ಪುಟ್ಟಕ್ಕನ ಮಕ್ಕಳು: ಅವ್ವನ ನೋವಿನ ಮಾತುಗಳು ಸಹನಾ ಪ್ರೀತಿಯನ್ನೇ ತ್ಯಾಗ ಮಾಡಿಸುತ್ತದೆಯಾ..?
ಪುಟ್ಟಕ್ಕ ಇಷ್ಟು ವರ್ಷ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇಡೀ ಜೀವನವನ್ನೇ ಮಕ್ಕಳಿಗಾಗಿ ತ್ಯಾಗ ಮಾಡಿದ್ದಾಳೆ. ಆದರೆ ಒಂದಿಷ್ಟೂ ಬೇಸರವನ್ನು ಮಾಡಿಕೊಂಡಿಲ್ಲ. ಮಕ್ಕಳ ಬೆಳವಣಿಗೆಯಲ್ಲಿ ತನ್ನ ನೋವನ್ನು ಮರೆತಿದ್ದಾಳೆ. ಪುಟ್ಟಕ್ಕನ ಮುಂದಿರುವುದು ಸದ್ಯಕ್ಕೆ ಮಕ್ಕಳ ಭವಿಷ್ಯ. ಮೊದಲು ಸಹನಾಳಿಗೆ ಒಂದೊಳ್ಳೆ ಸಂಬಂಧ ನೋಡಿ ಮದುವೆ ಮಾಡುವುದು. ಸ್ನೇಹಾ ಹೇಗೂ ಓದುತ್ತಿದ್ದಾಳೆ. ಸುಮಾ ಇನ್ನು ಚಿಕ್ಕವಳು. ಹೀಗಾಗಿ ಆ ಇಬ್ಬರ ಜವಾಬ್ದಾರಿಗಿಂತ ಸಹನಾಳ ಜವಾಬ್ದಾರಿ ಪುಟ್ಟಕ್ಕನಿಗೆ ದೊಡ್ಡದಾಗಿ ಕಾಣುತ್ತಿದೆ.
ಸಹನಾ ಮದುವೆಗೆ ಈಗಾಗಾಲೇ ಸಂಬಂಧ ಹುಡುಕುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಒಂದು ಸಂಬಂಧ ಬಂದಿತ್ತು. ಅದು ಪ್ರೀತಿ ಚಿಗುರುವ ಮುನ್ನ. ಆದರೆ ರಾಜೇಶ್ವರಿ ಬಂದು ಆ ಸಂಬಂಧವನ್ನೆಲ್ಲಾ ಹಾಳುಗೆಡವಿದಳು. ಈಗಲೂ ಒಳ್ಳೆ ಸಂಬಂಧವೇ ಬಂದಿದೆ. ಆದರೆ ಗಂಡಿನ ಕಡೆಯವರ ಷರತ್ತಿಗೆ ಮನೆಯವರೆಲ್ಲಾ ವಿರೋಧಿಸುವಂತಾಗಿದೆ.

ಪುಟ್ಟಕ್ಕನ ಕಷ್ಟ ಹೆಣ್ಣು ಮಕ್ಕಳಿಗೆ ಜೀವನ ಪಾಠ!
