ಜೀ ಕನ್ನಡದಲ್ಲಿ ಮುಂದಿನ ವಾರದಿಂದ ಹರಿಯಲಿದೆ 'ಮಹಾನದಿ'
ಕಳೆದ ಹತ್ತು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ 'ಜೀ ಕನ್ನಡ' ವಾಹಿನಿ 'ನಾಗಿಣಿ', 'ಗಂಗಾ', 'ಮಹಾದೇವಿ' ಅಂತಹ ವಿಭಿನ್ನ ಕಥಾಹಂದರವುಳ್ಳ ಧಾರಾವಾಹಿಗಳನ್ನೊಳಗೊಂಡಂತೆ 'ಡ್ರಾಮಾ ಜ್ಯೂನಿಯರ್ಸ್', 'ಸರಿಗಮಪ', 'ವೀಕೆಂಡ್ ವಿತ್ ರಮೇಶ್' ಅಂತಹ ರಿಯಾಲಿಟಿ ಶೋಗಳ ಮೂಲಕ ಜನಮನ ಗೆದ್ದಿದೆ.
ಕನ್ನಡ ಮನರಂಜನಾ ವಾಹಿನಿಗಳ ಪೈಕಿ ಸದ್ಯ ಅಗ್ರಸ್ಥಾನಕ್ಕೇರಿರುವ ಜೀ ಕನ್ನಡ ವಾಹಿನಿಯಲ್ಲಿ 'ಮಹಾನದಿ' ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ['ಜೀ ಕನ್ನಡ' ವಾಹಿನಿಯ 'ಮಹರ್ಷಿವಾಣಿ'ಗೆ 2 ವರ್ಷಗಳ ಸಂಭ್ರಮ]

'ಪದವಿಯ ಆಟಕೆ ಪ್ರೀತಿಯೇ ಪಗಡೆ' ಎಂಬ ಅಡಿಬರಹ ಹೊತ್ತು ಬರುತ್ತಿರುವ 'ಮಹಾನದಿ' ರಾಜಕೀಯ ಹಿನ್ನೆಲೆಯಿರುವ ಪ್ರೇಮ ಕಥೆ. ನಾರಾಯಣಪಟ್ಟಣ ಎಂಬ ಸಣ್ಣ ಊರಿನ ಪೋಸ್ಟ್ ಮ್ಯಾನ್ ಮಗಳು ಮಧುರ ಊರಿನ ಎಂ.ಎಲ್.ಎ ವಿಕ್ರಂ ಸಿಂಹನಿಗೆ ತನ್ನ ಅಕ್ಕ ಮೇಘನಳನ್ನು ಮದುವೆ ಮಾಡಿಸಲು ಹೋಗಿ ತಾನೇ ಅವನಿಂದ ಮೋಹಿತಳಾಗುತ್ತಾಳೆ. [ಜೀ ಕನ್ನಡ ಟಿ.ಆರ್.ಪಿ ಉಡೀಸ್; ಎಲ್ಲಾ 'ಡ್ರಾಮಾ' ಮಾಡಿದ್ದಕ್ಕೆ.!]

ಅವಳ ಇಡೀ ಕುಟುಂಬ ತಮಗೇ ಅರಿವಿಲ್ಲದಂತೆ ರಾಜಕೀಯ ಚದುರಂಗದ ದಾಳಗಳಾಗುತ್ತಾರೆ. ಈ ಚಕ್ರವ್ಯೂಹದಿಂದ ಮಧುರಾ ಹೇಗೆ ಪಾರಾಗುತ್ತಾಳೆ? ಅಕ್ಕನ ಸಂಸಾರವನ್ನು ಹೇಗೆ ರೂಪಿಸುತ್ತಾಳೆ ಅನ್ನೋದೇ 'ಮಹಾನದಿ' ಕಥೆಯ ಸಾರಾಂಶ.

ಈಗಾಗಲೇ 'ಶ್ರೀರಸ್ತು ಶುಭಮಸ್ತು', 'ಚಿ.ಸೌ.ಸಾವಿತ್ರಿ', 'ಮಹಾದೇವಿ', 'ಪುನರ್ ವಿವಾಹ'ದಂತಹ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಶೃತಿ ನಾಯ್ಡು ರವರು ಈ ಕಾರ್ಯಕ್ರಮದ ನಿರ್ಮಾಣ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಸಿನಿಮಾ ನಟ ನಾಗಕಿರಣ್, ಕೀರ್ತಿ ರಾಜ್, ಭಾವನಾ ಬೆಳಗೆರೆ ಸೇರಿದಂತೆ ಹಲವಾರು ಪ್ರಸಿದ್ಧ ನಟರೂ ಹಾಗೂ ನುರಿತ ತಂತ್ರಜ್ಞರು ಈ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
'ಮಹಾನದಿ' ಧಾರಾವಾಹಿ ಇದೇ ಜುಲೈ 4 ರಿಂದ ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











