Puttakkana Makkalu:ಸ್ನೇಹಾ ಕೈ ಸೇರಿಯೇ ಬಿಡ್ತು ವಿಚ್ಛೇದನದ ಪೇಪರ್; ಮುಂದೇನು?
ಸ್ನೇಹಾ ಇತ್ತೀಚೆಗಿನ ದಿನಗಳಲ್ಲಿ ದುಡುಕಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆಕೆಗೆ ತಾನು ಹೀಗೆಲ್ಲ ಮಾಡಿದರೆ ಗಂಡನ ಮರ್ಯಾದೆಗೆ ಕುಂದು ಬರುತ್ತದೆ ಎನ್ನುವ ಆಲೋಚನೆ ಕೂಡ ಇರುವುದಿಲ್ಲ. ಸ್ನೇಹಾ ಎಲ್ಲರನ್ನೂ ಅತೀ ಬೇಗ ನಂಬಿ ಬಿಡುತ್ತಾರೆ. ಬಡವರು ನಿಜ ಹೇಳುತ್ತಾರೆ, ನೊಂದವರು ಯಾವತ್ತೂ ಸುಳ್ಳು ಹೇಳುವುದಿಲ್ಲ ಎನ್ನುವ ನಂಬಿಕೆ ಮೇರೆಗೆ ಆಕೆ ಎಲ್ಲರನ್ನೂ ನಂಬುತ್ತಾಳೆ. ಅದು ಬೇರೆ ಒಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರಬೇಕಾದರೆ, ಅದನ್ನು ನೋಡಿ ಸುಮ್ಮನೆ ಕೂರಲಾರದೆ ಒಬ್ಬರ ಮಾತು ಕೇಳಿ ತನ್ನ ಅತ್ತೆಯ ಮೇಲೆಯೇ ಸವಾರಿ ಮಾಡಿದ ಸ್ನೇಹಾಗೆ ಇದೀಗ ಬಹಳ ದೊಡ್ಡ ಗಿಫ್ಟ್ ಸಿಕ್ಕಿದೆ.
ಆಕೆಗೆ ತಾನು ಮಾಡಿರುವುದು ತಪ್ಪು ಎನ್ನುವ ಅರಿವು ಕೂಡ ಇಲ್ಲದೆ ಬಹಳ ನೊಂದುಕೊಂಡು ಇರುತ್ತಾಳೆ. ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ಇತ್ತ ಪುಟ್ಟಕ್ಕ ಬಹಳ ಜೋರಾಗಿ ಅಳುತ್ತಾರೆ. "ನನ್ನ ಮಗಳನ್ನು ಯಾರು ನಂಬಲು ತಯಾರಿಲ್ಲ. ಯಾಕೆ ಹೀಗೆ ಆಗಿ ಹೋಯಿತು. ನನ್ನ ಮಗಳು ಮಾಡಿದ ತಪ್ಪು ತಪ್ಪೇ. ಆದರೆ, ಆಕೆ ಪದ್ಮಗೆ ಹಣ ಕೊಟ್ಟು ಇದೆಲ್ಲ ಮಾಡಿಸಿದ್ದಾಳೆ ಎಂದರೆ ನನಗೆ ನಂಬಲು ಅಸಾಧ್ಯ" ಎನ್ನುವುದು ಪುಟ್ಟಕ್ಕನ ವಾದ. ಸ್ನೇಹಾನನ್ನು ಆಕೆಯ ಗಂಡನೇ ನಂಬದೆ ಇರಬೇಕಾದರೆ ಇನ್ನೂ ಮನೆಯವರು ನಂಬುವುದಾದರು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ. ಇದೀಗ ರಾಧಾ ಕೂಡ ಸ್ನೇಹಾನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ.

ರಾಧಾಗೆ ಸ್ನೇಹಾ ಅಂದರೆ ಇಷ್ಟ ಇಲ್ಲ. ಹೇಗಾದರೂ ಮಾಡಿ ಸ್ನೇಹಾಳಿಂದ ತನ್ನ ಮಾವನನ್ನು ದೂರ ಮಾಡಬೇಕು, ತನ್ನ ಮಾವ ತನ್ನವನು ಆಗಬೇಕು ಎನ್ನುವ ಆಸೆ. ಆಕೆ ಸ್ನೇಹಾಗೆ ಇಲ್ಲ ಸಲ್ಲದನ್ನು ಹೇಳಿ ಸ್ನೇಹಾ ಮನೆಯಿಂದ ಹೊರ ಹೋಗುವಂತೆ ಹೇಳುತ್ತಾಳೆ. ಆದರೆ, ಪುಟ್ಟಕ್ಕ "ನನ್ನ ಮಗಳು ಯಾವತ್ತೂ ಹಾಗೆ ಮಾಡುವುದು ಇಲ್ಲ. ಆಕೆ ಕೊಂಚ ಹಠವಾದಿ. ನ್ಯಾಯದ ಪರ ನಿಲ್ಲುವವಳು. ಆದರೆ, ಆಕೆಗೆ ಅನ್ಯಾಯ ಕಂಡರೆ ಸಹಿಸುವುದಿಲ್ಲ. ನೇರವಾಗಿ ಮಾತಾಡುತ್ತಾಳೆ. ದಯವಿಟ್ಟು ನನ್ನ ಮಗಳ ಬಗ್ಗೆ ಇಲ್ಲ ಸಲ್ಲದನ್ನು ಹೇಳಬೇಡಿ . ಅಮ್ಮಾವರೇ ನಾನು ಈಗಾಗಲೇ ಮೊದಲ ಮಗಳ ವಿಚಾರದಲ್ಲಿ ನಾನು ಈಗಾಗಲೇ ಬಹಳ ನೋವನ್ನು ಅನುಭವಿಸಿದ್ದೇನೆ. ಇದೀಗ ಸ್ನೇಹಾ ವಿಚಾರ ಕೂಡ ಅದೇ ಆದರೆ ಏನು ಮಾಡುವುದು" ಎಂದು ಬಹಳ ಆತಂಕದಿಂದ ಇರುತ್ತಾರೆ.
ಕಾಲು ಹಿಡಿಯಲು ಬಂದ ಪುಟ್ಟಕ್ಕ
ಕೊನೆಗೆ ಪುಟ್ಟಕ್ಕ ಬಂಗಾರಮ್ಮನ ಕಾಲು ಹಿಡಿಯಲು ಬರುತ್ತಾರೆ. "ಅಮ್ಮಾವರೇ ನನ್ನ ಮಗಳು ತಪ್ಪು ಮಾಡಿದ್ದರೆ, ಆಕೆಯನ್ನು ಕ್ಷಮಿಸಿ. ಅಮ್ಮಾವರೇ ನಿಮ್ಮ ಕಾಲು ಹಿಡಿಯುತ್ತೇನೆ: ಎಂದು ಕಾಲಿಗೆ ಬೀಳಲು ಮುಂದಾಗುತ್ತಾರೆ. ಆದರೆ, ಇದನ್ನು ನೋಡಿದ ಸ್ನೇಹಾ "ಅವ್ವ ನೀನು ಯಾರ ಕಾಲಿಗೆ ಬೀಳುವ ಅಗತ್ಯ ಇಲ್ಲ. ಅತ್ತೆಯವರೇ ನನ್ನ ಬಳಿ ಮನೆ ಬಿಟ್ಟು ಹೋಗು ಎಂದರೆ ನಾನು ಖಂಡಿತವಾಗಿಯೂ ಮನೆ ಬಿಟ್ಟು ಹೋಗುತ್ತೇನೆ" ಎಂದು ಹೇಳುತ್ತಾಳೆ.

ಅಮ್ಮನ ಮಾತಿಗೆ ಮೌನ ತಾಳಿದ ಕಂಠಿ
"ನಾನು ಯಾರನ್ನೂ ಈ ಮನೆಗೆ ಸ್ವಾಗತಿಸಿಲ್ಲ. ಯಾರು ಈ ಮನೆಗೆ ನಿನ್ನನ್ನು ಕರೆದುಕೊಂಡು ಬಂದರೋ ಅವರೇ ಇದರ ಬಗ್ಗೆ ನಿರ್ಧಾರ ಮಾಡಲಿ" ಎಂದು ಕಂಠಿಯ ಮುಖ ನೋಡಿ ಹೇಳುತ್ತಾಳೆ. ಬಳಿಕ ಅಲ್ಲಿಂದ ಬಂಗಾರಮ್ಮ ಹೊರಟು ಹೋಗುತ್ತಾಳೆ. ಪುಟ್ಟಕ್ಕಗೆ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗಿ ಬಿಡುತ್ತಾಳೆ. ಕಂಠಿ ಕೂಡ ಸ್ನೇಹಾ ಹಾಗೂ ಪುಟ್ಟಕ್ಕ ಬಳಿ ಒಂದು ಮಾತನಾಡದೆ ಬಂಗಾರ ಮ್ಮನವರ ಹಿಂದೆ ಹೋಗುತ್ತಾನೆ. ಪುಟ್ಟಕ್ಕ, ಸ್ನೇಹಾಳನ್ನು ಬಿಗಿದಪ್ಪಿ ಅಳುತ್ತಾರೆ.
ಮಾಡದ ತಪ್ಪಿಗೆ ಸ್ನೇಹಾಗೆ ಶಿಕ್ಷೆ
ಆಕೆಗೆ ಸ್ನೇಹಾ ಏನು ತಪ್ಪು ಮಾಡಿಲ್ಲ ಎನ್ನುವುದು ಚೆನ್ನಾಗಿ ತಿಳಿದಿದೆ. ಮಾಡದ ತಪ್ಪಿಗೆ ಸ್ನೇಹಾಗೆ ಶಿಕ್ಷೆ ಕೂಡ ಸಿಕ್ಕಿದೆ. ಇದೀಗ ಎಲ್ಲಾ ಆದ ಬಳಿಕ ಸ್ನೇಹಾ ರೂಮ್ನಲ್ಲಿ ಇರುತ್ತಾಳೆ. ಆ ವೇಳೆ ರೂಮ್ಗೆ ಬಂದ ರಾಧಾ, ಸ್ನೇಹಾ ಬಳಿ ಬಂದು ಒಂದು ಲೆಟರ್ ಕೊಡುತ್ತಾಳೆ. ಲೆಟರ್ ನೋಡಿದ ಸ್ನೇಹಾಗೆ ಅರಿವಾಗುತ್ತದೆ. ಇದು ವಿಚ್ಛೇದನದ ಪೇಪರ್ ಎಂದು. ಆ ಕೂಡಲೇ ಅದನ್ನು ನೋಡಿದ ಸ್ನೇಹಾಗೆ ಸಿಡಿಲು ಎರಗಿದ ಹಾಗೆ ಆಗುತ್ತದೆ.


Click it and Unblock the Notifications











