ನಾನಿನ್ನೂ ಭಿಕ್ಷೆ ಬೇಡಲ್ಲ; ಬಿಗ್ ಬಾಸ್ ಬಗ್ಗೆ ಕೇಳ್ಬೇಡಿ.. ನಂಗಿಷ್ಟ ಇಲ್ಲ- ಹುಚ್ಚ ವೆಂಕಟ್..!
''ಬಿಗ್ ಬಾಸ್'' ಮೂಲಕ ಹಲವರು ಕನ್ನಡಿಗರಿಗೆ ಪರಿಚಯವಾಗಿದ್ದಾರೆ. ಕೆಲವರು ಬದುಕು ರೂಪಿಸಿಕೊಂಡರೆ.. ಇನ್ನೂ ಕೆಲವರು ''ಬಿಗ್ ಬಾಸ್''ದಿಂದ ಸಿಕ್ಕ ಜನಪ್ರಿಯತೆಯ ಅಮಲಿನಲ್ಲಿ ಮೈ ಮರೆತು ಕಾಣೆಯಾಗಿದ್ದಾರೆ. ಇನ್ನೂ ''ಬಿಗ್ ಬಾಸ್'' ಅಂದರೆ ವಿವಾದಾತ್ಮಕ ವ್ಯಕ್ತಿಗಳ ನೆಚ್ಚಿನ ಸ್ಥಳ ಎನ್ನುವುದು ಲೋಕಾರೂಢಿ ಮಾತು. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಪ್ರತೀ ಸೀಜನ್ನಿನಲ್ಲಿಯೂ...
ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಆ ಪೈಕಿ ಕೆಲ ವರ್ಷಗಳ ಹಿಂದೆ ಕನ್ನಡದ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಬೆಂಕಿ ಚೆಂಡಿನಂತೆ ಸ್ಫರ್ಧಿಗಳ ಹುಟ್ಟಡಗಿಸಿದ್ದವರು ಹುಚ್ಚ ವೆಂಕಟ್. ಹೌದು, ಹುಚ್ಚ ವೆಂಕಟ್.. ಮಾತೆತ್ತಿದರೆ 'ನನ್ ಎಕ್ಡ ನನ್ ಎಕ್ಡ' ಎನ್ನುತ್ತಾ, ಕೆಲ ವರ್ಷಗಳ ಹಿಂದೆ ಸಿಕ್ಕ ಸಿಕ್ಕವರ ಜೊತೆ ರಂಪ ರಾಮಾಯಣ ಮಾಡಿಕೊಳ್ತಿದ್ದ ವ್ಯಕ್ತಿ.

ನಿರ್ದೇಶಕನಾಗಿ-ನಿರ್ಮಾಪಕನಾಗಿ-ನಟನಾಗಿ ಇಷ್ಟೇ ಅಲ್ಲ ಗಾಯಕನಾಗಿ ಕೂಡ ಗುರುತಿಸಿಕೊಂಡ ಹುಚ್ಚ ವೆಂಕಟ್ ಬಗ್ಗೆ ಅನೇಕರಲ್ಲಿ ಅನೇಕ ರೀತಿಯ ಅಭಿಪ್ರಾಯಗಳಿವೆ. ಅದು ಏನೇ ಇರಲಿ.. ವೆಂಕಟ್ ನಿಜಕ್ಕೂ ಗಂಭೀರ ಸ್ವಭಾವದ ಮನುಷ್ಯ. ಆದರೆ..ಸೋಶಿಯಲ್ ಮೀಡಿಯಾದ ವೈಭವೀಕರಣ ವೆಂಕಟರಾಮ್ ಲಕ್ಷ್ಮಣ್ ಅಲಿಯಾಸ್ ಹುಚ್ಚ ವೆಂಕಟ್ ಅವರನ್ನು ಮಾನಸಿಕವಾಗಿ ದ್ವಂದ್ವಕ್ಕೆ ಸಿಲುಕುವಂತೆಯೂ ಮಾಡಿಬಿಟ್ಟಿತು.
