100 ಸಂಚಿಕೆ ಪೂರೈಸಿದ 'ರಾಜಿ': ಸೊಸೆಯ ಮುಗ್ಧತೆ ಅರ್ಥ ಮಾಡಿಕೊಳ್ಳುತ್ತಾಳಾ ಸರಸ್ವತಿ?
'ರಾಜಿ' ಧಾರಾವಾಹಿ ಈಗ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಎಲ್ಲರ ಮನೆ ಮನ ತಲುಪಿರುವ 'ರಾಜಿ' ಇದೀಗ 100 ಸಂಚಿಕೆಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಕರ್ಣನನ್ನು ಪ್ರೀತಿಯಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾಳೆ. ಇನ್ನೇನಿದ್ದರು ಅತ್ತೆಯನ್ನು ಸಂಭಾಳಿಸುವುದನ್ನಷ್ಟೇ ರಾಜಿ ಕಲಿಯಬೇಕಿದೆ. ಮನೆಯಲ್ಲಿ ಮಾವ ಅಂತು ರಾಜಿಗೆ ಫುಲ್ ಸಪೋರ್ಟಿವ್ ಆಗಿದ್ದಾರೆ. ಈ ಎಲ್ಲಾ ಖುಷಿಗೆ ನೂರು ದಿನಗಳು ತುಂಬಿದೆ.
ರಾಜಿ ಮತ್ತು ಕರ್ಣನ ಜೀವನದಲ್ಲಿ ಏನೇನೋ ನಡೆಯುತ್ತಿದೆ. ರಾಜಿ ಬಯಸಿದ್ದೆ ಸಿಕ್ಕಿದರು, ಕರ್ಣ ಬಯಸಿದ್ದು ಸಿಗಲಿಲ್ಲ. ಆದರೆ ವಿಧಿ ಬರೆದಿದ್ದು ರಾಜಿಯನ್ನೇ ಎಂದು ಕರ್ಣ ಭಾವಿಸಿದರೆ ಎಲ್ಲವೂ ಸರಿಯಾಗುತ್ತೆ. ಕೆಲವೊಂದು ಘಟನೆಗಳು ಅದನ್ನೇ ನಿರೂಪಿಸುವಂತೆ ನಡೆಯುತ್ತಿದೆ. ಆದರೆ ಕರ್ಣ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಇದೀಗ ಎಲ್ಲಾ ಸಮಸ್ಯೆ, ಏಳು-ಬೀಳುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಎಲ್ಲರಿಗೂ ಹೇಳಲಿದ್ದಾರೆ.

ಸಾನ್ವಿ ಮೇಲೆಯೇ ಸರಸ್ವತಿಗೆ ಮನಸ್ಸು
ಸರಸ್ವತಿ ಕರ್ಣನ ತಾಯಿ. ಕರ್ಣ ಮತ್ತು ರಾಜಿ ಮದುವೆಗೂ ಮುನ್ನ ರಾಜಿಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದಳು. ರಾಜಿಗೊಂದು ಒಳ್ಳೆಯ ಜೀವನ ಕಲ್ಪಿಸಿಕೊಡಬೇಕೆಂದು ಬಯಸಿದ್ದಳು. ಆದರೆ ಅದ್ಯಾವಾಗ ಪರಿಸ್ಥಿತಿಗೆ ತಲೆಕೊಟ್ಟು ಕರ್ಣನನ್ನು ರಾಜಿ ಮದುವೆಯಾದಳೋ ಅಲ್ಲಿಂದ ಇಲ್ಲಿಯವರೆಗೂ ರಾಜಿಯನ್ನು ಸರಸ್ವತಿ ಕ್ಷಮಿಸುವ ಗೋಜಿಗೆ ಹೋಗಿಲ್ಲ. ಪ್ರೀತಿಯ ಮಾತುಗಳೆಲ್ಲಾ ಈಗ ಒರಟು ಭಾಷೆಗೆ ತಿರುಗಿವೆ. ತಾಯಿ ಪ್ರೀತಿ ಕೊಡುತ್ತಿದ್ದ ಹೃದಯ ಮಾತಿಗೆ ಮುಂಚೆ ಚುಚ್ಚು ಮಾತು ಆಡಲು ಆರಂಭಿಸಿವೆ. ಆದರೆ ಈ ಮಧ್ಯೆ ರಾಜಿಯ ತಾಳ್ಮೆಯೂ ಹೆಚ್ಚಾಗಿದೆ.

