ಟಿ.ಎನ್ ಸೀತಾರಾಮ್ ಎಂದರೆ ಸಾವಯವ ಕೃಷಿಕ
ಟಿಎನ್ ಸೀತಾರಾಮ್ ಅವರನ್ನು ಸಾವಯವ ಕೃಷಿಕ ಎಂದು ವರ್ಣಿಸಿದ್ದು ಕಲರ್ಸ್ ಕನ್ನಡ ಮತ್ತು ಕಲರ್ಸ್ ಸೂಪರ್ ವಾಹಿನಿಗಳ ಬಿಸ್ನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು. ಅವರು ಈ ಮಾತುಗಳನ್ನು ಹೇಳಿದ್ದು 'ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮದಲ್ಲಿ.
"ಯಾಕೆಂದರೆ, ಇಂದಿನ ಕಾಲಘಟ್ಟದಲ್ಲಿ ಎಲ್ಲವನ್ನು ಕೂಡ ವ್ಯವಹಾರವಾಗಿ ನೋಡಲೇಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಧಾರಾವಾಹಿಗಳು ಕೂಡ ರೇಟಿಂಗ್ ಹೆಚ್ಚು ನೀಡಬೇಕು ಎನ್ನುವುದು ಅನಿವಾರ್ಯವಾಗುತ್ತದೆ. ನಾಲ್ಕು ವಾಹಿನಿಗಳ ಬಿಸ್ನೆಸ್ ಹೆಡ್ ಎನ್ನುವುದನ್ನು ನಾನು ನಾಲ್ಕು ಅಂಗಡಿಗಳನ್ನು ಇರಿಸಿಕೊಂಡ ವ್ಯಾಪಾರಿಯಂತೆ ಆಲೋಚಿಸಬಲ್ಲೆ. ಹಾಗಾಗಿ ಹೆಚ್ಚು ಸೇಲ್ ಆಗುವ ಅಂಗಡಿಯ ಉತ್ಪನ್ನಕ್ಕೆ, ಅಂದರೆ ದೊಡ್ಡ ಮಟ್ಟದ ರೇಟಿಂಗ್ ತರುವ ಧಾರಾವಾಹಿಗೆ ನನ್ನ ಬೆಂಬಲ ಇದ್ದೇ ಇರುತ್ತದೆ. ಆದರೆ ನಾಲ್ಕು ಅಂಗಡಿಗಳಿಂದ ಪ್ರಸಾರವಾಗುವ ಒಟ್ಟು ಹದಿನೆಂಟು ಧಾರಾವಾಹಿಗಳಲ್ಲಿ ಸೀತಾರಾಮ್ ಅವರ ಧಾರಾವಾಹಿಯನ್ನು ರೇಟಿಂಗ್ನಾಚೆಗೂ ಹೆಚ್ಚು ಇಷ್ಟಪಡುತ್ತೇನೆ.
ಅದಕ್ಕೆ ಪ್ರಮುಖ ಕಾರಣ ಈ ಅಂಗಡಿಯಲ್ಲಿ ದೊರಕುವ ಆಹಾರ ತುಂಬ ಸಾವಯವವಾಗಿರುವಂಥದ್ದು. ಅಂದರೆ ಅವರು ಬರೇ ಟಿಆರ್ಪಿಯ ಹಿಂದೆ ಬಿದ್ದು ಕತೆ ಕಟ್ಟಿಕೊಂಡು ಹೋಗುವವರಲ್ಲ, ಅದರಲ್ಲಿ ಸಹಜತೆ ಇರುತ್ತದೆ. ನಮ್ಮ ಬದುಕು ಇರುತ್ತದೆ. ಬದುಕಿನ ಪಾಠಗಳಿರುತ್ತವೆ ಎಂದು ಪ್ರಶಂಸಿಸಿದರು. ಮುಂದೆ ಓದಿ....

