ಮತ್ತೊಂದು ಪೌರಾಣಿಕ ಧಾರಾವಾಹಿ ಶುರು: ಉದಯ ಟಿವಿಯಲ್ಲಿ 'ಜೈ ಹನುಮಾನ್'
Recommended Video

ಮನರಂಜನಾ ಕ್ಷೇತ್ರದ ಬದಲಾದ ಸನ್ನಿವೇಶದಲ್ಲಿ ಕಿರುತೆರೆಯೂ ಹಿರಿತೆರೆಯಷ್ಟು ಶ್ರೀಮಂತವಾಗಿದೆ. ವಿನೂತನ ಕಥೆ, ನಿರೂಪಣೆಗಳ ಜತೆಗೆ ಅದ್ಧೂರಿ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಈ ದಿಸೆಯಲ್ಲಿ ಕನ್ನಡ ಮನರಂಜನಾ ವಾಹಿನಿಗಳ ಹಿರಿಯಣ್ಣ ಉದಯ ಟಿವಿ 'ಜೈ ಹನುಮಾನ್' ಎಂಬ ಅದ್ಧೂರಿ ಧಾರಾವಾಹಿಯನ್ನು ಕನ್ನಡದ ವೀಕ್ಷಕರಿಗೆ ನೀಡಲು ಸಿದ್ಧತೆ ನಡೆಸಿದೆ.
ಅಕ್ಟೋಬರ್ 8 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತೀ ದಿನ ರಾತ್ರಿ 7.30ಕ್ಕೆ 'ಜೈ ಹನುಮಾನ್' ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋಗಳು ಪ್ರೇಕ್ಷಕರ ಮನಸೂರೆಗೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲೂ ಹವಾ ಸೃಷ್ಟಿಸಿದೆ.
ಎಲ್ಲ ವಯೋಮಾನದ ವೀಕ್ಷಕರಿಗೂ ಇಷ್ಟವಾಗುವಂತಹ ಕಥೆ, ನಿರೂಪಣೆ ಹಾಗೂ ಕಣ್ಮನ ಸೆಳೆಯುವ ನಿರ್ಮಾಣ ಈ ಧಾರಾವಾಹಿಯ ವಿಶೇಷವಾಗಿದೆ.
ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಮುಂದೆ ಓದಿರಿ....

ಪ್ರತಿ ಫ್ರೇಮ್ ನಲ್ಲೂ ಗುಣಮಟ್ಟ
ಈಗಾಗಲೇ ಐವತ್ತಕ್ಕೂ ಹೆಚ್ಚಿನ ಸಂಚಿಕೆಗಳ ಚಿತ್ರೀಕರಣ ಪೂರೈಸಿದ್ದು, ಪ್ರತೀ ಫ್ರೇಮ್ ನಲ್ಲೂ ಸಿನಿಮಾದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ರೋಚಕ ಸನ್ನಿವೇಷಗಳನ್ನು ಹೆಣೆಯಲಾಗಿದ್ದು ಬಿಗಿಯಾದ ಚಿತ್ರಕಥೆ ಹಾಗೂ ಸತ್ವಯುತ ಸಂಭಾಷಣೆಗಳು ಈ ಧಾರಾವಾಹಿಯಲ್ಲಿ ಇರಲಿವೆ.

