ಎಂಟು ವರ್ಷದ ಬಳಿಕ ಜೀ ಕನ್ನಡಕ್ಕೆ ನಿರೂಪಕನಾಗಿ ಮರಳಿದ ನಿರಂಜನ್ ದೇಶಪಾಂಡೆ ಹೇಳಿದ್ದೇನು?
ಧಾರಾವಾಹಿಗಳ ಜೊತೆಗೆ ಭಿನ್ನ ರೀತಿಯ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡವೂ ಒಂದು. ಹೀಗಿರುವಾಗ ಜೀ ಕನ್ನಡದಲ್ಲಿ ಇದೀಗ ಹೊಸ ರಿಯಾಲಿಟಿ ಶೋ ಶುರುವಾಗಿದೆ. ಅದು 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2. 'ಭರ್ಜರಿ ಬ್ಯಾಚುಲರ್ಸ್' ಸೀಸನ್ ಎರಡು ವರ್ಷದ ಹಿಂದೆ ಪ್ರಸಾರ ಕಂಡಿತ್ತು. 24 ಜೂನ್ 2023 ರಂದು ಪ್ರಸಾರ ಕಂಡ 'ಭರ್ಜರಿ ಬ್ಯಾಚುಲರ್ಸ್' ನಲ್ಲಿ ಹತ್ತು ಜನ ಬ್ಯಾಚುಲರ್ಸ್ ಭಾಗವಹಿಸಿದ್ದರು.
ಅಂದ ಹಾಗೇ ಆ ಹತ್ತು ಜನ ಬ್ಯಾಚುಲರ್ಸ್ಗಳಿಗೆ ಹತ್ತು ಜನ ಮೆಂಟರ್ಗಳೂ ಕೂಡಾ ಇದ್ದರು. ಬರೋಬ್ಬರಿ ಮೂವತ್ತೆರಡು ಸಂಚಿಕೆಗಳು ಪ್ರಸಾರಗೊಂಡ ಈ ಶೋವಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಈ ಶೋವಿನ ತೀರ್ಪುಗಾರರಾಗಿದ್ದರೆ ಅಕುಲ್ ಬಾಲಾಜಿ ನಿರೂಪಕರಾಗಿದ್ದರು.

ಇದೀಗ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2 ಶುರುವಾಗಿದೆ. ಕಳೆದ ಸೀಸನ್ನಲ್ಲಿ ಹತ್ತು ಜನ ಬ್ಯಾಚುಲರ್ಸ್ ಹಾಗೂ ಹತ್ತು ಜನ ಮೆಂಟರ್ಗಳು ಇದ್ದಂತೆ ಈ ಸೀಸನ್ ನಲ್ಲೂ ಹತ್ತು ಜನ ಬ್ಯಾಚುಲರ್ಸ್ ಹಾಗೂ ಮೆಂಟರ್ಗಳಿದ್ದಾರೆ. ರವಿಚಂದ್ರನ್ ಹಾಗೂ ರಚಿತಾರಾಮ್ ಅವರು ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದಾರೆ. ಸಣ್ಣ ಬದಲಾವಣೆ ಎಂದರೆ ಈ ಬಾರಿ ಈ ಶೋ ನಿರೂಪಣೆ ಮಾಡುತ್ತಿರುವುದು ಮಾತ್ರ ನಿರಂಜನ್ ದೇಶಪಾಂಡೆ.
'ಭರ್ಜರಿ ಬ್ಯಾಚುಲರ್ಸ್' ಸೀಸನ್ 2 ನಿರೂಪಕರಾಗಿ ನಿರಂಜನ್ ದೇಶಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಆರ್ಜೆ ಆಗಿ ವೃತ್ತಿಜೀವನ ಶುರು ಮಾಡಿದ್ದ ನಿರಂಜನ್ ದೇಶಪಾಂಡೆ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿದ್ದಾರೆ. ಪದವಿಯ ಬಳಿಕ ಇನ್ನೇನು ಉದ್ಯೋಗ ಹುಡುಕಬೇಕು ಎನ್ನುವಷ್ಟರಲ್ಲಿ ರೇಡಿಯೋ ಚಾನೆಲ್ ಒಂದಕ್ಕೆ ಆಡಿಶನ್ ನೀಡುವ ಅವಕಾಶ ಇವರಿಗೆ ಸಿಕ್ಕಿತು. ಆದದ್ದಾಗಲಿ ಎಂದು ಆಡಿಶನ್ ನೀಡಿದ ನಿರಂಜನ್ ಆರ್ ಜೆ ಆಗಿ ವೃತ್ತಿ ಜೀವನ ಶುರು ಮಾಡಿದರು.
