ಕೋಟ್ಯಧಿಪತಿಯಲ್ಲಿ ಅಪ್ಪುಗೆ ಅಭಿಮಾನಿ ಕೇಳಿದ ವಿಶೇಷವಾದ ಪ್ರಶ್ನೆ
ವರನಟ ಡಾ.ರಾಜ್ ಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಇಂದು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರಾಗಿ ಮೆರೆಯುತ್ತಿದ್ದಾರೆ ಅಣ್ಣಾವ್ರ ಮಕ್ಕಳು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸಹ ಇತ್ತೀಚಿಗೆ ಮತ್ತೆ ಬಣ್ಣ ಹಚ್ಚುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೆಳ್ಳಿ ಪರದೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲು ಮಿಂಚುತ್ತಿದ್ದಾರೆ. ಸದ್ಯ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೂಲಕ ಅಪ್ಪು ಪ್ರತೀ ವಾರ ಅಭಿಮಾನಿಗಳ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಸಾಮಾನ್ಯರ ಜೊತೆ ಸಾಮಾನ್ಯರಾಗಿ ಬೆರೆತು ಅಪ್ಪು ನಡೆಸಿಕೊಡುವ ಈ ಕಾರ್ಯಕ್ರಮ ಜನಪ್ರಿಯವಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರು ಕೇಳಿದ ಪ್ರಶ್ನೆಗೆ ಪುನೀತ್ ಅಷ್ಟೆ ಸಹಜವಾಗಿ ಉತ್ತರಿಸಿದ್ದಾರೆ. ಸ್ಪರ್ಧಿಯ ಪ್ರಶ್ನೆ ಹೀಗಿತ್ತು. "ನೀವು ಸ್ಟಾರ್ ನಟನ ಮಗನಾಗಿ ಹುಟ್ಟಿದ್ದೀರಿ, ನೀವು ಎಷ್ಟೆ ಸಾಧನೆ ಮಾಡಿದ್ರು ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಎಂದು ಕರೆಯುತ್ತಾರೆ. ಇದನ್ನ ಹೇಗೆ ಎದುರಿಸಿದ್ರಿ? ಎಂದು ಕೇಳಿದ್ದಾರೆ.

ವರ್ಷಕ್ಕೆ ಎರಡು ತಿಂಗಳು ಹಳ್ಳಿಯಲ್ಲಿ ಇರುತ್ತಿದ್ದೆ
ಇದಕ್ಕೆ ಪುನೀತ್ "ಚಿಕ್ಕವಯಸ್ಸಿನಿಂದನೂ ತುಂಬು ಕುಟುಂಬದಲ್ಲಿ ಬೆಳೆದವನು. ನಮ್ಮ ಮನೆಯಲ್ಲಿ ಸಾಕಷ್ಟು ಮಕ್ಕಳು ಇರುತ್ತಿದ್ದರು. ಹಾಗಾಗಿ ವಿಶೇಷವಾದ ಆತಿಥ್ಯವೇನು ಇರುತ್ತಿರಲಿಲ್ಲ. ವರ್ಷಕ್ಕೆ ಎರಡು ತಿಂಗಳಾದ್ರು ನಮ್ಮ ಹಳ್ಳಿ ಅಂದ್ರೆ ಗಾಜನೂರಿಗೆ ಹೋಗುತ್ತಿದ್ವಿ. ಅಪ್ಪನ ಜೊತೆ ಜಾಸ್ತಿ ಇದ್ದಿದ್ದು ಅಂದ್ರೆ ನಾನೆ. ಶೂಟಿಂಗ್ ಗೆ ಹೋಗಿ ಅವರ ಜೊತೆ ಊರು ಸುತ್ತಾಡುತ್ತಿದ್ದೆ. ಆದ್ರೆ ಯಾವತ್ತು ಸ್ಟಾರ್ ಕಿಡ್ ಎನ್ನುವ ವಿಚಾರ ತಲೆಗೆ ಬರ್ತಿಲ್ಲಿಲ್ಲ"