ರಾಜಿಯ ಲಕ್ಷಣ ಕಂಡರೂ ಕೆಂಡಕಾರುತ್ತಿದ್ದಾಳೆ ಸರಸ್ವತಿ
ಸದ್ಯ ಮನೆಯಲ್ಲಿ ರಾಜಿಗೆ ದುಷ್ಮನ್ಗಳೇ ಹೆಚ್ಚಾಗಿದ್ದಾರೆ. ಅವಳನ್ನು ಒಂದಲ್ಲ ಒಂದು ರೀತಿ ಸಿಕ್ಕಿಬೀಳಿಸಬೇಕೆಂದು ಕಾಯುತ್ತಿರುವ ಮನಸ್ಸುಗಳ ನಡುವೆ, ಆಕೆಯನ್ನು ಕಾವಲಂತೆ ಕಾಯುವ ಮನಸ್ಸುಗಳು ಕಾಣ ಸಿಗುತ್ತಿವೆ. ಅದರಲ್ಲಿ ರಾಜಿಯ ಮಾವ ಎಂದರೆ ಕರ್ಣನ ಅಪ್ಪ ಸದಾ ಮುಂದು. ಸದ್ಯ ಚೆಂದವಾಗಿ ಸಿದ್ಧವಾಗಿರುವ ರಾಜಿ, ಮಾವನ ಮುಂದೆ ನಾನು ಹೆಂಗೆ ಕಾಣುತ್ತಿದ್ದೀನಿ ಎಂದು ಕೇಳಿದ್ದಾಳೆ. ಮಾವ ಥೇಟ್ ದೇವತೆಯಂತೆಯೇ ಕಾಣುತ್ತಿದ್ದೀಯ ಅಂತ ಹೇಳಿದರೆ. ಅತ್ತೆ ಸರಸ್ವತಿ ಮಾತ್ರ ಸೊಸೆ ರಾಜಿಯನ್ನು ಹೊಗಳಿಲ್ಲ. ಒಳ್ಳೆ ಮಾರಿಯಂತೆ ಕಾಣುತ್ತಿದ್ದೀಯಾ ಎಂದೇ ಹೇಳಿದ್ದಾಳೆ.

ಸಾನ್ವಿಯನ್ನೇ ಸೊಸೆ ಮಾಡಿಕೊಳ್ಳುವ ಬಯಕೆ
ರಾಜಿ ಮನೆಯ ಮಗಳಾಗಿದ್ದಳು. ಬೇರೆ ದೇಶದಲ್ಲಿದ್ದ ಕರ್ಣ ಬರುವಾಗ ತನ್ನ ಜೊತೆ ಸಾನ್ವಿಯನ್ನು ಕರೆತಂದಿದ್ದ. ಇವಳನ್ನೇ ಮದುವೆಯಾಗುವುದು ಎಂದು ಹೇಳಿದ್ದ. ಮನೆಯವರಿಗೆಲ್ಲಾ ಒಪ್ಪಿಗೆಯೂ ಆಗಿದ್ದಳು. ಆದರೆ ಅನಿವಾರ್ಯತೆಗೆ ಒತ್ತುಕೊಟ್ಟು ಕರ್ಣ, ರಾಜಿಯನ್ನು ಮದುವೆಯಾದ. ಆದರೆ ಅತ್ತೆ ಸರಸ್ವತಿಗೆ ಈಗಲೂ ಸಾನ್ವಿಯ ಮೇಲೆಯೇ ಹೆಚ್ಚು ಒಲವಿದೆ. ಆಕೆಯನ್ನು ಮತ್ತೊಮ್ಮೆ ಮನೆ ತುಂಬಿಸಿಕೊಳ್ಳಲು ಯೋಚಿಸುತ್ತಿದ್ದಾಳೆ. ಅದಕ್ಕಾಗಿಯೇ ರಾಜಿಯನ್ನು ಸದಾ ನಿಂದಿಸುವ ಸರಸ್ವತಿ, ಸಾನ್ವಿಯನ್ನು ಏನು ಅನ್ನುವುದಿಲ್ಲ.

ಕರ್ಣನನ್ನು ಮರಳಿ ಪಡೆಯುವ ಫ್ಲ್ಯಾನ್
ಸಾನ್ವಿಗೂ ಅದೇ ಕೆಟ್ಟ ಹಠ. ಅದಕ್ಕೆಂದೆ ರಾಜಿ ಮತ್ತು ಕರ್ಣನ ಮದುವೆಯಾದ ಬಳಿಕ ಮನೆ ಬಿಟ್ಟು ಹೋಗಿದ್ದ ಸಾನ್ವಿ ಮತ್ತೆ ಬಂದು ಸೇರಿಕೊಂಡಿದ್ದಾಳೆ. ಆಗಾಗ ಕಿತಾಪತಿ ಮಾಡುತ್ತಾ ರಾಜಿಯನ್ನು ತಗಲಾಕಿಸುವ ಯೋಜನೆ ರೂಪಿಸುತ್ತಿದ್ದಾಳೆ. ಆದರೆ ರಾಜಿ ಕೆಲವೊಂದು ಕಡೆ ಎಡವಿದರೂ, ಅವಳ ಮುಗ್ಧತೆಯೇ ಅವಳನ್ನು ಕಾಪಾಡುತ್ತಿದೆ. ಸಾನ್ವಿ ಮಾಡುವ ಎಲ್ಲಾ ಕೆಟ್ಟ ಕೆಲಸಗಳು ರಾಜಿಗೆ ವರವಾಗಿ ಬದಲಾಗುತ್ತಿವೆ. ಕರ್ಣ ನಿಧಾನವಾಗಿ ರಾಜಿ ಕಡೆಗೆ ವಾಲುತ್ತಿದ್ದಾನೆ.


Click it and Unblock the Notifications











