ಟಿವಿ ಧಾರಾವಾಹಿ ದೃಶ್ಯ ನೋಡಿ ಅಜ್ಜಿಗೆ ಹೃದಯಾಘಾತ

ಮೃತಪಟ್ಟ ವೃದ್ಧೆಯ ಹೆಸರು ಕಾಸವ್ವ ಬಡೇಲಪ್ಪ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಧಾರಾವಾಹಿಯಲ್ಲಿನ ನಾಯಕಿಯನ್ನು ರೌಡಿಗಳು ಅಟ್ಟಿಸಿಕೊಂಡು ಹೋಗುವ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿಕೊಂಡ ಹಿರಿಯ ಜೀವ ಕುಳಿತಲ್ಲೇ ಕುಸಿದುಬಿದ್ದಿದೆ.
ಬಳಿಕ ಆಕೆಯನ್ನು ಮನೆಯಿಂದ ಕೂಡಲೆ ಹೊರಗೆ ತರಲಾಯಿತು. ಆದರೆ ಅಷ್ಟರಲ್ಲಾಗಲೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಕೂಡಲೆ ವೈದ್ಯರನ್ನು ಕರೆಸಿ ಪರೀಕ್ಷಿಸಲಾಯಿತು. ಆದರೆ ಅಷ್ಟರಲ್ಲಾಗಲೆ ಕಾಲ ಮೀರಿಹೋಗಿತ್ತು. ಅವರೂ ಏನೂ ಮಾಡಲಾಗದೆ ಕೈಚೆಲ್ಲಿದರು.
"ಈ ಹಿರಿಯ ಜೀವ ಪ್ರತಿನಿತ್ಯ ಈ ಧಾರಾವಾಹಿಯನ್ನು ತಪ್ಪದೆ ವೀಕ್ಷಿಸುತ್ತಿತ್ತು. ಉದಯ ವಾಹಿನಿಯಲ್ಲಿ ರಾತ್ರಿ 9 ರಿಂದ 9.30ಕ್ಕೆ ಪ್ರಸಾರವಾಗುವ 'ಬಂಗಾರ' ಧಾರಾವಾಹಿಯನ್ನೇ ಕಾಸಮ್ಮ ತಪ್ಪದೆ ನೋಡುತ್ತಿದ್ದರು. ಆದರೆ ಅವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಪಕ್ಕದ ಮನೆಯಲ್ಲಿ ಈ ಧಾರಾವಾಹಿ ಪ್ರಸಾರವಾಗುವ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು.
ಶುಕ್ರವಾರ ಕಾಸಮ್ಮನ ಗಂಡ ಊಟಕ್ಕೆ ಬಡಿಸಲು ಹೇಳಿದಾಗ, ಧಾರಾವಾಹಿ ನೋಡಿಕೊಂಡು ಬಂದು ಬಡಿಸುತ್ತೇನೆ ಎಂದು ಹೇಳಿ ಪಕ್ಕದ ಮನೆಗೆ ಹೋಗಿದ್ದರು. ಆದರೆ ಧಾರಾವಾಹಿಯಲ್ಲಿನ ಕಾವೇರಿ ಪಾತ್ರವನ್ನು ಬಹಳಷ್ಟು ಮನಸ್ಸಿಗೆ ಹಚ್ಚಿಕೊಂಡಿದ್ದರು ಕಾಸವ್ವ.
ರೌಡಿಗಳ ಗ್ಯಾಂಗ್ ಕಾವೇರಿಯನ್ನು ಅಟ್ಟಿಸಿಕೊಂಡು ಹೋಗುವ ರೋಚಕ ದೃಶ್ಯ ಪ್ರಸಾರವಾಗಿದೆ. ಆದರೆ ಕಾವೇರಿ ಕಾರಿನ ಡಿಕ್ಕಿಯಲ್ಲಿ ಅವಿತುಕೊಂಡಿರುತ್ತಾರೆ. ಆದರೆ ರೋಚಕವಾಗಿ ಸಾಗುವ ಧಾರಾವಾಹಿಯಲ್ಲಿ ರೌಡಿಗಳು ಕಾರಿನ ಡಿಕ್ಕಿಯನ್ನು ಓಪನ್ ಮಾಡುತ್ತಾರೆ. ಕಣ್ಣೆವೆ ಮಿಟುಕಿಸದೇ ಧಾರಾವಾಹಿ ನೋಡುತ್ತಿದ್ದ ಕಾಸವ್ವ ಶಾಕ್ಗೆ ಒಳಗಾಗಿದ್ದಾರೆ. ಆಘಾತಗೊಂಡ ಅವರು ಕುಳಿತಲ್ಲೇ ಕುಸಿದು ಬಿದ್ದರು" ಎಂದು ಘಟನೆಯ ಬಗ್ಗೆ ಅದೇ ಗ್ರಾಮದ ಹಬೀಬ್ ವಿವರ ನೀಡಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











