ಕೆಬಿಸಿ ಜೂನಿಯರ್ ಶೋನಲ್ಲಿ ₹50 ಲಕ್ಷ ಗೆದ್ದ ಪಂಜಾಬಿನ ಹುಡುಗಿ ಜಪ್ಸಿಮ್ರನ್ ಕೌರ್
ಕಿರುತೆರೆಯ 'ಕೌನ್ ಬನೇಗಾ ಕರೋಡ್ಪತಿ' ಕ್ವಿಝ್ ಗೇಮ್ ಶೋನಲ್ಲಿ ಭಾಗವಹಿಸುವುದೇ ಹೆಮ್ಮೆಯ ಸಂಗತಿ. ಎಲ್ಲರಿಗೂ ಅಷ್ಟು ಸುಲಭವಾಗಿ ಈ ಅವಕಾಶ ಸಿಗುವುದಿಲ್ಲ. ಆದರೆ 14 ವರ್ಷದ ಪಂಜಾಬಿ ಹುಡುಗಿ 50 ಲಕ್ಷ ಗೆದ್ದು ಅಚ್ಚರಿ ಮೂಡಿಸಿದ್ದಾಳೆ.
ಅಮಿತಾಬ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ಪತಿ' ಶೋ ನೋಡುತ್ತಿದ್ದ ಹುಡುಗಿ ಒಮ್ಮೆಯಾದರೂ ಅದರಲ್ಲಿ ಭಾಗವಹಿಸಬೇಕು ಎಂದು ಕನಸು ಕಂಡಿದ್ದಳು. ಇದೀಗ ಭಾಗವಹಿಸುವುದು ಅಷ್ಟೇ ಅಲ್ಲ ಭಾರಿ ಬಹುಮಾನವನ್ನೇ ಗೆದ್ದು ಖುಷಿಪಟ್ಟಿದ್ದಾಳೆ. ಪಂಜಾಬ್ನ ಜಲಂಧರ್ನಲ್ಲಿ ಹುಟ್ಟಿ ಬೆಳೆದ ಜಪ್ಸಿಮ್ರನ್ ಕೌರ್ ಅಲ್ಲಿನ ಕೇಂದ್ರಿಯ ವಿದ್ಯಾಲಯದಲ್ಲಿ 8 ತರಗತಿ ಓದುತ್ತಿದ್ದಾಳೆ. ಜನರಲ್ ನಾಲ್ಡೆಜ್ ಚೆನ್ನಾಗಿ ಗೊತ್ತಿದ್ದರಿಂದ 'ಕೌನ್ ಬನೇಗಾ ಕರೋಡ್ಪತಿ' ಶೋನಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದಳು. ಅಷ್ಟೆಕ್ಕೆ ಸುಮ್ಮನಾಗದೇ ಅದಕ್ಕಾಗಿ ಪ್ರಯತ್ನಿಸುತ್ತಲೇ ಇದ್ದಳು. ತಂದೆಯ ಸಹಾಯದಿಂದ ಶೋನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.
'ಕೌನ್ ಬನೇಗಾ ಕರೋಡ್ಪತಿ ಜೂನಿಯರ್ಸ್' ಸೀಸನ್ನಲ್ಲಿ ಪಂಜಾಬಿ ಹುಡುಗಿಗೆ ಭಾಗವಹಿಸುವ ಅವಕಾಶ ಸಿಕ್ಕಿದೆ. ಅದು ಅಷ್ಟು ಸುಲಭವಾಗಿ ಧಕ್ಕಿದ್ದಲ್ಲ. ಅದಕ್ಕಾಗಿ ಪ್ರವೇಶ ಪರೀಕ್ಷೆ, ಸಂದರ್ಶನದಲ್ಲಿ ಪ್ರತಿಭೆ ಪ್ರದರ್ಶಿಸಿ ಕೊನೆಯದಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಎದುರು ಹಾಟ್ ಸೀಟ್ನಲ್ಲಿ ಕೂತಿದ್ದಾಳೆ. ಸಿಕ್ಕಾಪಟ್ಟೆ ಚೂಟಿಯಾದ ಹುಡಗಿ ತನ್ನ ಮಾತಿನ ಮೂಲಕ ಬಿಗ್ಬಿಗೂ ಚಮಕ್ ಕೊಟ್ಟಿದ್ದಾಳೆ.

₹50 ಲಕ್ಷ ಗೆದ್ದ ಜಪ್ಸಿಮ್ರನ್ ಕೌರ್
ಶೋನಲ್ಲಿ ₹50 ಲಕ್ಷ ಗೆದ್ದ ಜಪ್ಸಿಮ್ರನ್ ಕೌರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾಳೆ. "ಹಾಟ್ ಸೀಟ್ನಲ್ಲಿ ಕೂತಾಗ ಎಂತಹ ಪ್ರಶ್ನೆ ಕೇಳುತ್ತಾರೋ ಎಂದು ಭಯಗೊಂಡಿದ್ದೆ. ಆದರೆ ಅಮಿತಾಬ್ ಸರ್ ಮಕ್ಕಳ ಜೊತೆ ಬಹಳ ಜಾಲಿಯಾಗಿ ಮಾತನಾಡುತ್ತಾರೆ. ಅವರ ಜೊತೆ ಮಾತನಾಡುತ್ತಾ ಭಯ ಹೋಗಿತ್ತು. 'ಕೌನ್ ಬನೇಗಾ ಕರೋಡ್ಪತಿ ಜೂನಿಯರ್ಸ್'ನಲ್ಲಿ 50 ಲಕ್ಷ ಗೆದ್ದಿದ್ದು ಬಹಳ ಖುಷಿಯಾಗಿದೆ" ಎಂದಿದ್ದಾಳೆ.

ಮಗಳ ಸಾಧನೆಗೆ ಬಗ್ಗೆ ಹೆಮ್ಮೆ ಇದೆ
ಜಪ್ಸಿಮ್ರನ್ ಕೌರ್ ಅವರ ತಂದೆ ಬಲ್ಜಿತ್ ಸಿಂಗ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಈ ವರ್ಷ ಕೆಬಿಸಿ ಶೋಗೆ ಆಯ್ಕೆ ಆಗಿದ್ದರು. ಆದರೆ ಹಾಟ್ ಸೀಟ್ಗೆ ಹೋಗುವ ಅವಕಾಶ ಸಿಕ್ಕಿರಲಿಲ್ಲ. "ತನ್ನ ಮಗಳ ಸಾಧನೆ ಬಹಳ ಹೆಮ್ಮೆ ಎನಿಸುತ್ತಿದೆ. ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ನಮ್ಮ ನಗರಕ್ಕೆ, ರಾಜ್ಯಕ್ಕೆ ಒಳ್ಳೆ ಹೆಸರು ಬಂದಂತಾಗಿದೆ" ಎಂದು ತಂದೆ ಹೇಳಿದ್ದಾರೆ. ಮಗಳು ಖಂಡಿತ ಗೆದ್ದು ಬರುತ್ತಾಳೆ ಎನ್ನುವ ನಂಬಿಕೆ ಇತ್ತು. 10 ತಿಂಗಳ ಮಗುವಾಗಿದ್ದಾಗಲೇ ಅವಳು ಮಾತನಾಡಲು ಶುರು ಮಾಡಿದ್ದಳು ಎಂದು ಜಪ್ಸಿಮ್ರನ್ ಕೌರ್ ತಾಯಿ ತಿಳಿಸಿದ್ದಾರೆ.

ಸ್ಪೇಸ್ ಸೈಂಟಿಸ್ಟ್ ಆಗಬೇಕು
ಮುಂದೆ ಸ್ಪೇಸ್ ಸೈಂಟಿಸ್ಟ್ ಆಗಬೇಕು ಎಂದು ಕನಸು ಕಂಡಿರುವ ಜಪ್ಸಿಮ್ರನ್ ಕೌರ್ಗೆ ಪುಸ್ತಕ ಓದುವುದು ಅಂದರೆ ಬಹಳ ಆಸಕ್ತಿ. ಇಷ್ಟು ಹಣ ಗೆದ್ದಿದ್ದೀಯಾ, ಇದನ್ನು ಏನು ಮಾಡುತ್ತೀಯ ಎನ್ನುವ ಪ್ರಶ್ನೆಗೆ "ನಮ್ಮ ಅಜ್ಜಿಯ ಮೊಣಕಾಲು ಆಪರೇಷನ್ ಮಾಡಿಸಬೇಕು. ಸ್ಪೇಸ್ ಸೈಂಟಿಸ್ಟ್ ಆದ ಮೇಲೆ ಬಡ ಮಕ್ಕಳ ಓದಿಗೆ ಸಹಾಯ ಮಾಡುತ್ತೇನೆ" ಎಂದು ಉತ್ತರ ಕೊಟ್ಟಿದ್ದಾಳೆ. ಆದರೆ 'ಕೌನ್ ಬನೇಗಾ ಕರೋಡ್ಪತಿ' ನಿಯಮದ ಪ್ರಕಾರ ಜಪ್ಸಿಮ್ರನ್ ಕೌರ್ 18 ವರ್ಷ ತುಂಬಿದ ಮೇಲೆ 50 ಲಕ್ಷ ಹಣವನ್ನು ತಲುಪಿಸುತ್ತಾರೆ.

ಕನ್ನಡದಲ್ಲೂ ಶೋ ಸಕ್ಸಸ್
'ಕೌನ್ ಬನೇಗಾ ಕರೋಡ್ಪತಿ' ಶೋ ಕನ್ನಡದಲ್ಲೂ ಪ್ರಸಾರವಾಗಿತ್ತು. ಕನ್ನಡದ ಕೋಟ್ಯಧಿಪತಿ ಹೆಸರಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಶೋ ನಡೆಸಿಕೊಟ್ಟಿದ್ದರು. ಸಾಕಷ್ಟು ಜನ ಶೋನಲ್ಲಿ ಭಾಗವಹಿಸಿ ಹಣ ಗೆದ್ದಿದ್ದರು. ಗೆಲ್ಲಲು ಸಾಧ್ಯವಾಗದ ಸಂಕಷ್ಟದಲ್ಲಿದ್ದ ಬಡ ಸ್ಪರ್ಧಿಗಳಿಗೆ ಸ್ವತಃ ಅಪ್ಪು ಹಣದ ಸಹಾಯ ಮಾಡಿದ್ದರು. ಆದರೆ ಇದು ಯಾರಿಗೂ ಗೊತ್ತಾಗುತ್ತಿರಲಿಲ್ಲ.


Click it and Unblock the Notifications











