Puttakkana Makkalu: ಪುಟ್ಟಕ್ಕನ ಪುಟ್ಟ ಗುಡಿಗೆ ಗೆಸ್ಟ್ ಎಂಟ್ರಿ.. ಯಾರದು ಕಿರುತೆರೆ ನಟ?
2013ರಲ್ಲಿ "ಮಿಲನ" ಎಂಬ ಧಾರಾವಾಹಿ ಕಿರುತೆರೆ ಪ್ರಪಂಚದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಖಳನಾಯಕ ಅಥವಾ ಖಳನಾಯಕಿಯೇ ಇಲ್ಲದ ಈ ಧಾರಾವಾಹಿಯ ಕಥೆಯು ಸಂಬಂಧಗಳ ನಡುವಿನ ತೊಳಲಾಟಗಳ ಬಗ್ಗೆ ಅದ್ಭುತವಾಗಿ ಚಿತ್ರಿಸಿತ್ತು. ಸಮರ್ಥ್ ಹಾಗೂ ಪ್ರಾರ್ಥನಾ ಎಂಬ ಗಂಡ ಹೆಂಡತಿಯರ ದಾಂಪತ್ಯದಲ್ಲಿ ಮೂರನೆಯವಳೊಬ್ಬಳು ಬಂದಾಗ ಏನೆಲ್ಲಾ ಸಂಕಷ್ಟಗಳು ಇರುತ್ತವೆ ಎಂಬುದು ಮಿಲನ ಧಾರಾವಾಹಿಯ ಕಥಾಂದರವಾಗಿತ್ತು.
'ಮಿಲನ' ಧಾರಾವಾಹಿಯಲ್ಲಿ ಪ್ರೌಢ ಹಾಗೂ ವಿವಾಹಿತ ಗಂಡಸಿನ ಪಾತ್ರವನ್ನು ಮಾಡಿದ ಪ್ರಶಾಂತ್ ಭಾರದ್ವಾಜ್ಗೆ ಆಗ ಕೇವಲ 20 ವರ್ಷ ವಯಸ್ಸು. ತನ್ನ ಪ್ರಬುದ್ಧ ಫೇಸ್ ಹಾಗೂ ಅಭಿನಯದಿಂದ ಈ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ ಈ ನಟ ಮುಂದೆಯೂ ಕೆಲವು ಧಾರಾವಾಹಿಗಳಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಗೆಸ್ಟ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾರರ್ ಧಾರಾವಾಹಿ 'ಆತ್ಮಬಂಧನ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ಪ್ರಶಾಂತ್ ಭಾರಧ್ವಾಜ್ ಇದೀಗ ಅತಿಥಿ ಪಾತ್ರದ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಲಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕಿ ಸ್ನೇಹ ಅಕ್ಕ ಸಹನಾ ಮದುವೆಯಾಗುವ ಹುಡುಗ ಮುರಳಿಯ ಸ್ನೇಹಿತ ಸಾತ್ವಿಕ್ ಆಗಿ ಪ್ರಶಾಂತ್ ಭಾರಧ್ವಾಜ್ ಅಭಿನಯಿಸಿದ್ದಾರೆ.

