Puttakkana Makkalu: ಹಣ ಕದ್ದ ಕಳ್ಳ ಸಿಕ್ಕಿಬಿದ್ದರೂ ಪುಟ್ಟಕ್ಕನ ವಿರುದ್ಧವೇ ತೀರ್ಪು ಬಂದಿದ್ದೇಕೆ?
ವಿಭಿನ್ನವಾದ ಕಥೆಯೊಂದಿಗೆ ಜೀ ಕನ್ನಡ ವಾಹಿನಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಪುಟ್ಟಕ್ಕನಿಗೆ ಮೂವರು ಹೆಣ್ಣುಮಕ್ಕಳು ಜನಿಸಿದರು ಎಂಬ ಕಾರಣಕ್ಕೆ ಗಂಡು ಮಗು ಬೇಕೆಂದು ಗೋಪಾಲಯ್ಯ ಹೇಳದೆ ಕೇಳದೆ ಹೋಗಿ ರಾಜೇಶ್ವರಿಯನ್ನು ಮದುವೆಯಾಗುತ್ತಾನೆ.
ಗೋಪಾಲಯ್ಯನಿಗೆ ಪುಟ್ಟಕ್ಕನ ಪೋಷಕರು ವರದಕ್ಷಿಣೆಯಾಗಿ ಮನೆಯನ್ನು ಕೊಡುತ್ತಾರೆ. ಆ ಮನೆಯಲ್ಲಿ ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಿರುತ್ತಾಳೆ. ಪಕ್ಕದಲ್ಲೇ ಒಂದು ಮೆಸ್ ತೆರೆದು ಜೀವನ ನಡೆಸುತ್ತಿರುತ್ತಾಳೆ. ಸುತ್ತೂರಲ್ಲಿ ಪುಟ್ಟಕ್ಕನ ಮೆಸ್ ಎಂದರೆ ತುಂಬಾ ಫೇಮಸ್.
ಪುಟ್ಟಕ್ಕ ಹಾಗೂ ಅವರ ಹೆಣ್ಣು ಮಕ್ಕಳ ಮೇಲೆ ಊರ ಜನ ಗೌರವ ಇಟ್ಟಿರುತ್ತಾರೆ. ಹೀಗಿರುವಾಗ ಪುಟ್ಟಕ್ಕನ ಏಳಿಗೆಯನ್ನು ಕಂಡು ರಾಜೇಶ್ವರಿ ಕಿಡಿಕಾರುತ್ತಾಳೆ. ಹೇಗಾದರೂ ಮಾಡಿ ಪುಟ್ಟಕ್ಕನ ಬಳಿಯಿರುವ ಮೆಸ್ ಹಾಗೂ ಮನೆಯನ್ನು ಕಿತ್ತುಕೊಂಡು ಅವಳನ್ನು ಬೀದಿಯಲ್ಲಿ ನಿಲ್ಲಿಸಬೇಕೆಂದು ಸ್ಕೆಚ್ ಹಾಕುತ್ತಿರುತ್ತಾಳೆ.

ಹಣ ಕೊಟ್ಟು ಪುಟ್ಟಕ್ಕನನ್ನು ಹಳ್ಳಕ್ಕೆ ತಳ್ಳಿದ ರಾಜೇಶ್ವರಿ!
ಉಪಾಯ ಮಾಡುವ ರಾಜೇಶ್ವರಿ, 10 ಲಕ್ಷ ಹಣದ ಜೊತೆಗೆ ಬಾಂಡ್ ಪೇಪರ್ ತೆಗೆದುಕೊಂಡು ಗೋಪಾಲಯ್ಯನ ಜೊತೆ ಸೀದಾ ಪುಟ್ಟಕ್ಕನ ಮನೆಗೆ ಹೋಗುತ್ತಾಳೆ. ನಿಮ್ಮ ಮಕ್ಕಳ ಮದುವೆಗೆ ಧಾರೆ ಎರೆದು ಕೊಡಲು ನಿನ್ನ ಗಂಡ ಬೇಕು ಎಂದರೆ, ಮನೆಯನ್ನು ನಮ್ಮ ಹೆಸರಿಗೆ ಬರೆದು, ಈ ಹಣ ತಗೊಂಡು ಎಲ್ಲಾದ್ರೂ ಹೋಗು ಎನ್ನುತ್ತಾರೆ. ಆಗ ಪುಟ್ಟಕ್ಕ ಪತ್ರ ಹಾಗೂ ಹಣ ತೆಗೆದುಕೊಳ್ಳುತ್ತಾಳೆ. ಆದರೆ ತನ್ನ ಎರಡನೇ ಮಗಳು ಸ್ನೇಹಾಳಿಂದ ಈ ವಿಚಾರವನ್ನು ಮುಚ್ಚಿಡುತ್ತಾಳೆ. ಯಾಕೆಂದರೆ, ಸ್ನೇಹಗೆ ತನ್ನ ತಾಯಿಯನ್ನು ಗೋಪಾಲಯ್ಯ ನಡುನೀರಲ್ಲಿ ಕೈ ಕೊಟ್ಟು ಹೋಗಿದ್ದು ತಪ್ಪು ಎಂಬ ಕಾರಣಕ್ಕೆ ಕೆಂಡದಷ್ಟು ಕೋಪ ಇಟ್ಟಿಕೊಂಡಿರುತ್ತಾಳೆ. ಹಾಗಾಗಿ ತಂದೆಯ ವಿಚಾರಕ್ಕೆ ಸದಾ ರೇಗಾಡುತ್ತಾಳೆ ಎಂದು ಪುಟ್ಟಕ್ಕ ಈ ವಿಚಾರವನ್ನು ಮುಚ್ಚಿಟ್ಟಿರುತ್ತಾಳೆ.

ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪುಟ್ಟಕ್ಕ!
ಪತ್ರಕ್ಕೆ ಸಹಿ ಹಾಕಿದರೆ ತಪ್ಪಾಗುತ್ತೆ ಎಂದು ಯೋಚಿಸಿದ ಪುಟ್ಟಕ್ಕ ದೊಡ್ಡ ಮಗಳು ಸಹನಾಳ ಜೊತೆ ಗೋಪಾಲಯ್ಯನ ಮನೆಗೆ ಹೋಗಿ ಹಣ ಮತ್ತು ಪತ್ರವನ್ನು ವಾಪಸ್ ಕೊಡುತ್ತಾಳೆ. ಆದರೆ ರಾಜೇಶ್ವರಿ ಅದನ್ನು ತೆಗೆದುಕೊಳ್ಳದೆ ಹಾಗೆ ಕಳಿಸುತ್ತಾರೆ. ಮನೆಗೆ ಹಣದ ಬ್ಯಾಗ್ ಹಿಡಿದುಕೊಂಡು ಹೋಗುವಾಗ ಬೈಕ್ನಲ್ಲಿ ಬಂದ ಕಳ್ಳ ಹಣವನ್ನು ಕಿತ್ತುಕೊಂಡು ಹೋಗುತ್ತಾನೆ. ಭಯಗೊಂಡ ಪುಟ್ಟಕ್ಕ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ, ಪೊಲೀಸ್ ಕೆಟ್ಟದಾಗಿ ಮಾತನಾಡಿ ಕಳಿಸುತ್ತಾರೆ.

ಬಂಗಾರಮ್ಮನಿಂದ ತೀರ್ಪು ಪ್ರಕಟ!
ಹಣ ಏನಾಯ್ತು ಎಂಬ ಬಗ್ಗೆ ವಿಚಾರಣೆ ನಡೆಸಿದಾಗ ಪುಟ್ಟಕ್ಕ, ಕಳ್ಳ ಹಾಗೂ ಪೊಲೀಸ್ ವರ್ತನೆ ಬಗ್ಗೆ ಹೇಳಿ ಕಣ್ಣೀರಿಡುತ್ತಾಳೆ. ಆದರೆ, ಬಂಗಾರಮ್ಮನ ಬಳಿ ಬಡ್ಡಿ ಹಣ ಕೇಳಲು ಬಂದಿದ್ದ ಪುಟ್ಟಕ್ಕ ಹಣ ತೆಗೆದುಕೊಳ್ಳದೆ ಹೋಗಿದ್ದು ಯಾಕೆ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡುವುದಿಲ್ಲ. ಇದು ಬಂಗಾರಮ್ಮನಿಗೆ ಅನುಮಾನವನ್ನು ಉಂಟು ಮಾಡುತ್ತದೆ.

ರಾಜೇಶ್ವರಿ ಬಳಿ ಪುಟ್ಟಕ್ಕ ಕ್ಷಮೆ ಕೇಳಿದ್ರಾ?
ಬಂಗಾರಮ್ಮ ಪುಟ್ಟಕ್ಕನನ್ನು ರಾಜೇಶ್ವರಿ ಬಳಿ ಕ್ಷಮೆ ಕೇಳುವಂತೆ ಹೇಳುತ್ತಾಳೆ. ಅಷ್ಟರಲ್ಲಿ ಬಂಗಾರಮ್ಮನ ಮಗ ಕಂಠಿ, ಹಣ ಕದ್ದ ಕಳ್ಳ ಹಾಗೂ ಪೊಲೀಸರನ್ನು ಒದ್ದು ಎಳೆದುಕೊಂಡು ಬರುತ್ತಾನೆ. ಆಗ ಅವರಿಬ್ಬರು ಹಣ ಕದಿಯಲು ಕಾರಣವೇನು ಎಂದು ಹೇಳುತ್ತಾರೆ. ರಾಜೇಶ್ವರಿ ತಮ್ಮನೇ ಹಣ ಕದ್ದ ಕಳ್ಳ. ಹಣ ಕದಿಯುವಂತೆ ಗೋಪಾಲಯ್ಯನೇ ಹೇಳಿರುತ್ತಾನೆ. ಬಳಿಕ ಪೊಲೀಸ್ಗೆ ಹಣ ಕೊಟ್ಟು ಪುಟ್ಟಕ್ಕನಿಂದ ದೂರು ತೆಗೆದುಕೊಳ್ಳದಂತೆ ಮಾಡಿರುತ್ತಾನೆ. ಈ ಸತ್ಯ ಈಗ ಬಂಗಾರಮ್ಮನಿಗೆ ಅರ್ಥವಾಗುತ್ತದೆ. ಮುಂದೆ ಏನಾಗುತ್ತೆ ಅಂತ ರಾಜೇಶ್ವರಿ ಹಾಗೂ ಗೋಪಾಲಯ್ಯ ತಲೆಕೆಡಿಸಿಕೊಂಡಿರುತ್ತಾರೆ. ಈಗ ಬಂಗಾರಮ್ಮ ಯಾವ ಕಡೆ ತೀರ್ಪು ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.


Click it and Unblock the Notifications











