ಒಂದೇ ವಾರದಲ್ಲಿ ಅಮ್ಮ-ಅಪ್ಪ ಇಬ್ರೂ ಇಲ್ಲ; ಪೋಷಕರ ನೆನೆದು 'ಪುಟ್ಟಕ್ಕನ ಮಗಳು' ನಟಿಯ ಪೋಸ್ಟ್
'ಪುಟ್ಟಕ್ಕನ ಮಗಳು' ಧಾರಾವಾಹಿಯ ನಟಿ ಅಕ್ಷತಾ ಮಾಯಾಸಂದ್ರ ಕಿರುತೆರೆಯಲ್ಲಿ ಚಿರಪರಿಚತ ನಟಿ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಈ ನಟಿ ಅಮ್ಮಂದಿರ ದಿನದಂದು ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಓದುಗರ ಕಣ್ಣುಗಳನ್ನು ಒದ್ದೆಯಾಗಿಸಿದೆ. ಕಳೆದ ವರ್ಷ ಅಕ್ಷತಾ ಮಾಯಸಂಧ್ರ ಒಂದೇ ವಾರದ ಅಂತರದಲ್ಲಿ ಅಮ್ಮ ಹಾಗೂ ಅಪ್ಪ ಇಬ್ಬರನ್ನೂ ಕಳೆದುಕೊಂಡಿದ್ದರು.
ಅಕ್ಷತಾ ಮಾಯಸಂದ್ರ ಕಿರುತೆರೆಯಲ್ಲಿ 'ಪುಟ್ಟಕ್ಕನ ಮಕ್ಕಳು', 'ನನ್ನರಸಿ ರಾಧೆ' ಅಂತಹ ಜನಪ್ರಿಯರ ಧಾರಾವಾಹಿಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ಷತಾ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು. ಅಮ್ಮನನ್ನು ಹೆಚ್ಚು ಹಚ್ಚಿಕೊಂಡಿದ್ದ ನಟಿಗೆ ಅವರನ್ನು ಕಳೆದುಕೊಂಡಿದ್ದ ಆಘಾತದಿಂದ ಹೊರ ಬರುವ ಮುನ್ನವೇ ತಂದೆ ಕೂಡ ಇಹಲೋಕ ತ್ಯಜಿಸಿದ್ದರು.

ಇಂದು (ಮೇ 11) ತಾಯಂದಿರ ದಿನ. ಈ ದಿನದಂದು ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಮ್ಮ ಹಾಗೂ ಮಗಳ ಸಂಬಂಧ. ಜಗಳ, ಪ್ರೀತಿ, ಕಣ್ಣೀರು ಇವೆಲ್ಲವನ್ನೂ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಓದಲು ಮುಂದೆ ಓದಿ.
"ಇವತ್ತು ತಾಯಂದಿರ ದಿನ.
ಮದುವೆಯ ಮೊದಲು, ಅಮ್ಮನ ಜೊತೆಗೆ ಏನೇ ಮನಸ್ತಾಪ, ಭಿನ್ನಾಭಿಪ್ರಾಯ, ಕದನ, ಜಗಳ ಆದ್ರೂ ಅದೊಂದು ದಿನಕ್ಕಷ್ಟೇ.... ರಾತ್ರಿಯ ವೇಳೆಗೆ ನನಗೆ ಬೇಸರವಾಗಿ ಕ್ಷಮೆ ಕೇಳಿಯೋ ಅಥವಾ ನಾನೇನು ತಿಂದಿಲ್ಲ, ಹಸಿವಾಗಿರಬೇಕು ಎನ್ನುವ ಕಾಳಜಿಯಿಂದ ಆಯ್ತು ಬಿಡು, ನಾ ಬೈಯೊಲ್ಲ ಅಂತ ಬಂದು ತಬ್ಬಿ ತುತ್ತಿಕ್ಕಿ ಅಂದಿನ ದಿನಕ್ಕೆ ಮಂಗಳ ಹಾಡಿ ಮಲಗಿಸುತ್ತಿದ್ದಳು ನನ್ನಮ್ಮ.
