'ಪಾರು' ಧಾರಾವಾಹಿಯ ಪ್ರೀತು ಬಗ್ಗೆ ನಿಮಗೇಷ್ಟು ಗೊತ್ತು? ಹ್ಯಾಂಡ್ಸಮ್ ಹುಡುಗನ ಸಿನಿ ಜರ್ನಿ ಹೇಗಿದೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪಾರು'. ಈ ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಮಗ ಪ್ರೀತಮ್ ಆಲಿಯಾಸ್ ಪ್ರೀತು ಆಗಿ ಸಿದ್ಧು ಮೂಲಿಮನಿ ಗಮನ ಸೆಳೆದಿದ್ದಾರೆ. ಧಾರಾವಾಹಿ ಹಾಗೂ ಸಿನಿಮಾ ಎರಡರಲ್ಲೂ ಗಮನ ಸೆಳೆಯುತ್ತಿರುವ ಯುವ ನಟನೀತ.
ಸಿದ್ಧು ಮೂಲಿಮನಿ ಬಣ್ಣದ ಪಯಣಕ್ಕೆ ಮುನ್ನುಡಿ ಬರೆದಿದ್ದು ರಂಗಭೂಮಿ. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸಿದ್ಧು ಮೂಲಿಮನಿ ಇಂದು ಪ್ರೀತು ಪಾತ್ರದ ಮೂಲಕ ಕರ್ನಾಟಕದಾದ್ಯಂತ ಫೇಮಸ್ಸು ಆಗಿರುವ ಹ್ಯಾಂಡ್ ಸಮ್ ಹುಡುಗ.

'ಬಣ್ಣದ ಬುಗುರಿ' ಮೂಲಕ ಬಣ್ಣದ ಪಯಣ
ಹಂಸಲೇಖ ಅವರ ಕಾಲೇಜು ಸೇರಿ ನಟನೆಯ ರೀತಿ ನೀತಿಗಳನ್ನು ಅರಿತುಕೊಂಡರು. ಮುಂದೆ ರಂಗಾವತಾರ ತಂಡ ಸೇರಿದ ಸಿದ್ಧು ಮೂಲಿಮನಿ ನಟನಾ ಕ್ಷೇತ್ರದಲ್ಲಿ ಒಂದಷ್ಟು ಪಳಗಿದರು. ರಂಗಭೂಮಿಯಲ್ಲಿ ಒಂದಷ್ಟು ಪಕ್ವವಾದ ಬಳಿಕ ಕಿರುತೆರೆಯತ್ತ ಮುಖ ಮಾಡುವ ನಿರ್ಧಾರ ಮಾಡಿದ ಸಿದ್ಧು ಮೂಲಿಮನಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಣ್ಣದ ಬುಗುರಿ' ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದರು.

ಹಲವು ಧಾರಾವಾಹಿಗಳಲ್ಲಿ ಸಿದ್ದು ನಟನೆ
'ಬಣ್ಣದ ಬುಗುರಿ'ಯ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅನುರಾಗ ಸಂಗಮ' ಧಾರಾವಾಹಿಯಲ್ಲಿ ಸಿದ್ಧು ಬಣ್ಣ ಹಚ್ಚಿದರು. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಂದೂರಲ್ಲಿ ರಾಜ ರಾಣಿ', ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಾಕ್ಷಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದರು. ಮುಂದೆ 'ಪಾರು' ಧಾರಾವಾಹಿಯ ಪ್ರೀತಮ್ ಆಗಿ ಬದಲಾದ ಸಿದ್ಧು ಮೂಲಿಮನಿ ಇಂದು ಅದೇ ಪಾತ್ರದ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದರು.

'ಪಾರು' ಧಾರಾವಾಹಿಯ ಪ್ರೀತು ಪಾತ್ರ ಫೇಮಸ್
"ಪಾರು ಧಾರಾವಾಹಿಯ ಮೊದಲು ನಾನು ನಾಲ್ಕೈದು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದೇನೆ. ಆದರೆ ಕಿರುತೆರೆ ಜಗತ್ತಿನಲ್ಲಿ ನಾನು ಮನೆ ಮಾತಾಗಿದ್ದು ಮಾತ್ರ ಪ್ರೀತು ಆಗಿ ಬದಲಾದ ಮೇಲೆಯೇ. ನಾನಿಂದು ಎಲ್ಲೇ ಹೋದರೂ ಜನ ನನ್ನನ್ನು ಗುರುತಿಸುವುದು ಪಾರು ಧಾರಾವಾಹಿಯ ಪ್ರೀತು ಆಗಿ. ಜನ ಇಂದು ಪ್ರೀತು ಆಗಿ ಗುರುತಿಸುವಾಗ ತುಂಬಾ ಸಂತಸವಾಗುತ್ತಿದೆ" ಎಂದು ಹೇಳುತ್ತಾರೆ ಸಿದ್ಧು ಮೂಲಿಮನಿ.

ಕಿರುತೆರೆ ಮಾತ್ರವಲ್ಲ ಹಿರಿತೆರೆಯಲ್ಲಿ ಮೋಡಿ
'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವ', 'ಲಂಬೋದರ', 'ಬಸವನಗುಡಿ ಬೆಂಗಳೂರು','ಸಾರ್ವಜನಿಕರಿಗೆ ಸುವರ್ಣಾವಕಾಶ','ರಂಗಿತರಂಗ', 'ಧಮಾಕಾ' ಸಿನಿಮಾಗಳಲ್ಲಿ ನಟಿಸಿದ್ದ ಸಿದ್ಧು ಮೂಲಿಮನಿ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಮುನ್ನ ಆಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾ ಬಿಡುಗಡೆಯಾಗಬೇಕಿದೆ. 'ಹ್ಯಾಪಿ ಬರ್ತ್ ಡೇ ಟು ಮೀ' ಹಾಗೂ 'ಕೆಯೋಸ್' ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು 'ಅಭಿರಾಮಚಂದ್ರ', 'ಓಮಿನಿ' ಸಿನಿಮಾಗಳು ತೆರೆ ಮೇಲೆ ಬರಬೇಕಾಗಿದೆ. ಕೊನೆಯದಾಗಿ 'ಅಜ್ಞಾತವಾಸಿ' ಹಾಗೂ 'ಗೊಂಬೆರಾಮ' ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