ಆರ್ ಜೆ ಆಗಿ ನಾಲ್ಕು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನಿರಂಜನ್ ನಂತರ ಕಾಣಿಸಿಕೊಂಡಿದ್ದು ನಟನಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಲನ' ಧಾರಾವಾಹಿಯಲ್ಲಿ ಅಂಜನ್ ಪಾತ್ರದಲ್ಲಿ ನಟಿಸುವ ಮೂಲಕ ನಟನಾ ಲೋಕದಲ್ಲಿ ಮಿಂಚಿದರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್' 4 ರ ಸ್ಪರ್ಧಿಯಾಗಿದ್ದ ಇವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ವೀಕ್ಷಕರ ಮನೆ, ಮನ ಸೆಳೆಯುವಲ್ಲಿ ಯಶಸ್ವಿಯಾದರು.
ನಂತರ 'ಮಜಾಭಾರತ' ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡ ಇವರು ಮುಂದೆ 'ತುತ್ತಾಮುತ್ತಾ' ಸೀಸನ್ 1 ಮತ್ತು 2, 'ಸವಾಲಿಗೆ ಸೈ', 'ಗಿಚ್ಚಿಗಿಲಿ', 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 2, 'ಗಿಚ್ಚಿ ಗಿಲಿಗಿಲಿ' 2 ಶೋ ನಿರೂಪಕರಾಗಿ ವೀಕ್ಷಕರನ್ನು ತಮ್ಮ ಮಾತಿನಿಂದಲೇ ರಂಜಿಸಿದ್ದಾರೆ.
ಇದೀಗ 'ಭರ್ಜರಿ ಬ್ಯಾಚುಲರ್ಸ್' ನ ಸಾರಥ್ಯ ವಹಿಸಿರುವ ನಿರಂಜನ್ ದೇಶಪಾಂಡೆ ಸೋಶಿಯಲ್ ಮೀಡಿಯಾ ಪೇಜ್ನಲ್ಲೂ ಲೈವ್ ಬಂದುದಲ್ಲದೇ ಜೀ ಕನ್ನಡ ವಾಹಿನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಟನಾಗಿ, ರೇಡಿಯೋ ಜಾಕಿಯಾಗಿ, ರಂಗಭೂಮಿ ಕಲಾವಿದನಾಗಿ ಜೊತೆಗೆ ನಿರೂಪಕನಾಗಿ ನಾನು ನಿಮ್ಮೆಲ್ಲರಿಗೂ ಪರಿಚಿತ. ನಾನು ಒಂದಷ್ಟು ವರ್ಷಗಳಿಂದ ನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿರುವುದು ಕೂಡಾ ನಿಮಗೆ ತಿಳಿದಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಿರೂಪಣೆ ಮಾಡಿದ ಶೋ 'ಪರದೇಶದಲ್ಲಿ ಪರದಾಟ' ಅದು ಪ್ರಸಾರವಾಗುತ್ತಿದ್ದದ್ದು ಜೀ ಕನ್ನಡದಲ್ಲಿ. ಈಗ ಎಂಟತ್ತು ವೃರ್ಷಗಳ ಬಳಿಕ ಮತ್ತೆ ಜೀ ಕನ್ನಡಕ್ಕೆ ನಿರೂಪಕನಾಗಿ ಬರುತ್ತಿದ್ದೇನೆ. ನನ್ನನ್ನು ಹಾರೈಸಿ ಎಂದು ಹೇಳಿಕೊಂಡಿದ್ದಾರೆ.
ಇದರ ಜೊತೆಗೆ 'ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 1'ರ ನಿರೂಪಣೆಯನ್ನು ಅಕುಲ್ ಬಾಲಾಜಿ ಅವರು ಮಾಡಿದ್ದರು. ಇದೀಗ ನನ್ನ ಸರದಿ. ಅಕುಲ್ ಅವರಷ್ಟು ಚೆನ್ನಾಗಿ ಮಾಡುವುದಕ್ಕೆ ನನಗೆ ಬರದಿದ್ದರೂ ತಕ್ಕಮಟ್ಟಿಗೆ ಮಾಡುತ್ತೇನೆ. ಖಂಡಿತವಾಗಿಯೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನಿಮ್ಮೆಲ್ಲರಿಗೂ ಮನರಂಜನೆ ಮಹಾಪೂರವನ್ನೇ ಉಣಬಡಿಸುತ್ತೇನೆ ಎಂದಿದ್ದಾರೆ ನಿರಂಜನ್ ದೇಶಪಾಂಡೆ.
ರಂಗಭೂಮಿ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಪ್ರತಿಭಾವಂತ ನಟ. 'ಬೊಂಬೆ ಮಿಠಾಯಿ' ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟ ಇವರು ತದ ನಂತರ
ಪಾದರಸ', 'ನನ್ನ ಪ್ರಕಾರ', 'ಸಂಪ್ನೋಕಿ ರಾಣಿ', 'ಸವರ್ಣ ದೀರ್ಘ ಸಂಧಿ', 'ಪಾಪಿ ಚಿರಾಯು', 'ಆಮ್ಲೆಟ್' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











