Actress Priyanka: 'ಪುಣ್ಯವತಿ'ಗೆ ಕಿರುತೆರೆಯತ್ತ 'ಆಸೆ'.. ನಟಿ ಪ್ರಿಯಾಂಕಾ ಸೆಕೆಂಡ್ ಇನ್ನಿಂಗ್ಸ್ ಶುರು
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪದ್ಮಿನಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದಿದ್ದ ನಟಿ ಪ್ರಿಯಾಂಕಾ ಹೊಸ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಹೌದು! ರಮೇಶ್ ಅರವಿಂದ್ ನಿರ್ಮಾಣದಡಿಯಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'ಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ನಟಿ ಪ್ರಿಯಾಂಕಾ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯು ಬಿಗ್ ಬಾಸ್ ಪ್ರಸಾರವಾಗುತ್ತಿರುವ ಕಾರಣದಿಂದ ಬಹುಬೇಗನೇ ಪ್ರಸಾರ ನಿಲ್ಲಿಸಿತ್ತು. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಪ್ರಿಯಾಂಕಾ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

'ಪುಣ್ಯವತಿ' ಧಾರಾವಾಹಿ ಮುಗಿದ ನಂತರ ಇದೀಗ 'ಆಸೆ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಪ್ರಿಯಾಂಕಾರನ್ನು ತೆರೆ ಮೇಲೆ ಕಾಣಿಸಿಕೊಳ್ಳಲು ಸೀರಿಯಲ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ಕೂಡಾ ಬಿಡುಗಡೆಯಾಗಿದ್ದು, ತಮ್ಮ ನೆಚ್ಚಿನ ನಟಿಯನ್ನು ಮತ್ತೆ ಕಿರುಪರದೆ ಮೇಲೆ ನೋಡಲು ಕಾತರರಾಗಿದ್ದಾರೆ.
ಇನ್ನು 'ಆಸೆ' ಧಾರಾವಾಹಿಯ ಪ್ರೋಮೋ ನೋಡಿದರೆ ಇದು ಒಂದು ಪಕ್ಕಾ ಮಿಡಲ್ ಕ್ಲಾಸ್ ಕುಟುಂಬದ ಕಥೆಯಂತೆ ಭಾಸವಾಗುತ್ತದೆ. ನಾಯಕಿಯಾಗಿ ಪ್ರಿಯಾಂಕಾ ನಟಿಸಿದರೆ, ನಾಯಕನಾಗಿ 'ನಾಗಿಣಿ 2' ಖ್ಯಾತಿಯ ನಿನಾದ್ ಹರಿತ್ಸ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ನಾಗೇಂದ್ರ ಶಾ, ಸ್ನೇಹ ನಂದೀಶ್, ಛಾಯಾ ಮುಂತಾದವರು ತಾರಾಗಣದಲ್ಲಿದ್ದಾರೆ.

ಅಂದ ಹಾಗೇ ಇದು ರಮೇಶ್ ಅರವಿಂದ್ ಅವರು ನಿರ್ಮಾಣ ಮಾಡುತ್ತಿರುವ ನಾಲ್ಕನೇ ಧಾರಾವಾಹಿ. ಹೌದು.. ಈ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ ಸೀಸನ್ 2', ಧಾರಾವಾಹಿಯನ್ನು ನಿರ್ಮಾಣ ಮಾಡುವ ಮೂಲಕ ಕಿರುತೆರೆಗೆ ನಿರ್ಮಾಪಕರಾಗಿ ನಟ ರಮೇಶ್ ಅರವಿಂದ್ ಕಾಲಿಟ್ಟಿದ್ದರು. ತದ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯ ನಿರ್ಮಾಪಕರಾಗಿಯೂ ರಮೇಶ್ ಅರವಿಂದ್ ಕಾಣಿಸಿಕೊಂಡರು.
ಇದೀಗ ಹೊಸ ಧಾರಾವಾಹಿಯ ಮೂಲಕ ಮತ್ತೆ ನಿರ್ಮಾಪಕರಾಗಿ ಕಿರುತೆರೆಗೆ ಮರಳಿದ್ದಾರೆ. ಈಗ 'ಆಸೆ' ಧಾರಾವಾಹಿಯ ಮೂಲಕ ಮತ್ತೆ ವೀಕ್ಷಕರಿಗೆ ಮನರಂಜನೆಯನ್ನು ನೀಡುವುದಕ್ಕೆ ಮುಂದಾಗಿದ್ದಾರೆ. ಆದರೆ, ಆಸೆ ಸೀರಿಯಲ್ ಯಾವಾಗ ಪ್ರಸಾರ ಆಗುತ್ತೆ ಅನ್ನೋದು ಇನ್ನೂ ನಿಗದಿಯಾಗಿಲ್ಲ. ಸದ್ಯ 'ಗೌರಿಶಂಕರ' ಅನ್ನೋ ಧಾರಾವಾಹಿಯನ್ನು ಪ್ರಸಾರದ ಕಡೆ ಚಿಂತನೆ ನಡೆಸಿದೆ. ಅದಾದ ಬಳಿಕ ರಮೇಶ್ ಅರವಿಂದ್ ನಿರ್ಮಾಣದ 'ಆಸೆ' ಪ್ರಸಾರ ಆಗಲಿದೆ.


Click it and Unblock the Notifications











