ಸಿನಿಮಾ ಬೇಕಂದ್ರೆ ನೀನು ಅದಕ್ಕೆ ಒಪ್ಕೋಬೇಕು ; ಕಹಿ ಅನುಭವ ಹಂಚಿಕೊಂಡ ಪರಿಣೀತಾ
ಚಿತ್ರರಂಗದಲ್ಲಿ ಹಲವರದ್ದು ಮುಖವಾಡದ ಬದುಕು. ಕೆಲವರಿಗೆ ಇಲ್ಲಿ ಪ್ರಚಾರದ ಹುಚ್ಚಿದ್ದರೆ, ಇನ್ನುಳಿದ ಕೆಲವರಲ್ಲಿ ಮುಕ್ಕಾಲು ಪಾಲು ಜನಕ್ಕೆ ಹೆಣ್ಣಿನ ಮೇಲೆ ಮೋಹ. ಚಿತ್ರರಂಗದಲ್ಲಿ ಹೇಗಾದರೂ ಮಾಡಿ ಒಂದು ಅವಕಾಶ ಪಡೆಯಬೇಕು.. ಮಿಂಚಬೇಕು.. ಎಂದು ಕನಸು ಕಾಣುತ್ತಾರಲ್ವಾ.. ? ಇವರ ಈ ಕನಸೇ ಈ ಕಿರಾತಕರ ಬಂಡವಾಳ.
ನಮ್ಮ ಈ ಮಾತುಗಳಿಗೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವು ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗಕ್ಕೇರುವಂತೆ ನಮ್ಮ ಮೇಲೆ ಒತ್ತಡ ಹಾಕಲಾಗಿತ್ತು ಎಂದಿದ್ದಾರೆ. ಇದಕ್ಕೆ ಪರಿಣೀತಾ ಬೋರ್ಥಾಕುರ್ ಸದ್ಯದ ಉದಾಹರಣೆ.

ಹೌದು,ಪರಿಣೀತಾ ಬೋರ್ಥಾಕುರ್.. ಅಸ್ಸಾಂನ ಅರಗಿಣಿ. 2001ರಲ್ಲಿ ಅಸ್ಸಾಂನ ''ನಾಯಕ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಪರಿಣೀತಾ ಬೋರ್ಥಾಕುರ್ ''ಸಾಸ್ ಬಹು ಔರ್ ಸೆನ್ಸೆಕ್ಸ್'' ಚಿತ್ರದ ಮೂಲಕ ಬಾಲಿವುಡ್ಗೆ ಬಂದರು. ಆ ನಂತರ ಜಾನ್ ಅಬ್ರಾಹಿಂ ಅಭಿನಯದ ''ಫೋರ್ಸ್''.. ಸೈಫ್ ಅಲಿ ಖಾನ್ ಅಭಿನಯದ ''ಕುರ್ಬಾನ್'' ಚಿತ್ರಗಳಲ್ಲಿ ಕೂಡ ಅಭಿನಯಿಸಿದರು.
ಆದರೆ, ದುರದೃಷ್ಟಕರ. ಅಸ್ಸಾಂನಲ್ಲಿಯೂ ಮಿಂಚುವಲ್ಲಿ ವಿಫಲವಾದ ಪರಿಣೀತಾ ಬೋರ್ಥಾಕುರ್ ಹಿಂದಿಯಲ್ಲಿ ಕೂಡ ನೆಲೆ ಕಂಡುಕೊಳ್ಳಲಿಲ್ಲ. ಈ ಹಿನ್ನೆಲೆ ಅನಿವಾರ್ಯವಾಗಿ ಕಿರುತೆರೆಯತ್ತ ಮುಖ ಮಾಡಿದ ಪರಿಣೀತಾ ಬೋರ್ಥಾಕುರ್, ''ಲಾವಣ್ಯ''.. ''ಮಮತಾ''.. ''ಪ್ರೀತಂ ಪ್ಯಾರೇ ಔರ್ ವೋ''.. ''ಸ್ವರಾಗಿಣಿ''.. ಸೇರಿ ಒಂದೂವರೆ ಡಜನ್ ಧಾರಾವಾಹಿಯಲ್ಲಿ ಅಭಿನಯಿಸಿದರು.
ಸದ್ಯ ''ವಸುಧಾ'' ಎಂಬ ಧಾರಾವಾಹಿಯನ್ನು ಪರಿಣೀತಾ ಬೋರ್ಥಾಕುರ್ ಮಾಡುತ್ತಿದ್ದಾರೆ. ಇಂಥಾ ಪರಿಣೀತಾ ಬೋರ್ಥಾಕುರ್ ಸದ್ಯ ತಮ್ಮ ಕಹಿ ಅನುಭವ ನೆನೆದಿದ್ದಾರೆ. ಸಂದರ್ಶನದಲ್ಲಿ ತಮ್ಮ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಈ ಕುರಿತು ''ಟೆಲಿ ಚಕ್ಕರ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪರಿಣೀತಾ ಬೋರ್ಥಾಕುರ್, ಚಿತ್ರರಂಗದ ಆರಂಭದ ದಿನಗಳಲ್ಲಿ ಸೈಕಲ್ ಹೊಡೆಯುತ್ತಿದ್ದಾಗ ನಿರ್ದೇಶಕರೊಬ್ಬರು ಅವಕಾಶ ನೀಡುವ ನೆಪದಲ್ಲಿ ತಮ್ಮೆದುರು ಅಸಭ್ಯ ಬೇಡಿಕೆ ಇಟ್ಟಿದ್ದರು ಎಂದು ಹೇಳಿದ್ದಾರೆ.

