ಪ್ರಸಿದ್ಧ ಚಲನಚಿತ್ರ 'ಮಾನಸ ಸರೋವರ' ಈಗ ಕಿರುತರೆ ಧಾರಾವಾಹಿ
ನಂದಿನಿ, ಜೀವನದಿ, ಜೋ ಜೋ ಲಾಲಿ, ಅರಮನೆ, ದೊಡ್ಡಮನೆ ಸೊಸೆ, ಬ್ರಹ್ಮಾಸ್ತ್ರ ಧಾರಾವಾಹಿಗಳ ಯಶಸ್ಸಿನ ನಂತರ, ಈಗ ಕಿರುತೆರೆಯಲ್ಲೇ ಮೊದಲ ಬಾರಿಗೆ ಹೊಸದೊಂದು ಸಾಹಸಕ್ಕೆ ಉದಯ ಟಿವಿ ಕೈಹಾಕಿದೆ.
ಜನಪ್ರಿಯ ಕನ್ನಡ ಚಿತ್ರವೊಂದನ್ನು ಮತ್ತೆ ಜನಮಾನಸದ ಎದುರಿಗೆ ಹೊಸ ರೀತಿಯಲ್ಲಿ ತರುವ ಪ್ರಯತ್ನಕ್ಕೆ ಉದಯ ಟಿವಿ ಮುಂದಾಗಿದೆ. 'ಮಾನಸ ಸರೋವರ' ಎಂಬ ಚಿತ್ರವನ್ನು ಧಾರಾವಾಹಿಯಾಗಿ ಮುಂದುವರಿಸಲು ಉದಯ ಟಿವಿ ಸಜ್ಜಾಗಿದೆ.
'ಮಾನಸ ಸರೋವರ'.... 1983 ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ಸಿನಿಮಾ. ಪುಟ್ಟಣ್ಣ ಕಣಗಾಲ್ ನಿರ್ದೇಶನದ, ಶ್ರೀನಾಥ್, ಪದ್ಮಾ ವಾಸಂತಿ ಮತ್ತು ರಾಮಕೃಷ್ಣ ಅಭಿನಯದ ಚಿತ್ರ. ಈಗ ಇದೇ ಸಿನಿಮಾದ ಮುಂದುವರೆದ ಭಾಗವಾಗಿ 'ಮಾನಸ ಸರೋವರ' ಎನ್ನುವ ಹೆಸರಿನಲ್ಲೇ ಉದಯ ಟಿವಿಯಲ್ಲಿ ಧಾರಾವಾಹಿ ಟೆಲಿಕಾಸ್ಟ್ ಆಗೋಕೆ ರೆಡಿಯಾಗಿದೆ. ಮುಂದೆ ಓದಿರಿ....

ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಪಕಿ
'ಮಾನಸ ಸರೋವರ' ಧಾರಾವಾಹಿಯಲ್ಲಿ ಒಂದು ಕಡೆ ಶ್ರೀನಾಥ್, ಪದ್ಮಾ ವಾಸಂತಿ, ರಾಮಕೃಷ್ಣ ನಟಿಸುತ್ತಿದ್ದಾರೆ ಅನ್ನೋದಾದ್ರೆ ಮತ್ತೊಂದು ಕಡೆ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಡಾ|| ಶಿವರಾಜ್ ಕುಮಾರ್ ರವರ ಬ್ಯಾನರ್ ಶ್ರೀಮುತ್ತು ಸಿನಿ ಕ್ರಿಯೇಷನ್ಸ್ ಮೂಲಕ ಈ ಧಾರಾವಾಹಿಯನ್ನ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ ರವರ ಮಗಳು ನಿವೇದಿತಾ ಶಿವರಾಜ್ ಕುಮಾರ್ ಇದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

ಸಿನಿಮಾದ ಮುಂದುವರಿದ ಭಾಗ
ಮನಸ್ಸಿನ ಆಧಾರದ ಮೇಲೆ ಚಿತ್ರಿತವಾಗಿದ್ದ 'ಮಾನಸ ಸರೋವರ' ಸಿನಿಮಾ ಬಹು ಸೂಕ್ಷ್ಮ ಕಥಾಹಂದರ ಹೊಂದಿದ್ದ ಚಿತ್ರ. ಈಗ ಅದರ ಮುಂದುವರೆದ ಭಾಗವಾಗಿ ಸೀರಿಯಲ್ ಬರ್ತಿದೆ ಅಂದ್ರೆ ವೀಕ್ಷಕ ಪ್ರಭುಗಳಿಗೆ ಅದೊಂದು ರಸದೌತಣವೇ ಸರಿ. ಈಗಾಗಲೇ ಈ ಧಾರಾವಾಹಿಯ ಪ್ರೋಮೋಗಳು ಕರ್ನಾಟಕದಾದ್ಯಂತ ಮನೆಮಾತಾಗಿದೆ. ಅದ್ರಲ್ಲೂ ಶಿವಣ್ಣನೇ ಒಂದು ಪ್ರೋಮೋದಲ್ಲಿ ಈ ಧಾರಾವಾಹಿಯ ಬಗ್ಗೆ ಹೇಳಿರೋದು ಅವರಿಗೆ ಈ ಕಥೆಯ ಮೇಲಿರೋ ಭರವಸೆ ತೋರಿಸತ್ತೆ.

ಧಾರಾವಾಹಿಯ ಕಥೆಯೇನು.?
'ಮಾನಸ ಸರೋವರ' ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಹುಚ್ಚನಾದ ಡಾ||ಆನಂದ್ ಈಗ ಏನಾಗಿದ್ದಾರೆ? ಸಂತೋಷ್ ನನ್ನು ವರಿಸಿದ ವಾಸಂತಿ ಬದುಕು ಈಗ ಹೇಗಿದೆ? ಆನಂದ್ ನನ್ನು ದುಡ್ಡಿನಾಸೆಗೆ ಬಿಟ್ಟು ಹೋಗಿದ್ದ ಅವರ ಪತ್ನಿ ಸರೋಜಾ ಈಗ ಏನು ಮಾಡುತ್ತಿದ್ದಾಳೆ? ಎಂಬ ಎಳೆಯನ್ನು ಇಟ್ಟುಕೊಂಡು ಧಾರಾವಾಹಿಯನ್ನು ಮುಂದುವರಿಸಲಾಗಿದೆ.

ಶಿವಣ್ಣ ಏನಂತಾರೆ.?
"ಪುಟ್ಟಣ್ಣ ಅವರು ನನ್ನ ಫೇವರಿಟ್ ನಿರ್ದೇಶಕ, ಭಾರತೀಯ ಚಿತ್ರರಂಗದಲ್ಲೇ ಅವರಂತಹ ನಿರ್ದೇಶಕ ಇನ್ನೊಬ್ಬರಿಲ್ಲ್ಲ. ಡೈರೆಕ್ಟರ್ಸ್ ಡೈರೆಕ್ಟರ್ ಅವರು. ಮಾಮೂಲಿ ಕಥೆಗಳನ್ನ ಹೊರತು ಪಡಿಸಿ ಹೊಸ ಪ್ರಯತ್ನ ಮಾಡಬೇಕು ಅನ್ನೋದು ನನ್ನ ಮಗಳ ಆಸೆ ಆಗಿತ್ತು. ಅದಕ್ಕೋಸ್ಕರ 'ಮಾನಸ ಸರೋವರ' ಧಾರಾವಾಹಿ ಮಾಡೋಕೆ ಹೊರಟೆವು" ಎನ್ನುತ್ತಾರೆ ಶಿವಣ್ಣ.

