿನ್ನನ್ನ ಸೇರುವೆ ಎನ್ನುವ ದೇವಯಾನಿ ಕಥೆ ಏನಾಗುತ್ತೆ..? ದೇವಯಾನಿ ಸಾವನ್ನು ಹೇಗೆ ಗೆಲ್ಲುತ್ತಾಳೆ, ಶತ್ರುಗಳಿಂದ ಗಂಡನನ್ನ ಹೇಗೆ ರಕ್ಷಣೆ ಮಾಡ್ತಾಳೆ? ಎನ್ನುವ ಕುತೂಹಲ ಅಂಶದಿಂದ ಪ್ರತಿಯೊಂದು ಸಂಚಿಕೆಯಲ್ಲೂ ತಿರುವನ್ನು ಹೊಂದಿರುವ ಅಪರೂಪದ ಧಾರಾವಾಹಿ ದೇವಯಾನಿ.

ನಿರ್ದೇಶಕರು ಯಾರು.?
ದೇವಯಾನಿ ಧಾರಾವಾಹಿಯನ್ನು ಸುಂದರೇಶ್ ಅವರು ಓಂ ಸಾಯಿರಾಂ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಆಕ್ಷನ್ ಕಟ್ ಜೊತೆಗೆ ಛಾಯಾಗ್ರಹಣ ನಿರ್ವಹಣೆಯನ್ನು ನಿರ್ದೇಶಕ ಎಂ.ಕುಮಾರ್ ವಹಿಸಿಕೊಂಡಿದ್ದಾರೆ. ಕಥೆಯನ್ನು ಖ್ಯಾತ ಕಥೆಗಾರರಾದ ಗಿರಿಜಾ ಮಂಜುನಾಥ್ ಅವರು ಬರೆಯುತ್ತಿದ್ದು, ಸಂಭಾಷಣೆಯನ್ನು ಗೌತಮ್ ವಖಾರಿ ಬರೆಯುತ್ತಿದ್ದಾರೆ. ಮಾಮೂಲಿ ಅತ್ತೆ ಸೊಸೆಯ ಕಾಟ ಕಿರುಕುಳ ಕಥೆಯಿಂದ ಹೊರತಾಗಿರುವ ಈ ಹೊಸ ಧಾರಾವಾಹಿ ಪ್ರತಿಯೊಂದು ಕಂತಿನಲ್ಲೂ ಕುತೂಹಲ ತಿರುವುಗಳನ್ನು ನೀಡುತ್ತಾ ಮನರಂಜಿಸುವುದರಲ್ಲಿ ಸಂಶಯವಿಲ್ಲ ಎಂದು ತಂಡದವರು ಹೇಳುತ್ತಾರೆ. 'ದೇವಯಾನಿ' ಇದೇ ನವಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