ನನಗೊಂದು ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಆ ಚಿತ್ರದ ಒಪ್ಪಂದಕ್ಕೆ ಸಹಿ ಹಾಕಲು ಬರುವಂತೆ ನನ್ನ ಕರೆಯಲಾಗಿತ್ತು ಎಂದು ಹೇಳಿರುವ ಪರಿಣೀತಾ ಬೋರ್ಥಾಕುರ್ ಅಲ್ಲಿ ಹೋದ ನಂತರ ಇನ್ನೇನು ಸಹಿ ಮಾಡಬೇಕು, ಅಷ್ಟರಲ್ಲಿ ಈ ಅವಕಾಶ ನಿಮಗೆ ಬೇಕು ಅಂದರೆ ದೈಹಿಕ ಸಂಪರ್ಕ ಬೆಳೆಸಬೇಕೆಂದು ಷರತ್ತು ನನಗೆ ಹಾಕಿದರು ಎಂದು ನೆನಪು ಮಾಡಿಕೊಂಡಿದ್ದಾರೆ.
ಆ ಮಾತು ಕೇಳಿ ನನಗೆ ನಿಂತ ನೆಲ ಕುಸಿದಂತಾಗಿತ್ತು ಎಂದು ಹೇಳಿರುವ ಪರಿಣೀತಾ ಬೋರ್ಥಾಕುರ್, ನಾನು ನೀವು ಬೇಡ, ನಿಮ್ಮ ಸಿನಿಮಾನೂ ನನಗೆ ಬೇಡ ಎಂದು ಹೇಳಿ ಅಲ್ಲಿಂದ ಹೊರ ಬಂದೆ ಎಂದು ಹೇಳಿದ್ಧಾರೆ. ಮುಂದುವರೆದು ನಾನು ಹೀಗೆ ಏಕಾಏಕಿ ಹೊರ ಬಂದ ಹಿನ್ನೆಲೆ ಬೆದರಿದ ಆ ವ್ಯಕ್ತಿ ನನಗೆ ಆ ನಂತರ ಕರೆ ಮಾಡಿದ, ಈ ವಿಷಯವನ್ನು ಯಾರ ಹತ್ತಿರ ಕೂಡ ಹೇಳಬೇಡಿ ಎಂದು ಗೋಗರೆದ ಎಂದು ಹೇಳಿದ್ದಾರೆ.
ಕೆಲಸ ಸಿಗುತ್ತೆ ಅಥವಾ ಸಿಗಲಿ ಎಂದು ನಾನು ಯಾವತ್ತು ನನ್ನ ಸ್ವಾಭಿಮಾನ ಅಡ ಇಡಲಿಲ್ಲ, ತಪ್ಪು ದಾರಿಯನ್ನು ತುಳಿಯಲಿಲ್ಲ ಎಂದು ಹೆಮ್ಮೆಯಿಂದ ಈ ಸಂದರ್ಶನದಲ್ಲಿ ಹೇಳಿಕೊಂಡಿರುವ ಪರಿಣೀತಾ ಬೋರ್ಥಾಕುರ್ ಇವತ್ತು ನಾನು ಚೂರು ಪಾರು ಹೆಸರು ಮಾಡಿ, ಹಣ ಕೀರ್ತಿ ಸಂಪಾದಿಸಿದ್ದರೆ ಅದು ನನ್ನ ಸ್ವಂತ ಪರಿಶ್ರಮದಿಂದ, ನನ್ನಲ್ಲಿನ ಪ್ರತಿಭೆಯಿಂದ ಎಂದು ಹೇಳಿದ್ಧಾರೆ.
ಸದ್ಯ ಪರಿಣೀತಾ ಬೋರ್ಥಾಕುರ್ ಅವರ ಈ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪರಿಣೀತಾ ಬೋರ್ಥಾಕುರ್ ಅವರ ಎದುರು ಈ ಅಸಭ್ಯ-ಅಸಹ್ಯ ಬೇಡಿಕೆ ಇಟ್ಟ ಆ ವ್ಯಕ್ತಿ ಯಾರು ಎನ್ನುವ ಚರ್ಚೆ ನಡೆಯುತ್ತಿದೆ. ''ಕಾಸ್ಟಿಂಗ್ ಕೌಚ್'' ಚಿತ್ರರಂಗದಲ್ಲಿ ಆಳವಾಗಿ ಬೇರೂರಿದೆ ಎನ್ನುವುದಕ್ಕೂ ಕೂಡ ಪರಿಣೀತಾ ಬೋರ್ಥಾಕೂರ್ ಅವರ ಈ ಮಾತುಗಳು ಸಾಕ್ಷಿಯಂತಿವೆ.


Click it and Unblock the Notifications