ಪುಟ್ಟಕ್ಕ ನೋಡುಗರಿಗೆ ಮಾದರಿಯೇ ಸರಿ. ಮೂವರು ಹೆಣ್ಣು ಮಕ್ಕಳಿದ್ದರೂ, ನಾಳೆಗೆ ಎಂದು ಹಣ ಕೂಡಿಟ್ಟಿಲ್ಲವಾದರೂ, ಇವತ್ತಿಗೆ ನೆಮ್ಮದಿಯಾಗಿ ಬದುಕು ನಡೆಸುತ್ತಿದ್ದಾಳೆ. ನಾಳೆಗೆ ದೇವಿ ಇದ್ದಾಳೆ ಎಂಬ ಧೈರ್ಯ ಪುಟ್ಟಕ್ಕನದ್ದು. ಆದರೆ ಗಂಡನನ್ನು ಬಿಟ್ಟು ಬಂದ ಮೇಲೆ ಪುಟ್ಟಕ್ಕ ಪಟ್ಟ ಕಷ್ಟ ಛಲ ಕಲಿಸಿಕೊಟ್ಟಿದೆ. ಆದರೆ ಗಂಡನ ಮನೆಯಲ್ಲಿದ್ದಾಗ ಪಟ್ಟ ಕಷ್ಟ ಇದೆಯಲ್ಲ ಅದು ನರಕ ತೋರಿಸಿದೆ. ಸಹನಾಳಿಗೆ ಗರ್ಭಿಣಿಯಾದಾಗ ಮೂರು ಹೊತ್ತು ತಿನ್ನಲು ಅನ್ನ ಇರಲಿಲ್ಲವಂತೆ. ಯಾವ ಮಗು ಜನಿಸುತ್ತದೆಯೋ ಎಂಬ ಆತಂಕದಲ್ಲಿಯೇ ಪುಟ್ಟಕ್ಕ ಕಾಲ ಕಳೆದಿದ್ದರಂತೆ. ಅದಕ್ಕೆ ಸಹನಾ ಈಗಲೂ ಸ್ವಲ್ಪ ಶಬ್ಧವಾದರೂ ಭಯ ಬೀಳುತ್ತಾಳೆ ಎಂದು ಸಹನಾಳ ಹುಟ್ಟಿನ ಬಗ್ಗೆ ಹೇಳಿದ್ದರು ಪುಟ್ಟಕ್ಕ. ಇದು ಧಾರಾವಾಹಿಯೇ ಇರಬಹುದು. ಕಥೆಯೇ ಆಗಿರಬಹುದು. ಆದರೆ ಪುಟ್ಟಕ್ಕ ಹೇಳಿದ ಗರ್ಭಿಣಿ ಕಥೆ ಹಲವು ಹೆಣ್ಣು ಮಕ್ಕಳ ನಿಜ ಜೀವನವೇ ಸರಿ. ಇದನ್ನು ಕೇಳುತ್ತಿದ್ದರೆ ಎಂಥವರ ಕಣ್ಣಲ್ಲೂ ನೀರು ಬರುತ್ತಿದೆ.

ಪ್ರೀತಿ ತ್ಯಾಗ ಮಾಡುತ್ತಾಳಾ ಸಹನಾ?
ಪುಟ್ಟಕ್ಕನನ್ನು ಮೂರು ಮಕ್ಕಳು ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಅವ್ವನ ಕಷ್ಟಕ್ಕೆ ಸ್ಪಂದಿಸುತ್ತಿರುತ್ತಾರೆ. ಮನೆಯಲ್ಲಿ ಯಾರಿಗೆ ಕೆಲಸವಿಲ್ಲದೆ ಇದ್ದರೆ ಮೊದಲು ಹೋಗುವುದು ಮೆಸ್ ಕಡೆಗೆ ಕ್ಯಾಶಿಯರ್, ಊಟ ಬಡಿಸುವುದು, ಪಾರ್ಸೆಲ್ ಕಟ್ಟುವ ಕೆಲಸ ಮಾಡುತ್ತಿರುತ್ತಾರೆ. ಸದ್ಯ ಸಹನಾ ಮದುವೆ ವಿಚಾರ ಬಂದಾಗ, ಚರ್ಚೆ ವೇಳೆ ಪುಟ್ಟಕ್ಕ ತನ್ನ ಒಡಲೊಳಗಿರುವ ನೋವನ್ನು ಹೇಳಿಕೊಳ್ಳಲೇಬೇಕಾದ ಪರಿಸ್ಥಿತಿ ಬಂದಿದೆ. ಹಳೆಯ ನೋವು, ಕಷ್ಟ, ಸಹನಾಳ ಬದುಕು ಎಲ್ಲವನ್ನೂ ಹೇಳಿದಾಗ ಸಹನಾ ಅಕ್ಷರಶಃ ಸಣ್ಣ ಮಗುವಿನಂತೆ ಕಣ್ಣೀರು ಹಾಕಿದ್ದಾಳೆ. ಬೇಗ ಕರಗುವ ಸಹನಾ ಇದೀಗ ಅವ್ವನ ಕಷ್ಟ ಕೇಳಿ ಇನ್ನು ಹೇಳದೆ ಬಿಟ್ಟಿರುವ ಪ್ರೀತಿಯನ್ನು ತ್ಯಾಗ ಮಾಡಿಬಿಡುತ್ತಾಳಾ ಎಂಬ ಆತಂಕ ಕಾಡುತ್ತಿದೆ.