ನಿವೇದಿತಾ ಶಿವರಾಜ್ ಕುಮಾರ್ ಏನಂತಾರೆ.?
"ಎಲ್ಲಿ ಕೂಡ ಕಾಂಪ್ರೊಮೈಸ್ ಮಾಡಿಕೊಳ್ಳದೇ ಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದೇವೆ. ಸಿನಿಮಾಗಳಿಗೆ ಬಳಸುವ ರೆಡ್ ಎಪಿಕ್, ಆರೀ ಅಲೆಕ್ಸಾ ಕ್ಯಾಮರಾಗಳಲ್ಲಿ ಶೂಟಿಂಗ್ ನಡೀತಿದೆ. ಶ್ರೀನಾಥ್ ಸರ್ ಸೇರಿದಂತೆ ಪ್ರತೀ ಕಲಾವಿದರೂ ಕೂಡ ತುಂಬ ಚೆನ್ನಾಗಿ ಆಕ್ಟ್ ಮಾಡುತ್ತಿದ್ದಾರೆ" ಎನ್ನುತ್ತಾರೆ ನಿರ್ಮಾಪಕಿ ನಿವೇದಿತಾ ಶಿವರಾಜ್ ಕುಮಾರ್.

ಶ್ರೀನಾಥ್ ಹೇಳಿದ್ದೇನು.?
"ನಾನು ಈ ಸೀರಿಯಲ್ ನಟನೆ ಮಾಡೋದಕ್ಕೆ ಮುಖ್ಯ ಕಾರಣ ಪುಟ್ಟಣ್ಣ ಅವರು. ಪ್ರತಿ ಸೀನಿನಲ್ಲಿ ನಟನೆ ಮಾಡೋವಾಗ ಅವರೇ ಕಣ್ಮುಂದೆ ಬರುತ್ತಾರೆ. ಭೌತಿಕವಾಗಿ ನಮ್ಮ ಜೊತೆಗೆ ಅವರು ಇಂದು ಇರದೇ ಇದ್ದರೂ, ಮಾನಸಿಕವಾಗಿ ಜೊತೆಗಿದ್ದಾರೆ ಎನ್ನುವ ಭಾವ ನನ್ನನ್ನು ಆವರಿಸಿದೆ" ಎನ್ನುತ್ತಾರೆ ಪ್ರಣಯರಾಜ ಶ್ರೀನಾಥ್.

ರಾಮಕೃಷ್ಣ ಹೇಳಿದಿಷ್ಟು
"ನಾನು ಧಾರಾವಾಹಿ ಮಾಡೋಕೆ ಶಿವರಾಜ್ ಕುಮಾರ್ ಅವರೇ ಕಾರಣ. ರಾಜಕುಮಾರ್ ಕುಟುಂಬ ಅಂದರೆ ನನಗೆ ಅಪರಿಮಿತ ವಿಶ್ವಾಸ, ಧಾರಾವಾಹಿ ಕೂಡ ತುಂಬ ಚೆನ್ನಾಗಿ ಮೂಡಿಬರುತ್ತಿದೆ" ಅಂತಾರೆ ನಟ ರಾಮಕೃಷ್ಣ.

ಥ್ರಿಲ್ ನೀಡಿದೆ ಎಂಬ ಪದ್ಮಾ ವಾಸಂತಿ
"ಮಾನಸ ಸರೋವರ ನನ್ನ ಫಸ್ಟ್ ಸಿನಿಮಾ. ಈಗ ಮತ್ತೆ ಅದೇ ಕಥೆಯ ಮುಂದುವರಿಕೆಯನ್ನ ಧಾರಾವಾಹಿಯಾಗಿ ಮಾಡ್ತಾ ಇರೋದೆ ಒಂದು ಥ್ರಿಲ್" ಎನ್ನುತ್ತಾರೆ ನಟಿ ಪದ್ಮಾವಾಸಂತಿ.