ಪರಮೇಶ್ವರ ಗುಂಡ್ಕಲ್ ಪ್ರಶಂಸೆ
"ಸೀತಾರಾಮ್ ಅವರು ಸಮಾಜದ ಎಲ್ಲ ಪ್ರಮುಖ ವೃತ್ತಿವಿಭಾಗಗಳಲ್ಲಿ ಕೂಡ ಅನುಭವ ಪಡೆದುಕೊಂಡವರು. ರಾಜಕೀಯ, ಕೃಷಿ, ಬ್ಯಾಟರಿ ಉದ್ಯಮ, ವಕೀಲಿ, ಚಿತ್ರರಂಗ, ಸಾಹಿತ್ಯ.. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಒಂದು ಕೈ ಪರೀಕ್ಷಿಸಿದವರು. ಒಂದು ವೇಳೆ ಸಾಹಿತ್ಯ ಕ್ಷೇತ್ರದಲ್ಲೇ ಮುಂದುವರಿದಿದ್ದರೆ, ಅವರಲ್ಲಿನ ಬರವಣಿಗೆಯ ಶಕ್ತಿಗೆ ಅವರು ಬಹುಶಃ ಒಂಬತ್ತನೆಯ ಜ್ಞಾನಪೀಠವನ್ನು ಕನ್ನಡಕ್ಕೆ ತರುತ್ತಿದ್ದರೇನೋ. ಆದರೆ ಅದು ಯಾವುದೇ ರಂಗದಲ್ಲಿಯೂ ತೊಡಗಿಸಿಕೊಳ್ಳದೇ ನೇರವಾಗಿ ಅಷ್ಟೊಂದು ಸಾಹಿತ್ಯ ಪ್ರೇಮವನ್ನು ಧಾರಾವಾಹಿ ಕ್ಷೇತ್ರಕ್ಕೆ ತಂದಿರುವುದು ಖುಷಿಯಾಗಿದೆ" ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದರು.

ಧನ್ಯವಾದ ಹೇಳಿದ ಟಿಎನ್ಎಸ್
ನಿರ್ದೇಶಕ ಟಿ.ಎನ್ ಸೀತಾರಾಮ್ ಮಾತನಾಡಿ, ನಿಧಾನಗತಿಯ ಧಾರಾವಾಹಿ ಮಾಡುವ ತಮ್ಮ ಶೈಲಿಗೆ ವೇಗವನ್ನು ತುಂಬಿಸಿರುವಲ್ಲಿ ಪರಮೇಶ್ವರ್ ಗುಂಡ್ಕಲ್ ಅವರ ಪಾತ್ರ ದೊಡ್ಡದು ಎಂದರು. ಸಂವಾದದಲ್ಲಿ ತಾರ್ಕಿಕ ಮತ್ತು ಸಂಭಾಷಣೆಗಳ ನಡುವಿನ ಅಂಕಿ ಅಂಶಗಳ ಕುರಿತಾದ ತಪ್ಪುಗಳ ಬಗ್ಗೆ ವಿವಾರಿಸುವ ಬದಲು ಭಾವನಾತ್ಮಕವಾಗಿ ಧಾರಾವಾಹಿ ಹೇಗಿದೆ ಎನ್ನುವ ಅಭಿಪ್ರಾಯಕ್ಕೆ ಒತ್ತು ನೀಡಬೇಕು ಎಂದು ಅವರು ಹೇಳಿದರು. ಶೀರ್ಷಿಕೆ ಗೀತೆ ರಚಿಸಿದ ಎಚ್ಎಸ್ ವೆಂಕಟೇಶ ಮೂರ್ತಿಯವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ 'ಮಗಳು ಜಾನಕಿ' ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಜಾನಕಿಯ ಸಹೋದರಿ ಪಾತ್ರಧಾರಿ ಐಶ್ವರ್ಯಾ ರಂಗರಾಜನ್ ಮತ್ತು ಪ್ರವೀಣ್ ಡಿ ರಾವ್ ಸೇರಿ ಆಲಾಪಿಸಿದರು.