ಆದರೆ ಈಗ ಹುಚ್ಚ ವೆಂಕಟ್ ಲೈಫ್ ಓಕೆ ಎನ್ನುವ ಹಂತಕ್ಕೆ ಬಂದು ತಲುಪಿದಂತಿದೆ . ಇದಕ್ಕೆ ಸಾಕ್ಷಿ ಎಂಬಂತೆ ಬಹುಕಾಲದ ನಂತರ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದು ತುಂಬಾನೇ ಸಮಾಧಾನವಾಗಿ ಮನ ಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬದುಕಿನ ಕೆಲ ಪುಟಗಳನ್ನು ತಿರುವಿ ಹಾಕಿದ್ದಾರೆ. ಹೆಣ್ಣನ್ನೂ ಗೌರವದಿಂದ ಕಾಣಬೇಕು ಎಂದು ಕಿವಿ ಮಾತನ್ನು ಕೂಡ ಹೇಳಿರುವ ಹುಚ್ಚ ವೆಂಕಟ್ ''ಬಿಗ್ ಬಾಸ್'' ಕಾರ್ಯಕ್ರಮದ ಕುರಿತು ಕೂಡ ಮಾತನಾಡಿದ್ದಾರೆ.
ಹೌದು, ಅಸಲಿಗೆ ಕಳೆದ ವರ್ಷ ''ಬಿಗ್ ಬಾಸ್'' ಆರಂಭವಾಗುವ ಮುನ್ನ ಕಿಚ್ಚ ಸುದೀಪ್ ಅವರಲ್ಲಿ ಹುಚ್ಚ ವೆಂಕಟ್ ಮನವಿಯೊಂದನ್ನು ಮಾಡಿಕೊಂಡಿದ್ದರು. ಪ್ಲೀಸ್ ''ಬಿಗ್ ಬಾಸ್'' ಮನೆಗೆ ನನ್ನನ್ನೂ ಕರ್ಕೊಳ್ಳಿ ಎಂದು ಹೇಳಿದ್ದರು. ''ಬಿಗ್ ಬಾಸ್''ನಲ್ಲಿ ಭಾಗಿಯಾಗಲು ನನಗೊಂದು ಅವಕಾಶ ಕೊಡಿ, ಒಂದು ದಿನಕ್ಕೆ ಕರೆದರೂ ಓಕೆ, ಒಂದು ವಾರಕ್ಕೆ ಕರೆದರೂ ಓಕೆ. ನೀವು ''ಬಿಗ್ ಬಾಸ್'' ಮನೆಯಲ್ಲಿ ಮೂರು ತಿಂಗಳಿರಬೇಕು ಅಂದರೂ ಕೂಡ ನಾನು ಬರುತ್ತೇನೆ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದರು.

ಹುಚ್ಚ ವೆಂಕಟ್ ಅವರ ಕಳೆದ ವರ್ಷದ ಈ ವಿಡಿಯೋ ಈ ವರ್ಷ ಕೂಡ ವೈರಲ್ ಆಗಿತ್ತು. ಈ ಹಿನ್ನೆಲೆ ಈ ವಿಚಾರದ ಕುರಿತು ''ಫ್ರೀಡಂ ಟಿವಿ''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹುಚ್ಚ ವೆಂಕಟ್ ನಾನು ''ಬಿಗ್ ಬಾಸ್''ನಲ್ಲಿ ಅವಕಾಶ ಕೊಡಿ ಎಂದು ಇನ್ನೂ ಮತ್ತೆ ಕೇಳಲ್ಲ ಅವರಿಗೆ ಇಷ್ಟ ಇದ್ದರೆ ಅವರು ಕರಿತಾರೆ ಇಲ್ಲಾ ಅಂದರೆ ಅವರಿಷ್ಟ ಎಂದು ಹೇಳಿದ್ದಾರೆ.
