25 ವರ್ಷಗಳ ದಾಂಪತ್ಯ ಅಂತ್ಯ, ಎದೆಯೆತ್ತರಕ್ಕೆ ಬೆಳೆದ 3 ಮಕ್ಕಳಿದ್ದರೂ ದೂರವಾದ ಪ್ರೀತಿಸಿ ಮದ್ವೆಯಾಗಿದ್ದ ತಾರಾ ಜೋಡಿ
ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿ ಎಂಬ ಎರಡಕ್ಷರಕ್ಕೂ ಬೆಲೆ ಇಲ್ಲ. ಮದುವೆ ಎಂಬ ಮೂರಕ್ಷರಕ್ಕೂ ಕಿಮ್ಮತ್ತು ಇಲ್ಲ.
ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ .. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಅಚ್ಚರಿ ಅಂದರೆ ಒಂದೆರಡಲ್ಲ ಹಲವಾರು ವರ್ಷ ಜೊತೆಯಲ್ಲಿ ಇದ್ದವರು ಕೂಡ ವಿಚ್ಚೇದನದ ಅರ್ಜಿಯೊಂದಿಗೆ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಈ ಸಾಲಿಗೆ 2026ರ ಹೊಸ ವರ್ಷದ ಆರಂಭದಲ್ಲಿಯೇ ಮನು ವರ್ಮಾ ಮತ್ತು ಸಿಂಧು ಕೂಡ ಸೇರಿಕೊಂಡಿದ್ದಾರೆ.

ಹೌದು, ಮನು ವರ್ಮಾ ಮತ್ತು ಸಿಂಧು. ಮಲಯಾಳಂನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಹೆಸರು ಮಾಡಿದ ತಾರೆಯರು. ಮನು ಮಲಯಾಳಂನ ಹಿರಿಯ ನಟ ಜಗನ್ನಾಥ್ ವರ್ಮಾ ಅವರ ಮಗ. 80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದ ಮನು ಹಲವು ಚಿತ್ರಗಳಲ್ಲಿ ಖಳನಾಯಕನಾದರೆ ಇನ್ನು ಕೆಲ ಚಿತ್ರಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿದ್ದಾರೆ. ಸದ್ಯ ಕಿರುತೆರೆಯ ಮೂಲಕ ಕೇರಳದ ಮನೆ ಮತ್ತು ಮನಗಳನ್ನು ತಲುಪುತ್ತಿದ್ದಾರೆ.
ಇನ್ನು ಸಿಂಧು ವರ್ಮಾ ಕೂಡ ಕಿರುತೆರೆಯ ಪ್ರಖ್ಯಾತ ಹೆಸರು. ಆ ಕಾಲದಲ್ಲಿ ಬಾಲ ಕಲಾವಿದೆಯಾಗಿ ಮಿಂಚಿದ್ದ ಸಿಂಧು ತಮ್ಮ ಮಾಜಿ ಪತಿ ಮನು ವರ್ಮಾ ಜೊತೆ ಪರಸ್ಪರಂ ಎಂಬ ಧಾರಾವಾಹಿಯನ್ನು ಕೂಡ ಮಾಡಿದ್ದರು.
ಇಂಥಾ ಮನು ವರ್ಮಾ ಮತ್ತು ಸಿಂಧುಗೆ ಎದೆಯೆತ್ತರಕ್ಕೆ ಬೆಳೆದ ಮೂರು ಮಕ್ಕಳಿದ್ದಾರೆ. ಇವರ ದಾಂಪತ್ಯ ಜೀವನಕ್ಕೆ 25 ವರ್ಷಗಳಾಗಿವೆ. ಆದರೂ ಕೂಡ ಇವರ ಸಂಬಂಧ ಮುರಿದು ಬಿದ್ದಿದೆ. ಈ ಕುರಿತು ಮನು ವರ್ಮಾ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿಚ್ಛೇದನ ಈಗ ಫ್ಯಾಷನ್ ಆಗಿದೆ ಎಂದಿದ್ದಾರೆ.
''ಮೂವಿ ವರ್ಲ್ಡ್ ಮೀಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮನು ವರ್ಮಾ, ನಾನು ಮತ್ತು ಸಿಂಧು ಜೊತೆಯಲ್ಲಿ ಈಗ ವಾಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಅಧಿಕೃತವಾಗಿ ನಾವು ಇಬ್ಬರು ಇನ್ನೂ ವಿಚ್ಚೇದನ ಪಡೆದಿಲ್ಲ, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿರುವ ಮನು ವರ್ಮಾ ನಾವು ಮತ್ತೆ ಒಂದಾಗುವ ಸಾಧ್ಯತೆ ತುಂಬಾನೇ ಕಡಿಮೆ ಇದೆ ಎಂದು ಹೇಳಿದ್ದಾರೆ.