ನವದುರ್ಗೆಯರೊಂದಿಗೆ ಸೀತಾರಾಮ್!
ಕನ್ನಡದ ಕಿರುತೆರೆ ಧಾರಾವಾಹಿಗಳಿಗೆ ಸಂವಾದಗಳ ಪಿತಾಮಹ ಎಂದು ಗುರುತಿಸಿಕೊಂಡವರು ಟಿಎನ್ ಸೀತಾರಾಮ್. ಅವರ ನಿರ್ದೇಶನದಲ್ಲಿ ಭೂಮಿಕಾ ಸಂಸ್ಥೆಯಿಂದ ತೆರೆಗೆ ಬಂದ ಹಲವಾರು ಧಾರಾವಾಹಿಗಳ ನೂರಾರು ಸಂವಾದ ಕಾರ್ಯಕ್ರಮಗಳಿಗೆ ಕರುನಾಡು ಸಾಕ್ಷಿಯಾಗಿದೆ. ಆದರೆ ಅವೆಲ್ಲಕ್ಕಿಂತ ವಿಭಿನ್ನವಾದ ಸಂವಾದ ಇತ್ತೀಚೆಗೆ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೆರವೇರಿತು. ಕಲರ್ಸ್ ಸೂಪರ್ನಲ್ಲಿ ಪ್ರಸಾರವಾಗುತ್ತಿರುವ ‘ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮ ಅದಾಗಿದ್ದು, ಅಲ್ಲಿ ಧಾರಾವಾಹಿಯ ಕಲಾವಿದರ ಜೊತೆಗೆ ವಿಶೇಷ ಆಹ್ವಾನಿತರು ಭಾಗಿಯಾಗಿದ್ದರು. ಅವರು ಬೇರೆ ಯಾರೂ ಅಲ್ಲ, ಇದುವರೆಗಿನ ಸೀತಾರಾಮ್ ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದಂಥ ಎಲ್ಲ ನಾಯಕಿಯರು ಅಲ್ಲಿದ್ದರು.

ಟಿಎನ್ಎಸ್ ಅವರ ಕಲಾವಿದರು ಭಾಗಿ
ಸಂವಾದದಲ್ಲಿ ಟಿಎನ್ ಸೀತಾರಾಮ್ ಅವರ ಈ ಹಿಂದಿನ ಧಾರಾವಾಹಿಗಳ ನಾಯಕಿಯರಾದ ಮಾಯಾಮೃಗದ ವಕೀಲೆ, ಮುಕ್ತದ ಮಾಧವಿ ಪಟೇಲ್ ಮಾಳವಿಕಾ ಅವಿನಾಶ್, ಮುಕ್ತ ಮತ್ತು ಮುಕ್ತ ಮುಕ್ತ ಧಾರಾವಾಹಿಯಲ್ಲಿ ಅರುಂಧತಿಯಾಗಿ ಅಭಿನಯಿಸಿದ ನಂದಿನಿ ಗೌಡ, ಮುಕ್ತ ಮುಕ್ತ ಧಾರಾವಾಹಿಯ ಶಾಂಭವಿ ಟೀಚರ್ ಪಾತ್ರ ನಿರ್ವಹಿಸಿದ ಸೀತಾಕೋಟೆ, ಮಾಯಾಮೃಗದ ದಾಕ್ಷಾಯಿಣಿ, ಮನ್ವಂತರದ ನಂದಿನಿ ಕೇಳ್ಕರ್ ಪಾತ್ರಧಾರಿ ವೀಣಾ ಸುಂದರ್, ಮಹಾ ಪರ್ವ ಧಾರಾವಾಹಿಯ ಅಶ್ವಿನಿ ಗೌಡ, ಮಾಯಾಮೃಗದ ಶಾರದಾ, ಮನ್ವಂತರದ ಮಾಯಾ, ಮುಕ್ತದ ಇಂಚರ, ಮುಕ್ತ ಮುಕ್ತದ ನಿವೇದಿತಾ ಜಯಶ್ರೀ ರಾಜ್, ಮುಕ್ತದ ಅನುಪಮಾ, ಮುಕ್ತ ಮುಕ್ತದ ವೈಜಯಂತಿ, ಮಹಾಪರ್ವದ ಪರಿಣಿತಾ ಸುಷ್ಮಾ ಭಾರದ್ವಾಜ್ (ಅವರು ಮಹಾಪರ್ವಕ್ಕೆ ಸಂಭಾಷಣೆಯನ್ನು ಕೂಡ ಬರೆದಿದ್ದರು) ಮಾಯಾಮೃಗದ ವಿದ್ಯಾ ಖ್ಯಾತಿಯ ಎಂ.ಡಿ ಪಲ್ಲವಿ, ಮನ್ವಂತರ ಧಾರಾವಾಹಿಯ ಮಂದಾಕಿನಿ ಮೇಘಾ ನಾಡಿಗೇರ್, ಮತ್ತು ಮಗಳು ಜಾನಕಿ ಧಾರಾವಾಹಿಯ ಜಾನಕಿ ಗಾನವಿ ಅಲ್ಲಿ ಉಪಸ್ಥಿತರಿದ್ದರು.


Click it and Unblock the Notifications