ಧಾರಾವಾಹಿಯಲ್ಲಿ ಪಾತ್ರ ಸಿಕ್ಕಿದ್ದೇ ರೋಚಕ
"ನನಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತು. 'ಮಿಲನ' ಧಾರಾವಾಹಿ ಮೂಲಕ ನನ್ನ ಬಣ್ಣ ಪಯಣ ಶುರುವಾಯಿತು. ಮಿಲನ ಧಾರಾವಾಹಿ ಸಿಗುವ ಮೊದಲು ಎರಡು-ಮೂರು ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದೆ. ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಲ್ಲವಿ ಅನುಪಲ್ಲವಿ' ಎಂಬ ಧಾರವಾಹಿಯ ತಂಡವು ಇನ್ನೊಂದು ಧಾರಾವಾಹಿಯನ್ನು ಮಾಡುತ್ತಿದ್ದಾರೆ ಎಂದು ಕೇಳಿದಾಗ ಅದಕ್ಕೂ ಆಡಿಶನ್ ಕೊಟ್ಟೆ. ನನ್ನ ಪ್ರಕಾರ, ನಾನು ಆಡಿಷನಲ್ಲಿ ಚೂರು ಚೆನ್ನಾಗಿ ನಟಿಸಿರಲಿಲ್ಲ. ಒಟ್ಟು ಮೂರು ಪಾತ್ರಗಳಲ್ಲಿ ನನಗೊಂದು ಪಾತ್ರ ಸಿಗುತ್ತದೆ ಎಂದು ಹೇಳಿದ್ದರು. ನಂತರ ನನ್ನನ್ನು ನೋಡಿದ ಹಲವಷ್ಟು ಜನರು ನಾನು ಹೀರೋ ಆಗಿ ನಟಿಸಲು ಸರಿಯಾಗಿದ್ದೇನೆ ಎಂದು ನಿರ್ಧರಿಸಿದರು. ಈ ರೀತಿಯಾಗಿ 'ಮಿಲನ' ಧಾರಾವಾಹಿ ನನ್ನ ಕೈ ಸೇರಿತ್ತು. ಇದು ನನ್ನ ಅದೃಷ್ಟ ಎಂದು ಹೇಳಬಹುದು ಅಂದಿನಿಂದ ಇಂದಿನವರೆಗೂ ಅಭಿನಯ ನನ್ನ ಕ್ಷೇತ್ರ ಇಂದು ನಂಬಿ ಇದರಲ್ಲೇ ನಾನು ನೆಲೆಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ" ಎನ್ನುತ್ತಾರೆ ಪ್ರಶಾಂತ್ ಭಾರಧ್ವಾಜ್.

ಒಬ್ಬ ನಟನ ಕೈಲಿ ನಟನೆ ಮಾತ್ರ ಇರುತ್ತೆ
"ಹಲವಷ್ಟು ಬಾರಿ ನಮಗೆ ಬೇಕಾಗಿರುವ ಪಾತ್ರಗಳೇ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಬಾರಿ ಚಿಕ್ಕ ಪಾತ್ರವನ್ನು ಅದ್ಭುತವಾಗಿ ನಟಿಸುವ ಶಕ್ತಿ ನಮ್ಮಲ್ಲಿ ಇರುತ್ತದೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ನಮಗೆ ಬೇಕಾಗಿರುವ ಪಾತ್ರಕ್ಕೆ ಕಾಯುತ್ತ ಕೂರುವುದು ಮೂರ್ಖತನ. ಕೆಲವೊಮ್ಮೆ ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ನಂಬಿದ್ದರು. ಕೊನೆಗೆ ನಿರ್ದೇಶಕರು ಆ ಪಾತ್ರದ ದಾರಿಯನ್ನೇ ತಿರುಗಿಸಿ ಬಿಡಬಹುದು. ಹಾಗಾಗಿ ನಟನೆ ಎಂದಾಗ ಅಲ್ಲಿ ಒಬ್ಬ ನಟನ ಕೈಲಿ ನಟನೆ ಮಾತ್ರ ಇರುತ್ತದೆ. ಮತ್ತೆ ಯಾವುದು ಆತನ ಕೈಲಿರುವುದಿಲ್ಲ" ಎಂದು ಹೇಳುತ್ತಾರೆ ಪ್ರಶಾಂತ್ ಭಾರಧ್ವಾಜ್.

