ಶ್ರೀದೇವಿ ಡ್ರಾಮಾ ಕಂಪೆನಿಯಲ್ಲಿ 'ಕಾಂತಾರ' ಕ್ಲೈಮ್ಯಾಕ್ಸ್: ಮುಂದೇನಾಗುತ್ತೆ?
'ಕಾಂತಾರ' ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರು ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಚಿತ್ರದ ಅಂತ್ಯದಲ್ಲಿ ಶಿವನ ಪಾತ್ರದ ಮೇಲೆ ಗುಳಿಗ ದೈವ ಆವಾಹನೆ ಆಗಿ ಆರ್ಭಟಿಸುವ ದೃಶ್ಯ ಮೈ ಜುಮ್ ಎನಿಸುತ್ತಿದೆ. ಇದೇ ದೃಶ್ಯವನ್ನು ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ಮರುಸೃಷ್ಟಿ ಮಾಡಲಾಗಿದೆ.
ಕರಾವಳಿಯ ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಬಹಳ ಸೊಗಸಾಗಿ ತೆರೆಗೆ ತಂದು ರಿಷಬ್ ಶೆಟ್ಟಿ ಸಕ್ಸಸ್ ಕಂಡಿದ್ದಾರೆ. ನಿರ್ದೇಶಕರಾಗಿ ಮಾತ್ರವಲ್ಲದೇ ನಟರಾಗಿಯೂ 'ಕಾಂತಾರ' ಚಿತ್ರದಲ್ಲಿ ಗೆದ್ದಿದ್ದಾರೆ. ನಿರ್ದೇಶನಕ್ಕಿಂತ ಅವರ ನಟನೆಗೆ ಹೆಚ್ಚು ಅಂಕ ಸಿಕ್ಕಿದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ರಿಷಬ್ ಶೆಟ್ಟಿ ಅಭಿನಯವನ್ನು ಕೊಂಡಾಡುತ್ತಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ನಲ್ಲಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ಬಗ್ಗೆ ವರ್ಣನೆ ಇದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಈ ದೈವಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕ, ಭಾರತ ಅಷ್ಟೇಅಲ್ಲ ಬೇರೆ ದೇಶಗಳಲ್ಲಿ ಸಿನಿಮಾ ನೋಡಿದವರು ಕೂಡ ಭೂತ ಕೋಲ ಆಚರಣೆ ಬಗ್ಗೆ ಮಾತನಾಡುತ್ತಿದ್ದಾರೆ.
'ಕಾಂತಾರ' ಸಿನಿಮಾ ತೆಲುಗಿನಲ್ಲೂ ಡಬ್ ಆಗಿ ಸೂಪರ್ ಹಿಟ್ ಆಗಿದೆ. ಕ್ಲೈಮ್ಯಾಕ್ಸ್ನಲ್ಲಿ ರಿಷಬ್ ಶೆಟ್ಟಿ ಅಭಿನಯ ನೋಡಿ ದಂಗಾಗಿದ್ದಾರೆ. ಈಗ ಇದೇ ದೃಶ್ಯವನ್ನು ತೆಲುಗು ಕಿರುತೆರೆಯ 'ಶ್ರೀದೇವಿ ಡ್ರಾಮಾ ಕಂಪೆನಿ' ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಾಗಿದೆ. ಅದರ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

'ಕಾಂತಾರ' ಕ್ಲೈಮ್ಯಾಕ್ಸ್ ಮರುಸೃಷ್ಠಿ
'ಶ್ರೀದೇವಿ ಡ್ರಾಮಾ ಕಂಪೆನಿ' ತೆಲುಗು ಕಿರುತೆರೆಯ ಜನಪ್ರಿಯ ಕಾರ್ಯಕ್ರಮ. ಸಾಕಷ್ಟು ಜನ ಹಾಸ್ಯ ಕಲಾವಿದರು ತಮ್ಮ ಪರ್ಫಾರ್ಮೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ. ಕೆಲವೊಮ್ಮೆ ಸೂಪರ್ ಹಿಟ್ ಸಿನಿಮಾಗಳ ಸ್ಪೂಫ್ ಕೂಡ ಮಾಡಲಾಗುತ್ತದೆ. ಅದೇ ರೀತಿ ಈ ವಾರ ನೂಕರಾಜ್ ಮತ್ತವರ ತಂಡ 'ಕಾಂತಾರ' ಕ್ಲೈಮ್ಯಾಕ್ಸ್ ಮರುಸೃಷ್ಠಿ ಮಾಡಿ ಚಿತ್ರತಂಡಕ್ಕೆ ಟ್ರಿಬ್ಯೂಟ್ ಮಾಡಿದ್ದಾರೆ. ನೂಕರಾಜ್ ಥೇಟ್ ರಿಷಬ್ ಶೆಟ್ಟಿ ಚಿತ್ರದಲ್ಲಿ ಕಾಣಿಸಿಕೊಂಡಂತೆ ಅಬ್ಬರಿಸಿದ್ದಾರೆ. ಗುಳಿದ ದೈವ ಆಕಯಾದಾಗ ರಿಷಬ್ ಶೆಟ್ಟಿ ಹೇಗೆ ನಟಿಸಿದ್ದರೋ ಅದೇ ರೀತಿ ಹಾವಭಾವ ಪ್ರದರ್ಶನಿಸಿ ನೂಕರಾಜ್ ಗಮನ ಸೆಳೆದಿದ್ದಾರೆ. ಅವರ ಪರ್ಫಾರ್ಮೆನ್ಸ್ ಝಲಕ್ ನೋಡಿದವರು ಮೆಚ್ಚಿ ಕೊಂಡಾಡುತ್ತಿದ್ದಾರೆ.