ಮದುವೆ ನಂತರ, ನೀ ಬರುವುದೇ ಅಪರೂಪ, ಇರೋದೇ ಇಲ್ಲ, ಹೀಗೆ ಬಂದು ಹಾಗೆ ಹೋಗೋಕೆ ಯಾಕೆ ಬರೋದು, ಅನ್ನುವಷ್ಟಕ್ಕೆ ನಮ್ಮ ಜಗಳ ಮುಗಿಯುತ್ತಿತ್ತು.
Happy mother's day ಅಮ್ಮ ಅಂತ ಫೋನ್ ಮಾಡಿ ವಿಶ್ ಮಾಡಿದ್ರೆ "ಇವತ್ತೊಂದಿನ ನೆನಪಾದೆ ಅಲ್ವಾ, ಹೋಗ್ಲಿ ಬಿಡು, ಇವತ್ತಾದರೂ ಎಲ್ಲಾರೂ ಒಟ್ಟಿಗೆ ಹೊರಗೆ ಊಟ ಮಾಡಿ ಬರೋಣ ಬಾ" ಅನ್ನುತಿದ್ರು.
ಹೊತ್ತು ಗೊತ್ತಿಲ್ಲದ ಕೆಲಸಗಳ ಒತ್ತಡದ ನಡುವೆ ಟ್ರೈ ಮಾಡ್ತೀವಿ, ನನಗೆ ಸ್ವಲ್ಪ ಕೆಲಸ ಇದೆ, ಇವರು ಬಿಜಿ ಅಂದ್ರೆ "ಮೂರು ಹೊತ್ತೂ ಕೆಲ್ಸ ಇರುತ್ತೆ, ಒಂದು ಹೊತ್ತಿನ ಊಟಕ್ಕೂ ಪುರುಸೊತ್ತು ಇರಲ್ವ, ಹೋಗ್ಲಿ. ಮನೆಲೇ ಅಡುಗೆ ಮಾಡ್ತೀನಿ ಇಲ್ಲೇ ಬನ್ನಿ" ಅಂತ ಹೇಗಾದರೂ ಬಯಸಿದಾಗಲೆಲ್ಲ ಮನೆಗೆ ಕರೆಸಿಕೊಳ್ಳುವ ಪ್ರಯತ್ನ ಅವಳದ್ದು.
ಅಮ್ಮ ಹುಷಾರು ತಪ್ಪಿದಾಗ ಆಸ್ಪತ್ರೆ ಓಡಾಟ, ಬಿಟ್ರೆ ಶೂಟಿಂಗ್ ಅಂತ ಬೇರೆ ಊರಿಗೆ ಪಯಣದ ನಡುವೆ ಅವಳ ಜೊತೆ ಇಡೀ ದಿನ ಕಾಲ ಕಳೆಯಲೂ ಸಮಯ ಇಲ್ಲದಂತೆ ಆಯಿತು. ಕಡೆಯ ಎರಡು ಬಾರಿ ಆಸ್ಪತ್ರೆ ವಾಸದ ನಂತರ, ನಾನೂ ಊರಿಗೆ ಹೋಗ್ತಾ ಇರ್ತೀನಿ ನಿಮ್ಮೊಬ್ಬರಿಗೆ ಅಮ್ಮನ್ನ ನೋಡೋದು ಕಷ್ಟ ಅಂತ ಒಬ್ಬ ಕೇರ್ ಟೇಕರ್ನನ್ನು ಗೊತ್ತು ಮಾಡಿ ಬಂದೆ. ಕಡೆಯ ಎರಡ್ಮೂರು ತಿಂಗಳು ಬಹುತೇಕ ಜೊತೆಯಲ್ಲೇ ಇದ್ದೆ.
ಎಲ್ಲಾದರೂ ಕೆಲಸದ ಮೇಲೆ ಹೊರಬಂದರೆ ಸಾಕು, "ಅವಳು ಎಲ್ಲಾ ಮಾಡ್ತಾಳೆ ಕಣೆ, ನೀ ಜೊತೆಲಿರು ಸಾಕು" ಅಂತ ಫೋನ್ ಮಾಡಿ ಅಳೋಳು ಅಮ್ಮ. ಕೆಲಸಕ್ಕೆ ಹೋಗಿಲ್ಲ ಅಂದ್ರೆ ಹೇಗಮ್ಮ, ನಾನು ಮಗು ಆಗಿದ್ದಾಗ ನೀ ಕೆಲಸಕ್ಕೆ ಹೋಗೋವಾಗ ನಾ ಹಠ ಮಾಡಿದ್ನಾ, ಈಗ ನೀನು ಮಗು... ನಾನು ಅಮ್ಮ ಅಂದುಕೋ... ಜಾಣೆ ಅಂತ ಸಮಾಧಾನ ಮಾಡಿ ಮಾತು ಮುಂದುವರೆಸಲೂ ಆಗದೆ ಅಪ್ಪನಿಗೆ ಕೊಡು ಫೋನ್ ಅಂತ ಅಪ್ಪನ ಬಳಿ ಅಳ್ತಿದ್ದೆ.
ಅಪ್ಪ, ಏನೇ ಕಷ್ಟ ಇದ್ರೂ ಹೇಳಿಕೊಳ್ಳದವರು. "ನೀನೇನು ಯೋಚನೆ ಮಾಡಬೇಡ ಮಗಳೇ. ನಾನು ನೋಡ್ಕೋತೀನಿ. ಕೇರ್ ಟೇಕರ್ ಇದ್ದಾರೆ ನೀನು ಆರಾಮಾಗಿ ನಿನ್ ಕೆಲಸ ಮಾಡ್ಕೋ, ಬೇಕು ಅಂದಾಗ ನಾನೇ ಫೋನ್ ಮಾಡ್ತೀನಿ. ಅಮ್ಮನ ಮಾತಿಗೆ ತಲೆ ಕೆಡಿಸ್ಕೋಬೇಡ, ನಿನ್ನ ಕೆಲಸದ ಮೇಲೆ ಗಮನ ಕೊಡು" ಅಂತ ಅಪ್ಪನೇ ನನಗೆ ಸಮಾಧಾನ ಮಾಡ್ತಾ ಇದ್ದರು.
ಪ್ರಾಯಶಃ ಅಮ್ಮನಿಗೆ ಅಲ್ಲೂ ನೋಡಿಕೊಳ್ಳೋಕೆ ಒಬ್ಬರು ಬೇಕು ಅಂತ ವಾರವೊಪ್ಪತ್ತಿನಲ್ಲೇ ಅಪ್ಪನೂ ಅಮ್ಮನ ಹತ್ತಿರ ಹೊರಟುಬಿಟ್ರು. ಇವತ್ತು ತಾಯಂದಿರ ದಿನ ಫೋನ್ ಮಾಡಿ ವಿಶ್ ಮಾಡೋದಕ್ಕೆ ಜಗಳ ಮಾಡೋದಿಕ್ಕೆ ಅವಳು ಇಲ್ಲ. ಅಮ್ಮ ಜಗಳ ಮಾಡಿದ್ಲು ಅಂತ ಅತ್ಕೊಂಡು ಹೇಳಿಕೊಳ್ಳೋದಕ್ಕೆ, ಕೇಳಿಸಿಕೊಂಡು ಸಮಾಧಾನ ಮಾಡಲಿಕ್ಕೆ ಅಪ್ಪನೂ ಇಲ್ಲ. ಅವರಿಬ್ಬರೂ ಇದ್ದಾಗ ಇನ್ನೊಂದಷ್ಟು ಹೆಚ್ಚು ಸಮಯ ಅವರ ಜೊತೆ ಕಳೆದಿದ್ದರೆ ಚೆನ್ನಾಗಿರೋದು ಅಂತ ಈಗಲೂ ಗಿಲ್ಟ್ ಕಾಡತ್ತೆ. ಇದು ಎಲ್ಲರನ್ನೂ ಕಾಡುವ ಅತೃಪ್ತಿ." ಎಂದು ಪುಟ್ಟಕ್ಕನ ಮಕ್ಕಳು ಸೀರಿಯಲ್ ಖ್ಯಾತಿಯ ಅಕ್ಷತಾ ಮಾಯಸಂದ್ರ ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.


Click it and Unblock the Notifications