'ಮಿಲನ' ತಿರುವು ಕೊಟ್ಟ ಸಿನಿಮಾ
"ಮಿಲನ ಧಾರವಾಹಿಯಲ್ಲಿ ಸಮರ್ಥ್ ಪಾತ್ರ ಸಿಕ್ಕಾಗಲು ನನಗೆ ಆಕ್ಟಿಂಗ್ ತೀರ ಹೊಸದು. ನಿರ್ದೇಶಕರಾದ ಮಧುಸೂದನ್ ಅವರು ನನಗೆ ಅದ್ಭುತವಾಗಿ ಅಭಿನಯಿಸಲು ಹೇಳಿಕೊಡುತ್ತಾ ಬಂದರು ಜೊತೆಗೆ ನನ್ನ ಸಹನಟರು ಕೂಡ ಒಳ್ಳೆಯ ರೀತಿಯಲ್ಲಿ ಸಹಕಾರ ಕೊಡುತ್ತ ನನ್ನ ಅಭಿನಯವನ್ನು ಮೌಲ್ಡ್ ಮಾಡುತ್ತಾ ಬಂದರು. ಈ ಧಾರಾವಾಹಿ ಪ್ರತಿ ಪಾತ್ರದಲ್ಲೂ ಒಂದಷ್ಟು ಸೈಕಲಾಜಿಕಲ್ ಎಲಿಮೆಂಟ್ ಗಳು ಇರುತ್ತವೆ. ಅದು ನನಗೆ ಬಹಳ ಖುಷಿ ಕೊಡುತ್ತದೆ" ಎಂಬುದು ಪ್ರಶಾಂತ್ ಅಭಿಪ್ರಾಯ.

ರಿಯಾಲಿಟಿ ಶೋನಲ್ಲೂ ಮಿಂಚಿಂಗ್
"ಇದಾದ ಮೇಲೆ ನಾನು ಆತ್ಮ ಬಂಧನ ಇತ್ಯಾದಿಯಾಗಿ ಒಟ್ಟು ನಾಲ್ಕು ಧಾರವಾಹಿಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದೆ. ಆ ನಿಟ್ಟಿನಲ್ಲಿ ನಾನು ತುಂಬಾ ಅದೃಷ್ಟವಂತ. ಇದರ ಜೊತೆಗೆ ಟೆಕ್ನಿಕಲ್ ವಿಷಯಗಳನ್ನು ಸ್ವಲ್ಪ ತಿಳಿದುಕೊಂಡಿರುವುದರಿಂದ ನನಗೆ ಧಾರಾವಾಹಿಯಲ್ಲಿ ಬ್ಯಾಕ್ ಗ್ರೌಂಡ್ ಕೆಲಸದಲ್ಲೂ ಬಹಳ ಆಸಕ್ತಿ ಇರುವುದನ್ನು ಸಾಬೀತು ಮಾಡಲು ಸಾಧ್ಯವಾಯಿತು. ಇದಲ್ಲದೆ ಡ್ಯಾನ್ಸ್ನಲ್ಲಿ ಕೂಡ ಆಸಕ್ತಿ ಇದ್ದ ನನಗೆ 'ಡಾನ್ಸ್ ಕರ್ನಾಟಕ ಡಾನ್ಸ್ ' ವೇದಿಕೆ ಅವಕಾಶ ದೊರಕಿದ್ದು ಇನ್ನೊಂದು ಖುಷಿಯ ವಿಚಾರ" ಎಂದು ಹೇಳಿದ್ದರು ಪ್ರಶಾಂತ್. "ಬೆಳ್ಳಿ ತೆರೆಯಲ್ಲಿಯೂ ಕಾಣಿಸಿಕೊಳ್ಳುವ ಆಸೆ ಇದೆ, ಒಳ್ಳೆ ಪಾತ್ರಗಳು ಸಿಕ್ಕರೆ ನಾನು ನಟಿಸಲು ಸದಾ ಸಿದ್ಧ." ಎಂದು ತಮ್ಮ ಕನಸಿನ ಹಂಚಿಕೊಂಡಿದ್ದಾರೆ ನಟ ಪ್ರಶಾಂತ್ ಭಾರದ್ವಾಜ್.


Click it and Unblock the Notifications