ಮುಂದುವರೆದು ''ಫ್ರೀಡಂ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ತಾವು ''ಬಿಗ್ ಬಾಸ್''ನಲ್ಲಿದ್ದ ಆ ದಿನಗಳನ್ನು ಕೂಡ ಮೆಲುಕು ಹಾಕಿರುವ ವೆಂಕಟ್ ನಾನು ಕ್ಯಾಮರಾ ಇದೆ ಎಂದು ಯಾವತ್ತು ಮಾತನಾಡಲ್ಲ. ಕ್ಯಾಮರಾ ಇರಲಿ... ಇಲ್ಲದಿರಲಿ.. ನಾನು ಯಾವತ್ತು ಒಂದೇ ತರ ಎಂದು ಹೇಳಿದ್ದಾರೆ.
''ಬಿಗ್ ಬಾಸ್'' ಮೂಲಕ ಜನಪ್ರಿಯತೆ ಸಿಗುತ್ತೆ ಎನ್ನುವ ವಿಚಾರ ನನಗೆ ಆಗ ಗೊತ್ತೇ ಇರಲಿಲ್ಲ ಎಂದು ಹೇಳಿರುವ ಹುಚ್ಚ ವೆಂಕಟ್ ''ಬಿಗ್ ಬಾಸ್'' ಮನೆಯಾಚೆ ಬಂದ ನಂತರ ಸೆಲ್ಫೀಗೋಸ್ಕರ ಜನ ಮುಗಿ ಬೀಳುತ್ತಿದ್ದರು. ಆಗಲೇ ''ಬಿಗ್ ಬಾಸ್''ದಿಂದ ಇಷ್ಟೆಲ್ಲಾ ಜನರ ಪ್ರೀತಿ ಸಿಗುತ್ತಾ ಎನ್ನುವ ಪ್ರಶ್ನೆ ನನಗೆ ಶುರುವಾಯ್ತು . ಆಗ ಅನೇಕರು ''ಬಿಗ್ ಬಾಸ್''ದಿಂದ ಜನಪ್ರಿಯತೆ ಸಿಕ್ಕಿದೆ ಆದರೆ ಜನರ ಈ ಪ್ರೀತಿ ನಿಮಗೆ ಸಿಕ್ತಿರುವುದು ನಿಮ್ಮ ನೇರವಂತಿಕೆಗೆ.. ನಿಮ್ಮ ಮಾತುಗಳಿಗೆ.. ಎಂದು ನನಗೆ ಹೇಳಿದರು ಎಂದು ಹೇಳಿದ್ದಾರೆ. ''ಬಿಗ್ ಬಾಸ್''ನ ನಾನು ಜೀವನಪರ್ಯಂತ ಮರೆಯಲ್ಲ. ನೋವಲ್ಲಿದ್ದಾಗ ನನಗೆ ಕರೆದು ಅವಕಾಶ ನೀಡಿದರು ಅವರಿಗೆ ಧನ್ಯವಾದಗಳು ಎಂದು ಕೂಡ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಕೇವಲ ದೊಡ್ಡವರು ಮಾತ್ರ ಅಲ್ಲ ಚಿಕ್ಕ ಚಿಕ್ಕ ಮಕ್ಕಳು ಕೂಡ ನೋಡುತ್ತಾರೆ. ಹೀಗಾಗಿ ಮನೆಯಲ್ಲಿರುವ ಸ್ಫರ್ಧಿಗಳು ಮಾತನಾಡುವಾಗ ತಮ್ಮ ಮಾತುಗಳ ಮೇಲೆ ನಿಗಾ ವಹಿಸಬೇಕು, ಜವಾಬ್ಧಾರಿಯಿಂದ ವರ್ತಿಸಬೇಕು, ನಿಮ್ಮ ಮಾತು ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ನೋಡ್ಕೊಂಡು ಆಡಿ ಎಂದು ನೈತಿಕತೆಯ ಪಾಠವನ್ನು ಮಾಡಿರುವ ಹುಚ್ಚ ವೆಂಕಟ್ ಎಲ್ಲಾ ಸ್ಫರ್ಧಿಗಳಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.


Click it and Unblock the Notifications











