ಕಥೆಯೊಂದು ಶುರುವಾಗಿದೆ ಧಾರಾವಾಹಿಗೆ ಒಂದು ವರ್ಷ: "ಪಯಣದುದ್ದಕ್ಕೂ ಹೀಗೇ ಜೊತೆಗಿರಿ" ಎಂದ ಸೌಮ್ಯ ಭಟ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಕಥೆಯೊಂದು ಶುರುವಾಗಿದೆ' ಯಶಸ್ವಿ ಒಂದು ವರ್ಷ ಪೂರೈಸಿದೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಾಯಕಿ ವರ್ಣಿಕಾ ಆಗಿ ಅಭಿನಯಿಸುತ್ತಿರುವ ನಟಿ ಸೌಮ್ಯ ಭಟ್ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.
ವರ್ಣಿಕಾ ಪಾತ್ರದ ಇತ್ತೀಚೆಗಿನ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ "ನಾನು ಅಭಿನಯವನ್ನು ವೃತ್ತಿಯನ್ನಾಗಿ ಪ್ರಾರಂಭಿಸಿದ್ದು, ಸುವರ್ಣ ವಾಹಿನಿಯ ಮಿಲನ ಧಾರಾವಾಹಿಯ ಪುಟ್ಟ ಪಾತ್ರದ ಮೂಲಕ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುರುತಿಸುತ್ತಿದ್ದದ್ದು ಲಕ್ಷ್ಮೀ ಬಾರಮ್ಮ (ಭಾಗ-೧) ಧಾರಾವಾಹಿಯ ಮೇಧಾ ಪಾತ್ರದಿಂದ"ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ತದನಂತರ ವೈಷ್ಣವಿ, ತೇಜು, ಆಶಿತಾ, ಪವಿತ್ರ ಹೀಗೆ.. ಈಗ ಕಳೆದೊಂದು ವರ್ಷದಿಂದ ವರ್ಣಿಕ! ಈ ಪಯಣ ಸಣ್ಣದೇನಲ್ಲ. ನಾನು ಅಭಿನಯಿಸಿದ ಪ್ರತಿ ಪಾತ್ರವೂ ಇನ್ನೂ ನನ್ನೊಳಗೆ ಹಸಿರಾಗಿದೆ. ಅವೆಲ್ಲದರ ಮತ್ತೊಂದು ರೂಪವೇ ವರ್ಣಿಕ! ಈ ನನ್ನ ಕಥೆಯಲ್ಲಿ ಜೊತೆಯಾಗಿರುವ ನಿಮಗೆಲ್ಲರಿಗೂ ನಾನು ಸದಾ ಋಣಿ, ಸಾಗಬೇಕಿರುವ ಹಾದಿಯಿನ್ನೂ ದೊಡ್ಡದಿದೆ, ಪಯಣದುದ್ದಕ್ಕೂ ಹೀಗೇ ಜೊತೆಗಿರಿ" ಎಂದು ಬರೆದುಕೊಂಡಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಲನ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ 'ಒಂದೂರಲ್ಲಿ ರಾಜ ರಾಣಿ', 'ಅಸಾಧ್ಯ ಅಳಿಯಂದಿರು' ಧಾರಾವಾಹಿಗಳಲ್ಲಿ ನಟಿಸಿದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಮೇಧಾ ಆಗಿ ಕಾಣಿಸಿಕೊಂಡ ಸೌಮ್ಯ ಭಟ್ ಅದೇ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷನ ಅಸಿಸ್ಟೆಂಟ್ ಆಶಿತಾ ಪಾತ್ರದಲ್ಲಿ ಅಭಿನಯಿಸಿದ್ದ ಸೌಮ್ಯ ಭಟ್ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪವಿತ್ರಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಇದರ ಜೊತೆಗೆ ತಮಿಳಿನ 'ತಾಳಂಪು' ಧಾರಾವಾಹಿಯಲ್ಲಿಯೂ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಸೌಮ್ಯ ಭಟ್ ಕಿರುತೆರೆ ಜೊತೆಗೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿರುವ ಬೆಡಗಿ.
'ರಾಜು ಎದೆಗೆ ಬಿದ್ದ ಅಕ್ಷರ' ಸಿನಿಮಾದಲ್ಲಿ ನಾಯಕನ ಅಕ್ಕನಾಗಿ ಸೌಮ್ಯ ಭಟ್ ಅಭಿನಯಿಸಿದ್ದರು. ಇಷ್ಟೇ ಅಲ್ಲದೆ 'ನಿನ್ನ ಸನಿಹಕೆ' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದರ ಜೊತೆಗೆ ವೆಬ್ ಸಿರೀಸ್ ಒಂದರಲ್ಲಿಯೂ ಬಣ್ಣ ಹಚ್ಚಿದ ಖ್ಯಾತಿ ಇವರದ್ದು.


Click it and Unblock the Notifications