ಸುಮಾಗೆ ಈ ಮದುವೆ ಇಷ್ಟವಿಲ್ಲ
ಸುಮಾಗೆ ಈಗಾಗಲೇ ಅಕ್ಕನ ಮನಸ್ಸಲ್ಲಿ ಮುರುಳಿ ಮೇಷ್ಟ್ರ ಮೇಲೆ ಲವ್ವಾಗಿರುವುದು ಗೊತ್ತಾಗಿದೆ. ಆದರೆ ಇಬ್ಬರು ಕೂಡ ಹೇಳಿಕೊಳ್ಳುತ್ತಿಲ್ಲ. ಇತ್ತ ಕಡೆ ನೋಡಿದರೆ ಸಹನಾಗೆ ಮನೆಯಲ್ಲಿ ಸಂಬಂಧ ಹುಡುಕುವ ಕೆಲಸ ಭರದಿಂದ ಸಾಗಿದೆ. ಫೋಟೊ ನೋಡಿ ಮನೆಯಲ್ಲಿ ಒಪ್ಪಿ ಆಗಿದೆ. ಹುಡುಗನ ಕೆಲಸ ಚೆನ್ನಾಗಿದೆ, ಹೀಗಾಗಿ ಸಹನಾ ಚೆನ್ನಾಗಿರುತ್ತಾಳೆ ಎಂಬ ಭರವಸೆ. ಆದರೆ ಯಾವುದೋ ಸಣ್ಣ ಪುಟ್ಟ ಕಾರಣ ಹುಡುಕಿ ಸುಮ ಈ ಸಂಬಂಧವೆ ಬೇಡ ಎನ್ನುತ್ತಿದ್ದಾಳೆ. ಅತ್ತ ಶುರುವಾಗಿರುವ ಪ್ರೀತಿ ಬಗ್ಗೆ ಹೇಳದೆ ಮನಸ್ಸಲ್ಲಿ ನೋವು ಪಡುತ್ತಾ, ಕಣ್ಣೀರು ಹಾಕುತ್ತಿದ್ದಾಳೆ ಸಹನಾ.
ಸ್ನೇಹಾ ಕರೆದರೆ ಗೋಪಾಲ ಬರಲೇಬೇಕಲ್ಲ
ಅಪ್ಪ ಎಂಬ ವಿಚಾರ ಬಂದರೆ ಸ್ನೇಹಾ ರುದ್ರಕಾಳಿಯಾಗುತ್ತಾಳೆ. ಸುಮಾ ಅಕ್ಕನಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಈಗ ಮತ್ತೆ ಗೋಪಾಲನ ವಿಚಾರ ಬಂದಿದೆ. ಆದರೆ ಈ ಬಾರಿ ಸ್ನೇಹಾ ಸೋಲಲೇಬೇಕಾದ ಪರಿಸ್ಥಿತಿ ಇದೆ. ಅದು ಅವ್ವನ ಕಡು ಕಷ್ಟದ ವಿಚಾರ ಕೇಳಿದ ಮೇಲೆ. ಹುಡುಗ, ಹುಡುಗನ ಹಿನ್ನೆಲೆ ಸ್ನೇಹಾಗೆ ಇಷ್ಟವಾಗಿದ್ದೆ ತಡ ಕರೆಸವ್ವ ಎಂದಳು. ಆದರೆ ಮಾತುಕತೆ ವೇಳೆಗೆ ಗೋಪಾಲ ಇರಲೇಬೇಕು ಎಂದಾಗ ಅದೇ ರೌದ್ರತೆ ತೋರಿದಳು. ಆದರೆ ಪುಟ್ಟಕ್ಕ ಮೂರು ಮಕ್ಕಳನ್ನು ಪಡೆದು, ಸಾಕಿ ಸಲಹಿದ ರೀತಿ ಕೇಳಿಸಿಕೊಂಡಿರುವ ಸ್ನೇಹಾ ಬದಲಾಗುವ ಸಾಧ್ಯತೆ ಇದೆ. ಖುದ್ದು ಸ್ನೇಹಾ ಹೋಗಿ ಕರೆದರೆ ಗೋಪಾಲ ಬರಲೇಬೇಕಾಗುತ್ತದೆ. ರಾಜೇಶ್ವರಿ ಕೂಡ ಏನು ಮಾಡಲು ಸಾಧ್ಯವಾಗುವುದಿಲ್ಲ.


Click it and Unblock the Notifications