ಅಪ್ಪನ ದುಡ್ಡನ್ನು ಕಳೆಯುತ್ತಿದ್ದಾನೆ ನೋಡಿ
"ಹೀರೋ ಆದ್ಮೇಲೆ, ಒಳ್ಳೆಯ ಕಾರಲ್ಲಿ ಓಡಾಡಿದ್ರೆ ಕೆಲವು ಅಣ್ಣಾವ್ರ ಮಗ ಹೇಗೆ ಕಾರಲ್ಲಿ ಓಡಾಡುತ್ತಿದ್ದಾನೆ. ಅಪ್ಪನ ದುಡ್ಡನ್ನು ಕಳೆಯುತ್ತಿದ್ದಾನೆ ನೋಡಿ ಎಂದು ಹೇಳುತ್ತಿದ್ರು. ಆದ್ರೆ ಯಾವುದನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ"

ಕಷ್ಟಪಟ್ಟು ಮುಂದೆ ಬರಬೇಕು
"ಯಾಕಂದ್ರೆ ನಮ್ಮನೆಯಲ್ಲಿ ಯಾವತ್ತು ಹಾಗೆ ಬೆಳೆಸಿಲ್ಲ. ಮನೆಯಲ್ಲಿ ಕಲಿಸಿದ ಬುದ್ದಿ ಅಂದ್ರೆ ಕೆಲಸ ಮಾಡಬೇಕು ಮೈನ ಚೆನ್ನಾಗಿ ದಂಡಿಸಬೇಕು, ನಿನ್ನ ಬದುಕನ್ನು ಒಳ್ಳೆಯ ರೀತಿಯಾಗಿ ರೂಪಿಸಿಕೊಳ್ಳಬೇಕು, ಕಷ್ಟಪಟ್ಟು ಮುಂದೆ ಬರಬೇಕು ಅಂತ ಮಾತ್ರ ಹೇಳಿಕೊಟ್ಟಿದ್ದಾರೆ. ಆದ್ರೂ ಇಂದು ಎಲ್ಲಿಯೆ ಹೋದರು ಪುನೀತ್ ಎಂದು ಕರೆಯಲ್ಲ. ಆದ್ರೆ ಅಣ್ಣಾವ್ರ ಮಗ ಎನ್ನುತ್ತಾರಲ್ಲಾ ಅದು ಇನ್ನೂ ಹೆಮ್ಮೆ ಎನಿಸುತ್ತೆ"

ಅಣ್ಣಾವ್ರ ತರ ಆಗಲಿಕ್ಕೆ ಆಗಲ್ಲ
ಅಣ್ಣಾವ್ರ ತರ ಆಗಲಿಕ್ಕೆ ಆಗಲ್ಲ. ಆದ್ರೆ ಅವರ ಮಾಡಿರುವ ಹೆಸರಿಗೆ ತಕ್ಕದಾಗಿ ಒಳ್ಳೆ ಮನುಷ್ಯಯನಾಗಿ ಇರುವುದಕ್ಕೆ ಪ್ರಯತ್ನ ಪಡೋಣ ಅಂತ ಅಷ್ಟೆ. ನಮ್ಮ ಕೆಲಸ ಏನಿದೆಯು ಅದನ್ನು ಮಾಡಿಕೊಂಡು ಹೋಗೋಣ. ಆದ್ರೆ ಐಡೆಂಟಿಟಿ ಕ್ರೈಸೀಸ್ ಎನ್ನುವುದು ಯಾವತ್ತು ತಲೆಯಲ್ಲಿ ಬಂದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಸ್ಪರ್ಧಿಗೆ ಕೇಳದ ಪ್ರಶ್ನೆ ಚೆನ್ನಾಗಿತ್ತು ಎಂದಿದ್ದಾರೆ.


Click it and Unblock the Notifications











