40ರ ಹರೆಯದಲ್ಲಿ ನೇಣಿಗೆ ಕೊರಳೊಡ್ಡಿದ ಟಿವಿ9ನ ಖ್ಯಾತ ಮಾಜಿ ಸುದ್ದಿ ನಿರೂಪಕಿ !
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೊಮ್ಮೆ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ. ಪ್ರತಿ 100 ಜನರಲ್ಲಿ 70 ಜನ ಪುರುಷರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ..
ಎಂದು ಎನ್ಸಿಆರ್ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ. ಇಷ್ಟೇ ಅಲ್ಲದೇ ಶೇಕಡಾ 36 % ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದೆ. ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುವರಲ್ಲಿ ಮಹಿಳೆಯರು ಮುಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ಇದಕ್ಕೆ ಸ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ ಪ್ರಕರಣ ಮತ್ತೊಂದು ಉದಾಹರಣೆ.
ಹೌದು, ಸ್ವೇಚ್ಛಾ ವೋತಾರ್ಕರ್.. ತೆಲುಗು ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು. ಒಂದಲ್ಲ.. ಎರಡಲ್ಲ.. ಕಳೆದ 18 ವರ್ಷಗಳಿಂದ ಪತ್ರಕರ್ತೆಯಾಗಿ ಸುದ್ದಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಸ್ವೇಚ್ಛಾ ಅವರಿಗೆ ಟಿವಿ 9 ತೆಲುಗು ವಾಹಿನಿ ಅಪಾರವಾದ ಹೆಸರು ತಂದು ಕೊಟ್ಟಿತ್ತು.

ಟಿವಿ 9ದಿಂದ ಹೊರ ಬಂದ ನಂತರ 'T ನ್ಯೂಸ್' ತೆಲುಗು ವಾಹಿನಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದ ಸ್ವೇಚ್ಛಾ ವೋತಾರ್ಕರ್, ವಿಶೇಷ ವರದಿಗಾರ್ತಿಯಾಗಿ ಕೂಡ ಕೆಲಸವನ್ನು ನಿರ್ವಹಿಸಿದ್ದರು.
ಪತಿಯಿಂದ ದೂರವಾಗಿದ್ದ ಸ್ವೇಚ್ಛಾ ವೋತಾರ್ಕರ್, ತಮ್ಮ ಮಗಳ ಜೊತೆ ತಮ್ಮ ತಂದೆ ಮತ್ತು ತಾಯಿ {ಶ್ರೀದೇವಿ} ಅವರ ಜೊತೆ ರಾಮ್ನಗರದಲ್ಲಿ ವಾಸ ಮಾಡುತ್ತಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಸ್ವೇಚ್ಛಾ ಅವರ ಮಗಳು ಶಾಲೆಯಿಂದ ಹಿಂತಿರುಗಿದಾಗ ಸ್ವೇಚ್ಛಾ ಅವರು ತಮ್ಮ ರೂಮ್ ಬಾಗಿಲು ತೆರೆಯದಿದ್ದಾಗ ಈ ಘಟನೆ ಬೆಳಕಿಗೆ ಬಂದಿದ್ದು, ನೆರೆಹೊರೆಯವರ ನೆರವಿನಿಂದ ರೂಮ್ ಬಾಗಿಲು ಒಡೆದು ಒಳಗೆ ಹೋದಾಗ ಸ್ವೇಚ್ಛಾ ಆತ್ಮಹತ್ಯೆಗೆ ಶರಣಾಗಿದ್ದರು.
ಇನ್ನು ಎರಡು ದಿನಗಳ ಹಿಂದೆಯಷ್ಟೇ ಸ್ವೇಚ್ಛಾ ಬೀಚ್ನಲ್ಲಿ ತಾವು ಧ್ಯಾನಕ್ಕೆ ಕುಳಿತಿರುವಂತಹ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಮನಸು ಶಾಂತವಾದರೆ ಆತ್ಮ ಮಾತನಾಡುತ್ತದೆ ಎಂಬರ್ಥದ ಬುದ್ದನ ಸಾಲುಗಳನ್ನು ಬರೆದುಕೊಂಡಿದ್ದರು. ಈ ಸಮಯದಲ್ಲಿ ವ್ಯಕ್ತಿಯೊಬ್ಬ ಇವರ ಜೊತೆಗಿದ್ದು ಸದ್ಯ ಸ್ವೇಚ್ಛಾ ಅವರ ಈ ಪೋಸ್ಟ್ ಪೊಲೀಸರಲ್ಲಿ ಅನುಮಾನ ಮೂಡಿಸಿದೆ.
ಇನ್ನು ತಮ್ಮ ಮಗಳು ಶವವಾಗಿ ಪತ್ತೆಯಾದ ಬೆನ್ನಲ್ಲೇ ಸ್ವೇಚ್ಛಾ ಅವರ ತಂದೆ ದೂರು ದಾಖಲಿಸಿದ್ದು ದೂರಿನಲ್ಲಿ ಅವರು ಒಬ್ಬ ವ್ಯಕ್ತಿಯನ್ನು ತಮ್ಮ ಮಗಳ ಸಾವಿಗೆ ಹೊಣೆಗಾರರನ್ನಾಗಿ ಮಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿಯನ್ನು ಮಾಡಿವೆ. ಸದ್ಯ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.
ಸುದ್ದಿ ನಿರೂಪಕಿಯಾಗಿ ಹೆಸರು ಮಾಡಿದ್ದ ಸ್ವೇಚ್ಛಾ ಅವರ ಅಕಾಲಿಕ ನಿಧನಕ್ಕೆ ಕಂಬನಿಯನ್ನು ಮಿಡಿದಿರುವ ಬಿಆರ್ಎಸ್ ಕಾರ್ಯಕಾರಿ ಅಧ್ಯಕ್ಷ ಕೆ.ಟಿ. ರಾಮ ರಾವ್, ಸ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ತಿಳಿದು ಆಘಾತವಾಗಿದೆ, ಅವರ ಪೋಷಕರಿಗೆ ದೇವರು ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ಬದುಕು ಕಷ್ಟ ಎಂದು ನಿಮಗೆ ಅನಿಸಿದರೆ, ದಯವಿಟ್ಟು ವೃತ್ತಿಪರರನ್ನು ಸಂಪರ್ಕಿಸಲು ಹಿಂಜರಿಯಬೇಡಿ ಎಂದಿರುವ ಕೆ.ಟಿ.ರಾಮ್ ರಾವ್ ಜೀವನವು ಜೀವಿಸಲು ಯೋಗ್ಯವಾಗಿದೆ, ಸಹಾಯ ಯಾವಾಗಲೂ ಲಭ್ಯವಿರುತ್ತದೆ. ಜೀವನದಲ್ಲಿ ಕಷ್ಟ ಬಂದಾಗ ಸಹಾಯ ಪಡೆಯುವುದು ಮುಖ್ಯ ಎಂದು ಹೇಳಿದ್ದಾರೆ. ಅತ್ಯಂತ ಬುದ್ದಿವಂತ ಪತ್ರಕರ್ತೆಯನ್ನು ತೆಲಂಗಾಣ ಇಂದು ಕಳೆದುಕೊಂಡಿದೆ, ಅವರ ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Disclaimer : ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications











