'ನಿನಗಾಗಿ' ಧಾರಾವಾಹಿಯ ನಟನ ರಿತ್ವಿಕ್ ಮಠದ್ ಹೊಸ ಸಿನಿಮಾ ಏನಾಯ್ತು?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ನಿನಗಾಗಿ'ಯೂ ಒಂದು. 'ನಿನಗಾಗಿ' ಧಾರಾವಾಹಿಯಲ್ಲಿ ನಾಯಕ ಜೀವನಾಗಿ ನಟಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ರಿತ್ವಿಕ್ ಮಠದ್. ತನ್ನ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ರಿತ್ವಿಕ್ ಮಠದ್ ಅವರು ನಟಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಆದರೂ ತಮ್ಮ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ಕುವರ.
ಕೃಷ್ಣ ಎನ್ನುವ ಮುದ್ದು ಹುಡುಗಿಯ ಅಪ್ಪ ಜೀವ ಆಗಿ ತೆರೆ ಮೇಲೆ ಮೋಡಿ ಮಾಡುತ್ತಿರುವ ರಿತ್ವಿಕ್ ಮಠದ್ ಅವರ ಅಭಿನಯ ಅದೆಷ್ಟು ಮೆಚ್ಚುಗೆಗೆ ಪಾತ್ರನಾಗಿದೆ ಎಂಬುದಕ್ಕೆ ಅವರು ಪಡೆದಿರುವ ಪ್ರಶಸ್ತಿಯೇ ಉದಾಹರಣೆ. ಹೌದು, ಕಳೆದ ವರ್ಷ ನಡೆದ ಅನುಬಂಧ ಅವಾರ್ಡ್ಸ್ನಲ್ಲಿ ಮನೆ ಮೆಚ್ಚಿದ ಅಪ್ಪ ಪ್ರಶಸ್ತಿ ರಿತ್ವಿಕ್ ಅವರ ಪಾಲಿಗೆ ದೊರಕಿದೆ.

ಅಂದ ಹಾಗೇ ಅನಿಮೇಶನ್ನಲ್ಲಿ ಬಿಎಸ್ಸಿ ಪದವಿ ಪಡೆದಿರುವ ರಿತ್ವಿಕ್ ಅವರು ನಟನೆಗೆ ಕಾಲಿಟ್ಟಿದ್ದು ಶ್ಯಾಮನಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯಲ್ಲಿ ನಾಯಕ ಶ್ಯಾಮ್ ಪಾತ್ರಕ್ಕೆ ಜೀವ ತುಂಬುವ ಮೂಲಕ ನಟನೆಯ ನಂಟು ಬೆಳೆಸಿಕೊಂಡ ರಿತ್ವಿಕ್ ನಟನಾಗುವ ಸಲುವಾಗಿ ಪ್ರತಿಷ್ಠಿತ ಕಂಪೆನಿಯ ಕೆಲಸವನ್ನು ಕೂಡಾ ಬಿಟ್ಟಿದ್ದರು.
'ಅನುರೂಪ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಈತ ಸೀದಾ ಹಾರಿದ್ದು ಹಿರಿತೆರೆಗೆ. 'ಜಸ್ಟ್ ಲವ್' ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ ಈತ ಅಲ್ಲೂ ಕೂಡಾ ತನ್ನ ನಟನೆಯ ಮೂಲಕ ಗುರುತಿಸಿಕೊಂಡರು. ನಂತರ 'ಯುವ ಸಾಮ್ರಾಟ್', 'ಶಂಭೂ ಮಹಾದೇವ', 'ಗಿಫ್ಟ್ ಬಾಕ್ಸ್' ಸಿನಿಮಾಗಳಲ್ಲಿ ನಟಿಸಿದ್ದ ರಿತ್ವಿಕ್ ಮತ್ತೆ ಮುಖ ಮಾಡಿದ್ದು ಕಿರುತೆರೆಯತ್ತ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮು ಪಾತ್ರದಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡರು ರಿತ್ವಿಕ್. ಪ್ರೀತಮ್ ಶೆಟ್ಟಿ ನಿರ್ದೇಶನದಡಿಯಲ್ಲಿ ಮೂಡಿ ಬರುತ್ತಿದ್ದ ಈ ಧಾರಾವಾಹಿ ಮರಾಠಿ ಧಾರಾವಾಹಿಯ ರಿಮೇಕ್ ಹೌದು. ಉತ್ತರ ಕನ್ನಡ ಸೊಬಗಿನ ಭಾಷೆಯನ್ನೊಳಗೊಂಡಿದ್ದ ಈ ಧಾರಾವಾಹಿಯು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿತ್ತು.
ಉತ್ತರ ಕನ್ನಡ ಹುಡುಗ ಶಿವರಾಮು ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ರಿತ್ವಿಕ್ 'ಗಿಣಿರಾಮ' ಧಾರಾವಾಹಿಯು ಮುಗಿದದ್ದೇ ತಡ ಸಿನಿಮಾದಲ್ಲಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡರು. 'ಕಲ್ಲುಸಕ್ರೆ' ಸಿನಿಮಾದಲ್ಲಿ ಬಣ್ಣ ಹಚ್ಚಿದ ರಿತ್ವಿಕ್ ಮಠದ್ ಜೀವ ಆಗಿ ಕಿರುತೆರೆಗೆ ಮರಳಿದರು. 'ನಿನಗಾಗಿ' ಧಾರಾವಾಹಿಯಲ್ಲಿ ಸಿಂಗಲ್ ಪೆರೇಂಟ್ ಜೀವ ಪಾತ್ರದಲ್ಲಿ ನಟಿಸುತ್ತಿರುವ ಇವರು ಧಾರಾವಾಹಿಯಲ್ಲಿ ಬ್ಯುಸಿಯಾಗಿರುವಾಗಲೇ ಮಗದೊಂದು ಸಿನಿಮಾದ ಅವಕಾಶ ಅವರಿಗೆ ದೊರಕಿತ್ತು.
ಪ್ರೀತಮ್ ಶೆಟ್ಟಿ ನಿರ್ದೇಶನದ 'ಮಾರ್ನಮಿ' ಎನ್ನುವ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ರಿತ್ವಿಕ್ ಕಾಣಿಸಿಕೊಳ್ಳಲಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಥೆಯನ್ನು 'ಮಾರ್ನಮಿ' ಸಿನಿಮಾದ ಮೂಲಕ ವೀಕ್ಷಕರ ಮುಂದೆ ಪ್ರೀತಮ್ ಶೆಟ್ಟಿ ಹೇಳ ಹೊರಟಿದ್ದು ಅದರಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ ರಿತ್ವಿಕ್ ಮಠದ್. ಒಟ್ಟಿನಲ್ಲಿ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ ರಿತ್ವಿಕ್.


Click it and Unblock the Notifications