ಮೂಲಕಥೆಗೆ ಚ್ಯುತಿ ತಂದಿಲ್ಲ
'ಮಾನಸ ಸರೋವರ' ಧಾರಾವಾಹಿಯನ್ನು ಮೂಲಕಥೆಗೆ ಯಾವ ಚ್ಯುತಿಯೂ ಬರದ ಹಾಗೆ ಈ ಕಥೆಯನ್ನ ಹೊಸೆಯಲಾಗಿದೆ. ಧಾರಾವಾಹಿ ರಂಗದಲ್ಲಿ ನುರಿತ ನಿರ್ದೇಶಕರಾದ ರಾಮ್ ಜಯಶೀಲ್ ವೈದ್ಯ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಶಿವಣ್ಣನವರೇ ಮೊದಲ 10 ಎಪಿಸೋಡ್ ಗಳ ಕಥೆಯನ್ನೂ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲಿ ಒಂದು ಸಂಚಲನವನ್ನಂತೂ ಈ ಧಾರಾವಾಹಿ ಹುಟ್ಟುಹಾಕುತ್ತೆ ಅನ್ನೋದ್ರಲ್ಲಿ ಯಾವ ಸಂಶಯವೂ ಇಲ್ಲ. ಧಾರಾವಾಹಿಯ ಕಥೆ ಹೇಗೆ ಶುರು ಆಗುತ್ತೆ ಅಂದ್ರೆ ವಾಸಂತಿಯ ಮಗಳು ಸುನಿಧಿ ಮನಃಶಾಸ್ತ್ರಜ್ಞೆ. ತನ್ನ ತಾಯಿಯಿಂದಲೇ ಹುಚ್ಚನಾದ ಡಾ||ಆನಂದ್ ನನ್ನು ಕ್ಯೂರ್ ಮಾಡುತ್ತೇನೆ ಎಂದು ಶಪಥ ಮಾಡುವ ಸುನಿಧಿ ಆ ಪ್ರಯತ್ನದಲ್ಲಿ ಗೆಲ್ಲುತ್ತಾಳಾ? ತನ್ನ ತಾಯಿಯಿಂದಾನೇ ಹೀಗಾಯ್ತು ಅಂತ ಗೊತ್ತಾದ್ರೆ ಸುನಿಧಿ ಏನು ಮಾಡ್ತಾಳೆ? ಇವೇ ಮೊದಲಾದ ಹತ್ತಾರು ಟ್ವಿಸ್ಟ್ ಗಳನ್ನು ಒಳಗೊಂಡಿದೆ 'ಮಾನಸ ಸರೋವರ' ಧಾರಾವಾಹಿ.

ಒಂದು ಕಾಂಟೆಸ್ಟ್ ಕೂಡ ಇದೆ
'ಮಾನಸ ಸರೋವರ' ತಂಡ ಒಂದು ಕಾಂಟೆಸ್ಟ್ ಕೂಡಾ ಮಾಡ್ತಿದ್ದಾರೆ. ಫೆಬ್ರವರಿ 19 ರಿಂದ ಮಾರ್ಚ್ 2 ರವರೆಗೆ ಪ್ರತಿದಿನ 'ಮಾನಸ ಸರೋವರ' ಕುರಿತಾದ ಪ್ರಶ್ನೆಗಳನ್ನು ಕೇಳುತ್ತಾರೆ. ಸರಿಯಾದ ಉತ್ತರ ಕೊಟ್ಟು ವಿಜಯಶಾಲಿಗಳಾದ ಒಂದು ಫ್ಯಾಮಿಲಿ ಇಡೀ 'ಮಾನಸ ಸರೋವರ' ತಂಡ ಹಾಗೂ ಶಿವಣ್ಣನ ಜೊತೆ ಭೋಜನ ಕೂಟದಲ್ಲಿ ಭಾಗವಹಿಸಬಹುದು.

'ಮಾನಸ ಸರೋವರ' ಪ್ರಸಾರ ಯಾವಾಗ.?
ಉದಯ ಟಿವಿಯ 'ಮಾನಸ ಸರೋವರ' ಇದೇ ಫೆಬ್ರವರಿ 26ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