ದೈವದ ಕೂಗು ಅನುಕರಣೆ ಬೇಡ
ಚಿತ್ರದಲ್ಲಿ ದೈವ ಆಕರ್ಷಣೆಯಾದಾಗ ಮಾಡುವ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ ಎಂದು ನಟ ರಿಷಬ್ ಶೆಟ್ಟಿ ಮನವಿ ಮಾಡಿಕೊಂಡಿದ್ದರು. "ನನ್ನ ಪಾತ್ರ ದೈವಾವೇಶದಲ್ಲಿ ದೃಶ್ಯ ಇದೆ. ಕೆಲವರು ಅದನ್ನು ಅನುಕರಣೆ ಮಾಡಿ ವಿಡಿಯೋ ಮಾಡುತ್ತಿದ್ದಾರೆ. ದೈವಾರಾಧನೆ ಒಂದು ಆಚರಣೆಯ ಭಾಗ, ನಂಬಿಕೆಯ ಸಂಗತಿ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹರಿಸಬೇಕು ದಯವಿಟ್ಟು ಯಾರೂ ದೈವದಂತೆ ಕೂಗು ಹಾಕುದನ್ನು ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿದ್ದರು.

ರೀಲ್ಸ್ ಮಾಡಿದ್ದ ಯುವತಿ ತಪ್ಪು ಕಾಣಿಕೆ
ಇನ್ನು ಇತ್ತೀಚೆಗೆ ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ, ಪಂಜುರ್ಲಿ ದೈವದ ರೀತಿ ವೇಷ ಹಾಕಿ ರೀಲ್ಸ್ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಿ ದೈವಾರಾಧನೆಯನ್ನಯ ಅಣಕ ಮಾಡಿದ್ದಾಳೆ ಅಂತ ಯುವತಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ಹರಕೆ ಮಾದರಿಯಲ್ಲಿ ಎಚ್ಚರಿಕೆ ಕೊಟ್ಟಿದ್ದರು. ನಂತರ ಆ ವಿಡಿಯೋ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದರು. ಧರ್ಮಸ್ಥಳಕ್ಕೆ ಭೇಟಿ ನೀಡಿ ಮಾಡಿದ ತಪ್ಪಿಗೆ ಶ್ವೇತಾ ರೆಡ್ಡಿ ಕ್ಷಮೆ ಕೋರಿ ತಪ್ಪು ಕಾಣಿಕೆ ಸಲ್ಲಿಸಿದ್ದರು.

ತಪ್ಪು ಕಾಣಿಕೆ ಸಲ್ಲಿಸುತ್ತಾರಾ ನೂಕರಾಜ್?
ರಿಷಬ್ ಶೆಟ್ಟಿ ಯಾರು ಈ ದೃಶ್ಯವನ್ನು ಅನುಕರಣ ಮಾಡಬೇಡಿ ಎಂದಿದ್ದರು. ಶ್ವೇತಾ ರೆಡ್ಡಿ ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ ಮೇಲೆ ತೆಲುಗು ನಟ ನೂಕರಾಜ್, 'ಕಾಂತಾರ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಮಾಡಿದ್ದು ಸರೀನಾ ಎನ್ನುವ ಚರ್ಚೆಯೂ ಶುರುವಾಗಿದೆ. ಸದ್ಯ ಕಾರ್ಯಕ್ರಮದ ಪ್ರೋಮೊ ಮಾತ್ರ ರಿಲೀಸ್ ಆಗಿದೆ. ನೂಕರಾಜ್ ಪರ್ಫಾರ್ಮೆನ್ಸ್ನ ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಭಾನುವಾರ ಸಂಪೂರ್ಣ ಕಾರ್ಯಕ್ರಮ ಪ್ರಸಾರವಾಗಲಿದೆ. ನಂತರ ಏನಾಗುತ್ತೋ ಕಾದು ನೋಡಬೇಕು.


Click it and Unblock the Notifications