ಪ್ರೀತಿಸಿ ಮದುವೆಯಾದ ಅನೇಕರು ದೂರ ಆಗಿದ್ದಾರೆ. ನಾವು ಕೂಡ ಅದರಿಂದ ಹೊರತಾಗಿಲ್ಲ ಎಂದು ಹೇಳಿರುವ ಮನು, ಪ್ರತ್ಯೇಕತೆ ಜೀವನದ ಒಂದು ಭಾಗವಾಗಿದೆ ಎಂದಿದ್ದಾರೆ. ಈಗೀಗ ವಿಚ್ಛೇದನ ಪಡೆಯುವುದು ಕೂಡ ಒಂದು ಫ್ಯಾಷನ್ ಆಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ವಿಚ್ಛೇದನ ಪಡೆಯುವುದು ಸುಲಭ ಅಲ್ಲ. ಕೌಟುಂಬಿಕ ನ್ಯಾಯಾಲಯಕ್ಕೆ ಹೋದವರಿಗೆ ಅದರ ಕಷ್ಟ ಗೊತ್ತು ಎಂದು ಹೇಳಿರುವ ಮನು ವರ್ಮಾ ಪ್ರತಿದಿನ ಅಲ್ಲಿ ಸಾವಿರಾರು ಪ್ರಕರಣಗಳು ಬರುತ್ತವೆ, ಕೆಲ ಒಮ್ಮೆ ನ್ಯಾಯಾಧೀಶರಿಗೆ ತಲೆ ನೋವು ಬರುತ್ತೆ ಎಂದು ಹೇಳಿದ್ದಾರೆ. ವಿಚ್ಚೇದನದ ಮೊರೆ ಹೋದ ಜೋಡಿಗಳು ಪರಸ್ಪರ ಒಳ್ಳೆಯದನ್ನು ಹೇಳುವುದಿಲ್ಲ, ಬದಲಿಗೆ ಪರಸ್ಪರ ನಿಂದನೆ, ಕೆಸರೆರಚಾಟ ಮಾಡುತ್ತಾರೆ ಎಂದು ಹೇಳಿರುವ ಮನು ವರ್ಮಾ ಈ ಕಾರಣಕ್ಕೆ ಅಲ್ಲಿಗೆ ಹೋಗುವದಕ್ಕೂ ಕೂಡ ಒಂದು ರೀತಿ ಹಿಂಜರಿಕೆಯಾಗುತ್ತೆ ಎಂದಿದ್ದಾರೆ.
ಪರಸ್ಪರ ಹೊಂದಾಣಿಕೆ ಇಲ್ಲದಿದ್ದಾಗ ದೂರವಾಗುವುದೇ ಉತ್ತಮ ಎಂದು ಹೇಳಿರುವ ಮನು ವರ್ಮಾ, ಕಷ್ಟಪಟ್ಟು ಒಟ್ಟಿಗೆ ಬದುಕಬೇಕಾಗಿಲ್ಲ. ಒಟ್ಟಿಗೆ ಇದ್ದರೆ ಮತ್ತಷ್ಟು ಸಮಸ್ಯೆಗಳು ಹೆಚ್ಚಬಹುದು ಎಂದು ಹೇಳಿದ್ದಾರೆ. ವಿದೇಶಗಳಲ್ಲಿ ಡಿವೋರ್ಸ್ ಆದ ನಂತರವೂ ಕೂಡ ಹಲವರು ಸ್ನೇಹಿತರಂತೆ ಇರುತ್ತಾರೆ. ನಮ್ಮಲ್ಲಿಯೂ ಹಾಗಾಗಬೇಕು ಎಂದಿರುವ ಮನು ವರ್ಮಾ ಆದರೆ ಹಾಗಾದರೆ ಅದರಿಂದ ವಿಚ್ಚೇದನ ಪಡೆಯುವವರ ಸಂಖ್ಯೆ ಹೆಚ್ಚಾಗಬಹುದು ಎಂಬ ಆತಂಕ ಕೂಡ ನನಗೆ ಇದೆ ಎಂದು ಹೇಳಿದ್ದಾರೆ.
ಅಂದ್ಹಾಗೇ ನಾನು ಮತ್ತು ಸಿಂಧು ಮತ್ತೆ ಒಂದಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಮನು ವರ್ಮಾ ಹೇಳಿದ್ದಾರಾದರೂ ಕೂಡ ಸಿಂಧು ತಮ್ಮ ಪತಿಯ ಜೊತೆಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣದಿಂದ ಕಿತ್ತು ಎಸೆದಿಲ್ಲ. ಬದಲಿಗೆ ಈಗಲೂ ಕೂಡ ನೆನಪುಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆ ಸಿಂಧು ಮನದಲ್ಲಿ ಇನ್ನು ಪ್ರೀತಿ ಇದ್ದು ಮನಸ್ತಾಪ ಮರೆತು ಇಬ್ಬರು ಒಂದಾಗಲಿ ಎಂದು ಇವರ ಕಿರುತೆರೆಯ ಅಭಿಮಾನಿಗಳು ಆಶಿಸುತ್ತಿದ್ದಾರೆ.


Click it and Unblock the Notifications