ಜೈ ಹನುಮಾನ್ ಕಥಾಹಂದರ
ಹದಿನಾಲ್ಕು ಲೋಕಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಅಜರಾಮರನಾಗುವ ವರ ಪಡೆದುಕೊಂಡಿದ್ದ ರಾವಣ ತನ್ನ ಅಧಿಕಾರ ಲಾಲಸೆಯಿಂದ ಇತರ ಜೀವಿಗಳ ಮೇಲೆ ಕ್ರೌರ್ಯ ಎಸಗುತ್ತಿದ್ದ. ಅವನನ್ನು ಸದೆ ಬಡಿಯಲು ಹನುಮಂತ ಜನ್ಮ ತಳೆಯುತ್ತಾನೆ. ಅವನ ಹುಟ್ಟಿನ ಹಿನ್ನೆಲೆ. ಮುಂದೆ ಸಾಗುವ ದಾರಿ, ಆತ ಹೇಗೆ ರಾಮನನ್ನು ಸಂಧಿಸುತ್ತಾನೆ? ರಾವಣನ ಸಂಹಾರಕ್ಕೆ ಹೇಗೆ ಸಾಥ್ ನೀಡುತ್ತಾನೆ ಇತ್ಯಾದಿ ಕುತೂಹಲಗಳಿಗೆ ಉತ್ತರ ನೀಡುತ್ತದೆ ಜೈ ಹನುಮಾನ್.

ಅದ್ಧೂರಿ ಸೆಟ್
ಅದ್ಧೂರಿ ಸೆಟ್ ಜತೆಗೆ ಪೂರಕವಾದ ಗ್ರಾಫಿಕ್ಸ್ ಗಳು ಗತವೈಭವವನ್ನು ಮತ್ತೆ ತೆರೆಯ ಮೇಲೆ ತಂದರೆ, ಕಲಾವಿದರ ಪ್ರೌಢ ನಟನೆ ಇಡೀ ಧಾರಾವಾಹಿಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯುತ್ತದೆ.

'ಜೈ ಹನುಮಾನ್' ತಂಡ
ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವವರು ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು. ಕಿರುತೆರೆಯ ನುರಿತ ನರ್ದೇಶಕ, ಬರಹಗಾರ ಬ.ಲ. ಸುರೇಶ್ ‘ಜೈ ಹನುಮಾನ್' ಗೆ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರಕಥೆ ನೀರಜ್ ಮತ್ತು ತಂಡ ಮಾಡುತ್ತಿದ್ದರೆ, ನಿಷಿನ್ ಚಂದ್ರ ಡಿಓಪಿ ಆಗಿದ್ದಾರೆ. ಸಂತೋಷ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಕಾಂಟಿಲೋ ಪ್ರೊಡಕ್ಷನ್ಸ್ ಮುಖ್ಯಸ್ಥ ಅಭಿಮನ್ಯು ಸಿಂಗ್ ಜತೆ ಯಶಸ್ವಿ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿರುವ ಹಿಮಾನಿ, ಗೌತಮ್, ಮನಿಷ್ ಪೋಪಟ್ ಮುಂತಾದವರ ತಂಡ ಇದೆ.

ಬಾಲಕ ಹನುಮಾನ್ ಪಾತ್ರದಲ್ಲಿ ಪ್ರದ್ಯುಮ್ನ
ತಾರಾಗಣದಲ್ಲಿ ಬಾಲಕ ಹನುಮಾನ್ ಪಾತ್ರವನ್ನು ಪ್ರದ್ಯುಮ್ನ ನಿರ್ವಹಿಸುತ್ತಿದ್ದಾನೆ. ಅಂಜನಾ ಪಾತ್ರವನ್ನು ಪ್ರಿಯಾಂಕಾ ಚಿಂಚೋಳಿ, ಕೇಸರಿಯಾಗಿ ಪ್ರಸನ್ನ, ಶಿವನಾಗಿ ಮಧು, ರಾವಣನಾಗಿ ವಿನಯ್ ಗೌಡ, ಕೈಕಸಿಯಾಗಿ ರಂಜಿತಾ ಸೂರ್ಯವಂಶಿ, ಪಾರ್ವತಿಯಾಗಿ ನಾಗಶ್ರೀ ವೀಕ್ಷಕರನ್ನು ರಂಜಿಸಲಿದ್ದಾರೆ.

ಪ್ರಸಾರ ಯಾವಾಗ.?
ದುಷ್ಟರ ಸಂಹಾರಕ್ಕಾಗಿ ಅವತರಿಸಿದ 'ಜೈ ಹನುಮಾನ್ ಇದೇ ಅಕ್ಟೋಬರ್ 8ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











